ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಆಚರಣೆಗೆ ಪಾಲಿಸಬೇಕಾದ ಮಾರ್ಗಸೂಚಿ
ಬೆಂಗಳೂರು, ಸೆ. 07: ಕೋವಿಡ್ ಸೋಂಕು ಭೀತಿ ಹಿನ್ನೆಲೆಯಲ್ಲಿ ಈ ಬಾರಿ ಗಣೇಶ ಚತುರ್ಥಿ ಹಬ್ಬಕ್ಕೆ ವಿನಾಯಕನನ್ನು ಎಲ್ಲೆಂದರೆ ಅಲ್ಲಿ ಕೂರಿಸಿ ಪೂಜೆ ಮಾಡುವಂತಿಲ್ಲ. ಗಣೇಶ ಹಬ್ಬದ ಆಚರಣೆ ಹಾಗೂ ಮೂರ್ತಿ ವಿಸರ್ಜನೆಗೆ ಬೆಂಗಳೂರು ಮಹಾ ನಗರ ವ್ಯಾಪ್ತಿಯಲ್ಲಿ ಹೊಸ ನಿಯಮಗಳನ್ನು ರೂಪಿಸಿದ್ದು, ಸಾರ್ವಜನಿಕರು ಚಾಚು ತಪ್ಪದೇ ಪಾಲಿಸಬೇಕಿದೆ. ಗಣೇಶ ಹಬ್ಬದ ಬಂದೋಬಸ್ತ್ ಹಾಗೂ ಗಣೇಶ ಹಬ್ಬದ ಆಚರಣೆ ಕುರಿತು ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಬೆಂಗಳೂರು ನಗರ ಪೊಲೀಸರು ನಡೆಸಿದ ಸಭೆಯಲ್ಲಿ ಕೆಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
Recommended Video
ಮಣ್ಣಿನ ಗಣೇಶ ವಿಗ್ರಹ ಕೂರಿಸಬೇಕು: ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಯಾರೂ ಎತ್ತರದ ಕಲರ್ ಫುಲ್ ಗಣೇಶ ವಿಗ್ರಹ ಕೂರಿಸುವಂತಿಲ್ಲ. ಬದಲಿಗೆ ಮಣ್ಣಿನ ಗಣೇಶ ವಿಗ್ರಹವನ್ನು ಕೂರಿಸಬೇಕು. ಗಣೇಶ ಮೂರ್ತಿಗಳನ್ನು ಕೆರೆ ಕಟ್ಟೆಗಳಲ್ಲಿ ಯಾರೂ ವಿಸರ್ಜನೆ ಮಾಡುವಂತಿಲ್ಲ. ಪ್ರತಿ ಏರಿಯಾದಲ್ಲಿ ಬಿಬಿಎಂಪಿ ನಿರ್ಮಿಸಿರುವ ನೀರಿನ ಟ್ಯಾಂಕ್ನಲ್ಲಿ ಗಣೇಶ ವಿಗ್ರಹವನ್ನು ಸಾರ್ವಜನಿಕರು ವಿಸರ್ಜನೆ ಮಾಡಬೇಕು. ಮೂರು ದಿನಕ್ಕೂ ಹೆಚ್ಚು ಕಾಲ ಗಣೇಶನ ವಿಗ್ರಹ ಕೂರಿಸುವಂತಿಲ್ಲ. ಮನೆಯಲ್ಲಿ ಕೂರಿಸುವ ವಿಗ್ರಹಗಳನ್ನ ಬಕೆಟ್ನಲ್ಲಿ ನೀರು ತುಂಬಿಸಿ ಮನೆಯಲ್ಲಿ ವಿಸರ್ಜನೆ ಮಾಡಬೇಕು ಎಂಬ ನಿರ್ದೇಶನ ನೀಡಲಾಗಿದೆ.
ಸಭೆಯಲ್ಲಿ ಚರ್ಚೆ
ಕೊರೊನಾ ಭೀತಿ, ಸೋಂಕು ಹರಡದಂತೆ ಮುಂಜಾಗ್ರತೆ ವಹಿಸುವ ಸಂಬಂಧ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಗೌರವ ಗುಪ್ತಾ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರು ಚರ್ಚೆ ನಡೆಸಿದರು. ಐದು ದಿನಗಳ ಕಾಲ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡುವುದಕ್ಕೆ ಬ್ರೇಕ್ ಹಾಕಲು ಸಭೆಯಲ್ಲಿ ನಿರ್ಧರಿಸಿದ್ದಾರೆ ಎಂದು ಅಧಿಕಾರಿ ಮೂಲಗಳು ಸ್ಪಷ್ಟ ಪಡಿಸಿವೆ. ಇದರ ಜತೆಗೆ ನಾಲ್ಕು ಅಡಿಗಿಂತಲೂ ಹೆಚ್ಚು ಎತ್ತರದ ಗಣೇಶ ವಿಗ್ರಹಗಳನ್ನು ಸಾರ್ವಜನಿಕ ಪ್ರದೇಶದಲ್ಲಿ ಕೂರಸುವಂತಿಲ್ಲ ಎಂಬ ನಿಯಮ ವಿಧಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ.
ಗೌರವ ಗುಪ್ತಾ ಹೇಳಿಕೆ
ಬಿಬಿಎಂಪಿ ಹಾಗೂ ಪೊಲೀಸ್ ಅಧಿಕಾರಿಗಳ ಸಭೆ ಮುಕ್ತಾಯದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಗೌರವ ಗುಪ್ತಾ, ಗಣೇಶ ಹಬ್ಬ ಆಚರಣೆ ಸಂಬಂಧ ಸಕಲ ಸಿದ್ಧತೆ ನಡೆಸಲಾಗಿದೆ. ಸ್ವಚ್ಛತೆ, ಅನುಮತಿ, ಕೋವಿಡ್ ಮಾರ್ಗಸೂಚಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸ್ಥಳೀಯರ ಅವಶ್ಯತೆ ಗಮನದಲ್ಲಿ ಇಟ್ಟುಕೊಂಡು ಸರಳವಾಗಿ ಹಬ್ಬ ಆಚರಣೆಗೆ ಅವಕಾಶ ನೀಡಲಾಗಿದೆ. ಸ್ಥಳೀಯವಾಗಿ ಗಣೇಶ ಮೂರ್ತಿ ಕೂರಿಸುವರು ಪೊಲೀಸ್ ಠಾಣೆ ಹಾಗೂ ವಾರ್ಡ್ನ ಬಿಬಿಎಂಪಿ ಅಧಿಕಾರಿಗಳ ಅನುಮತಿ ಪಡೆಯಬೇಕು. ಒಂದು ವಾರ್ಡ್ ಗೆ ಒಂದು ಗಣೇಶ ಮೂರ್ತಿ ಇಡಲು ಅವಕಾಶ ನೀಡಲಾಗಿದೆ. ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಸೂಚಿಸಿದ ಪ್ರದೇಶದಲ್ಲಿ ಗಣೇಶ ವಿಗ್ರಹ ಇಡಲು ಅವಕಾಶ ನೀಡಲಾಗಿದೆ. ಮೂರು ದಿನಕ್ಕಿಂತಲೂ ಹೆಚ್ಚು ದಿನ ಗಣೇಶ ವಿಗ್ರಹ ಇಡುವಂತಿಲ್ಲ ಎಂದು ಸ್ಪಷ್ಟನೆ ನೀಡಿದರು.
ಕೆರೆಗಳಲ್ಲಿ ಗಣೇಶನ ವಿಗ್ರಹ ವಿಸರ್ಜನೆಗೆ ನಿರ್ಬಂಧ
ಗಣೇಶ ಹಬ್ಬದ ಕುರಿತು ಬೆಂಗಳೂರು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕೊರೊನಾ ಸೋಂಕು ಹರಡುವ ಕಾರಣದಿಂದ ಮೂರು ದಿನಕ್ಕಿಂತಲೂ ಹೆಚ್ಚು ದಿನ ಗಣೇಶ ಮೂರ್ತಿ ಇಡುವಂತಿಲ್ಲ. ಬಿಬಿಎಂಪಿ ಅಧಿಕಾರಿಗಳ ಅನುಮತಿ ಜತೆಗೆ ಸ್ಥಳೀಯ ಡಿಸಿಪಿಯವರ ಅನುಮತಿ ಪಡೆಯಬೇಕು. ಗಣೇಶ ಹಬ್ಬದ ಸಂದರ್ಭದಲ್ಲಿ ಯಾವುದೇ ಸಾರ್ವಜನಿಕರು ಸಭೆ, ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವಂತಿಲ್ಲ. ಸರ್ಕಾರದ ಮಾರ್ಗದರ್ಶನದ ಪ್ರಕಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಪ್ರತಿ ದಿನ ರಾತ್ರಿ 9 ಗಂಟೆಯಿಂದ ನೈಟ್ ಕರ್ಪೂ ಅಸ್ತಿತ್ವದಲ್ಲಿ ಇರುವುದರಿಂದ ಅದನ್ನು ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಬೇಕು. ಗಣೇಶ ವಿಗ್ರಹ ವಿಸರ್ಜನೆ ಮಾಡಲು ಹೋಗುವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡಿರಬೇಕು ಎಂದು ಬೆಂಗಳೂರು ನಗರ ಪೊಲೀಸ್ ಅಯುಕ್ತ ಕಮಲಪಂತ್ ಹೇಳಿದ್ದಾರೆ.
ಕೇರಳಾ ನಿಫಾ ವೈರಸ್ ಬಗ್ಗೆ ನಿಗಾ
ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿರುವುದರಿಂದ ಕೇರಳದಿಂದ ಬರುವರು ಹಾಗೂ ಹೋಗುವರ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ರಾಜ್ಯ ಮಟ್ಟದಲ್ಲಿ ನಿಗಾ ವಹಿಸಿದ್ದು, ಗಡಿ ಭಾಗ ಕೊಡಗು, ದಕ್ಷಿಣ ಕನ್ನಡ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ಅದರಂತೆ ಗಣೇಶ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಳೆದ ವರ್ಷ ಗಣೇಶ ಹಬ್ಬದ ಆಚರಣೆಗೆ ಅವಕಾಶ ಇರಲಿಲ್ಲ. ಈ ಭಾರಿ ಸರಳ ಹಬ್ಬದ ಆಚರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವಕಾಶ ಕಲ್ಪಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಹ ಸರಳ ಗಣೇಶ ಹಬ್ಬದ ಆಚರಣೆ ಅವಕಾಶ ನೀಡಿ, ಸಾರ್ವಜನಿಕ ಸಮಾರಂಭ, ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಲಾಗಿದೆ. ಅನಧಿಕೃತವಾಗಿ ಗಣೇಶ ವಿಗ್ರಹ ಇಡುವವರ ವಿರುದ್ಧ ಪೊಲೀಸರು ಕ್ರಮ ಜರುಗಿಸಲಿದ್ದಾರೆ.