ಕಸ ಹಾಕುವವರನ್ನು ಕಂಡು ಹಿಡಿಯಲು ಬಿಬಿಎಂಪಿ ಹೊಸ ಪ್ಲಾನ್..!
ಬೆಂಗಳೂರು, ಜೂನ್25: ಸಿಲಿಕಾನ್ ಸಿಟಿಯಲ್ಲಿ ಕಸವನ್ನು ಎಲ್ಲೆಂದರಲ್ಲಿ ಎಸೆಯೋ ಮಂದಿ ಜನರೇನು ಕಡಿಮೆಯಿಲ್ಲ. ಕಸವನ್ನು ಕ್ಷಣದಲ್ಲೇ ಎಸೆದು ಯಾರ ಕಣ್ಣಿಗೂ ಕಾಣದಂತೆ ಎಸ್ಕೇಪ್ ಆಗಿಬಿಟ್ಟಿರುತ್ತಾರೆ. ಕಂಡ ಕಂಡಲ್ಲಿ ಕಸ ಎಸೆಯೋ ಜನರನ್ನು ಹಿಡಿದುಕೊಡಿ "ಪರಿಸರ ಪ್ರಹರಿ' ಎಂಬ ಪ್ರಮಾಣಪತ್ರವನ್ನು ಪಡೆದುಕೊಳ್ಳಿ ಎಂದು ಹೇಳಿ ಕಸವನ್ನು ಹಾಕುವವನ್ನು ಕಂಡು ಹಿಡಿಯಲು ಬಿಬಿಎಂಪಿ ಹೊಸ ಪ್ಲಾನ್ ಮಾಡಿದೆ.
ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಸ ವಿಲೇವಾರಿ ವಿಚಾರದಲ್ಲಿ ಸುದ್ದಿಯಾಗಿತ್ತು. ಕಸವನ್ನು ಎಸೆದು ಗಾರ್ಬೇಜ್ ಸಿಟಿಯನ್ನಾಗಿಸಬೇಡಿ ಎಂದು ಬಿಬಿಎಂಪಿ ಎಷ್ಟೇ ಹೇಳಿದರೂ ಜನ ಮಾತ್ರ ಕೇಳುತ್ತಿಲ್ಲ. ಇದೀಗ ಕಸ ಎಸೆಯುವ ಜನರೇ ಎಚ್ಚರಿಕೆಯನ್ನು ವಹಿಸಲೇಬೇಕಿದೆ. ಕಸ ಹಾಕುವವರನ್ನು ಕಂಡು ಹಿಡಿಯಲು ಬಿಬಿಎಂಪಿಯಿಂದ ಜಾರಿ ಮಾಡಿದೆ ಹೊಸ ಪಾಲಿಸಿ. ಕಸ ಹಾಕುವವರನ್ನು ತೋರಿಸಿಕೊಟ್ಟರೆೆ ಬಿಬಿಎಂಪಿ ಪ್ರಮಾಣ ಪತ್ರವನ್ನು ನೀಡಲಿದೆ.
ಕಂಡಕಂಡಲ್ಲಿ ಕಸ, ತ್ಯಾಜ್ಯ ಎಸೆಯುವುದರಿಂದ ನಗರದ ರಸ್ತೆ ತುಂಬಾ ಗಬ್ಬು ನಾರುತ್ತಿದೆ. ಈಗಾಗಲೇ ದಂಡ ಪ್ರಯೋಗ, ಮಾರ್ಷಲ್ ಗಳಿಂದ ಎಚ್ಚರಿಕೆ ನೀಡಿದ್ದರು ಜನ ಮಾತ್ರ ಹೆದರುತ್ತಿಲ್ಲ. ಕಸ ಹಾಕುವ ಜನರನ್ನು ಕಂಡು ಹಿಡಿಯಲು ಜನರನ್ನೇ ಬಳಕೆ ಮಾಡಿಕೊಳ್ಳಲು ಬಿಬಿಎಪಿ ಪ್ಲಾನ್ ಮಾಡಿದೆ. ಮುಳ್ಳನ್ನು ಮುಳ್ಳಿಂದಲೇ ಕಿತ್ತು ಬಿಸಾಕುವ ಅಸ್ತ್ರವಿದು ಎಂದು ಹೇಳಬಹುದಾಗಿದೆ.
GVP (Garbage Vulnerable Points) ಗುರುತು
ಕಸವನ್ನು ಎಸೆಯುವ ಜನರು ಆರೋಗ್ಯದ ಬಗ್ಗೆ ಕಾಳಜಿಯನ್ನೇ ಮಾಡುವುದಿಲ್ಲ. ಮನೆಯಲ್ಲಿರೋ ಕಸವನ್ನು ರಸ್ತೆಯಸಲ್ಲೋ.. ದಾರಿಯಲ್ಲಿ ಹೋಗುವಾಗ ಖಾಲಿ ನಿವೇಶನದಲ್ಲೋ, ವಿದ್ಯುತ್ ಕಂಬದ ಬಳಿಯಲ್ಲೋ ಎಸೆದು ಹೋಗಿಬಿಡುತ್ತಾರೆ. ಇದರಿಂದಾಗಿ ಬಿಬಿಎಂಪಿ 1500ಕ್ಕೂ ಹೆಚ್ಚು ರಸ್ತೆ ಬದಿಯ ಗಾರ್ಬೇಜ್ ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿದೆ. ಇದನ್ನು GVP (Garbage Vulnerable Points) ಎಂದು ಬಿಬಿಎಂಪಿ ಗುರುತಿಸಿದೆ.
70 ಕಡೆ ಕಸ, ತ್ಯಾಜ್ಯದಿಂದ ಗಬ್ಬು
ಈ ಪೈಕಿ 118 ಜಾಗಗಳು ಗಾರ್ಬೇಜ್ ಬ್ಲಾಕ್ ಸ್ಪಾಟ್ ಗಳು ಎಂದು ಗುರುತು ಮಾಡಲಾಗಿದೆ. ಈ 118 ಬ್ಲಾಕ್ ಸ್ಪಾಟ್ಗಳಲ್ಲಿ 48 ಜಾಗಗಳು ವಾರಕ್ಕೆ ಎರಡು ಬಾರಿ ಬ್ಲಾಕ್ ಸ್ಪಾಟ್ಗಳಾಗುತ್ತಿವೆ. ಉಳಿದಂತೆ 70 ಕಡೆ ಕಸ, ತ್ಯಾಜ್ಯದಿಂದ ಗಬ್ಬೆದ್ದು ನಾರುತ್ತಿರುವ ಸ್ಪಾಟ್ ಎಂದು ಗುರುತು ಮಾಡಲಾಗಿದೆ. 1,400ಕ್ಕೂ ಅಧಿಕ ಜಾಗಗಳಲ್ಲಿ ಮನೆ, ಇತರೆ ತ್ಯಾಜ್ಯ ತಂದು ಎಸೆದು ಮಾಲಿನ್ಯ ಮಾಡುತ್ತಿದ್ದಾರೆ ಎಂದು ಬಿಬಿಎಂಪಿ ತಿಳಿಸಿದೆ.
ಕಸ ಹಾಕುವ ಜನರ ದೃಶ್ಯಕೊಡಿ ಸರ್ಟಿಫಿಕೇಟು ಪಡೆಯಿರಿ
ಜನರ ಬೇಕಾಬಿಟ್ಟಿ ವರ್ತನೆಗೆ ಕಡಿವಾಣ ಹಾಕಲು ಬಿಬಿಎಂಪಿ ಹೊಸ ಪ್ಲ್ಯಾನ್ ಮಾಡಿಕೊಂಡಿದೆ. ಬ್ಲಾಕ್ ಸ್ಪಾಟ್ಗಳ ಸುತ್ತಮುತ್ತಲಿರುವ ಮನೆಗಳಲ್ಲಿ ಸಿಸಿಟಿವಿ ಇದ್ದರೆ ಬಿಬಿಎಂಪಿ ಕೊಟ್ಟರೆ ಪ್ರಮಾಣಪತ್ರವನ್ನು ನೀಡಲಿದೆ. ಸ್ವಚ್ಛ ಬೆಂಗಳೂರಿಗೆ ಸಹಕಾರ ಕೊಟ್ಟ ಸರ್ಟಿಫಿಕೇಟ್ ಬಿಬಿಎಂಪಿ ಕೊಡಲಿದೆ. ರಾತ್ರೋರಾತ್ರಿ ಕಸ ತಂದು ಬೇಕಾಬಿಟ್ಟಿ ಸುರಿದು ಹೋಗುವ ಜನರ ದೃಶ್ಯ ಇರುವ ಸಿಸಿಟಿಟಿವಿ ಸಮೇತ ಕೊಡುವಂತೆ ಹೇಳಿರುವ ಪಾಲಿಕೆ ಸಿಸಿಟಿವಿ ಅಥವಾ ದೃಶ್ಯ ಕೊಡಿ ಬಿಬಿಎಂಪಿಯಿಂದ ಸರ್ಟಿಫಿಕೇಟ್ ತಗೊಳ್ಳಿ ಎನ್ನುತ್ತಿದೆ.
ಕಸಹಾಕುವರನ್ನ ಹಿಡಿಯುವುದೇ ಈ ಪ್ಲಾನ್ ಉದ್ದೇಶ
ಕಸ ಕಳ್ಳರ ಹಿಡಿದುಕೊಟ್ಟರೆ ಪರಿಸರ ಪ್ರಹರಿ ಎಂದು ಸರ್ಟಿಫಿಕೇಟ್ ಬಿಬಿಎಂಪಿ ಕೊಡಲಿದೆ. ಎಷ್ಟೇ ಕ್ಲೀನ್ ಮಾಡಿದರೂ ಮತ್ತೆ ಮತ್ತೆ ಬಡಾವಣೆಗಳ ರಸ್ತೆಗಳಲ್ಲಿ ಕಸ ತಂದು ಸುರಿಯುತ್ತಿರುವ ಜನರನ್ನು ಹಿಡಿಯುವುದೇ ಈ ಪ್ಲಾನ್ನ ಉದ್ದೇಶವಾಗಿದೆ. ಜನರ ತಪ್ಪನ್ನು ಜನರಿಂದಲೇ ಸರಿ ಮಾಡಿಸಲು ಮುಂದಾಗಿರುವ ಮಹಾನಗರ ಪಾಲಿಕೆ ಯಶಸ್ಸನ್ನು ಕಾಣಬೇಕಿದೆ.
ಕಂಡವರ ಮನೆ ಮುಂದೆ ಕಸ ಹಾಕುವುದನ್ನು ಬಿಡದ ಜನ
ಬಿಬಿಎಂಪಿ ಕಸ ವಿಲೇವಾರಿಗಾಗಿಯೇ ಪ್ರತಿಯೊಂದು ಬಜೆಟ್ಟಿನಿಲ್ಲಿಯೂ 1200 ಕೋಟಿಯನ್ನು ಮೀಸಲು ಇಟ್ಟಿರುತ್ತದೆ. ಈ ಹಣವನ್ನು ಬಳಕೆ ಮಾಡಿಕೊಂಡು ಬಿಬಿಎಂಪಿ ಕಸ ವಿಲೇವಾರಿಯನ್ನು ಮಾಡುತ್ತದೆ. ಆದರೆ ಜನರು ಎಲ್ಲೆಂದರಲ್ಲಿ ಕಸವನ್ನು ಎಸೆಯುವುದರಿಂದ ಹಸಿ ಕಸ ಒಣ ಕಸವನ್ನು ಬೇರ್ಪಡಿಸಲು ಸಾಧ್ಯವಾಗುವುದಿಲ್ಲ. ಕಸವನ್ನು ವಿಲೇವಾರಿಯನ್ನು ಮಾಡುವುದು ಸಹ ವಿಪರೀತವಾದ ಕಷ್ಟವಾಗಲಿದೆ. ಇದಕ್ಕಾಗಿ ಬಿಬಿಎಂಪಿ ತಳ್ಳುವ ಗಾಡಿಯಲ್ಲೋ , ಕಸದ ಆಟೋದಲ್ಲೋ ಕಸವನ್ನು ಹಾಕಿ ಎಂದು ಹೇಳಿದರು ಜನ ಮಾತ್ರ ಕಸವನ್ನು ಕಂಡವರ ಮನೆಮುಂದೆ ಎಸೆಯೋ ಬುದ್ದಿ ಮಾತ್ರ ಬಿಡುತ್ತಿಲ್ಲ.