ಬಿಬಿಎಂಪಿಯಲ್ಲಿ ಬಿಜೆಪಿ ಅ'ಶೋಕ' ಗೀತೆ: ಯಾರು ಏನು ಹೇಳಿದ್ರು?
ಬೆಂಗಳೂರು, ಸೆ 11: ಬಿಬಿಎಂಪಿ ಮಹಾಪೌರರ ಚುನಾವಣೆ ಮತ್ತು ಕೆಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ಬೃಹನ್ನಾಟಕಕ್ಕೆ ಅಂತೂ ಇಂತೂ ತೆರೆಬಿದ್ದಿದೆ.
ಬಿಜೆಪಿ ನೂರು ಸ್ಥಾನ ಗೆದ್ದರೂ ಉಸ್ತುವಾರಿ ವಹಿಸಿಕೊಂಡಿದ್ದ ಅರ್ ಅಶೋಕ್ ಅವರಿಗೆ ಶೋಕ ಗೀತೆ' ಬರೆಯುವಲ್ಲಿನ ರಾಜಕೀಯ ರಣತಂತ್ರ ಯಶಸ್ವಿಯಾಗಿದೆ.
ಮೇಯರ್ ಚುನಾವಣೆ ಫಲಿತಾಂಶ ಬಹುತೇಕ ನಿರೀಕ್ಷಿತವಾಗಿದ್ದರೂ, ಕೊನೇ ಕ್ಷಣದ ತನಕ ಕಾದು ನೋಡಿ ಎಂದು ಅಶೋಕ್ ರಾಜಕೀಯ ಬಾಂಬ್ ಸಿಡಿಸಿದ್ದರು. ಆದರೆ ಈ ಬಾಂಬ್ ಯಾವ ಕೋನದಲ್ಲೂ ಸಿಡಿಯದಂತೆ ನಿಷ್ಕ್ರಿಯೆಗೊಳಿಸುವಲ್ಲಿನ ರಣತಂತ್ರ ಮೇಲುಗೈ ಸಾಧಿಸಿದೆ. (ಬೆಂಗಳೂರಿನ ಮೇಯರಾಗಿ ಮಂಜುನಾಥ ರೆಡ್ಡಿ)
131 ಮತಗಳನ್ನು ಪಡೆದು ಮಡಿವಾಳ ವಾರ್ಡಿನ ಹಿರಿಯ ಕಾಂಗ್ರೆಸ್ ಮುಖಂಡ ಮಂಜುನಾಥ ರೆಡ್ಡಿ ಬೆಂಗಳೂರು ಮಹಾನಗರದ ಮಹಾಪೌರರಾಗಿ ಮುಂದಿನ ಒಂದು ವರ್ಷದ ಅವಧಿಗೆ ಆಯ್ಕೆಯಾಗಿದ್ದಾರೆ.
ಚುನಾವಣೆಗೆ ಮುನ್ನ, ಫಲಿತಾಂಶದ ನಂತರ ಸೋತವರು ಗೆದ್ದವರ ಮೇಲೆ, ಗೆದ್ದವರು ಸೋತವರ ಮೇಲೆ ಆರೋಪ, ಪ್ರತ್ಯಾರೋಪ ಮಾಡುವುದು ಸಹಜವಾದ ರಾಜಕೀಯ ಪ್ರಕ್ರಿಯೆ.
ಅದರಂತೇ, ಭಾರೀ ಕುತೂಹಲ ಹುಟ್ಟಿಸಿದ್ದ ಬಿಬಿಎಂಪಿ ಮೇಯರ್ ಚುನಾವಣೆಯ ನಂತರ ಯಾರು ಏನು ಹೇಳಿದರು ಎನ್ನುವುದನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.
ಸಿಎಂ ಸಿದ್ದರಾಮಯ್ಯ
ಗೆದ್ದ ನೂತನ ಮೇಯರ್ ಅವರಿಗೆ ನನ್ನ ಅಭಿನಂದನೆ, ಹಾಗೂ ಮೇಯರ್ ಪರವಾಗಿ ಮತ ಚಲಾಯಿಸಿದ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಮೈತ್ರಿ ಐದು ವರ್ಷದ ವರೆಗೆ ಮುಂದುವರಿಯುತ್ತದೆ. ಮೈತ್ರಿ ಎಂದರೆ ಒಂದು ವರ್ಷಕ್ಕೆ, ಅರ್ಧ ವರ್ಷಕ್ಕೆಂದು ಮಾಡೋಕ್ಕೆ ಬರುವುದಿಲ್ಲ. ಬೆಂಗಳೂರಿನ ಹೆಸರನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನಗರದ ಅಭಿವೃದ್ದಿಗೆ ಸರಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಹರ್ಷ ಚಿತ್ತರಾಗಿದ್ದ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಿ ಎಸ್ ಯಡಿಯೂರಪ್ಪ
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಬಿಬಿಎಂಪಿಯಲ್ಲಿ ಅಧಿಕಾರ ನಡೆಸುದೆ ಎನ್ನುವುದರ ಅರಿವಿತ್ತು. ಇನ್ನಾದರೂ ಬೆಂಗಳೂರಿನ ಅಭಿವೃದ್ದಿ ಬಗ್ಗೆ ಗಮನಕೊಟ್ಟು ಕೆಲಸ ಮಾಡಲಿ. ಆದರೆ ಈ ಮೈತ್ರಿ ಎಷ್ಟು ದಿನ ಎನ್ನುವುದು ದೇವರೇ ಬಲ್ಲ ಎಂದು ಯಡಿಯೂರಪ್ಪ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ವೆಂಕಯ್ಯ ನಾಯ್ಡು
ಜನಾದೇಶ ನಮ್ಮ ಪರವಾಗಿದ್ದರೂ, ಆಡಳಿತ ಯಂತ್ರವನ್ನು ದುರಪಯೋಗ ಪಡಿಸಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಜನರೇ ಕಾಂಗ್ರೆಸ್ಸಿಗೆ ಪಾಠ ಕಲಿಸಲಿದ್ದಾರೆ. ಬಿಬಿಎಂಪಿ ಮೇಯರ್ ಆಯ್ಕೆ ಕೋರ್ಟಿನಲ್ಲಿದೆ, ಏನಾಗುತ್ತೋ ನೋಡೋಣ ಎಂದು ಮತದಾನದಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಅನಂತ್ ಕುಮಾರ್
ಜನಾದೇಶವನ್ನು ಧಿಕ್ಕರಿಸಿ ಇಂದು ಕಾಂಗ್ರೆಸ್ ಅಧಿಕಾರವನ್ನು ಹಿಡಿದಿದೆ. ಬೆಂಗಳೂರಿನ ಜನತೆ ಇವರಿಗೆ ಸರಿಯಾದ ಪಾಠ ಕಲಿಸಲಿದ್ದಾರೆಂದು ಕೇಂದ್ರ ಸಚಿವ ಅನಂತ್ ಕುಮಾರ್, ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದಾರೆ.
ಸದಾನಂದ ಗೌಡ
ನಾವು ನೂರು ಸ್ಥಾನವನ್ನು ಗೆದ್ದಿದ್ದೆವು. ಅಪವಿತ್ರ ಮೈತ್ರಿ ಮಾಡಿಕೊಂಡು ಇಂದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಬೆಂಗಳೂರಿನ ಸರ್ವಾಂಗೀಣ ಅಭಿವೃದ್ದಿಗೆ ನಮ್ಮ ಸಹಕಾರ ಇರುತ್ತದೆ ಎಂದು ಮತ ಚಲಾಯಿಸಿ ಬಂದ ಕೇಂದ್ರ ಸಚಿವ ಸದಾನಂದ ಗೌಡ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಆರ್ ಅಶೋಕ್
ಈ ಚುನಾವಣೆಯ ರಾಜಕೀಯ ಚಟುವಟಿಕೆಗಳು ದೊಂಬರಾಟದಂತೆ ನಡೆಯುತ್ತಿದೆ. ಕೋರ್ಟಿನ ಕಣ್ಗಾವಲಿನಲ್ಲಿ ನಡೆಯುತ್ತಿರುವ ಚುನಾವಣೆಯಿದು. ನಾವು ನ್ಯಾಯಕ್ಕಾಗಿ ಸುಪ್ರೀಂಕೋರ್ಟಿಗೆ ಹೋಗಲಿದ್ದೇವೆಂದು ಬಿಬಿಎಂಪಿ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದ ಆರ್ ಅಶೋಕ್ ಹೇಳಿದ್ದಾರೆ.