ಪುಟ್ಪಾತ್ ಒತ್ತುವರಿದಾರರಿಗೆ ಎಚ್ಚರಿಕೆ ಕೊಟ್ಟ ಬಿಬಿಎಂಪಿ ಮೇಯರ್
ಬೆಂಗಳೂರು, ಫೆಬ್ರವರಿ 19: ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಅವರು ಬುಧವಾರ ನಗರದ ಗಾಂಧಿನಗರ ವಾರ್ಡ್ ಹಾಗೂ ಚಿಕ್ಕಪೇಟೆ ವಾರ್ಡ್ ವ್ಯಾಪ್ತಿಯಲ್ಲಿ ಕಾಲ್ನಡಿಗೆಯ ಮೂಲಕ ಪಾದಚಾರಿ ಮಾರ್ಗಗಳ ತಪಾಸಣೆ ನಡೆಸಿದರು.
ಮೊದಲಿಗೆ ಬಿ.ವಿ.ಕೆ ಅಯ್ಯಂಗರ್ ರಸ್ತೆ ಬದಿಯ ಪಾದಚಾರಿ ಮಾರ್ಗದಲ್ಲಿ ಅನಧಿಕೃತವಾಗಿ ಮಳಿಗೆಗಳನ್ನಿಟ್ಟುಕೊಳ್ಳುವುದರಿಂದ ಪಾದಚಾರಿಗಳ ಓಡಾಟಕ್ಕೆ ಸಮಸ್ಯೆ ಆಗುತ್ತಿದ್ದು, ಅದನ್ನು ತೆರವುಗೊಳಿಸುವಂತೆ ಸ್ಥಳಿಯ ನಿವಾಸಿಯೊಬ್ಬರು ಮನವಿ ಮಾಡಿದರು. ಅದಕ್ಕೆ ಮಹಾಪೌರರು ಪ್ರತಿಕ್ರಿಯಿಸಿ, ಕೂಡಲೆ ಅನಧಿಕೃತ ಮಳಿಗೆಗಳನ್ನು ತೆರವುಗಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವುಮಾಡಿಕೊಡುವಂತೆ ಜಂಟಿ ಆಯುಕ್ತರಿಗೆ ಸೂಚನೆ ನೀಡಿದರು.
ಬಿ.ವಿ.ಕೆ ಅಯ್ಯಂಗರ್ ರಸ್ತೆಯ ಅಭಿನಯ್ ಚಿತ್ರಮಂದಿರ ಬಳಿಯಿಂದ ಕಾಲ್ನಡಿಗೆಯ ಮೂಲಕ ತಪಾಸಣೆ ಪ್ರಾರಂಭಿಸಿ, ಅವೆನ್ಯೂ ರಸ್ತೆ, ಮಾಮೂಲ್ ಪೇಟೆ, ಸುಲ್ತಾನ್ ಪೇಟೆ, ತರಗುಪೇಟೆ, ಕಾಟನ್ ಪೇಟೆಯಲ್ಲಿ ತಪಾಸಣೆ ನಡೆಸಲಾಯಿತು. ಈ ವೇಳೆ ಸ್ಥಳೀಯ ನಿವಾಸಿಗಳು ಕಸದ ಸಮಸ್ಯೆ, ರಸ್ತೆ ಹಾಳಾಗಿರುವುದು, ಒಳಚರಂಡಿ ನೀರು ರಸ್ತೆ ಮೇಲೆ ನಿಂತಿರುವುದು, ಪಾದಚಾರಿ ಮಾರ್ಗ, ಬೀದಿದೀಪ ಅಳವಡಿಕೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಅಹವಾಲುಗಳನ್ನು ತಿಳಿಸಿದರು.
ಈ ವೇಳೆ ಸಂಸದ ಪಿ.ಸಿ.ಮೋಹನ್, ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್, ಸ್ಥಳೀಯ ಪಾಲಿಕೆ ಸದಸ್ಯರಾದ ಲೀಲಾ ಶಿವಕುಮಾರ್, ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್, ವಲಯ ವಿಶೇಷ ಆಯುಕ್ತ ಬಸವರಾಜು, ಯೊಜನಾ ವಿಭಾಗದ ಮುಖ್ಯ ಅಭಿಯಂತರ ರಮೇಶ್, ವಲಯ ಜಂಟಿ ಆಯುಕ್ತ ಚಿದಾನಂದ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ, ಅಧೀಕ್ಷಕ ಅಭಿಯಂತರ ಲೋಕೇಶ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.