ರಾಜಕಾಲುವೆ ನೀರಿನ ಮಟ್ಟ ತಿಳಿಯಲು ಬಿಬಿಎಂಪಿ ಸ್ಮಾರ್ಟ್ ಐಡಿಯಾ
ಬೆಂಗಳೂರು, ಆಗಸ್ಟ್ 13 : ಮಳೆಗಾಲದಲ್ಲಿ ಬೆಂಗಳೂರು ನಗರದಲ್ಲಿನ ರಾಜಕಾಲುವೆಗಳು ತುಂಬಿ ಹರಿಯುತ್ತವೆ. ರಾಜಕಾಲುವೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿ ಅನಾಹುತವೂ ಆಗುತ್ತದೆ. ಇದನ್ನು ತಡೆಯಲಿ ಬಿಬಿಎಂಪಿ ಸ್ಮಾರ್ಟ್ ಐಡಿಯಾ ಮಾಡಿದೆ.
Recommended Video
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದ ರಾಜಕಾಲುವೆಗಳ ನೀರಿನ ಮಟ್ಟ ತಿಳಿಯಲು ವಾಟರ್ ಸೆನ್ಸಾರ್ ಅಳವಡಿಕೆ ಮಾಡಿದೆ. ಪ್ರತಿ 15 ನಿಮಿಷಕ್ಕೊಮ್ಮೆ ಈ ಸೆನ್ಸಾರ್ ಮೂಲಕ ರಾಜಕಾಲುವೆ ನೀರಿನ ಮಟ್ಟದ ಕುರಿತು ಸಂದೇಶ ಬರಲಿದೆ.
ಬಿಬಿಎಂಪಿ ವ್ಯಾಪ್ತಿಯ 28 ರಾಜಕಾಲುವೆಗಳಿಗೆ ಸೆನ್ಸಾರ್ ಅಳವಡಿಸಲಾಗಿದೆ. ಪ್ರಾಯೋಗಿಕವಾಗಿ ಬಿಬಿಎಂಪಿ ಕಾಳಪ್ಪ ಲೇಔಟ್, ಹುಳಿಮಾವು ರಾಜಕಾಲುವೆಗಳಿಗೆ ವಾಟರ್ ಲೆವೆಲ್ ಸೆನ್ಸಾರ್ ಅಳವಡಿಕೆ ಮಾಡಿದೆ.
ರಾಜಕಾಲುವೆಯಲ್ಲಿ ಎಷ್ಟು ನೀರು ಹರಿಯುತ್ತಿದೆ ಎಂದು ಸೆನ್ಸಾರ್ 15 ನಿಮಿಷಕ್ಕೆ ಒಮ್ಮೆ ಸಂದೇಶ ನೀಡುತ್ತದೆ. ಮಳೆಗಾಲದಲ್ಲಿ 5 ನಿಮಿಷಕೊಮ್ಮೆ ಎಷ್ಟು ಪ್ರಮಾಣದ ನೀರು ಹರಿಯುತ್ತದೆ? ಎಂಬ ಸಂದೇಶ ಬರಲಿದೆ.
ಪ್ರಾಯೋಗಿಕವಾಗಿ 28 ರಾಜಕಾಲುವೆಗಳಿಗೆ ಸೆನ್ಸಾರ್ ಅಳವಡಿಸಲಾಗಿದೆ. ಬೆಂಗಳೂರು ನಗರದಲ್ಲಿರುವ ಎಲ್ಲಾ ಕಾಲುವೆಗಳಿಗೆ ಇದನ್ನು ಅಳವಡಿಕೆ ಮಾಡಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.
ಒಂದು ವೇಳೆ ನಗರದಲ್ಲಿ ಮಳೆ ಹೆಚ್ಚಾಗಿ ರಾಜಕಾಲುವೆಗಳು ತುಂಬಿದರೆ ಅಕ್ಕ-ಪಕ್ಕದಲ್ಲಿರುವ ಪ್ರದೇಶಗಳ ಜನರಿಗೆ ಮುನ್ನೆಚ್ಚರಿಕೆ ರವಾನೆ ಮಾಡಲಾಗುತ್ತದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಆಗುವ ಅನಾಹುತವನ್ನು ಇದರಿಂದಾಗಿ ತಡೆಯಬಹುದಾಗಿದೆ.