ಬೆಂಗಳೂರಲ್ಲಿ ಮತ್ತೆ ಆಪರೇಷನ್ ಕಮಲ; ನಾಲ್ವರ ಫೋನ್ ಆಫ್!
ಬೆಂಗಳೂರು, ಸೆಪ್ಟೆಂಬರ್ 20 : ಕರ್ನಾಟಕದಲ್ಲಿ ಮತ್ತೊಂದು ಸುತ್ತಿನ ಆಪರೇಷನ್ ಕಮಲ ಆರಂಭವಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ 7 ದಿನಗಳು ಬಾಕಿ ಇರುವಾಗಲೇ ನಾಲ್ವರು ನಾಯಕರ ಫೋನ್ ಸ್ವಿಚ್ ಆಫ್ ಆಗಿದೆ.
ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಅಧಿಕಾರದಲ್ಲಿದೆ. ಮೇಯರ್ ಗಂಗಾಬಿಕೆ ಮತ್ತು ಉಪ ಮೇಯರ್ ಭದ್ರೇಗೌಡ ಅವಧಿ ಸೆಪ್ಟೆಂಬರ್ 28ರಂದು ಅಂತ್ಯಗೊಳ್ಳಲಿದೆ. ಸೆಪ್ಟೆಂಬರ್ 27ರಂದು ನೂತನ ಮೇಯರ್ ಆಯ್ಕೆ ಮಾಡಲು ಚುನಾವಣೆ ನಿಗದಿಯಾಗಿದೆ.
ಬಿಬಿಎಂಪಿ ವಿಭಜನೆ: ನಾಲ್ವರು ವಿಶೇಷ ಆಯುಕ್ತರ ನೇಮಕ
ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಆದ್ದರಿಂದ, ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲು ಪಕ್ಷ ತಂತ್ರ ರೂಪಿಸಿದೆ. ಇದಕ್ಕಾಗಿ ಆಪರೇಷನ್ ಕಮಲಕ್ಕೆ ಕೈ ಹಾಕಿದ್ದು, ನಾಲ್ವರು ಪಕ್ಷೇತರ ಸದಸ್ಯರನ್ನು ರೆಸಾರ್ಟ್ಗೆ ಕರೆದುಕೊಂಡು ಹೋಗಲಾಗಿದೆ.
ಬಿಬಿಎಂಪಿಯಲ್ಲೂ ಆಪರೇಷನ್ ಕಮಲ, ಮೇಯರ್ ಹುದ್ದೆ ಬಿಜೆಪಿಗೆ?
ಬಿಬಿಎಂಪಿಯಲ್ಲಿ ಮೈತ್ರಿಕೂಟ ಅಥವ ಬಿಜೆಪಿ ಅಧಿಕಾರಕ್ಕೆ ಬರಲು ಪಕ್ಷೇತರ ಸದಸ್ಯರ ಬೆಂಬಲ ಅನಿವಾರ್ಯವಾಗಿದೆ. ರಾಜ್ಯದಲ್ಲಿ ರಾಜಕೀಯ ಪರಿಸ್ಥಿತಿ ಬದಲಾಗಿದೆ, ಈ ಬಾರಿಯ ಮೇಯರ್ ಚುನಾವಣೆಯಲ್ಲಿ ಪಕ್ಷೇತರರು ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇದೆ.
ಬಿಬಿಎಂಪಿ ಮೇಯರ್ ಚುನಾವಣೆ ಯಾವಾಗ? ಇಲ್ಲಿದೆ ಮಾಹಿತಿ
ಬಿಜೆಪಿ ಜೊತೆ ಪಕ್ಷೇತರ ಶಾಸಕರು
ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಬಿಬಿಎಂಪಿಯ ನಾಲ್ವರು ಪಕ್ಷೇತರ ಸದಸ್ಯರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಲಕ್ಷ್ಮೀ ನಾರಾಯಣ್, ರಮೇಶ್, ಗಾಯತ್ರಿ ಮತ್ತು ಆನಂದ್ ಫೋನ್ಗಳು ಸ್ವಿಚ್ ಆಫ್ ಆಗಿದ್ದು ಆಪರೇಷನ್ ಕಮಲ ನಡೆದ ಅನುಮಾನ ಉಂಟಾಗಿದೆ.
ಮೈತ್ರಿಕೂಟಕ್ಕೆ ಆತಂಕ
ಪ್ರತಿ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷೇತರ ಸದಸ್ಯರ ಜೊತೆ ಡಿ. ಕೆ. ಸುರೇಶ್ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಮುನಿರತ್ನ ಇದ್ದು ಮೈತ್ರಿಕೂಟಕ್ಕೆ ಬೆಂಬಲ ಕೊಡುವಂತೆ ನೋಡಿಕೊಳ್ಳುತ್ತಿದ್ದರು. ಆದರೆ, ಈಗ ಡಿ. ಕೆ. ಸುರೇಶ್ ದೆಹಲಿಯಲ್ಲಿ ಅಣ್ಣನ ಜಾಮೀನು ವಿಚಾರದಲ್ಲಿ ಬ್ಯುಸಿಯಾಗಿದ್ದಾರೆ. ಮುನಿರತ್ನ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದು ಕಾಂಗ್ರೆಸ್ನಿಂದ ಉಚ್ಛಾಟನೆಗೊಂಡಿದ್ದಾರೆ. ಆದ್ದರಿಂದ, ಮೈತ್ರಿಕೂಟದ ನಾಯಕರಿಗೆ ಆತಂಕ ಎದುರಾಗಿದೆ.
ಮ್ಯಾಜಿಕ್ ನಂಬರ್ 129
ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಗೆಲುವು ಸಾಧಿಸಲು 129 ಮ್ಯಾಜಿಕ್ ನಂಬರ್ ಬೇಕಾಗಿದೆ. ಬಿಜೆಪಿ 125, ಕಾಂಗ್ರೆಸ್ 104, ಜೆಡಿಎಸ್ 21 ಸದಸ್ಯ ಬಲ ಹೊಂದಿದೆ. 7 ಪಕ್ಷೇತರ ಸದಸ್ಯರಿದ್ದು, ಇವರಲ್ಲಿ 4 ಜನರು ಗೋವಾ ರೆಸಾರ್ಟ್ ಸೇರಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ರಾಮಲಿಂಗಾ ರೆಡ್ಡಿ ನಡೆ ಏನು?
ಕಳೆದ ಬಾರಿಯ ಮೇಯರ್ ಚುನಾವಣೆಯಲ್ಲಿ ಬಿಟಿಎಂ ಕ್ಷೇತ್ರದ ರಾಮಲಿಂಗಾ ರೆಡ್ಡಿ ಅವರು ಗಂಗಾಬಿಕೆ ಅವರನ್ನು ಮೇಯರ್ ಮಾಡಲು ಬೆಂಬಲ ಕೊಟ್ಟಿದ್ದರು. ಆದರೆ, ಈ ಬಾರಿ ಅವರು ತಟಸ್ಥರಾಗಿ ಉಳಿಯುವ ಸಾಧ್ಯತೆ ಇದ್ದು, ಮೇಯರ್, ಉಪ ಮೇಯರ್ ಹುದ್ದೆ ಮೈತ್ರಿಕೂಟದ ಕೈ ತಪ್ಪುವುದು ಖಚಿತವಾಗಿದೆ.