ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಎಚ್ಚರಿಕೆ ನೀಡಿದ ಬಿಬಿಎಂಪಿ ಮೇಯರ್
ಬೆಂಗಳೂರು, ಫೆಬ್ರವರಿ 27: ಶುಕ್ರವಾರ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಅಧ್ಯಕ್ಷತೆಯಲ್ಲಿ ಯಲಹಂಕ ವಲಯ ವ್ಯಾಪ್ತಿಯ ಕುರಿತು ವಿವಿಧ ಅಭಿವೃದ್ಧಿ ಕಾರ್ಯಗಳ ಸಭೆ ನಡೆಯಿತು.
ಯಲಹಂಕ ವಲಯಕ್ಕೆ ಸಂಬಂಧಿಸಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಪ್ರತಿ ವಾರವೂ ಕಡ್ಡಾಯವಾಗಿ ಸಭೆ ನಡೆಸಿ ನಡಾವಳಿ ಮಾಡಬೇಕು ಎಂದು ಮಹಾಪೌರರು ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು. ಜೊತೆಗೆ ಸಭೆಗೆ ಹಾಜರಾಗದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು.
ಪುಟ್ಪಾತ್ ಒತ್ತುವರಿದಾರರಿಗೆ ಎಚ್ಚರಿಕೆ ಕೊಟ್ಟ ಬಿಬಿಎಂಪಿ ಮೇಯರ್
ಪಿ.ಒ.ಡಬ್ಲೂ ಕಾಮಗಾರಿಗಳನ್ನು ಕೂಡಲೆ ಕೈಗೆತ್ತಿಕೊಂಡು ಕಾಮಗಾರಿಗಳನ್ನು ಪ್ರಾರಂಭಿಸುವಂತೆ ಸೂಚನೆ ನೀಡಲಾಯಿತು. ಕೊಡಿಗೆಹಳ್ಳಿ ಕೆಳಸೇತುವೆಯನ್ನು ತೀರಾ ಕಳಪೆ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ರಿಟೈನಿಂಗ್ ವಾಲ್ ಸರಿಯಾಗಿ ನಿರ್ಮಿಸಿಲ್ಲ, ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ ಸಂಪರ್ಕ ಕಲ್ಪಿಸಿಲ್ಲ. ಈ ಪೈಕಿ ಕೆಳಸೇತುವೆ ನಿರ್ಮಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಅಧಿಕಾರಿಗೆ ಸೂಚನೆ ನೀಡಲಾಯಿತು.
ಪತ್ರ ಬರೆಯಲು ಅಧಿಕಾರಿಗೆ ಸೂಚನೆ
ವಲಯದಲ್ಲಿ ಒಟ್ಟು 90 ಉದ್ಯಾನಗಳು ಬರಲಿದ್ದು, 12 ಕೆರೆಗಳ ಬಳಿ ಉದ್ಯಾನಗಳನ್ನು ಅಭಿವೃದ್ಧಿಪಡಸಿಲಾಗಿದೆ. ಒಟ್ಟು 27 ಕೆರೆಗಳಿದ್ದು, ಒಟ್ಟಾರೆ 75 ಎಕರೆ ಒತ್ತುವರಿಯಾಗಿರುವ ಅಂದಾಜಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಅದಕ್ಕೆ ಮಹಾಪೌರರು ಪ್ರತಿಕ್ರಿಯಿಸಿ, ಕೆರೆ ಒತ್ತುವರಿ ಜಾಗವನ್ನು ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲು ಕೂಡಲೆ ಪಾಲಿಕೆ ಆಯುಕ್ತರಿಗೆ ಪತ್ರ ಬರೆಯಲು ಅಧಿಕಾರಿಗೆ ಸೂಚನೆ ನೀಡಿದರು.
4.93 ಕಿ.ಮೀ ವೈಟ್ ಟಾಪಿಂಗ್ ಕಾಮಗಾರಿ
ಪಾಲಿಕೆ ಯೋಜನಾ ವಿಭಾಗದಡಿ 4.93 ಕಿ.ಮೀ ವೈಟ್ ಟಾಪಿಂಗ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಎರಡು ಗ್ರೇಡ್ ಸಪರೇಟರ್ ಗಳಾದ ರಾಷ್ಟ್ರೋತ್ಥಾನ, ಥಣಿಸಂದ್ರ ಮೇಲ್ಸೇತುವೆ ಹಗೂ ಯಲಹಂಕದ ಉನ್ನಿಕೃಷ್ಣನ್ ರಸ್ತೆಯ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು. ಅದಕ್ಕೆ ಮಹಾಪೌರರು ಪ್ರತಿಕ್ರಿಯಿಸಿ, ಕಾಮಗಾರಿ ನಡೆಸುವ ವೇಳೆ ಬ್ಯಾರಿಕೇಡ್ ಹಾಕಿರುವುದಿಲ್ಲ, ಮಾರ್ಗ ಬದಾಲವಣೆ ಸೂಚನಾಫಲಕ ಹಾಕಿರುವುದಿಲ್ಲ, ರಾತ್ರಿ ವೇಳೆ ವಿದ್ಯುತ್ ದೀಪ ಹಾಕಿರುವುದಿಲ್ಲ, ಕಾಮಗಾರಿ ವೇಳೆ ತೆಗೆದಿರುವ ಮಣ್ಣು ತೆರವು ಮಾಡಿರುವುದಿಲ್ಲ. ಇದರಿಂದ ವಾಹನ ಸವಾರರಿಗೆ ಹೆಚ್ಚು ಸಮಸ್ಯೆ ಆಗುತ್ತದೆ. ಈ ಸಂಬಂಧ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಶರತ್ತುಗಳನ್ನು ವಿಧಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಕಾಮಗಾರಿ ನಡೆಸಲು ಸೂಚನೆ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿದರು.
130 ಪೇಯಿಂಗ್ ಗೆಸ್ಟ್
ಆಡಳಿತ ಪಕ್ಷದ ನಾಯಕರಾದ ಮುನಿಂದ್ರ ಕುಮಾರ್ ಮಾತನಾಡಿ, ಯಲಹಂಕ ವಲಯ ವ್ಯಾಪ್ತಿಯಲ್ಲಿ ಸುಮಾರು 130 ಪೇಯಿಂಗ್ ಗೆಸ್ಟ್(ಪಿ.ಜಿ)ಗಳನ್ನು ನಡೆಸಲಾಗುತ್ತಿದೆ. ವಸತಿ ಪ್ರದೇಶ ಹಾಗೂ 20 ಅಡಿ ರಸ್ತೆಯಲ್ಲಿ ಹಲವು ಪಿ.ಜಿಗಳನ್ನು ನಡೆಸಲಾಗುತ್ತಿದೆ. 20 ಅಡಿಯಲ್ಲಿ ನಿರ್ಮಾಣಮಾಡಿರುವ ಪಿಜಿಗಳಿಗೆ ಪರವಾನಗಿ ನೀಡಲಾಗಿದ್ದು, ಕೂಡಲೆ ಪರವಾನಗಿ ರದ್ದುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಜಕ್ಕೂರು ರೈಲ್ವೆ ಮೇಲ್ಸೇತುವೆ ತಪಾಸಣೆ
ಸಭೆ ನಡೆಸಿದ ಬಳಿಕ ಜಕ್ಕೂರು ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ತಪಾಸಣೆ ನಡೆಸಲಾಯಿತು. ಈ ವೇಳೆ ಸ್ಥಳೀಯ ನಿವಾಸಿಗಳು ಕಳೆದ 8 ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಕಾಮಗಾರಿ ಪೂರ್ಣಗೊಂಡಿರುವುದಿಲ್ಲ. ಇದರಿಂದ ಯಲಹಂಕಕ್ಕೆ ಹೋಗಲು ತುಂಬಾ ತೊಂದರೆಯಾಗುತ್ತಿದ್ದು, ತಾತ್ಕಾಲಿಕವಾಗಿ ಪರ್ಯಾಯ ಮಾರ್ಗ ಕಲ್ಪಿಸುವಂತೆ ತಿಳಿಸಿದರು. ಅದಕ್ಕೆ ಮಹಾಪೌರರು ಪ್ರತಿಕ್ರಿಯಿಸಿ, ಶೀಘ್ರ ರೈಲ್ವೆ ಇಲಾಖೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇತರೆ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ಹಾಗೂ ಸಭೆ ನಡೆಸಿ ಇರುವ ಸಮಸ್ಯೆ ಇತ್ಯರ್ಥಪಡಿಸಲಾಗುವುದು. ಜಕ್ಕೂರಿನಿಂದ ಯಲಹಂಕಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗವನ್ನು ತೀರ್ವ ಸ್ವಚ್ಚತಾ ಕಾರ್ಯದಡಿ ಸ್ವಚ್ಛತೆ ಮಾಡಿ ರಸ್ತೆಗೆ ಡಾಂಬರೀಕರಣ ಹಾಕಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.