ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಬರ್ಬರ ಹತ್ಯೆ ,ಆರೋಪಿಗಳು ಪರಾರಿ
ಬೆಂಗಳೂರು, ಜೂ. 24: ಛಲವಾದಿ ಪಾಳ್ಯದ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಅನ್ನದಾನ ಮಾಡಲು ಹೋಗಿದ್ದ ರೇಖಾ ಅವರನ್ನು ಹೊರಗೆ ಕರೆಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕೊಲೆ ಮಾಡುವ ಮುನ್ನ ಕಚೇರಿ ಮುಂದಿದ್ದ ಸಿಸಿಟಿವಿ ಕ್ಯಾಮರಾಗಳನ್ನು ತಿರುಗಿಸಿ ಕೊಲೆ ಮಾಡಿರುವುದು ನೋಡಿದರೆ, ಇದೊಂದು ಪ್ರೀಪ್ಲ್ಯಾನ್ ಮರ್ಡರ್ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. 2018 ರಲ್ಲಿ ರೇಖಾ ಪತ್ನಿ ಕದಿರೇಶ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.ಇದೀಗ ಪತ್ನಿಯನ್ನು ಕೊಲೆ ಮಾಡಿರುವುದು ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ.
Recommended Video
ಛಲವಾದಿ ಪಾಳ್ಯದ ಮಾಜಿ ಕಾರ್ಪೊರೇಟರ್ ಅಗಿದ್ದ ರೇಖಾ ಕದಿರೇಶ್ ಫ್ಲವರ್ ಗಾರ್ಡನ್ನಲ್ಲಿ ವಾಸವಾಗಿದ್ದರು.ಸೋಂಕು ಹಿನ್ನೆಲೆಯಲ್ಲಿ ಬಡವರಿಗೆ ಅನ್ನದಾನ ಮಾಡುತ್ತಿದ್ದರು. ಗುರುವಾರ ಬೆಳಗ್ಗೆ ಬೆಳಗ್ಗೆ 9.30 ರ ಸುಮಾರಿಗೆ ಛಲವಾದಿ ಪಾಳ್ಯದಲ್ಲಿರುವ ಕಚೇರಿಗೆ ರೇಖಾ ಬಂದಿದ್ದರು. ಕಚೇರಿಯಿಂದ ಹೊರಗೆ ಕರೆಸಿಕೊಳ್ಳುವ ಮುನ್ನ ಕಚೇರಿಯ ಎರಡು ಸಿಸಿಟಿವಿ ಕ್ಯಾಮರಾಗಳನ್ನು ಮೇಲಕ್ಕೆ ತಿರುಗಿಸಿದ್ದಾರೆ. ಹೊರಗೆ ಬಂದ ರೇಖಾ ಕದಿರೇಶ್ ಅವರನ್ನು ಬೆಳಗ್ಗೆ 10.30 ರ ಸುಮಾರಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಗಾಯಗೊಂಡ ರೇಖಾ ಅವರನ್ನು ಕೆಂಪೇಗೌಡ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ರೇಖಾ ಅವರ ಪತಿ ಕದಿರೇಶ್ರನ್ನು ಶೋಭನ್ ಮತ್ತು ಸಹಚರರು 2018 ರಂದು ಮುನೇಶ್ವರ ದೇವಸ್ಥಾನದ ಬಳಿ ಕೊಚ್ಚಿ ಕೊಲೆ ಮಾಡಿದ್ದರು. ಟೆಂಡರ್ ವಿಚಾರವಾಗಿ ಕದಿರೇಶ್ರನ್ನು ಕೊಂದಿದ್ದ ಶೋಭನ್ ಮತ್ತು ಸಹಚರರು ವಕೀಲರ ಸೋಗಿನಲ್ಲಿ ನ್ಯಾಯಾಲಯಕ್ಕೆ ಶರಣಾಗಿದ್ದರು. ಇದೀಗ ಮೂರು ವರ್ಷದ ಬಳಿಕ ರೇಖಾ ಕದಿರೇಶ್ ಅವರನ್ನು ಕೊಲೆ ಮಾಡಿದ್ದು ರೇಖಾ ಅವರ ಬಾಡಿಗಾರ್ಡ್ ಪೀಟರ್ ಸಂಬಂಧಿ ಸ್ಟೀಫನ್ ಮತ್ತು ಸುರೇಶ್ ಅವರು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಪೀಟರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಎಂಟು ಪೊಲೀಸ್ ತಂಡಗಳನ್ನು ರಚನೆ ಮಾಡಲಾಗಿದೆ.
ಮೊದಲೇ ಪ್ಲಾನ್: ರೇಖಾ ಕದಿರೇಶ್ ಒಬ್ಬರೇ ಕಚೇರಿಯಲ್ಲಿದ್ದರು. ಈ ವೇಳೆ ಕಚೇರಿ ಶುದ್ಧ ಗೊಳಿಸಲು ಒಬ್ಬ ವ್ಯಕ್ತಿಯಷ್ಟೇ ಇದ್ದ. ಈ ವೇಳೆ ಹೊರಗೆ ಕರೆಸಿದ ಮೂವರು ಕಿರಾತಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ರೇಖಾ ಕದಿರೇಶ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರತರ ಪೆಟ್ಟಾಗಿರುವ ಕಾರಣ ಸಾವನ್ನಪ್ಪಿದ್ದಾರೆ. ಕದಿರೇಶ್ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಸ್ಟೀಫನ್ ಮತ್ತು ಸಹಚರರು ಇತ್ತೀಚೆಗೆ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. ಗಂಡ ಹತ್ಯೆಯಾದ ಮೂರು ವರ್ಷದಲ್ಲೇ ಪತ್ನಿಯನ್ನು ಸಹ ಕೊಲೆ ಮಾಡಿದ್ದಾರೆ. ಕೊಲೆಗೆ ಟೆಂಡರ್ ಹಾಗೂ ಹಳೇ ದ್ವೇಷ ಕಾರಣ ಎಂದು ಹೇಳಲಾಗುತ್ತಿದೆ.
ಡಿಸಿಪಿ ಸ್ಪಷ್ಟನೆ: ರೇಖಾ ಕದಿರೇಶ್ ಕಚೇರಿಯಲ್ಲಿದ್ದಾಗ ಮೂವರು ದುಷ್ಕರ್ಮಿಗಳು ಹೊರಗೆ ಕರೆಸಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಕೊಲೆ ಮಾಡುವ ಬಗ್ಗೆ ಮೊದಲೇ ಪ್ಲಾನ್ ಮಾಡಿದ್ದಾರೆ. ಹೀಗಾಗಿ ಕಚೇರಿಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಮೇಲಕ್ಕೆ ತಿರುಗಿಸಿ ನಂತರ ಹಲ್ಲೆ ಮಾಡಿದ್ದಾರೆ. ಗಾಯಗೊಂಡ ರೇಖಾ ಕದಿರೇಶ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಆರೋಪಿಗಳ ಪತ್ತೆಗೆ ಎಂಟು ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.