ಬೆಂಗಳೂರಿನಲ್ಲಿ ಒತ್ತುವರಿ ಡ್ರಾಮ; ನಾನಲ್ಲ, ನಾನವನಲ್ಲ ಎನ್ನುತ್ತಿರುವ ಬಿಲ್ಡರ್ಗಳು
ಬೆಂಗಳೂರು, ಸೆ. 16: ನಗರದಲ್ಲಿ ಬಿಬಿಎಂಪಿಯಿಂದ ರಾಜಕಾಲುವೆ ಒತ್ತುವರಿ ಇತ್ಯಾದಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಮುಂದುವರಿದಿದೆ. ಯಲಹಂಕ, ಮಹದೇವಪುರ, ದಾಸರಹಳ್ಳಿ, ಬೊಮ್ಮನಹಳ್ಳಿ ವಲಯದಲ್ಲಿನ ವಿವಿಧೆಡೆ ಒತ್ತುವರಿ ಆಗಿರುವುದನ್ನು ಗುರುತಿಸಿ ತೆರವು ಕಾರ್ಯ ಮಾಡಲಾಗುತ್ತಿದೆ.
ಐಟಿ ಕಂಪನಿಗಳು ಹೆಚ್ಚು ಇರುವ ಮತ್ತು ಮಳೆಯಿಂದ ಭಾರೀ ಪ್ರವಾಹ ಸ್ಥಿತಿ ಎದುರಿಸಿದ ಮಹದೇವಪುರ ವಲಯದಲ್ಲಿ ನಡೆಯುತ್ತಿರುವ ಒತ್ತುವರಿ ಕಾರ್ಯದ ಬಗ್ಗೆ ಹೆಚ್ಚಿನ ಜನರ ಗಮನ ನೆಟ್ಟಿದೆ. ದೊಡ್ಡ ದೊಡ್ಡ ಬಿಲ್ಡರ್ಗಳು ಲೇಔಟ್, ವಿಲ್ಲಾಗಳನ್ನು ನಿರ್ಮಿಸಿರುವ ಪ್ರದೇಶ ಇದಾಗಿದೆ.
ಬೆಂಗಳೂರು: 4 ವಲಯ ಸೇರಿ 29 ಒತ್ತುವರಿ ತೆರವು, ಎಲ್ಲೆಲ್ಲಿ ಸರ್ವೇ ಕಾರ್ಯ ಪ್ರಗತಿ?
ಬಾಗ್ಮನೆ, ಪೂರ್ವಂಕರ ಮೊದಲಾದ ದೊಡ್ಡ ಬಿಲ್ಡರ್ಗಳ ಕಟ್ಟಡಗಳ ನಿರ್ಮಾಣದ ವೇಳೆ ರಾಜಕಾಲುವೆಗಳ ಒತ್ತುವರಿ ಆಗಿರುವುದು ಬಿಬಿಎಂಪಿಯ ಸರ್ವೆಯಿಂದ ದೃಢಪಟ್ಟಿದೆ. ಆದರೆ, ಬಿಲ್ಡರ್ಗಳು ತಮ್ಮಿಂದ ಒತ್ತುವರಿ ಆಗಿರುವುದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ. ಬೇರೆ ಬಿಲ್ಡರ್ಗಳ ಮೇಲೆ ಎಲ್ಲರೂ ಬೊಟ್ಟು ಮಾಡುತ್ತಿದ್ದಾರೆ.
ಬಾಗ್ಮನೆ ಟೆಕ್ ಪಾರ್ಕ್ನಿಂದ 2.5 ಮೀಟರ್ ಅಗಲದಷ್ಟು ಕಾಲುವೆ ಒತ್ತುವರಿ, ಮತ್ತು ಪೂರ್ವಂಕರ ಪೂರ್ವ ಪಾರ್ಕ್ರಿಡ್ಜ್ ಲೇಔಟ್ನ ಎರಡು ವಿಲ್ಲಾಗಳ ನಿರ್ಮಾಣದಲ್ಲಿ 2.5 ಮೀಟರ್ ಅಗಲದ ಕಾಲುವೆ ಒತ್ತುವರಿ ಆಗಿರುವುದು ಕಂಡುಬಂದಿತ್ತು. ಮೊನ್ನೆ ಬಾಗ್ಮನೆ ಬಿಲ್ಡರ್ನವರು ಹೇಳಿಕೆ ನೀಡಿ, ತಮ್ಮಿಂದ ಒತ್ತುವರಿ ಆಗಿರುದನ್ನು ಒಪ್ಪಿಕೊಂಡಿದ್ದೇನೋ ಹೌದು. ಅದರೆ, ಅದಕ್ಕೆ ಪೂರ್ವಂಕರ ಬಿಲ್ಡರ್ಗಳು ಕಾರಣ ಎಂದು ಆರೋಪ ಮಾಡಿದ್ದರು.
ಪೂರ್ವಂಕರ ವಾದ ಬೇರೆ
ಇದೀಗ ಪೂರ್ವಂಕರ ಬಿಲ್ಡರ್ಗಳು ಬೇರೆ ರಾಗ ಎಳೆದಿದ್ದಾರೆ. ತಮ್ಮ ಕಟ್ಟಡಗಳಿಂದ ಯಾವುದೇ ಒತ್ತುವರಿ ಆಗಿಲ್ಲ ಎಂದು ಹೇಳುತ್ತಿರುವ ಪೂರ್ವಂಕರ ಸಂಸ್ಥೆ, ಈ ಪ್ರದೇಶದಲ್ಲಿ ಪ್ರವಾಹ ಉದ್ಭವಿಸಲು ಸುತ್ತಮುತ್ತ ಇರುವ ಇತರ ಅಕ್ರಮ ಲೇಔಟ್ಗಳು ಕಾರಣ ಎಂದು ದೂಷಿಸಿದೆ.
ಈ ಪ್ರದೇಶದಲ್ಲಿ ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಲಾದ 20 ದೊಡ್ಡ ಕಟ್ಟಡಗಳಲ್ಲಿ ಪೂರ್ವಂಕರ ಪೂರ್ವ ಪಾರ್ಕ್ರಿಡ್ಜ್ನ ಕಟ್ಟಡವೂ ಇದೆ ಎಂಬುದು ಬಿಬಿಎಂಪಿಯ ವಾದ. ನೀರುಗಾಲುವೆಯನ್ನು 2.5 ಮೀಟರ್ ಅಗಲದಷ್ಟು ಒತ್ತುವರಿ ಮಾಡಿ ರಸ್ತೆ, ಕ್ಲಬ್ಹೌಸ್ ಕಟ್ಟಲಾಗಿದೆ. ಒಂದು ವಿಲ್ಲಾದ ಎರಡು ಸಣ್ಣ ಭಾಗಗಳು ಒತ್ತುವರಿ ಜಾಗದಲ್ಲಿ ಬರುತ್ತವೆ ಎಂದು ಬಿಬಿಎಂಪಿ ಹೇಳಿದೆ.
ಅತ್ತ, ಪೂರ್ವಂಕರಕ್ಕೆ ಹೊಂದಿಕೊಂಡು ಇರುವ ಬಾಗ್ಮನೆ ಟೆಕ್ ಪಾರ್ಕ್ ಮೊನ್ನೆ ಲೋಕಾಯುಕ್ತರ ಮೊರೆ ಹೋಗಿತ್ತು. ಬಾಗ್ಮನೆ ಟೆಕ್ ಪಾರ್ಕ್ನಿಂದ 2.5 ಮೀಟರ್ ಅಗಲದ ಕಾಲುವೆ ಒತ್ತುವರಿ ಆಗಿದೆ. ಈ ಜಾಗದಲ್ಲಿ ಕಾಂಕ್ರೀಟ್ ಸ್ಲಾಬ್ಗಳನ್ನು ಹಾಕಿದ್ದಾರೆ.
ಕಟ್ಟಡದೊಳಗೆ ನೀರು ನುಗ್ಗುವುದನ್ನ ತಡೆಯಲು ಸ್ಲಾಬ್ ಹಾಕಲಾಗಿದೆ. ಈ ಸ್ಲಾಬ್ ತೆಗೆದರೆ ನೀರು ಟೆಕ್ ಪಾರ್ಕ್ ಒಳಗೆ ಹರಿದುಹೋಗುತ್ತದೆ ಎಂದು ಹೇಳಿ ಒತ್ತುವರಿ ತೆರವು ಕಾರ್ಯಾಚರಣೆಗೆ ಬಾಗ್ಮನೆಯವರು ಲೋಕಾಯುಕ್ತದಿಂದ ತಡೆ ತಂದಿದ್ದಾರೆ.
ಈ ಅವಾಂತರಕ್ಕೆಲ್ಲಾ ಪೂರ್ವಂಕರ ಪೂರ್ವ ಪಾರ್ಕ್ರಿಡ್ಜ್ ಲೇಔಟ್ ಕಾರಣ. ನೀರು ಹರಿದುಹೋಗಲು ಸರಿಯಾದ ಸ್ಥಳಾವಕಾಶ ಕೊಡದೆಯೇ ಕಟ್ಟಡಗಳನ್ನು ಕಟ್ಟಿದ್ದಾರೆ ಎಂಬುದು ಬಾಗ್ಮನೆಯವರ ಅರೋಪ.
ಬೆಂಗಳೂರು: 4 ವಲಯ ಸೇರಿ 29 ಒತ್ತುವರಿ ತೆರವು, ಎಲ್ಲೆಲ್ಲಿ ಸರ್ವೇ ಕಾರ್ಯ ಪ್ರಗತಿ?
ಅನುಮೋದಿತ ಪ್ಲಾನ್ ಪ್ರಕಾರ ನಿರ್ಮಾಣ
ಬಾಗ್ಮನೆಯ ಈ ಆರೋಪವನ್ನು ಪೂರ್ವಂಕರ ಬಿಲ್ಡರ್ಸ್ ತಳ್ಳಿಹಾಕಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪೂರ್ವಂಕರ ಲಿಮಿಟೆಡ್ನ ಸಿಇಒ ಅಭಿಷೇಕ್ ಕಪೂರ್, ಪೂರ್ವ ಪಾರ್ಕ್ರಿಡ್ಜ್ ಅನ್ನು ಸಮಗ್ರ ಅಭಿವೃದ್ಧಿ ಯೋಜನೆಯ ಪ್ರಕಾರ 2004ರಲ್ಲಿ ಕಟ್ಟಲಾಗಿದೆ. ಅಧಿಕಾರಿಗಳು ಅನುಮೋದಿಸಿದ ಪ್ಲಾನ್ ಪ್ರಕಾರವೇ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಪ್ರವಾಹ ಪರಿಸ್ಥಿತಿಗೆ ತಾವು ಕಾರಣರಲ್ಲ. ಅಕ್ಕಪಕ್ಕದ ಪ್ರದೇಶಗಳಲ್ಲಿ ಲೇಔಟ್ಗಳನ್ನು ನಿರ್ಮಿಸಿದ ಇತರ ಬಿಲ್ಡರ್ಗಳು ಇದಕ್ಕೆ ಕಾರಣ ಎಂದು ಪೂರ್ವಂಕರ ಮುಖ್ಯಸ್ಥರು ಆಪಾದಿಸಿದ್ದಾರೆ.
ಸತ್ವ ಗ್ರೂಪ್ನಿಂದ ಒತ್ತುವರಿ
ಸಲಾರ್ಪುರಿಯಾ ಸತ್ತ್ವ ಗ್ರೂಪ್ನವರು ಮಾರತ್ತಹಳ್ಳಿ, ಕರಿಯಮ್ಮನ ಅಗ್ರಹಾರ ಗ್ರಾಮಗಳಲ್ಲಿ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿದೆ ಎಂದು ಬಿಬಿಎಂಪಿ ಸರ್ವೆ ನಡೆಸಿ ಹೇಳಿದೆ. ಆದರೆ, ಒತ್ತುವರಿ ಆಗಿರುವ ವಿಚಾರ ಬಿಬಿಎಂಪಿ ಅಧಿಕಾರಿಗಳಿಂದ ತನಗೆ ಅಧಿಕೃತವಾಗಿ ಗೊತ್ತಾಗಿಲ್ಲ ಎಂದು ಸತ್ತ್ವ ಗ್ರೂಪ್ ಹೇಳಿದೆ.
"ನಾವು ವಿವರಕ್ಕಾಗಿ ಕಾಯುತ್ತಿದ್ದೇವೆ. ಮಾಹಿತಿ ಸಿಕ್ಕ ಬಳಿಕ ಅಧಿಕಾರಿಗಳೊಂದಿಗೆ ಸಹಕರಿಸಲು ಸಿದ್ಧರಿದ್ದೇವೆ" ಎಂದು ಸತ್ವ ಗ್ರೂಪ್ನ ಉಪಾಧ್ಯಕ್ಷ ಪಿ.ಕೆ. ಮಿಶ್ರಾ ತಿಳಿಸಿದ್ದಾರೆ.
ಹೈಕೋರ್ಟ್ ನಿರ್ದೇಶನ
ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ಆದ ಬಗ್ಗೆ ಸಿಎಜಿ ವರದಿಯಲ್ಲಿ ಉಲ್ಲೇಖವಾಗಿತ್ತು. ಇದರ ಮಾಹಿತಿಯನ್ನು ನೀಡುವಂತೆ ಬಿಬಿಎಂಪಿಗೆ ಹೈಕೋರ್ಟ್ ನಿನ್ನೆ ನಿರ್ದೇಶನ ನೀಡಿದೆ. ಹಾಗೆಯೇ, ರಾಜಕಾಲುವೆಯ ಎಷ್ಟು ಭಾಗದ ಒತ್ತುವರಿಯನ್ನು ಪತ್ತೆ ಮಾಡಲಾಗಿದೆ, ಎಷ್ಟು ಒತ್ತುವರಿಯನ್ನು ತೆರವು ಮಾಡಲಾಗಿದೆ ಎಂದು ಬಿಬಿಎಂಪಿಯಿಂದ ಮಾಹಿತಿ ಕೇಳಿತು ನ್ಯಾಯಾಲಯ.
ಆದರೆ, ದಿನವೂ ಕೂಡ ಸರ್ವೆ ನಡೆಯುತ್ತಿದ್ದು, ಒತ್ತುವರಿಯನ್ನು ಪತ್ತೆ ಮಾಡಲಾಗುತ್ತಿದೆ. ಜೊತೆ ಜೊತೆಗೆ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಈವರೆಗೆ ಎಷ್ಟು ಒತ್ತುವರಿ ಆಗಿದೆ ಎಂಬ ಮಾಹಿತಿ ಸಂಗ್ರಹಿಸಲು ಕಾಲಾವಕಾಶ ಬೇಕು ಎಂದು ಬಿಬಿಎಂಪಿ ಗುರುವಾರ ಹೈಕೋರ್ಟ್ ನ್ಯಾಯಪೀಠಕ್ಕೆ ಕೋರಿಕೊಂಡಿತು. ಇಂದು ಶುಕ್ರವಾರ ವಿಚಾರಣೆ ಮುಂದುವರಿಯಲಿದೆ.
(ಒನ್ಇಂಡಿಯಾ ಸುದ್ದಿ)