ಜಲಾವೃತ ತಡೆಯಲು ಬಿಬಿಎಂಪಿ ವಿಫಲ- ಬೆಳತ್ತೂರಿನಲ್ಲಿ ಪ್ರತಿಭಟನೆ
ಬೆಂಗಳೂರು ಆಗಸ್ಟ್ 8: ಸಿಲಿಕಾನ್ ಸಿಟಿಯಲ್ಲಿ ಬಿಟ್ಟುಬಿಡದಂತೆ ಸುರಿಯುತ್ತಿರುವ ಮಳೆಯಿಂದಾಗಿ ಜನ ರೋಸಿ ಹೋಗಿದ್ದಾರೆ. ಮುಂದಿನ ಮೂರು ದಿನಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಬಗ್ಗೆ ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಈ ನಡುವೆ ನಿರಂತರ ಮಳೆ ಅನೇಕ ಅನಾನುಕೂಲತೆಯನ್ನು ಉಂಟುಮಾಡಿದೆ. ಹೀಗಾಗಿ ವೈಟ್ಫೀಲ್ಡ್ ಬಳಿಯ ಬೆಳತ್ತೂರಿನ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಳೆಯಿಂದಾಗುವ ಸಮಸ್ಯೆಗಳನ್ನು ತಡೆಯುವಲ್ಲಿ ವಿಫಲವಾದ ಕಾರಣ ವೈಟ್ಫೀಲ್ಡ್ ಬಳಿಯ ಬೆಳತ್ತೂರಿನ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪದೇ ಪದೇ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದಿದ್ದರೆ ಬಿಬಿಎಂಪಿ ತೆರಿಗೆ ವಸೂಲಿ ಮಾಡುವುದರಲ್ಲಿ ಅರ್ಥವೇನು ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ತೆರೆದ ಚರಂಡಿಗಳಿಂದ ಉಂಟಾಗಿರುವ ಗುಂಡಿಗಳು ಮತ್ತು ಅಪಾಯಗಳ ಬಗ್ಗೆ ದೂರಿದ್ದಾರೆ. ತಗ್ಗು ಪ್ರದೇಶದ ರಸ್ತೆಗಳು ಮತ್ತು ಪ್ರದೇಶಗಳಲ್ಲಿ ಮಳೆ ನೀರಿನ ಪ್ರವಾಹ ಮುಂದುವರಿದಿದ್ದು ಜನ ಹೈರಾಣಾಗಿದ್ದಾರೆ. ಇದರಿಂದ ಸಂಚಾರಕ್ಕೆ ಮಾತ್ರವಲ್ಲದೇ ವಾಸಿಸಲೂ ಯೋಗ್ಯವಲ್ಲದ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಸಾಯಿ ಲೇಔಟ್ನ ರಮೇಶ್ ಎಸ್ ಸೇರಿದಂತೆ ಅನೇಕರು ಅನಾರೋಗ್ಯಕ್ಕೆ ಒಳಗಾಗುವ ಭಯದಲ್ಲಿದ್ದಾರೆ. ಆದರೆ ಬಿಬಿಎಂಪಿ ಅಧಿಕಾರಿಗಳು ಹೇಳುವುದೇ ಬೇರೆ.
ಬಿಬಿಎಂಪಿ ನಿಯಂತ್ರಣ ಕೊಠಡಿ ಪ್ರಕಾರ, ಕಳೆದ ಎರಡು ದಿನಗಳಿಂದ ಮತ್ತಿಕೆರೆ ಶಂಕರಪುರಂ ಮತ್ತು ಕುವೆಂಪು ವೃತ್ತದಲ್ಲಿ ತಲಾ ಒಂದೊಂದು ಮರಗಳು ಉರುಳಿವೆ. ಕಲ್ಯಾಣ್ ನಗರದಲ್ಲಿ ಮರದ ಕೊಂಬೆಗಳು ಬಿದ್ದಿವೆ. ಮಳೆ ಕಡಿಮೆಯಾಗಿರುವುದರಿಂದ ರಸ್ತೆ, ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಕಂಟ್ರೋಲ್ ರೂಂ ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ 3 ದಿನಗಳಲ್ಲಿ ಹೆಚ್ಚಿನ ಮಳೆ
IMD ಪ್ರಕಾರ, ಬೆಂಗಳೂರಿನಲ್ಲಿ ಮುಂದಿನ ಮೂರು ದಿನಗಳವರೆಗೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಕರಾವಳಿ ಕರ್ನಾಟಕ ಮತ್ತು ಮಲೆನಾಡು ಪ್ರದೇಶದಲ್ಲಿ ಹಳದಿ ಅಲರ್ಟ್ನಲ್ಲಿದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ, ಉತ್ತರ ಕರ್ನಾಟಕದ ಬೆಳಗಾವಿಯಲ್ಲಿಯೂ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ 12 ಮಿಮೀ ಮಳೆಯಾಗಿದೆ.
Recommended Video