ಬಿಬಿಎಂಪಿ ನಕಲಿ ಬಿಲ್ ಹಗರಣ, ಶಾಸಕರ ರಾಜೀನಾಮೆಗೆ ಎಎಪಿ ಒತ್ತಾಯ
ಬೆಂಗಳೂರು, ಅಕ್ಟೋಬರ್ 26 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗಾಂಧಿನಗರ, ರಾಜರಾಜೇಶ್ವರಿ ನಗರ ಮತ್ತು ಮಲ್ಲೇಶ್ವರಂ ವಿಭಾಗದಲ್ಲಿ ನಡೆದ ಅವ್ಯವಹಾರದಲ್ಲಿ ಭಾಗಿಯಾಗಿರುವ ಶಾಸಕರು ರಾಜೀನಾಮೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.
2008ರಿಂದ 2012ರ ತನಕ ನಡೆದ ಅವ್ಯವಹಾರ, ನಕಲಿ ಬಿಲ್ ತಯಾರಿಕೆ, ಕಡತಗಳಿಗೆ ಬೆಂಕಿ ಹಚ್ಚಿರುವುದು ಎಲ್ಲವೂ ದೊಡ್ಡ ಹಗರಣ ನಡೆದಿದೆ ಎಂಬುದನ್ನು ಹೇಳುತ್ತಿವೆ. ಇದುವರೆಗೆ ಇದರ ಬಗ್ಗೆ ತನಿಖೆ ನಡೆಸಿದ ಸಂಸ್ಥೆಗಳು ಸಹ ಹಗರಣ ನಡೆದಿದೆ ಎಂದು ಹೇಳಿವೆ ಎಂದು ಎಎಪಿ ಹೇಳಿದೆ.
ಹೈಕೋರ್ಟ್ ಬಳಿಕ ಎನ್ಜಿಟಿ ಸರದಿ: ಬಿಬಿಎಂಪಿಗೆ 5 ಕೋಟಿ ದಂಡ
ಗಾಂಧಿನಗರ , ರಾಜರಾಜೇಶ್ವರಿ ನಗರ ಮತ್ತು ಮಲ್ಲೇಶ್ವರಂ ವಿಭಾಗಗಳಲ್ಲಿ 2008 ರಿಂದ 2012 ರವರೆಗೆ ನಡೆದಿರುವ 1,539 ಕೋಟಿ ರೂ. ಗಳಿಗೂ ಹೆಚ್ಚಿನ ಮೊತ್ತದ ಕಾಮಗಾರಿಗಳಲ್ಲಿನ ಅವ್ಯವಹಾರಗಳ ಬಗ್ಗೆ ಈಗಾಗಲೇ ಅನೇಕ ತನಿಖಾ ಸಂಸ್ಥೆಗಳು ವರದಿಯನ್ನು ನೀಡಿವೆ.
ಬಿಬಿಎಂಪಿ ಸಿವಿಲ್ ಕಾಮಗಾರಿಯಲ್ಲಿ ಅಕ್ರಮ: ನ್ಯಾ.ದಾಸ್ ಸಮಿತಿ ವರದಿ
ಈ ಹಗರಣಗಳ ಕಡತಗಳು ಬಿಬಿಎಂಪಿ ಕೊಠಡಿಯಲ್ಲಿದ್ದವು. ಅದಕ್ಕೆ ಬೆಂಕಿ ಹಚ್ಚಲಾಗಿತ್ತು. ವಿಧಾನಸಭೆಯಲ್ಲಿ ಈ ಕುರಿತು ಭಾರಿ ಚರ್ಚೆ ನಡೆದ ಬಳಿಕ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು.
ನಕಲಿ ಬಿಲ್ ಹಗರಣ, ಶಾಸಕ ಮುನಿರತ್ನ ವಿರುದ್ಧ ಎಫ್ಐಆರ್
ಬಿಎಂಟಿಎಫ್ ತನಿಖೆ
2011ರ ಅಕ್ಟೋಬರ್ನಲ್ಲಿ ಬೆಂಗಳೂರು ಮಹಾನಗರ ಕಾರ್ಯಪಡೆಗೆ ( ಬಿಎಂಟಿಎಫ್) ಬಿಬಿಎಂಪಿ ಆಯುಕ್ತರು ಈ ಬಗ್ಗೆ ತನಿಖೆ ನಡೆಸಬೇಕೆಂದು ದೂರನ್ನು ಸಲ್ಲಿಸಿದ್ದರು. ಕಾರ್ಯಪಡೆಯು ಈ ಬಗ್ಗೆ ತನಿಖೆಯನ್ನು ನಡೆಸಿ ಹಗರಣ ಸಾಬೀತಾಗಿರುವ ಬಗ್ಗೆ ವರದಿ ನೀಡಿದೆ.
ಬಿಬಿಎಂಪಿ ಆಯುಕ್ತರಿಗೆ ವರದಿ
ಬಿಬಿಎಂಪಿ ಆಯುಕ್ತರ ನೇತೃತ್ವದ ತಾಂತ್ರಿಕ ಜಾಗೃತದಳ ಟಿವಿಸಿಸಿಯು ಸಹ 2011 ಅಕ್ಟೋಬರ್ನಲ್ಲಿ ಆಯುಕ್ತರಿಗೆ ನೀಡಿದ ವರದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಸ್ಪಷ್ಟಪಡಿಸಿದೆ. ಟಿವಿಸಿಸಿ ತನ್ನ ವರದಿಯಲ್ಲಿ ಸುಮಾರು 8,500 ಕಡತಗಳ 10109 ಬಿಲ್ ರಿಜಿಸ್ಟರ್ ನಂಬರ್ ಗಳಲ್ಲಿ ಅವ್ಯವಹಾರ ನಡೆದಿದ್ದು ಹಾಗೂ ನಡೆದಿರುವ ಕಾಮಗಾರಿಗಳಿಗೆ ತಾಳೆಯಾಗುತ್ತಿಲ್ಲ ಎಂದು ಹೇಳಿದೆ.
ಕಾಮಗಾರಿಗಳನ್ನು ಮಾಡದೆ ನಕಲಿ ಬಿಲ್ ಗಳನ್ನು ಸೃಷ್ಟಿಸಿ ಮಹಾನಗರ ಪಾಲಿಕೆಯಿಂದ ಹಣ ಮಂಜೂರು ಮಾಡಿಸಿಕೊಳ್ಳಲಾಗಿದೆ ಎಂಬ ಆರೋಪವನ್ನು ಸಹ ಟಿವಿಸಿಸಿಯು ತನ್ನ ವರದಿಯಲ್ಲಿ ಮಾಡಿದೆ.
ಸಿಐಡಿ ತನಿಖೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಈ ಅವ್ಯವಹಾರದ ಕಡತಗಳನ್ನು ರಹಸ್ಯವಾಗಿ ಇಡಲಾಗಿತ್ತು. ಕಡತಗಳು ಇದ್ದ ಡಾರ್ಕ್ ರೂಂಗೆ ದುಷ್ಕರ್ಮಿಗಳು ಹಚ್ಚಿದ್ದರು.
ಈ ಬಗ್ಗೆ ವಿಧಾನಸಭೆಯಲ್ಲಿ ಕಾವೇರಿದ ಚರ್ಚೆ ನಡೆದಿತ್ತು. ಸೂಕ್ತ ತನಿಖೆ ನಡೆಸಬೇಕೆಂದು ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಆಗ್ರಹಿಸಿತ್ತು. ಆಗ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು.
ಸಿಐಡಿ 285 ಕಾಮಗಾರಿಗಳ ತನಿಖೆಯನ್ನು ನಡೆಸಿ ಏಳು ವರ್ಷಗಳ ನಂತರ 2018ರ ಫೆಬ್ರವರಿ 23 ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಒಂದೊಂದು ಕಾಮಗಾರಿಗಳ ಬಗ್ಗೆ ಪ್ರತ್ಯೇಕವಾಗಿ 90 ಪ್ರಕರಣಗಳನ್ನು ದಾಖಲಿಸಿ ಕೊಂಡು ತನಿಖೆ ನಡೆಸಲಾಗಿದ್ದು, ನಗರದ ಬಹುದೊಡ್ಡ ಹಗರಣ ಎಂದು ಸಿಐಡಿ ದೋಷಾರೋಪ ಪಟ್ಟಿಯಲ್ಲಿ ಹೇಳಿದೆ.
ಹೊಸ ಸಮಿತಿ ರಚನೆ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಿವೃತ್ತ ನ್ಯಾಯಮೂರ್ತಿ ಡಾ. ನಾಗಮೋಹನದಾಸ್ ನೇತೃತ್ವದ ನಾಲ್ವರು ಸದಸ್ಯರ ಸಮಿತಿಯನ್ನು ನೇಮಿಸಿತ್ತು. ಈ ಸಮಿತಿಯು ಕಳೆದ ವರ್ಷ ತನ್ನ ಮಧ್ಯಂತರ ವರದಿಯನ್ನು ನೀಡಿತ್ತು. 600 ಪುಟಗಳ ಅಂತಿಮ ವರದಿಯನ್ನು ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಾ. ಜಿ ಪರಮೇಶ್ವರ ಅವರಿಗೆ ನೀಡಿದೆ.
ಸಮಿತಿ ಅಧ್ಯಕ್ಷರಾಗಿರುವ ನಾಗಮೋಹನ್ ದಾಸ್ ಅವರು ಹಗರಣದ ಮೊತ್ತ ಸಾವಿರಾರು ಕೋಟಿ ಆಗಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಯಾವ-ಯಾವ ಶಾಸಕರು
ಆಯುಕ್ತರ ತಾಂತ್ರಿಕ ಸಮಿತಿ , ಲೋಕಾಯುಕ್ತ , ಬೆಂಗಳೂರು ಮಹಾನಗರ ಕಾರ್ಯಪಡೆ ಹಾಗೂ ನಿವೃತ್ತ ನ್ಯಾಯಾಧೀಶರ ನೇತೃತ್ವದ ನಾಲ್ವರು ಸದಸ್ಯರ ಸದಸ್ಯರ ಸಮಿತಿಯು ಈ ಹಗರಣವು ನಡೆದಿರುವುದು ಸ್ಪಷ್ಟವಾಗಿದ್ದು ಮಹಾನಗರ ಪಾಲಿಕೆಗೆ ಸಾವಿರಾರು ಕೋಟಿ ರೂಗಳ ನಷ್ಟವಾಗಿದ್ದು ತಪ್ಪಿತಸ್ಥರಿಗೆ ಆಗಲೇಬೇಕು ಎಂದು ಹೇಳಿದೆ.
ಆಮ್ ಆದ್ಮಿ ಪಕ್ಷದ ಕರ್ನಾಟಕ ಘಟಕವು ಈ ಕೂಡಲೇ ಈ ಮೂರೂ ಕ್ಷೇತ್ರಗಳಲ್ಲಿ ಆಗ ಮತ್ತು ಪ್ರಸ್ತುತ ಶಾಸಕರಾಗಿರುವ ದಿನೇಶ್ ಗುಂಡೂರಾವ್, ಮುನಿರತ್ನ ಹಾಗೂ ಡಾ .ಅಶ್ವತ್ಥ ನಾರಾಯಣ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದೆ.