ಬೆಂಗಳೂರು; ಚರಂಡಿ ಹೂಳು ತೆಗೆಯಲು 83 ಕೋಟಿ ರೂ. ಮೀಸಲು
ಬೆಂಗಳೂರು, ಮೇ 26: ಮಳೆ ನಂತರ ಆದ ಅವಾಂತರದಿಂದ ಎಚ್ಚೆತ್ತಿರುವ ಬಿಬಿಎಂಪಿ ಮಳೆಗಾಲಕ್ಕೂ ಮೊದಲೇ ನಗರದ ವ್ಯಾಪ್ತಿಯಲ್ಲಿರುವ ಸುಮಾರು 800 ಕಿಲೋ ಮೀಟರ್ ಚರಂಡಿಗಳ ಹೂಳು ತೆಗೆಯಲು ನಿರ್ಧರಿಸಿದ್ದು, ಇದಕ್ಕಾಗಿ 83 ಕೋಟಿ ರೂಪಾಯಿ ಮೀಸಲಿಟ್ಟಿದೆ.
ಅಕಾಲಿಕ ಮಳೆಯಿಂದಾಗಿ ನಗರದಲ್ಲಿ ಸಂಭವಿಸಿದ ಅನಾಹುತಗಳಿಗೆ, ಚರಂಡಿಯಲ್ಲಿ ಹೂಳು ತುಂಬಿರುವುದೇ ಕಾರಣವಾಗಿದೆ. ಇದರಿಂದಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪ್ರಾಥಮಿಕ, ಮಾಧ್ಯಮಿಕ ಮತ್ತು ತೃತೀಯ ಹಂತದ ಚರಂಡಿಗಳಲ್ಲಿ ಹೂಳು ತೆಗೆಯಲು ನಿರ್ಧರಿಸಲಾಗಿದೆ.
ರಾಜಕಾಲುವೆ ಒತ್ತುವರಿ ಗುರುತಿಸಲು ಭೂ ಮಾಪಕರ ಕೊರತೆ
ಚರಂಡಿಯಲ್ಲಿನ ಅಡೆ ತಡೆಗಳನ್ನು ತೆರವುಗೊಳಿಸಲು ಸುಮಾರು 83 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಆದರೆ ಇನ್ನೂ ರಾಜಕಾಲುವೆ, ಚರಂಡಿಗಳ ಮೇಲಿನ ಒತ್ತುವರಿ ತೆರವುಗೊಳಿಸಲು ವಿಳಂಬವಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಸೃಷ್ಟಿಸಲು ಮೊದಲ ಕಾರಣವಾಗಿದೆ.
ಮಳೆ ನೀರು ಪ್ರವಾಹ: ದಾವೋಸ್ನಿಂದ ವಿಡಿಯೊ ಕಾನ್ಫರೆನ್ಸ್ ನಡೆಸಿದ ಅಶ್ವತ್ಥನಾರಾಯಣ
ಮೊದಲ ಹಂತದಲ್ಲಿ 400 ಕಿ.ಮೀ. ಚರಂಡಿ ಸ್ವಚ್ಛತೆ
83 ಕೋಟಿಯಲ್ಲಿ ರಸ್ತೆ ಬದಿಯ ಚರಂಡಿಗಳ ಹೂಳು ತೆಗೆಯಲು 39.60 ಕೋಟಿ ರೂಪಾಯಿಗಳನ್ನು ಕಳೆದ ಸಾಲಿನ ಬಜೆಟ್ನಲ್ಲಿ ಬಿಬಿಎಂಪಿ ಮೀಸಲಿಟ್ಟಿದ್ದರೂ ಕ್ರಿಯಾ ಯೋಜನೆ ಸಿದ್ಧಪಡಿಸುವಲ್ಲಿ ವಿಳಂಬವಾಗಿದೆ. ಇಲ್ಲದಿದ್ದರೆ ಈ ವೇಳೆಗಾಗಲೇ ಕಾಮಗಾರಿ ಕೈಗೆತ್ತಿಕೊಳ್ಳಬಹುದಾಗಿತ್ತು. ಪ್ರತಿವಾರ್ಡ್ಗೆ ಕಾಮಗಾರಿ ಕಾರ್ಯಕ್ರಮದ ಅನುದಾನದಡಿ 20 ಲಕ್ಷ ರೂ. ನೀಡಲಾಗಿದೆ.
ಪ್ರತ್ಯೇಕ ಕ್ರಿಯಾ ಯೋಜನೆಯಲ್ಲಿ ಬಿಬಿಎಂಪಿಯು ಕೆಆರ್ ಪುರ, ಮಹದೇವಪುರ, ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಆರ್ಆರ್ನಗರ, ಯಶವಂತಪುರ, ಬ್ಯಾಟರಾಯನಪುರ, ಯಲಹಂಕ ಮತ್ತು ದಾಸರಹಳ್ಳಿಯಂತಹ ವಿಧಾನಸಭಾ ಕ್ಷೇತ್ರಗಳ ಚರಂಡಿಗಳನ್ನು ಏಕಕಾಲದಲ್ಲಿ ಸ್ವಚ್ಛಗೊಳಿಸಲು 7 ಕೋಟಿ ರೂ. ಹಣವನ್ನು ಖರ್ಚು ಮಾಡಲಿದೆ. ಮಳೆಗಾಲದ ಮೊದಲು ಸುಮಾರು 400 ಕಿಮೀ ಚರಂಡಿಗಳ ಹೂಳು ತೆಗೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ
"ಮುಖ್ಯಮಂತ್ರಿಗಳ ನಿರ್ದೇಶನದಂತೆ ಕೆಲಸ ಮಾಡುತ್ತಿದ್ದೇವೆ. ಇದುವರೆಗೆ ಹೂಳು ತೆಗೆಯದ ಮಳೆನೀರು ಹರಿಯುವ ಚರಂಡಿಗಳಲ್ಲಿ ಈ ಯೋಜನೆಯಲ್ಲಿ ಹೂಳು ತೆಗೆಯಲಾಗುತ್ತಿದೆ. ಇದಕ್ಕಾಗಿ ಅಲ್ಪಾವಧಿ ಟೆಂಡರ್ಗಳನ್ನು ಕರೆಯಲಾಗಿದೆ" ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.
ಟೆಂಡರ್ ಷರತ್ತುಗಳು ಪ್ರಕಾರ, ರಾಜಕಾಲುವೆ, ಚರಂಡಿಗಳಲ್ಲಿ ಬೆಳೆದಿರುವ ಗಿಡ, ಪೊದೆಗಳನ್ನು ತೆರವುಗೊಳಿಸುವುದು, ಮೂರು ಮೀಟರ್ ಆಳದಷ್ಟು ಹೂಳು ತೆಗೆಯುವುದು ಮತ್ತು ಮರಳಿನ ಚೀಲಗಳನ್ನು ಜೋಡಿಸುವುದನ್ನು ಒಳಗೊಂಡಿದೆ.
ಈ ಕಾಮಗಾರಿಗಳ ಜೊತೆಗೆ ಪ್ರಾಥಮಿಕವಾಗಿ ಜನ ವಸತಿ ಪ್ರದೇಶಗಳಲ್ಲಿರುವ ಸುಮಾರು 400 ಕಿ.ಮೀ ಮಳೆನೀರಿನ ಚರಂಡಿಗಳ ಹೂಳು ತೆಗೆಯಲು ಬಿಬಿಎಂಪಿ ಮುಂದಾಗಿದೆ.
ಪ್ರತಿ ವರ್ಷ ಚರಂಡಿ ನಿರ್ವಹಣೆಗೆ 36 ಕೋಟಿ ರೂ. ಖರ್ಚು
ಮಳೆನೀರು ಚರಂಡಿಗಳ ವಾರ್ಷಿಕ ನಿರ್ವಹಣೆಗಾಗಿ ಪಾಲಿಕೆ ವಾರ್ಷಿಕವಾಗಿ 36 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತದೆ. ಒಪ್ಪಂದದ ಅವಧಿ ಇತ್ತೀಚೆಗಷ್ಟೆ ಮುಕ್ತಾಯವಾಗಿದೆ. ಆದರೆ ಮುಂಗಾರು ಆರಂಭಕ್ಕೆ ಕೆಲವೇ ದಿನಗಳು ಇರುವ ಕಾರಣ ಒಪ್ಪಂದದ ಅವಧಿಯನ್ನು ಕೆಲವು ತಿಂಗಳುಗಳವರೆಗೆ ವಿಸ್ತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಳೆಗಾಲ ಆರಂಭವಾಗಲೂ ಕೆಲವೇ ದಿನಗಳು ಇರುವ ಸಂದರ್ಭದಲ್ಲಿ ಚರಂಡಿ ಸ್ವಚ್ಛ ಗೊಳಿಸುವ ಕೆಲಸಕ್ಕೆ ಬಿಬಿಎಂಪಿ ಮುಂದಾಗಿದೆ. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವಂತೆ ಪ್ರತಿ ವರ್ಷ ಮಳೆಗಾಲದಲ್ಲಿ ಅನಾಹುತಗಳು ಸಂಭವಿಸುತ್ತಿದ್ದರೂ ಸಮಸ್ಯೆ ಬಗೆಹರಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ.
ರಾಜಕಾಲುವೆ ಒತ್ತುವರಿ ತೆರವು ಯಾವಾಗ
ಪ್ರತಿ ಬಾರಿ ಮಳೆಯಾದಾಗಲೂ ಒಂದಲ್ಲಾ ಒಂದು ಸಮಸ್ಯೆಗಳೂ ಬೆಂಗಳೂರು ನಗರವನ್ನು ಕಾಡುತ್ತಲೇ ಇದೆ. ಎರಡನೇ ಅತಿ ದೊಡ್ಡ ತೆರಿಗೆ ಪಾವತಿಸುವ ನಗರವಾದ ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯ ಸರಿಯಾಗಿಲ್ಲ ಎಂದು ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ ಇತ್ತೀಚೆಗಷ್ಟೆ ಸರ್ಕಾರ, ಬಿಬಿಎಂಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ನಂತರ ಎಚ್ಚೆತ್ತ ಬಿಬಿಎಂಪಿ ಮತ್ತು ಸರ್ಕಾರ ರಸ್ತೆಗಳ ಗುಂಡಿ ಮುಚ್ಚಿತ್ತು, ಆದರೆ ರಾಜಕಾಲುವೆ ಒತ್ತುವರಿ ತೆರವು, ಚರಂಡಿಗಳ ಸ್ವಚ್ಛತೆ ಕೆಲಸ ಮಾತ್ರ ವಿಳಂಬವಾಗುತ್ತಲೇ ಇದೆ. ಇನ್ನು ಇತ್ತೀಚೆಗಷ್ಟೇ ಸುರಿದ ಮಳೆಯಿಂದಾಗಿ ರಾಜಧಾನಿಯ ಹಲವು ಪ್ರದೇಶಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ರಸ್ತೆಗಳೆಲ್ಲ ಕೆರೆಗಳಂತಾಗಿದ್ದವು, ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಸಾರ್ವಜನಿಕರು ಪರದಾಡುವಂತಾಯಿತು. ವಿರೋಧ ಪಕ್ಷಗಳು ಸೇರಿ ಹಲವರು ಪಾಲಿಕೆ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
Recommended Video