ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ; 2 ತಿಂಗಳಲ್ಲಿ ನಾಲ್ವರು ಸಾವು
ಬೆಂಗಳೂರು, ಮೇ15: ಬಿಬಿಎಂಪಿ ಕಸದ ಲಾರಿ ಚಾಲಕರ ಬೇಜವಾಬ್ದಾರಿಗೆ ಸ್ವಿಗ್ಗಿ ಡೆಲಿವರಿ ಬಾಯ್ ಬಲಿಯಾದ ಘಟನೆ ನಾಗವಾರ-ಥಣಿಸಂದ್ರ ಮುಖ್ಯರಸ್ತೆಯಲ್ಲಿ ನಡೆದಿದೆ. ಯಾದಗಿರಿ ಜಿಲ್ಲೆ ಸುರಪುರ ಮೂಲದ ಸುಮಾರು 25 ವರ್ಷದ ದೇವಣ್ಣ ಮೃತಪಟ್ಟ ಯುವಕ. ದೇವಣ್ಣ ಬೆಂಗಳೂರಿನ ಕೊತ್ತನೂರಿನಲ್ಲಿ ವಾಸವಾಗಿದ್ದರು.
ಶನಿವಾರ ರಾತ್ರಿ ದ್ವಿಚಕ್ರ ವಾಹನದಲ್ಲಿ ನಾಗವಾರದಿಂದ ಹೆಗ್ಗಡೆನಗರ ಕಡೆಗೆ ಹೋಗುತ್ತಿರುವಾಗ ಹಿಂದಿನಿಂದ ಬಂದ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ದೇವಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಲಾರಿ ಚಾಲಕ ದಿನೇಶ್ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಚಾಲಕ ದಿನೇಶ್ ನಾಯಕ್ ದಾವಣಗೆರೆಯ ಹೆದ್ದನೆ ಗ್ರಾಮದವರು ಎಂಬ ಮಾಹಿತಿ ಸಿಕ್ಕಿದೆ. ಮಾರ್ಚ್ ತಿಂಗಳ ಬಳಿಕ ಬೆಂಗಳೂರು ನಗರದಲ್ಲಿ ಕಸದ ಲಾರಿ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.
ವೇಗವಾದ ಮತ್ತು ಅಜಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬ ಆರೋಪವಿದೆ. ಬಿಬಿಎಂಪಿ ಕಸದ ಲಾರಿ ಚಾಲಕ ದಿನೇಶ್ ನಾಯಕ್ನನ್ನು ಚಿಕ್ಕಜಾಲ ಸಂಚಾರಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಸಾವನ್ನಪ್ಪಿದ್ದ ಅಕ್ಷತಾ; ಮಾರ್ಚ್ 21 ಹೆಬ್ಬಾಳದ ಬಳಿ ರಸ್ತೆಯನ್ನು ದಾಟುವಾಗ ಶಾಲಾ ಬಾಲಕಿ ಸುಮಾರು 15 ವರ್ಷದ ಅಕ್ಷತಾಳನ್ನು ಬಿಬಿಎಂಪಿ ಲಾರಿ ಕಸದ ಲಾರಿ ಬಲಿ ಪಡೆದಿತ್ತು. ಶಾಲೆಗೆ ತೆರಳಿ ಮನೆಗೆ ಹೋಗುತ್ತಿದ್ದ ಅಕ್ಷತಾ ಬಲಿಗೆ ಬಿಬಿಎಂಪಿಯ ನಿರ್ಲಕ್ಷ್ಯವೂ ಕಾರಣವಾಗಿತ್ತು. ಹೆಬ್ಬಾಳದ ಅಂಡರ್ ಪಾಸ್ನಲ್ಲಿ ಮಳೆ ನೀರು ನಿಂತಿದ್ದ ಪರಿಣಾಮದಿಂದಾಗಿ ರಸ್ತೆಯನ್ನು ಅಕ್ಷತಾ ದಾಟುತ್ತಿದ್ದಳು. ಈ ವೇಳೆ ವೇಗವಾಗಿ ಬಂದ ಲಾರಿ ಅಕ್ಷತಾಳಿಗೆ ಡಿಕ್ಕಿ ಹೊಡೆದಿತ್ತು.
ಮಾರ್ಚ್ 31 ರಂದು ಥಣಿಸಂದ್ರ ಮುಖ್ಯರಸ್ತೆಯಲ್ಲಿ ಬಿಬಿಎಂಪಿಯ ಕಸದ ಲಾರಿ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮದಿಂದಾಗಿ ಯಲಹಂಕ ನಿವಾಸಿಯಾಗಿದ್ದ ಸುಮಾರು 60 ವರ್ಷದ ರಾಮಣ್ಣ ಗಂಭೀರವಾಗಿ ಗಾಯಗೊಂಡಿದ್ದರು. ರಾಮಣ್ಣ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದರು.
ಏಪ್ರಿಲ್ 18ರಂದು ನಾಯಂಡಹಳ್ಳಿ ರಿಂಗ್ ರಸ್ತೆಯ ಬಳಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ಎಸ್ಬಿಐ ಉದ್ಯೋಗಿ ಪದ್ಮಿನಿಯ ದ್ವಿಚಕ್ರವಾಹನಕ್ಕೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದಿತ್ತು. ಸುಮಾರು 40 ವರ್ಷದ ಪದ್ಮಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಸಂಚಾರಿ ಪೊಲೀಸರ ಕಾರ್ಯಾಚರಣೆ; ಬಿಬಿಎಂಪಿ ಕಸದ ಲಾರಿಗಳು ಪದೇ ಪದೇ ಅಪಘಾತವನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆಯನ್ನು ಮಾಡಿದ್ದರು. ಕೇವಲ ಒಂದೆರಡು ದಿನಗಳಿಗೆ ಮೀಸಲು ಎಂಬ ಕಾರ್ಯಾಚರಣೆಯಿಂದ ಬಿಬಿಎಂಪಿ ಚಾಲಕರ ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ಜಂಟೀ ಪೊಲೀಸ್ ಆಯುಕ್ತರಾದ ರವಿಕಾಂತೇಗೌಡರು ತಮ್ಮ ಸಿಬ್ಬಂದಿಗಳಿಗೆ ನಿರಂತರ ಕಾರ್ಯಾಚರಣೆಯನ್ನು ಮಾಡುವಂತೆ ಸೂಚಿಸಬೇಕು ಎಂಬ ಒತ್ತಾಯವೂ ಇದೆ.
ಬಿಬಿಎಂಪಿ ಕಸದ ಲಾರಿಯ ಚಾಲಕರ ದಿವ್ಯ ನಿರ್ಲಕ್ಷ್ಯಕ್ಕೆ ಹಲವು ಅಮಾಯಕ ಜೀವಗಳು ಬಲಿಯಾಗಿವೆ. ಕಸದ ಲಾರಿಗಳ ಫಿಟ್ನೇಸ್ ಪರಿಶೀಲಿಸುವ ಕಾರ್ಯವನ್ನು ಬಿಬಿಎಂಪಿ ಕಾಲಕಾಲಕ್ಕೆ ಮಾಡಬೇಕಿದೆ. ಚಾಲಕರ ಮೇಲೆ ನಿಗಾ ಇರಿಸುವಂತ ಕೆಲಸವನ್ನು ಮಾಡಬೇಕು.
Recommended Video