ಬಿಬಿಎಂಪಿಯು ರಾತ್ರಿ ಮುಚ್ಚಿದ ಗುಂಡಿಗಳು ಒಂದೇ ಮಳೆಗೆ ಬಾಯ್ತೆರೆದಿವೆ
ಬೆಂಗಳೂರು, ಸೆಪ್ಟೆಂಬರ್ 24: ಕರ್ನಾಟಕ ಹೈಕೋರ್ಟ್ ನಿರ್ದೇಶನದ ಮೇರೆಗೆ ಬಿಬಿಎಂಪಿಯು ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದೆ. ಆದರೆ ಒಂದೇ ಮಳೆಗೆ ಎಲ್ಲಾ ಗುಂಡಿಗಳು ಮತ್ತೆ ಬಾಯಿ ತೆರೆದುಕೊಂಡಿವೆ.
ಸೆ.24ರೊಳಗೆ ಗುಂಡಿ ಮುಕ್ತ ಬೆಂಗಳೂರು: ಹೈಕೋರ್ಟ್ ಡೆಡ್ ಲೈನ್
ಬೆಂಗಳೂರಲ್ಲಿ ಸಾವಿರಾರು ರಸ್ತೆ ಗುಂಡಿಗಳಿದ್ದು ಜನರಿಗೆ ನಿತ್ಯ ನರಕಸದೃಶವಾಗಿ ಪರಿಣಮಿಸಿತ್ತು, ಸಾವಿರಾರು ಅಪಘಾತಗಳು ನಡೆಯುತ್ತಿತ್ತು, ಹೀಗಾಗಿ ಇದೆಲ್ಲಾ ಗುಂಡಿಗಳನ್ನು ಸೆ.24 ರೊಳಗೆ ಮುಚ್ಚಲು ಹೈಕೋರ್ಟ್ ಆದೇಶ ನೀಡಿತ್ತು. ಒಂದೊಮ್ಮೆ ಸೋಮವಾರದೊಳಗೆ ಮುಚ್ಚದಿದ್ದರೆ ಬಿಬಿಎಂಪಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಇನ್ನೆರಡು ದಿನ ಮುಂದುವರಿಯುವ ಸೂಚನೆ
ಈ ಹಿನ್ನೆಲೆಯಲ್ಲಿ ರಾತ್ರಿ ಹಗಲೆಂದು ನೋಡದೆ ರಸ್ತೆಗುಂಡಿಗಳನ್ನು ಮುಚ್ಚುವಲ್ಲಿ ಹರಸಾಹಸಪಡುತ್ತಿದೆ, ಹೀಗೆ ಕಾಟಾಚಾರಕ್ಕೆ ಒಂದೆರೆಡು ರಾತ್ರಿಯಲ್ಲಿ ಗುಂಡಿ ಮುಚ್ಚಿದರೆ ಇನ್ನೇನಾಗಬೇಕು, ವರ್ಷದಲ್ಲಿ ಮಾಡುವ ಕೆಲಸವನ್ನು ಎರಡು ರಾತ್ರಿಯಲ್ಲಿ ಬಿಬಿಎಂಪಿ ಮಾಡಿ ಮುಗಿಸಿದೆ.
ಗುಂಡಿ ಮುಚ್ಚಲು ಬಳಕೆ ಮಾಡಿದ್ದ ಡಾಂಬರ್, ಮರಳು ಎಲ್ಲವೂ ನೀರಿನಲ್ಲಿ ಹೋಮಮಾಡಿದಂತಾಗಿದೆ. ಇನ್ನೂ ಮೂರ್ನಾಲ್ಕು ದಿನ ಬೆಂಗಳೂರಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದ್ದು ಒಂದು ವಾರದೊಳಗೆ ಮತ್ತೆ ಎಲ್ಲಾ ಗುಂಡಿಗಳು ತೆರೆದುಕೊಳ್ಳುವ ಸಾಧ್ಯತೆ ಇದೆ.