''ಮೇಯರ್ ಹುದ್ದೆ ಎಂದರೆ ಬಿಬಿಎಂಪಿಯ ಎಟಿಎಂ ಮಷಿನ್"
ಬೆಂಗಳೂರು, ಡಿಸೆಂಬರ್ 01: ''ಬೆಂಗಳೂರು ಮೇಯರ್ ಎಂದರೆ ಅಪಖ್ಯಾತಿಯ ಕೆಲಸಗಳಷ್ಟೇ ನೆನಪಿಗೆ ಬರುತ್ತವೆಯೇ ಹೊರತು ಜನಮಾನಸದ ನೆನಪಿನಲ್ಲುಳಿಯುವ ಯಾವ ಅಭಿವೃದ್ಧಿ ಕಾರ್ಯವನ್ನು ಇತ್ತೀಚಿನ ವರ್ಷಗಳಲ್ಲಿ ಯಾವ ಮೇಯರ್ಗಳೂ ಮಾಡಿಲ್ಲ'' ಎಂದು ಎಎಪಿಯ ಬಿಬಿಎಂಪಿ ಕ್ಯಾಂಪೇನ್ ಉಸ್ತುವಾರಿ ಶಾಂತಲಾ ದಾಮ್ಲೆಯವರು ಆರೋಪಿಸಿದ್ದಾರೆ.
ಆಮ್ ಆದ್ಮಿ ಪಕ್ಷವು ಬೆಂಗಳೂರಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಂತಲಾ ದಾಮ್ಲೆಯವರು ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಒಂದು ಲೀಟರ್ ಹಾಲಿಗೆ ನೀರನ್ನು ಸೇರಿಸಿ 70 ಮಕ್ಕಳಿಗೆ ಕುಡಿಸಿರುವಂತಹ, ಬೆಂಗಳೂರಿನ ಬಿಬಿಎಂಪಿ ಶಾಲೆಗಳಲ್ಲೂ ಶಾಲೆಗಳು ಆರಂಭವಾಗಿ ಎರಡು ತಿಂಗಳಾದರೂ ಮಕ್ಕಳಿಗೆ ಪಠ್ಯ ಪುಸ್ತಕಗಳು ದೊರೆಯದೇ ಇರುವ ಅಮಾನವೀಯ ಬೇಜವಬ್ದಾರಿ ಆಡಳಿತ ವ್ಯವಸ್ಥೆಯೊಳಗೆ ನಾವಿದ್ದೇವೆ. ಇಂತಹ ದುಸ್ಥಿತಯನ್ನು ಹೋಗಲಾಡಿಸಿ ಹೊಸ ಬೆಂಗಳೂರನ್ನು ನಿರ್ಮಾಣ ಮಾಡುವ ಮೂಲಕ ಬೆಂಗಳೂರಿನ ಘನತೆಯನ್ನು ಹೆಚ್ಚಿಸಲು ಎಎಪಿಯು ಮುಂದಾಗಿದೆ ಎಂದು ತಿಳಿಸಿದರು.
1949ರಿಂದ ಇಲ್ಲಿಯವರೆಗೆ ಹಲವಾರು ಮೇಯರ್ ಗಳಾಗಿದ್ದಾರೆ. ಆದರೆ ಇವರೆಲ್ಲರೂ ತಮ್ಮ ರಾಜಕೀಯ ಬೆಳವಣಿಗೆಗಾಗಿ ಮೇಯರ್ ಸ್ಥಾನವನ್ನು ಬಳಸಿಕೊಡಿದ್ದಾರೆಯೇ ಹೊರತು ಜನಪರವಾದ ಯಾವೊಂದು ಕೆಲಸವನ್ನೂ ಮಾಡಿಲ್ಲ. ಒಬ್ಬರು ಪಾಲಿಕೆಯ ಸಿಎ ನಿವೇಶನವನ್ನೇ ತಮ್ಮ ಸೊಸೆಯ ಕ್ಲಿನಿಕ್ ಕಟ್ಟಲು ಬಳಿಸಿಕೊಂಡಿದ್ದಾರೆ. ಮತ್ತೊಬ್ಬ ಮಾಜಿ ಮೇಯರ್ ಪುತ್ರನ ಮೇಲೆ ಗುಂಡಾಗಿರಿಯ ಕೇಸುಗಳಿದ್ದರೆ, ಇನ್ನೊಬ್ಬ ಮಾಜಿ ಮೇಯರ್ ಒಬ್ಬಾಕೆಯ ಮೇಲೆ ಸಾಲ ಪಡೆದು ಪಂಗನಾಮ ಹಾಕಿದ ಪೊಲೀಸ್ ಕೇಸುಗಳಿವೆ. ಮೇಯರ್ ಆಗಿ ಆ ಮೂಲಕ ಎಂಎಲ್ಎ ಟಿಕೆಟ್ ಪಡೆದ ಮಾಜಿ ಮೇಯರ್ ಒಬ್ಬರು ಐಎಂಎ ಹಗರಣದ ನಂತರ ನಾಪತ್ತೆಯಾಗಿಬಿಟ್ಟಿದ್ದಾರೆ ಇಂತಹವರೆಲ್ಲರೂ ಮೇಯರ್ ಹುದ್ದೆಗೆ ಅಪಖ್ಯಾತಿ ತಂದೊಡ್ಡಿದ್ದಾರೆ. ಇಂಥವನ್ನು ಕಿತ್ತೊಗೆದ ಉತ್ತಮರನ್ನು ಜನರು ಆರಿಸಬೇಕೆಂದು ಕರೆ ಕೊಟ್ಟರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ನಟಿ, ಗಾಯಕಿ ಶರಣ್ಯ, ''ಹೆಣ್ಣನ್ನು ಭಾರತಾಂಬೆ, ಭುವನೇಶ್ವರಿ ಎಂದೆಲ್ಲಾ ಹೊಗಳಿ ಆಕೆಯ ಮೇಲೆ ಅತ್ಯಾಚಾರ ಮಾಡಿ ಸುಟ್ಟಾಕುವಂತಹ, ಅತ್ಯಾಚಾರಿಗಳ ಪರವಾಗಿ rally ಮಾಡುವಂತಹ ಹೀನ ಮನಸ್ಥಿತಿ ಸಮಾಜದೊಳಗೆ ಸೃಷ್ಟಿಯಾಗಿದೆ. ಸಿನಿಮಾಗಳಲ್ಲೂ ಹೆಣ್ಣನ್ನು ಎರಡನೇ ದರ್ಜೆಯ ಪ್ರಜೆಯಾಗಿ, ಗಂಡಿನ ಗುಲಾಮಳಂತೆ ಚಿತ್ರೀಕರಿಸಿ ಜನರ ಮುಂದಿಡುವ ಕಲೆ ಆರಂಭದಿಂದಲೂ ರೂಢಿಯಾಗಿದೆ. ಹಿಂಸೆ ಅನುಭವಿಸಿ ಕ್ಷಮಯಾಧರಿತ್ರಿ ಎನ್ನುವ ಪಟ್ಟ ಪಡೆಯುವ ಅಗತ್ಯತೆ ಹೆಣ್ಣಿಗೆ ಬೇಕಾಗಿಲ್ಲ. ಮುಂದಿನ ಪೀಳಿಗೆಯೂ ಇಂಥಹ ಕ್ರೌರ್ಯಕ್ಕೆ ಒಳಗಾಗದಂತಹ ವಾತವರಹಣ ಸೃಷ್ಠಿಸಬೇಕಷ್ಟೇ'' ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ರಾಮಚಂದ್ರ ಹಡಪದ್, ಎಎಪಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, ಪಕ್ಷದ ರಾಜ್ಯ ಕಾರ್ಯದರ್ಶಿ ಸಂಚಿತ್ ಸಹಾನೀ, ಪಕ್ಷದ ವಿಜಯ ನಗರ ಕ್ಷೇತ್ರದ ಆಧ್ಯಕ್ಷರಾದ ಚೆನ್ನಪ್ಪಗೌಡ, ಪಕ್ಷದ ಮುಖಂಡರಾದ ಜಗದೀಶ್ ಚಂದ್ರ, ಸಂತೋಷ್, ರೇಣುಕ ವಿಶ್ವನಾಥನ್ ಮತ್ತಿತರರು ಭಾಗವಹಿಸಿದ್ದರು.