ಬಿಬಿಎಂಪಿ 1000 ಗುಂಡಿ ಇವೆ ಎಂದರೆ, ಪೊಲೀಸರು ಪ್ರಕಾರ 2000 ರಸ್ತೆ ಗುಂಡಿಗಳು
ಬೆಂಗಳೂರು, ಜೂನ್ 27: ಸಿಲಿಕಾನ್ ಸಿಟಿ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಬಂದ ವೇಳೆ ಬಿಬಿಎಂಪಿ 23 ಕೋಟಿ ಹಣವನ್ನು ವ್ಯಯ ಮಾಡಿ ರಸ್ತೆಗಳಿಗೆ ಡಾಂಬಾರನ್ನು ಹಾಕಿತ್ತು. ರಸ್ತೆಗಳಿಗೆ ಡಾಂಬಾರು ಹಾಕಿ ಮಿರ ಮಿರ ಮಿಂಚುವಂತೆ ಮಾಡಿದ್ದರು. ಆದರೆ, ಆ ರಸ್ತೆ ಪ್ರಧಾನಿ ಬಂದು ಹೋದ ಒಂದೆರಡು ದಿನದಲ್ಲೆ ಕಿತ್ತು ಹೋಗಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದರಿಂದ ಎಚ್ಚೆತ್ತ ಬಿಬಿಎಂಪಿ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯನ್ನು ಮಾಡಿದ್ದಾರೆ.
ರಸ್ತೆಗುಂಡಿಗಳು ಬಿಬಿಎಂಪಿ ಮಾನವನ್ನು ಹಾರಾಜು ಹಾಕುತ್ತವೆ. ಹೊಸ ರಸ್ತೆಗಳನ್ನು ಇತರೆ ಇಲಾಖೆಗಳು ಅಗೆದು ಹಾಳು ಮಾಡುತ್ತವೆ ಎಂಬ ಆರೋಪವಿದೆ. ಬಿಬಿಎಂಪಿ ಪಿಎಂ ಮೋದಿ ಕಚೇರಿಗೆ ರಸ್ತೆ ಗುಂಡಿ ಬೀಳಲು ಕಾರಣವಾಗಿದ್ದು ಬಿಡ್ಲ್ಯೂಎಸ್ಎಸ್ಬಿ ಕಾರ್ಯ ಎಂದು ತಿಳಿಸಿ ಪತ್ರವನ್ನು ಬರೆದು ಕಳಪೆ ಕಾಮಗಾರಿಯನ್ನು ಸಮರ್ಥನೆ ಮಾಡಿಕೊಂಡಿದೆೆ.
ಪಿಎಂ ಕಚೇರಿಯವೆರಗೂ ಬಿಬಿಎಂಪಿ ಕಳಪೆ ಕಾಮಗಾರಿಯ ವಿಚಾರ ಸದ್ದು ಮಾಡಿದ್ದೇ ತಡ ಮುಖ್ಯಮಂತ್ರಿಗಳು ಎಚ್ಚೆತ್ತುಕೊಂಡಿದ್ದಾರೆ. ಬಿಬಿಎಂಪಿ ಆಯುಕ್ತಕನ್ನು ಕರೆದು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಯನ್ನು ಮಾಡಿ ಸಮನ್ವಯ ಸಾಧಿಸುವಂತೆ ಸೂಚನೆಯನ್ನು ನೀಡಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ್ದಾರೆ.
BWSSB, BDA,ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಜೊತೆ ಸಭೆ
ಪ್ರಧಾನಿ ಮೋದಿಗಾಗಿ ಹಾಕಿದ ಡಾಂಬಾರು ಕಿತ್ತು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಬಿಬಿಎಂಪಿಯಿಂದ ಎಲ್ಲಾ ಇಲಾಖೆಗಳ ಜೊತೆ ಸಮನ್ವಯ ಸಭೆ ಆಯೋಜನೆ ಮಾಡಲಾಗಿತ್ತು. ಎಲ್ಲಾ ಪ್ರಮುಖ ಇಲಾಖೆಗಳ ಜೊತೆ ಬಿಬಿಎಂಪಿ ಮಹತ್ವದ ಸಭೆಯನ್ನು ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ನಡೆಸಲಾಯಿತು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಆಡಳಿತಗಾರ ರಾಕೇಶ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ರಸ್ತೆ ಗುಂಡಿ ವಿಚಾರ ಪ್ರಸ್ತಾಪಿಸಿ ಚರ್ಚೆಯನ್ನು ಹಿರಿಯ ಅಧಿಕಾರಿಗಳು ಮಾಡಿದ್ದಾರೆ. ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ನಮ್ಮ ಮೆಟ್ರೊ ಎಂಡಿ ಪರ್ವೇಜ್ ಅಂಜುಮ್, BWSSB, BDA, ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ. ರಸ್ತೆಗುಂಡಿಗಳಿಂದ ದಿನದಿಂದ ದಿನಕ್ಕೆ ಪಾಲಿಕೆ ಮಾನ ಹರಾಜಾಗುತ್ತಿದೆ, ಇಲಾಖೆಗಳ ಸಹಕಾರ ಹಾಗೂ ಜವಾಬ್ದಾರಿಗಳ ಬಗ್ಗೆ ಸಭೆಯಲ್ಲಿ ಚರ್ಚೆಯನ್ನು ಮಾಡಲಾಗಿದೆ.
ಯಾವ ಅಧಿಕಾರಿಗಳ ಜೊತೆ ಚರ್ಚೆ
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಗರ ಪೋಲಿಸ್ ಆಯುಕ್ತ ಪ್ರತಾಪ್ ರೆಡ್ಡಿ, ಜಲಮಂಡಳಿ ಅಧ್ಯಕ್ಷ ಜಯರಾಮ್, ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಅಂಜುಂ ಪರ್ವೇಜ್, ಬಿಡಿಎ ಆಯುಕ್ತ ರಾಜೇಶ್ ಗೌಡ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಅನ್ಬುಕುಮಾರ್, ಸಂಚಾರಿ ಪೋಲಿಸ್ ಜಂಟಿ ಆಯುಕ್ತ ರವಿಕಾಂತೇಗೌಡ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರು ರಾಜೇಂದ್ರ ಚೋಳನ್, ಬಿಎಂಟಿಸಿ ನಿರ್ದೇಶಕ ಸೂರ್ಯ ಸೇನ್, ಪಾಲಿಕೆಯ ವಿಶೇಷ ಆಯುಕ್ತರುಗಳು ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.
1000 ಪ್ಲಸ್ ರಸ್ತೆ ಗುಂಡಿ ಇದೆ
ಟ್ರಾಫಿಕ್ ಪೊಲೀಸರು ನಗರದಲ್ಲಿ ಮಳೆ ಬಂದಾಗ ವಾಟರ್ ಲಾಗಿನ್ ಆಗುವ 54 ಸ್ಥಳಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರ ಬಗ್ಗೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಹೆಬ್ಬಾಳ , ಕೆಆರ್ ಪುರಂ ಜಂಕ್ಷನ್ ಗೊರಗುಂಟೆ ಪಾಳ್ಯದಲ್ಲಿನ ಟ್ರಾಫಿಕ್ ಬಗ್ಗೆ ಸಹ ಸಭೆಯಲ್ಲಿ ಚರ್ಚೆ ನಡೆದಿದೆ. ಈ ಭಾಗದಲ್ಲಿ ಟ್ರಾಫಿಕ್ ತಡೆಗಟ್ಟಲು ತಾತ್ಕಾಲಿಕ ಹಾಗೂ ಕ್ರಿಯಾ ಯೋಜನೆ ಮಾಡಲಾಗುವುದು. ನಾಳೆ (ಜೂನ್ 28) ರಾತ್ರಿ 11 ಗಂಟೆಗೆ ಪೊಲೀಸ್ ಇಲಾಖೆಯೊಂದಿಗೆ ತಪಾಸಣೆ ಮಾಡಲಿದ್ದೇವೆ. ಟ್ರಾಫಿಕ್ ಸುಲಲಿತ ಸಂಚಾರಕ್ಕೆ ಪೊಲೀಸ್ ಇಲಾಖೆಗೆ ಬೇಕಿರುವ ಸಹಕಾರ ಬಿಬಿಎಂಪಿ ಮಾಡಲಿದೆ. ರಸ್ತೆ ಗುಂಡಿ ವಿಚಾರವಾಗಿ ಸಹ ಚರ್ಚೆ ನಡೆದಿದೆ, ಪಾಟ್ ಹೋಲ್ಗಳಿಗಾಗಿ ಸಹ ಪೊಲೀಸರಿಂದ ಬೇರೆ ಲಿಸ್ಟ್ ಕೊಟ್ಟಿದ್ದಾರೆ. ಇವತ್ತಿನವರೆಗೂ ಬಿಬಿಎಂಪಿ ಪ್ರಕಾರ 1000 ಪ್ಲಸ್ ರಸ್ತೆ ಗುಂಡಿ ಇದೆ, ಆದರೆ ಪೊಲೀಸ್ ಇಲಾಖೆ ಪ್ರಕಾರ 2000 ಇದೆ ಅನ್ನುತ್ತಿದ್ದಾರೆ ಅದನ್ನು ಸಹ ನೀಡುವಂತೆ ಹೇಳಿದ್ದೇವೆ.
ಪ್ರತಿ ಸೋಮವಾರ ಇಲಾಖೆಗಳ ಜೊತೆ ಸಮನ್ವಯ ಸಭೆ
ಪ್ರಧಾನ ಮಂತ್ರಿ ಕಾರ್ಯಲಯಕ್ಕೆ ನಾವು ಈಗಾಗಲೇ ವರದಿ ಕಳಿಸಿದ್ದೇವೆ. ಯಾವ ಗುಂಡಿಯ ವಿಚಾರವಾಗಿ ಟ್ವೀಟ್ ಆಗಿತ್ತು ಆ ವಿಚಾರವಾಗಿ ಮಾತ್ರ ವರದಿ ಕಳಿಸಿದ್ದೀವಿ. ನವೆಂಬರ್ 2021ರಲ್ಲಿ ಆ ರಸ್ತೆ ನಿರ್ಮಾಣ ಮಾಡಲಾಗಿತ್ತು. ನಂತರ ಅಲ್ಲಿ ಸೀವೇಜ್ ಕಂಡು ಬಂದಿತ್ತು. ಇವಾಗ ಜಾಸ್ತಿ ಅಗೆದು ನೋಡುವಾಗ ಅಲ್ಲಿ ಹಳೆ ಕಾಲದು ಒಂದು ವಾಟರ್ ಲೈನೆ ಇರೋದು ಕಂಡು ಬಂದಿದೆ. ಪಿಎಂ ಸಾಹೇಬ್ರು ಬಂದಾಗ ನಾವು ಆ ರಸ್ತೆ ಮಾಡಿಲ್ಲ. ಆ ರಸ್ತೆಯಲ್ಲಿ ಪ್ರಧಾನ ಮಂತ್ರಿಗಳು ಓಡಾಡಿಲ್ಲ. ಅದು ಪಿಎಂ ಓಡಾಡಿದ ಪಕ್ಕದ ರಸ್ತೆ ಆಗಿತ್ತು ಆ ಜಾಗ ಸಿಂಕ್ ಆಗ್ತಾ ಇತ್ತು ಅನ್ನುವ ಕಾರಣಕ್ಕೆ ತಾತ್ಕಾಲಿಕವಾಗಿ ಅದನ್ನು ಮುಚ್ಚಲಾಗಿತ್ತು. ನಾವು ಮರಿಯಪ್ಪನ ಪಾಳ್ಯದಲ್ಲಿ ಎರಡು ಕಡೆ ಚಕ್ಕೆ ತರ ಬಂದಿರೋದು ಬೇರೆ ರಸ್ತೆಯಿದೆ. ಪಿಎಂ ಕಚೇರಿಂದ ಕೇಳಿದ ರಸ್ತೆ ಬಗ್ಗೆ ಮಾತ್ರ ವರದಿ ನೀಡಿದ್ದೇವೆ. ಈ ರಸ್ತೆ ಪಕ್ಕದಲೇ ಕಾರು ಹೋಗಿತ್ತು ಸಿಂಕ್ ಆಗಿತ್ತು ಅದನ್ನು ಕಳಿಸಿದ್ದೇವೆ. ಇನ್ನು
ಮುಖ್ಯಮಂತ್ರಿಗಳು ನೀಡಿದ ಸೂಚನೆ ಮೇರೆಗೆ ಸಭೆ ನಡೆಸಲಾಗಿದೆ. ಪ್ರತಿ ಸೋಮವಾರ ಎಲ್ಲ ಇಲಾಖೆಯವರು ಸೇರೆ ಸಮನ್ವಯ ಸಭೆ ನಡೆಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.