ಬಿಬಿಎಂಪಿ ಕೊರೊನಾ ನಿಯಂತ್ರಣದಲ್ಲಲ್ಲ, ಭ್ರಷ್ಟಾಚಾರದಲ್ಲಿ ಮಾದರಿ- ಎಎಪಿ
ಬೆಂಗಳೂರು, ಮೇ 26: ಕೊರೊನಾ ಸಾಂಕ್ರಾಮಿಕ ರೋಗದ ನಿಯಂತ್ರಣ ಮಾಡುವಲ್ಲಿ, ಚಿಕಿತ್ಸೆ ನೀಡುವಲ್ಲಿ ಹಾಗೂ ಸಾವಿನ ಸಂಖ್ಯೆ ಕಡಿಮೆ ಮಾಡುವಲ್ಲಿ ಕೇಂದ್ರ ಸರಕಾರ ಬೆಂಗಳೂರನ್ನು ಮಾದರಿ ನಗರವಾಗಿ ಪರಿಗಣಿಸಿದೆ ಎಂಬ ಖುಷಿಯನ್ನು ಸರಕಾರ ಸಂಬ್ರಮಿಸುತ್ತಿದೆ. ನಿಚ್ಚಳವಾಗಿ ಈ ಪ್ರಶಂಸೆಗೆ ರೋಗ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂಧಿಗಳು, ಕೊರೊನಾ ವಾರಿಯರ್ಸ್ ಮೊದಲಾದವರು ಅರ್ಹರಾಗಿದ್ದಾರೆ. ಎಂದು ಆಮ್ ಆದ್ಮಿ ಪಕ್ಷ ಪ್ರತಿಕ್ರಿಯೆ ನೀಡಿದೆ.
Recommended Video
ಬೆಂಗಳೂರನ್ನು ಮಾದರಿ ನಗರ ಎಂದಿದ್ದು, ಇದನ್ನು ಬಿಬಿಎಂಪಿ ಅಧಿಕಾರಿಗಳು, ಬೇಜವಾಬ್ದಾರಿ ಸಚಿವರು ಸಂಬ್ರಮಿಸುತ್ತಿರುವುದು ಹಾಸ್ಯಾಸ್ಪದ. ತಮ್ಮ ಮೂರ್ಖತನದಿಂದ ಅನೇಕ ಸಮಸ್ಯೆಗಳನ್ನು ಸೃಷ್ಟಿಸಿ ಈಗ ಸಿಕ್ಕಿದ ಬಿರುದನ್ನು ತಮ್ಮ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಎಂದು ಎಎಪಿ ಹೇಳಿದೆ.
ಮೇಯರ್ ಮತ್ತು ಆಯುಕ್ತರೇ ಎಲ್ಲಿದ್ದೀರಾ? ಆಮ್ ಆದ್ಮಿ ಪಕ್ಷದ ಹತ್ತು ಪ್ರಶ್ನೆಗಳು
ಬೆಂಗಳೂರಿನಲ್ಲಿ ದಿನೇ ದಿನೇ ರೋಗ ತಗುಲಿದವರ ಸಂಖ್ಯೆ ಏರಿಕೆಯಾಗುತ್ತಿದೆ. ವೈದ್ಯಕೀಯ ಪರೀಕ್ಷೆಯ ಸಂಖ್ಯೆ ಕೂಡ ಗಣನೀಯವಾಗಿಲ್ಲ. ಕೊರೋನ ಆಸ್ಪತ್ರೆಗಳಲ್ಲಿ ಸರಿಯಾದ ಸೌಲಭ್ಯಗಳನ್ನು ಒದಗಿಸಿಲ್ಲ, ಬಿಬಿಎಂಪಿ ಆಯುಕ್ತರಂತೂ ಕೊರೋನದ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪವನ್ನು ಎದುರಿಸುತ್ತಿದ್ದಾರೆ. ಇವೆಲ್ಲದರ ಮಧ್ಯೆ ಬೆಂಗಳೂರು ದೇಶಕ್ಕೆ ಮಾದರಿ ನಗರವಾಗಿದೆ ಎಂಬ ಕೇಂದ್ರ ಸರಕಾರದ ಘೋಷಣೆ ಇವರಿಗೆ ಬಹುಪರಾಕ್ ಹಾಡಿದಂತಿದೆ. ಎಂದು ಎಎಪಿ ಬೇಸರ ಹೊರಹಾಕಿದೆ.
ಕಳಪೆ ಪಿಪಿಇ ಕಿಟ್ ಖರೀದಿ
ಈಗಾಗಲೇ ಕರ್ನಾಟಕ ಸರಕಾರದ ಮೇಲೆ ಕಳಪೆ ಪಿಪಿಇ ಕಿಟ್ ಗಳನ್ನು ಖರೀದಿ ಮಾಡಿದ ಆರೋಪವಿದೆ. ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಅಂಡ್ ವೇರ್ ಹೌಸಿಂಗ್ ಸೊಸೈಟಿ ಎಂಬ ಸರ್ಕಾರಿ ಸಂಸ್ಥೆಯು ಈ ದೋಷಪೂರಿತ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ ಕಿಟ್) ಸರಬರಾಜು ಮಾಡಿದೆ. ಮಹಾರಾಷ್ಟ್ರ ಮೂಲದ ಪ್ಲಾಸ್ಟಿಕ್ ಸರ್ಜ್ ಕಂಪನಿಯ ಮುಖಾಂತರ 22 ಕೋಟಿ ಮೌಲ್ಯದ 3 ಲಕ್ಷ ಪಿಪಿಇ ಕಿಟ್ ಗಳ ಖರೀದಿಯನ್ನು ನಡೆಸಿದೆ. ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು, ನರ್ಸ್ ಗಳು ಧರಿಸಲು ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗಿದೆ. ಆದರೆ ಈ ಕಿಟ್ಗಳು ಅತ್ಯಂತ ಕಳಪೆ ಗುಣಮಟ್ಟದ್ದಾಗಿದ್ದು ಖುದ್ದು ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿಗಳು ಈಗಾಗಲೇ ಮುಷ್ಕರವನ್ನೂ ನಡೆಸಿ, ದೂರನ್ನು ಸಹ ನೀಡಿದ್ದಾರೆ. ಅಲ್ಲದೆ ಐನೂರು ಮಂದಿ ವೈದ್ಯರು ರಾಜೀನಾಮೆ ಕೊಡಲು ಮುಂದಾಗಿದ್ದರು.
ಕೋಳಿ ಜಗಳದಿಂದ ಟೆಂಡರ್ ನಿಲ್ಲಿಸಲಾಯಿತು
ವೆಂಟಿಲೇಟರ್ ಖರೀದಿಯ ವಿಚಾರದಲ್ಲೂ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಉಪ ಮುಖ್ಯಮಂತ್ರಿಗಳ ನಡುವೆ ನಡೆದ ಕೋಳಿ ಜಗಳದಿಂದ ಟೆಂಡರ್ ಅನ್ನು ನಿಲ್ಲಿಸಲಾಯಿತು. ಲಾಕ್ ಡೌನ್ ನಲ್ಲಿ ಆಹಾರದ ಅಗತ್ಯ ಇರುವವರಿಗಾಗಿ ಇದ್ದ ಆಹಾರದ ಕಿಟ್ ಗಳನ್ನು ತಮ್ಮ ಮತದಾರರಿಗೆ ಹಂಚಿ ಪ್ರಚಾರ ಗಿಟ್ಟಿಸಿಕೊಂಡ ಕೆಟ್ಟ ರಾಜಕೀಯ ನಾಯಕರಿಂದ ತುಂಬಿರುವ ಬೆಂಗಳೂರು ಮತ್ತಷ್ಟೂ ಸಮಸ್ಯೆಗಳ ಕೂಪವಾಗಿ ಬೆಳೆಯುತ್ತಿದೆ. ತಮ್ಮ ತಮ್ಮ ಊರುಗಳಿಗೆ ಹಿಂತಿರುಗಲು ಬಯಸಿದ ಕಾರ್ಮಿಕರ ಜೊತೆಗೆ ಚೆಲ್ಲಾಟ ಆಡಿ ಅವರನ್ನು ಗೊಂದಲಕ್ಕೆ ತಳ್ಳಿ ಅವರು ಮತ್ತೆಂದೂ ಬೆಂಗಳೂರಿನ ಕಡೆಗೆ ಮುಖ ಮಾಡದಂತೆ ಮಾಡಿದ ಕೀರ್ತಿಯೂ ಸರಕಾರಕ್ಕೆ ಸಲ್ಲುತ್ತದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ: ಆಮ್ ಆದ್ಮಿ ಪಕ್ಷದ ಖಂಡನೆ
ಅನೇಕ ದೂರುಗಳು
ಕೊರೊನಾ ಶುರುವಾದಂದಿನಿಂದ ಬಿಬಿಎಂಪಿಯ ಒಳಗಿನಿಂದ ಭ್ರಷ್ಟಾಚಾರದ ಕೊಳಕು ವಾಸನೆ ಬೆಂಗಳೂರಿನಾದ್ಯಂತ ವ್ಯಾಪಿಸಿದೆ. ಕಮಿಷನರ್ ಅನಿಲ್ ಕುಮಾರ್ ಅವರು ಅನೇಕ ಆರೋಪಗಳನ್ನು ಎದುರಿಸುತ್ತಿದ್ದಾರೆ!. ಕಾರ್ಮಿಕರಿಗೆ, ನಿರ್ವಸತಿಗರಿಗೆ ನೀಡಬೇಕಾಗಿದ್ದ ಕೋಟಿ ಕೋಟಿ ರೂಪಾಯಿಯ ಸೌಲಭ್ಯಗಳು ಫಲಾನುಭವಿಗಳಿಗೆ ತಲುಪಿಲ್ಲ. ಒಂದೇ ಎರಡೇ..? ಅನೇಕ ದೂರುಗಳು ಇವರ ಮೇಲಿವೆ.
ಭ್ರಷ್ಟರಿಂದ ರೋಗ ನಿಯಂತ್ರಣ ನಡೆದಿಲ್ಲ
ಇಂತಹ ಸಂದರ್ಭದಲ್ಲಿ ಬೆಂಗಳೂರನ್ನು ದೇಶಕ್ಕೆ ಮಾದರಿ ಎಂದು ಕರೆದಿರುವುದು ಹಾಸ್ಯಾಸ್ಪದವಾಗಿದೆ. ಮುಖ್ಯಮಂತ್ರಿಗಳ ಶ್ರಮವನ್ನು ಆಮ್ ಆದ್ಮಿ ಪಕ್ಷ ಗೌರವಿಸುತ್ತದೆ. ಪಕ್ಷದ ಅನೇಕ ಮನವಿಗಳಿಗೆ ಅವರು ಸ್ಪಂದಿಸಿದ್ದಾರೆ. ಆದರೆ ಅವರ ಸುತ್ತ ಮುತ್ತ ಬಲೆ ಹೆಣೆಯುತ್ತಿರುವ ಭ್ರಷ್ಟರಿಂದ ರೋಗ ನಿಯಂತ್ರಣ ಸಮರ್ಪಕವಾಗಿ ನಡೆದಿಲ್ಲ. ನಮ್ಮ ರಾಜ್ಯದಲ್ಲಿ ಒಂದು ದಿನದಲ್ಲಿ ನಡೆಯುವ ಟೆಸ್ಟಿಂಗ್ ಸಂಖ್ಯೆ ಕೂಡಾ 15,000 ದಾಟಿಲ್ಲ. ರೋಗ ಹರಡುವಿಕೆಯ ಪ್ರಮಾಣ ಹೆಚ್ಚಾಗುತ್ತಿದೆ. ಬೆಂಗಳೂರು ಮರಣದ ಕೂಪವಾಗಿ ಬೆಳೆಯುತ್ತಿದೆ.
ಸಂಭ್ರಮಿಸುವ ಸಮಯ ಇದಲ್ಲ
ಕೇಂದ್ರ ಸರಕಾರ ಯಾವ ಮಾನದಂಡಗಳ ಮೂಲಕ ಬೆಂಗಳೂರನ್ನು ದೇಶಕ್ಕೆ ಮಾದರಿ ಎಂದು ಪರಿಗಣಿಸಿದೆಯೋ ಅದು ಗೊಂದಲಮಯವಾಗಿದೆ. ಅದು ನೀಡಿರುವ ಬಿರುದು ಹಿಡಿದುಕೊಂಡು ಸಂಭ್ರಮಿಸುವ ಸಮಯ ಇದಲ್ಲ. ರೋಗ ನಿಯಂತ್ರಣದ ಜೊತೆಗೆ ಮುಂದೆ ರಾಜ್ಯ ಎದುರಿಸಲಿರುವ ಕಂಡುಕೇಳರಿಯದ ಆರ್ಥಿಕ ಹಾಗೂ ಆರೋಗ್ಯ ಬಿಕ್ಕಟ್ಟನ್ನು ಎದುರಿಸಲು ಸರಕಾರ ಸಜ್ಜಾಗಬೇಕು. ಕೊರೋನ ನಿಯಂತ್ರಣ ಎಂದರೆ ಪ್ರಚಾರ ಗಿಟ್ಟಿಸಿಕೊಳ್ಳುವುದು ಅಲ್ಲ. ಮಾನ್ಯ ಮುಖ್ಯಮಂತ್ರಿಗಳು ತಕ್ಷಣ ಭಷ್ಟ ಬಿಬಿಎಂಪಿ ಅಧಿಕಾರಿಗಳನ್ನು, ಕಮಿಷನರ್ ಹಾಗೂ ಅವರ ಚೇಲಾಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸುತ್ತದೆ.