ಬೆಂಗಳೂರಿಗೆ ಪ್ರಧಾನಿ ಆಗಮನ ಹಿನ್ನೆಲೆ: ಅಲ್ಲಲ್ಲಿ ತೇಪೆ ಕೆಲಸ ಮಾಡಿದ ಬಿಬಿಎಂಪಿ
ಬೆಂಗಳೂರು ಜೂ.19: ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಜನ ತತ್ತರಿಸಿದ್ದಾರೆ. ತಗ್ಗು ಪ್ರದೇಶದ ಮನೆಗಳಿಗೆ ಹಾನಿ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸದ ಸಂದರ್ಭದಲ್ಲಿ ಮಳೆಯಿಂದ ಉಂಟಾದ ಸಮಸ್ಯೆಗಳನ್ನು ಬಿಬಿಎಂಪಿ ಹೇಗೆ ಎದುರಿಸುತ್ತದೆ ಎಂಬ ಪ್ರಶ್ನೆ ಉದ್ಭವಾಗಿದೆ.
ಈ ಕುರಿತು ಪ್ರತಿಕ್ರಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಮಳೆಯಿಂದ ನಗರದಲ್ಲಿ ಒಂಚರಂಡಿ ಉಕ್ಕಿಹರಿದು ಸಮಸ್ಯೆ ಉಂಟಾಗಿದ್ದ ಕಡೆಗಳಲ್ಲಿ ಚರಂಡಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗಿದೆ. ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತಿದ್ದರಿಂದ ಜನರು ಪ್ರವಾಹ ಸ್ಥಿತಿ ಎದುರಿಸುತ್ತಿದ್ದರು. ಪರಿಹಾರಾರ್ಥವಾಗಿ ತಗ್ಗು ಪ್ರದೇಶಗಳಿಗೆ ಮಳೆ ನೀರು ಹರಿದು ಹೋಗದಂತೆ ಕ್ರಮ ವಹಿಸಲಾಗಿದೆ.
ನಗರದ ಪೈ ಮತ್ತು ಸಾಯಿ ಬಡಾವಣೆ ಹಾಗೂ ಇನ್ನಿತರ ಬಡಾವಣೆಗಳಲ್ಲಿ ಒಳಚರಂಡಿಗಳ ಹರಿವಿನಲ್ಲಿದ್ದ ಸಮಸ್ಯೆ ಸರಿಪಡಿಸಲಾಗಿದೆ. ಕೆಲವೆಡೆ ಒಳಚರಂಡಿ ನಿರ್ಮಿಸಿ ಪೈಪ್ ಸಂಪರ್ಕ ಕಲ್ಪಿಸಿ ಮಳೆ ನೀರು ನಿಲ್ಲದಂತೆ ಮಾಡಲಾಗಿದೆ ಎಂದು ಹೇಳಿದರು.
"ನಗರದಲ್ಲಿ ಮಳೆ ಅನಾಹುತಗಳು ಸಂಭವಿಸುತ್ತಲೆ ಇವೆ. ಹೀಗಿದ್ದರೂ ಬಿಬಿಎಂಪಿ ಪೂರ್ವ ಸಿದ್ಧತೆ ಮಾಡಿಕೊಳ್ಳದೇ ನಿರ್ಲಕ್ಷ್ಯ ವಹಿಸುತ್ತದೆ. ಅವಘಡಗಳು ನಡೆದ ನಂತರ ಬಿಬಿಎಂಪಿ ಕೇವಲ ಪ್ರತಿಕ್ರಿಯೆ ನೀಡಲು ಸೀಮಿತವಾಗಿದೆ," ಎಂದು ನಗರ ತಜ್ಞ ಅಶ್ವಿನ್ ಮಹೇಶ್ ಎಂಬುವವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಆದರೆ ವಾಸ್ತವ ಸ್ಥಿತಿಗತಿಗಳು ನಾವು ಅಂದುಕೊಂಡಂತೆ ಇಲ್ಲ ಎಂದರು.
"ಮಳೆಗಾಲದಲ್ಲಿ ಬೆಂಗಳೂರಿಗೆ ಸಾಕಷ್ಟು ಮಳೆ ಸುರಿಯುತ್ತದೆ. ಎಲ್ಲಿ ಎಷ್ಟು ಮಳೆ ಸುರಿಯುತ್ತದೆ.? ಇದರಿಂದ ರಾತ್ರಿ ನಗರದ ಯಾವ ಭಾಗದಲ್ಲಿ ಅಧಿಕ ಮಳೆ ಬಿದ್ದು ಸಮಸ್ಯೆ, ಹಾನಿಗಳು ಉಂಟಾಗುತ್ತವೆ ಎಂದು ಊಹಿಸಲು ಆಗುವುದಿಲ್ಲ. ಆದರೂ ಬಿಬಿಎಂಪಿ ಮಳೆಯಿಂದ ಸಮಸ್ಯೆ ಉಂಟಾದಲ್ಲಿ, ದೂರು ಹಾಗೂ ಮಾಹಿತಿ ಮೇರೆಗೆ ಸ್ಪಂದಿಸುತ್ತದೆ. ಸ್ಥಳಕ್ಕೆ ಪಾಲಿಕೆ ಸಿಬ್ಬಂದಿ ತೆರಳಿ ಸಾರ್ವಜನಿಕರಿಗೆ ನೆರವಾಗುತ್ತಾರೆ," ಎಂದು ಹೇಳಿದರು.
ತಿಂಗಳ ಮೊದಲೇ ಸಭೆ
ಪ್ರತಿ ಬಾರಿಯಂತೆ ಈ ವರ್ಷವು ಮಳೆಗಾಲ ಆರಂಭಕ್ಕೂ ಒಂದು ತಿಂಗಳು ಪೂರ್ವದಲ್ಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತಿಯಲ್ಲಿ ಕಂದಾಯ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ಇಲಾಖೆ ಸಭೆ ನಡೆಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಆರ್. ಅಶೋಕ್ ಸೇರಿದಂತೆ ಅಧಿಕಾರಿಗಳು ಮಳೆಗಾದಲ್ಲಿ ಎದುರಾಗುವ ಸಂಕಷ್ಟಗಳ ಕುರಿತು ಚರ್ಚಿಸಿದ್ದಾರೆ.
ಪ್ರವಾಹ ಭೀತಿ ಉಂಟಾದರೆ ಅಗತ್ಯ ಸಲಕರಣೆ ಸಿದ್ಧವಾಗಿಟ್ಟುಕೊಳ್ಳಲು ಸೂಚಿಸಿದ್ದಾರೆ. ಮಳೆ ಹೆಚ್ಚಾಗಿ ಜನರ ವಾಸಸ್ಥಾನಗಳಿಗೆ ತೊಂದರೆಯಾದರೆ ಅಂತವರಿಗೆ ಪುನರ್ವಸತಿ ಕಲ್ಪಿಸಲು ಸಮುದಾಯ ಭವನಗಳನ್ನು ಸಿದ್ಧಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಅದರಂತೆ ಬಿಬಿಎಂಪಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಅವರು ವಿವರಿಸಿದರು.