ತ್ಯಾಜ್ಯ ಘಟಕ ವರದಿಗೆ ತಜ್ಞರ ಸಮಿತಿ: ತ್ಯಾಜ್ಯ ವಿವೇವಾರಿ ಮೇಲೊಂದು ಕಣ್ಣು
ಬೆಂಗಳೂರು, ಏಪ್ರಿಲ್ 24: ವೈಜ್ಞಾನಿಕ ಸಂಸ್ಕರಣಾ ಘಟಕಗಳ ಸಮರ್ಪಕ ನಿರ್ವಹಣೆಗಾಗಿ ಬಿಬಿಎಂಪಿ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ. ಸೆಲ್ವಕುಮಾರ್ ಸೇರಿ ನಾಲ್ವರ ಸಮಿತಿ ರಚಿಸಿದೆ.
ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೆಲವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ತಜ್ಞರ ಸಮಿತಿ ರಚಿಸಿ ವರದಿ ಪಡೆಯುವಂತೆ ಬಿಬಿಎಂಪಿಗೆ ಸೂಚಿಸಿತ್ತು. ಸಮಿತಿಯಲ್ಲಿ ವಿಜ್ಞಾನಿ ಡಾ. ಸೆಲ್ವಕುಮಾರ್, ಕೆಸಿಡಿಸಿ ಮಾಜಿ ನಿರ್ದೇಶಕ ಬಸವಯ್ಯ, ವ್ಯಾಪ್ ಕೋಸ್ ಸಂಸ್ಥೆಯ ವಿಶ್ವನಾಥ್ ನಾಯರ್, ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿ ಡಾ. ಶಿವಕುಮಾರ್ ಇದ್ದಾರೆ.
ಘನತ್ಯಾಜ್ಯ ಸಂಸ್ಕರಣಾ ಘಟಕಗಳ ಕಾರ್ಯಾರಂಭಕ್ಕೆ ಹೈಕೋರ್ಟ್ ನಿರ್ದೇಶನ
ಸಮಿತಿಯಿಂದ ಅಧ್ಯಯನ: ಸಮಿತಿಯು ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ವಿಧಾನ ಘಟಕಗಳ ಸುತ್ತಲೂ ಸಂರಕ್ಷಣ ವಲಯ ಕಾಯ್ದುಕೊಳ್ಳುವುದು, ಮಿಥೇನ್ ಗ್ಯಾಸ್ ಸೃಷ್ಟಿ, ತ್ಯಾಜ್ಯ ನೀರು ದುರ್ವಾಸನೆ ಹರಡುವುದನ್ನು ತಡೆಯುವ ಕುರಿತು ವಸ್ತುಸ್ಥಿತಿ ಅಧ್ಯಯನ ನಡೆಸಿ ವರದಿ ನೀಡಲಿದ್ದು, ಅದನ್ನು ಆಧರಿಸಿ ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಕಾರ್ಯಕ್ರಮ ರೂಪಿಸಲಿದೆ.
ಸರ್ಕಾರದ ವತಿಯಿಂದ 250 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ 6 ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ಮಿಸಲಾಗಿದ್ದರೂ ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿಯಾಗದೆ ಕ್ವಾರಿಗಳಿಗೆ ಸೇರುತ್ತಿದೆ. ಜತೆಗೆ ಹಲವು ಘಟಕಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿ ಘಟಕಗಳನ್ನು ಸ್ಥಗಿತಗೊಳಿಸಿರುವ ಬಗ್ಗೆ ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಜಾಗದ ಕೊರತೆ: ಕಸವನ್ನು ಎಲ್ಲಿ ಹಾಕಬೇಕು?
ಅದನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯ, ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಸ್ಥಗಿತಗೊಂಡಿರುವ ತ್ಯಾಜ್ಯ ಘಟಕಗಳನ್ನು ಮಾರ್ಷಲ್ ಗಳ ನೇಮಿಸಿಕೊಂಡು ಪುನರಾರಂಭಿಸುವಂತೆ ಸೂಚಿಸಿತ್ತು.