ಬಿಬಿಎಂಪಿ ಚುನಾವಣೆ; ಗುಪ್ತಚರ ವರದಿಗೆ ಬೆಚ್ಚಿಬಿತ್ತೇ ಕಾಂಗ್ರೆಸ್?
ಬೆಂಗಳೂರು, ಜು 1: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣಾ ಆಯೋಗ ದಿನಾಂಕ ಘೋಷಿಸಿದ್ದರೂ, ವಿಚಾರ ಸುಪ್ರೀಂಕೋರ್ಟಿನಲ್ಲಿ ಇರುವುದರಿಂದ ಇನ್ನೆರಡು ದಿನಗಳಲ್ಲಿ ಇರುವ ಎಲ್ಲಾ ಅನಿಶ್ಚಿತತೆ ದೂರವಾಗುವ ಸಾಧ್ಯತೆಯಿದೆ.
ಚುನಾವಣೆ ಮುಂದೂಡಲು ಮೊದಲಿನಿಂದಲೂ ಸರ್ವಪ್ರಯತ್ನ ನಡೆಸುತ್ತಿರುವ ಸಿದ್ದರಾಮಯ್ಯ ಸರಕಾರ ಕೊನೆಯ ಅಸ್ತ್ರವಾಗಿ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದೆ.
ಹೊಸ ಮೀಸಲಾತಿ ಪಟ್ಟಿಯ ನೆಪವನ್ನು ಮುಂದೊಡ್ಡಿ ಚುನಾವಣೆ ಮುಂದೂಡಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಸರಕಾರದ ಈ ನಡೆಯ ಹಿಂದೆ ಬೇರೇಯೇ ವಿಷಯಯಿದೆ ಎನ್ನುವ ಸುದ್ದಿಯಿದೆ. (ಬಿಬಿಎಂಪಿ ಚುನಾವಣೆಗಾಗಿ ಬಿಗ್ ಬೆಂಗಳೂರು ಫೈಟ್)
ಗುಪ್ತಚರದಳ ಇಲಾಖೆ ನೀಡಿದ ವರದಿಯಿಂದಾಗಿ ಕಾಂಗ್ರೆಸ್ ಪಕ್ಷ ಚುನಾವಣೆಯನ್ನು ಸದ್ಯಕ್ಕೆ ನಡೆಸಲು ಹಿಂದೇಟು ಹಾಕುತ್ತಿದೆ ಎನ್ನಲಾಗುತ್ತಿದೆ.
ಸದ್ಯದ ಪರಿಸ್ಥಿತಿಯಲ್ಲಿ ಬಿಬಿಎಂಪಿಗೆ ಚುನಾವಣೆ ನಡೆದರೆ ಕಾಂಗ್ರೆಸ್ಸಿಗೆ ಲಾಭಕ್ಕಿಂತ, ನಷ್ಟವಾಗುವ ಸಾಧ್ಯತೆಯೇ ಹೆಚ್ಚೆಂದು ಗುಪ್ತಚರ ಇಲಾಖೆ ಮುಖ್ಯಮಂತ್ರಿಗಳಿಗೆ ವರದಿ ನೀಡಿರುವುದರಿಂದ, ಕಾಂಗ್ರೆಸ್ ಸುಪ್ರೀಂಕೋರ್ಟ್ ಮೊರೆಹೋಗಲು ನಿರ್ಧರಿಸಿತು ಎನ್ನುವ ಮಾಹಿತಿ ಲಭ್ಯವಾಗಿದೆ.
ಇಂಟರೆಸ್ಟಿಂಗ್ ಸಂಗತಿಯೆಂದರೆ, ಕಳೆದ ಬಾರಿ 2010ರಲ್ಲಿ ಬಿಬಿಎಂಪಿ ಚುನಾವಣೆ ಆದಾಗ ಕೂಡ ಗುಪ್ತಚರ ಇಲಾಖೆ ಬಿಜೆಪಿಗೆ ಸೋಲುಂಟಾಗುತ್ತದೆಂದು ವರದಿ ನೀಡಿತ್ತು. ಆದರೆ, ಫಲಿತಾಂಶ ಪ್ರಕಟವಾದಾಗ, ಲೆಕ್ಕಾಚಾರ ತಿರುವುಮುರುವಾಗಿ ಬಿಜೆಪಿ ಜಯಭೇರಿ ಬಾರಿಸಿತ್ತು. ಅದನ್ನೀಗ ಇಲ್ಲಿ ಸ್ಮರಿಸಬಹುದು.
ವರದಿಯಲ್ಲಿ ಏನಿದೆ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಆತಂಕ ತಂದ ವರದಿ
ಕೆಲವು ದಿನಗಳ ಹಿಂದೆಯೇ ಸಿಎಂ ಸಿದ್ದರಾಮಯ್ಯ ಅವರು ಗುಪ್ತಚರದಳ ಇಲಾಖೆಯಿಂದ ವರದಿ ತರಿಸಿಕೊಂಡಿದ್ದಾರೆ. ಇದಾದ ನಂತರವೇ ಮುಖ್ಯಮಂತ್ರಿಗಳು ಬೆಂಗಳೂರು ನಗರ ಪ್ರದಕ್ಷಿಣೆ ಆರಂಭಿಸಿದ್ದು ಎಂದೇ ಉಲ್ಲೇಖಿಸಲಾಗುತ್ತಿದೆ.
ಬಿಬಿಎಂಪಿ ಹಾಲಿ ಬಲಾಬಲ
ಒಟ್ಟು
ವಾರ್ಡ್
:
198
ಬಿಜೆಪಿ
:
111
ಕಾಂಗ್ರೆಸ್
:
65
ಜೆಡಿಎಸ್
:
15
ಇತರರು
:
07
ಗುಪ್ತಚರ ಇಲಾಖೆ ನೀಡಿದ ವರದಿ ಏನು ಹೇಳುತ್ತೆ?
ಈಗ ಚುನಾವಣೆ ನಡೆದರೆ ಕಾಂಗ್ರೆಸ್ ಪಕ್ಷ ಕಳೆದ ಬಿಬಿಂಎಪಿ ಚುನಾವಣೆಯಲ್ಲಿ ಏನು ಸ್ಥಾನ ಪಡೆದಿತ್ತೋ, ಅಷ್ಟೇ ಸ್ಥಾನ ಪಡೆಯಬಹುದು ಎಂದು ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ. ಮೂಲಗಳ ಪ್ರಕಾರ ಕಾಂಗ್ರೆಸ್ ಅಬ್ಬಬ್ಬಾ ಎಂದರೆ ಎಪ್ಪತ್ತು ಸ್ಥಾನ ಪಡೆಯಬಹುದು ಎನ್ನುವ ವರದಿ ಮುಖ್ಯಮಂತ್ರಿಗಳನ್ನು ಚಿಂತೆಗೀಡುಮಾಡಿದೆ.
ಅಧಿಕಾರಕ್ಕೆ ಬರಲು ನೂರು ಸೀಟು
ಆಡಳಿತ ಪಕ್ಷದಲ್ಲಿ ಇದ್ದು ಕೊಂಡು ಚುನಾವಣೆ ಗೆಲ್ಲಲಾಗದಿದ್ದರೆ ಮುಖಭಂಗ ಖಂಡಿತ. ಅಧಿಕಾರಕ್ಕೆ ಬರಲು ಕನಿಷ್ಠ ನೂರು ಕ್ಷೇತ್ರದಲ್ಲಿ ಜಯ ಸಾಧಿಸಬೇಕಾಗಿದೆ. ಇದರಿಂದ ಸದ್ಯಕ್ಕೆ ರಿಲೀಫ್ ಪಡೆದುಕೊಳ್ಳಲು ಕೊನೆಯ ತಂತ್ರವಾಗಿ ಕಾಂಗ್ರೆಸ್ ಸುಪ್ರೀಂ ಮೊರೆ ಹೋಗಿದ್ದು ಎಂದು ವಾಖ್ಯಾನಿಸಲಾಗುತ್ತಿದೆ.
ಕಾಂಗ್ರೆಸ್ ಆಂತರಿಕ ವರದಿ
ಗುಪ್ತಚರದಳ ವರದಿಯ ಬೆನ್ನಲ್ಲೇ, ಈಗಾಗಲೇ ಕಾಂಗ್ರೆಸ್ ಖಾಸಗಿ ಸಂಸ್ಥೆಗಳಿಂದ ಸಮೀಕ್ಷೆ ನಡೆಸುತ್ತಿದೆ. ಇದರ ವರದಿ ಜುಲೈ ಮೊದಲ ವಾರದಲ್ಲಿ ಬರುವ ಸಾಧ್ಯತೆಯಿದೆ. ಇದೆರಡನ್ನು ಪರಿಶೀಲಿಸಿ ಮುಂದಿನ ಕಾರ್ಯತಂತ್ರ ರೂಪಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎನ್ನುವ ಸುದ್ದಿಯಿದೆ.
ಪಕ್ಷದಲ್ಲೇ ಅಪಸ್ವರ
ಬಿಬಿಎಂಪಿ ಚುನಾವಣೆ ಎದುರಿಸದೇ, ಮುಂದೂಡುವ ತಂತ್ರಕ್ಕೆ ಕಾಂಗ್ರೆಸ್ ಪಕ್ಷದಲ್ಲೇ ಭಿನ್ನಾಭಿಪ್ರಾಯವಿದೆ. ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ, ಬಿಬಿಎಂಪಿ ಚುನಾವಣೆ ಮುಂದೂಡಲು ಪ್ರಯತ್ನಿಸುತ್ತಿರುವುದಕ್ಕೆ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು, ಅದೂ ಮಾಜಿ ಪ್ರಧಾನಿ ದೇವೇಗೌಡರ ಸಮ್ಮುಖದಲ್ಲಿ.