ರಸ್ತೆಗುಂಡಿ ಮುಚ್ಚದೆ ನಿರ್ಲಕ್ಷ್ಯ, ಅಪಘಾತ: ಬಿಬಿಎಂಪಿ ಎಂಜಿನಿಯರ್ ಬಂಧನ
ಬೆಂಗಳೂರು, ಡಿಸೆಂಬರ್ 03: ನಗರದಲ್ಲಿ ರಸ್ತೆಗುಂಡಿಗಳಿಂದಾಗಿ ಅಪಘಾತ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ.
ರಸ್ತೆ ನಡುವಿನ ಗುಂಡಿಯಿಂದ ಅಪಘಾತವಾಗಿ ಯುವಕನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು, ಬಿಬಿಎಂಪಿ ಎಂಜಿನಿಯರ್ ಅವರನ್ನು ಪ್ರಮುಖ ಆರೋಪಿ ಎಂದು ಪರಿಗಣಿಸಿ ಬಂಧಿಸಿ, ಬಿಡುಗಡೆ ಮಾಡಿದ್ದಾರೆ. ರಸ್ತೆ ಕಾಮಗಾರಿ ನಿರ್ವಹಿಸಿದ್ದ ಗುತ್ತಿಗೆದಾರನನ್ನೂ ಆರೋಪಿ ಎಂದು ಪರಿಗಣಿಸಲಾಗಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ರಸ್ತೆಗುಂಡಿ ತಪ್ಪಿಸಲು ಹೋಗಿ ವೃದ್ಧರೊಬ್ಬರು ಬಲಿಯಾಗಿದ್ದರು. ಖುರ್ಷಿದ್ ಅಹ್ಮದ್ (60) ಮೃತ ವ್ಯಕ್ತಿಯಾಗಿದ್ದಾರೆ. ಜಯನಗರದ ನಿವಾಸಿಯಾಗಿರುವ ಖುರ್ಷಿದ್ ಅಹ್ಮದ್ ಅವರು ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಮಂಗನಹಳ್ಳಿ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ರಸ್ತೆ ಗುಂಡಿ ತಪ್ಪಿಸಲು ಹೋಗಿ ಬೈಕ್ ನಿಂದ ಬಿದ್ದು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಮೃತ ಖುರ್ಷಿದ್ ಅಂಗವಿಕಲರಾಗಿದ್ದರು. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವ್ಯಕ್ತಿ ಮರಣೋತ್ತರ ಪರೀಕ್ಷೆ ನಡೆದಿದೆ. ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಬೆಂಗಳೂರು; ರಸ್ತೆ ಗುಂಡಿ ಮುಚ್ಚಲು ಮತ್ತೊಂದು ಗಡುವು ಕೊಟ್ಟ ಸಚಿವರು
ಈ ನಡುವೆ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ರಸ್ತೆ ಗುಂಡಿ ಮುಚ್ಚುವ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ರಸ್ತೆ ಗುಂಡಿ ಮುಚ್ಚವಂತೆಯೂ ಸೂಚನೆ ನೀಡಲಾಗಿದೆ. ಮಳೆ ನಿಂತ ತಕ್ಷಣ ಯುದ್ಧೋಪಾದಿಯಲ್ಲಿ ಕೆಲಸ ಆರಂಭವಾಗುತ್ತೆ. ಗುಂಡಿ ಮುಚ್ಚುವ ಕೆಲಸ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಅಕ್ಟೋಬರ್ ತಿಂಗಳಿನಲ್ಲೂ ನಡೆದಿತ್ತು ಅಪಘಾತ, ರಸ್ತೆಗುಂಡಿ ತಪ್ಪಿಸಲು ಹೋಗಿ ಸ್ಕೂಟರ್ ನಿಂದ ಬಿದ್ದು ಸಂಭವಿಸಿದ ಅಪಘಾತದಲ್ಲಿ ಯುವತಿಯೊಬ್ಬರು ಮೃತಪಟ್ಟಿದ್ದಾರೆ.
ನಗರದ ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ಬಳಿ ದ್ವಿಚಕ್ರ ವಾಹನದಲ್ಲಿ ಒಂದೇ ಕುಟುಂಬದ ಮೂವರು ಚಲಿಸುತ್ತಿದ್ದರು. ಕಾಚೋಹಳ್ಳಿ ಕ್ರಾಸ್ ಬಳಿ ರಸ್ತೆ ಮಧ್ಯೆಯಿದ್ದ ಗುಂಡಿ ತಪ್ಪಿಸಲು ಹೋಗಿ ಆಯತಪ್ಪಿ ಸ್ಕೂಟರ್ ಸಮೇತ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಟಿಪ್ಪರ್ ಲಾರಿಯೊಂದು ಹರಿದು ಆಕೆ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮೃತರನ್ನು ನಗರದ ಮೈಸೂರು ರಸ್ತೆಯ ಗೋರಿಪಾಳ್ಯ ನಿವಾಸಿ ನುಬಿಯಾ (17) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಆಕೆಯ ಸಹೋದರಿ ಅಫ್ರಿನ್ (15) ಮತ್ತು ವಾಹನ ಚಲಾಯಿಸುತ್ತಿದ್ದ ಅಹ್ರಾನ್ ಗೆ ಗಂಭೀರ ಗಾಯಗಳಾಗಿವೆ.
ಮೂವರು ತಾವರೆಕೆರೆಯಿಂದ ಹಿಂತಿರುಗುತ್ತಿದ್ದಾಗ, ಕಾಚೋಹಳ್ಳಿ ಕ್ರಾಸ್ ಬಳಿಯ ಚಿಕ್ಕಗೊಲ್ಲರಹಟ್ಟಿಯ ಮಾಧವ ಆಸ್ಪತ್ರೆಯ ಬಳಿ ಬೆಳಿಗ್ಗೆ 10.40 ರ ಸುಮಾರಿಗೆ ಹಾದುಹೋಗುವಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿಯನ್ನು ತಪ್ಪಿಸಲು ಪ್ರಯತ್ನಿಸುವಾಗ ಅಹ್ರಾನ್ ವಾಹನದ ನಿಯಂತ್ರಣ ಕಳೆದುಕೊಂಡರು ಮತ್ತು ಮೂವರು ಸ್ಕೂಟರ್ ನಿಂದ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಪ್ರಕರಣದ ಹಿನ್ನಲೆ
ನವೆಂಬರ್ 27ರಂದು ಮಧ್ಯಾಹ್ನ 1.30ರ ಸುಮಾರಿನಲ್ಲಿ ಅಜೀಂ ಅಹ್ಮದ್ (21) ಎಂಬ ಯುವಕ ಹೋಂಡಾ ಡಿಯೋ ಸ್ಕೂಟರ್ನಲ್ಲಿ ಥಣಿಸಂದ್ರದಿಂದ ಹೆಗಡೆನಗರಕ್ಕೆ ಪ್ರಯಾಣಿಸುತ್ತಿದ್ದರು. ಥಣಿಸಂದ್ರ ಮುಖ್ಯರಸ್ತೆಯ ಪ್ರಕಾಶ್ ಹಾರ್ಡ್ವೇರ್ ಮುಂಭಾಗ ರಸ್ತೆಯ ಎಡಭಾಗದಲ್ಲಿ ಬಿದ್ದಿದ್ದ ಗುಂಡಿಯನ್ನು ಗಮಿನಿಸದೆ, ವಾಹನ ಅದಕ್ಕೆ ಇಳಿದು ಆಯತಪ್ಪಿ ಅಜೀಂ ಸ್ಕೂಟರ್ ಸಮೇತ ಕೆಳಗೆ ಬಿದ್ದಿದ್ದಾರೆ.
ಅದೇ ಸಮಯಕ್ಕೆ ವೇಗವಾಗಿ ಬಂದ 407 ಸರಕು ಸಾಗಾಣಿಕೆ ವಾಹನ ಅಜೀಂನ ಬಲಗಾಲು ತೊಡೆ ಮತ್ತು ಬಲಗೈಗೆ ತೀವ್ರವಾಗಿ ಗಾಯವಾಗಿದೆ. ಆತನನ್ನು ಚಿಕಿತ್ಸೆಗೆಗಾಗಿ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಸಂಜೆ 4.30ರ ಸುಮಾರಿಗೆ ಮೃತ ಪಟ್ಟಿದ್ದಾನೆ.
ಪ್ರಕರಣ ದಾಖಲು
ಈ ಕುರಿತು ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಐಪಿಸಿ 279, 336, 283, 304 (ಎ) ಹಾಗೂ ಎಎಂವಿ ಕಾಯ್ದೆ 134 (ಎ ಮತ್ತು ಬಿ) ಅಡಿ ಪ್ರಕರಣ ದಾಖಲಿಸಲಾಗಿದೆ.
ಅಧಿಕಾರಿಗಳಿಗೆ ಬಿಸಿ
ರಸ್ತೆ ಕಾಮಗಾರಿ ಉಸ್ತುವಾರಿ ಹೊಂದಿದ್ದ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಇಂಜಿಯರ್ ಶ್ರೀಮತಿ ಸವಿತಾ ಅವರು ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಯನ್ನು ಸಮರ್ಪಕವಾಗಿ ಮುಚ್ಚದೆ ನಿರ್ಲಕ್ಷ್ಯತೆ ವಹಿಸಿದ್ದರಿರಿಂದ ಸವಾರ ಮೃತಪಟ್ಟಿರುವುದಾಗಿ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದರು.
ಎಂಜಿನಿಯರ್ ಆರೋಪಿ
ಸುಪ್ರೀಂಕೋರ್ಟ್ ನಿಯಮಾನುಸಾರ ಎಂಜಿನಿಯರ್ ಅವರನ್ನು ಪ್ರಕರಣದ ಪ್ರಮುಖ ಆರೋಪಿಯನ್ನಾಗಿ, ಸರಕು ಸಾಗಾಣಿಕೆ 407 ವಾಹನದ ಚಾಲಕ ರವಿಯನ್ನು ಎರಡನೆ ಆರೋಪಿಯನ್ನಾಗಿಸಿ ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದ್ದು ರಸ್ತೆ ಕಾಮಗಾರಿ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರನ್ನು ಮೂರನೇ ಆರೋಪಿಯನ್ನಾಗಿ ಪರಿಗಣಿಸಲಾಗಿದೆ. ಅವರನ್ನು ಶೀಘ್ರವೇ ಬಂಧಿಸಿ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.
Recommended Video