ಬಿಬಿಎಂಪಿ ವಾರ್ಡ್ ಮೀಸಲಾತಿ ಪಟ್ಟಿ ಬುಧವಾರವೇ ಬಿಡುಗಡೆ?
ಬೆಂಗಳೂರು, ಆಗಸ್ಟ್ 03: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯ ಮೀಸಲು ಪಟ್ಟಿಯನ್ನು ನೀಡಲು ಸುಪ್ರೀಂಕೋರ್ಟ್ ಆಗಸ್ಟ್ 4 ಗುರುವಾರದವರೆಗೆ ಗಡುವು ನೀಡಿದೆ. ಸರ್ಕಾರ ಬುಧವಾರವೇ ಮೀಸಲು ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
ಬಿಬಿಎಂಪಿ 198 ವಾರ್ಡ್ ಮರುವಿಂಗಡಣೆ ಮಾಡಿ 243ಕ್ಕೆ ಏರಿಕೆ ಮಾಡಲಾಗಿದೆ. ಈ ವಾರ್ಡ್ಗಳಿಗೆ ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡಬೇಕಿದೆ. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ 2 ವರ್ಷಗಳಿಂದ ನ್ಯಾಯಾಲಯದಲ್ಲಿ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಹೈಕೋರ್ಟ್ 198 ವಾರ್ಡ್ಗಳಿಗೆ ಚುನಾವಣೆಯನ್ನು ನಡೆಸುವಂತೆ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ಗೆ ಮೇಲ್ಮನವಿಯನ್ನು ಸಲ್ಲಿಸಿದೆ. ಈ ಅರ್ಜಿಯ ವಿಚಾರಣೆ ಪ್ರಗತಿಯಲ್ಲಿದೆ.
ಬಿಬಿಎಂಪಿ ಮಾಜಿ ಮಹಿಳಾ ಕಾರ್ಪೋರೇಟರ್ಗೆ ಸೇರಿದ 3.35 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠ ಜುಲೈ 28ರಂದು ಅರ್ಜಿ ವಿಚಾರಣೆ ನಡೆಸಿತ್ತು. ಈ ವೇಳೆಯಲ್ಲಿ ಒಂದು ವಾರದೊಳಗೆ ಬಿಬಿಎಂಪಿಯ 243 ವಾರ್ಡ್ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಗಡುವನ್ನು ನೀಡಿತ್ತು.
ಈ ಗಡುವು ಗುರುವಾರ ಮುಗಿಯಲಿದ್ದು, ಸರ್ಕಾರ ಆಗಸ್ಟ್ 3 (ಬುಧವಾರ) ಮೀಸಲಾತಿ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಗಳಿದೆ. ಇನ್ನು ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡಿ ಸಾರ್ವಜನಿಕರ ಆಕ್ಷೇಪಣೆಗೆ ಅವಕಾಶವನ್ನು ನೀಡಬೇಕಿದೆ.
ಸುಪ್ರೀಂನಿಂದ ಮತ್ತೊಮ್ಮೆ ಛೀಮಾರಿ?
ಬಿಬಿಎಂಪಿಯ 243 ವಾರ್ಡ್ಗಳ ಮೀಸಲಾತಿಗೆ ಸಂಬಂಧಿಸಿದಂತೆ ವರದಿ ಸಲ್ಲಿಕೆಗೆ ನ್ಯಾ. ಭಕ್ತವತ್ಸಲ ಸಮಿತಿಯನ್ನು ನೇಮಿಸಲಾಗಿತ್ತು. ಈ ಸಮಿತಿಯು ಜುಲೈ 21ರಂದು ತನ್ನ ವರದಿಯನ್ನು ಸಲ್ಲಿಕೆ ಮಾಡಿತ್ತು. ಇದನ್ನು ಪರಿಶೀಲಿಸಿದ ಸರ್ಕಾರ ಕರಡು ವರದಿಯನ್ನು ಸಾರ್ವಜನಿಕ ಪ್ರಕಟಣೆ ಮಾಡುವಲ್ಲಿ ವಿಳಂಬ ಧೋರಣೆಯನ್ನು ಅನುಸರಿಸಿತ್ತು.
ಸುಪ್ರೀಂಕೋರ್ಟ್ ಒಂದು ವಾರದ ಗಡುವನ್ನು ನೀಡಿದ್ದರು ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸುವಲ್ಲಿ ಸರ್ಕಾರ ಮೀನಾಮೇಷವನ್ನು ಎಣಿಸುತ್ತಿದೆ. ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡದೇ ಇದ್ದರೆ ಸುಪ್ರೀಂ ಅಂಗಳದಲ್ಲಿ ಮತ್ತೊಮ್ಮೆ ಸರ್ಕಾರಕ್ಕೆ ಛೀಮಾರಿ ಹಾಕುವ ಸಾಧ್ಯತೆಗಳಿವೆ.
ಶಾಸಕರು ಸಚಿವರಿಂದಲೇ ಸಹಕಾರ?
ಬಿಬಿಎಂಪಿ ಚುನಾವಣೆಯನ್ನು ಹೇಗಾದರೂ ಮಾಡಿ ಮುಂದೂಡಬೇಕು ಎಂಬ ಹುನ್ನಾರವು ನಡೆಯುತ್ತಿದೆ. ಆಡಳಿತ ವಿರೋಧಿ ಅಲೆ ಮತ್ತು ತಮ್ಮ ತಮ್ಮ ವಾರ್ಡ್ಗಳಲ್ಲಿ ಟಿಕೆಟ್ ವಿಚಾರಕ್ಕೆ ಗೊಂದಲ ಉಂಟಾದರೇ ಮತ್ತೊಮ್ಮೆ ವಿಧಾನ ಸಭೆಯ ಚುನಾವಣೆಯಲ್ಲಿ ಗೆಲವುವನ್ನು ಪಡೆಯುವುದು ಕಷ್ಟವಾಗುತ್ತದೆ. ಪಕ್ಷಾಂತರವು ಹೆಚ್ಚುವ ಭೀತಿಯು ನಾಯಕರ ಅನುಮಾನ ಹುಟ್ಟಿಸಿದೆ. ಇದಕ್ಕಾಗಿ ವಾರ್ಡ್ಗಳ ಮರುವಿಂಗಡಣೆಯಲ್ಲಿ ಉಂಟಾಗಿರುವ ದೋಷ ಮೀಸಲಾತಿ ಪಟ್ಟಿ ಬಿಡುಗಡೆಯ ಬಳಿಕ ಮತ್ತಷ್ಟು ಆಕ್ಷೇಪಣೆ ಸಲ್ಲಿಸಲು ಬೆಂಗಳೂರಿನ ಶಾಸಕರು ಮತ್ತು ಸಚಿವರೇ ತಮ್ಮ ಬೆಂಬಲಿಗರಿಗೆ ಪ್ರೇರಣೆಯನ್ನು ನೀಡುತ್ತಿರುವ ಮಾತು ಕೇಳಿಬಂದಿದೆ. ಇನ್ನು ಈ ವಿಚಾರದಲ್ಲಿ ಸುಪ್ರೀಂ ಅಂಗಳಕ್ಕೆ ಹೋಗುವ ಸಾಧ್ಯತೆಗಳಿದ್ದು. ಸುಪ್ರೀಂ ಅರ್ಜಿಯನ್ನು ವಿಚಾರಣೆ ನಡೆಸಿದರೇ ಕನಿಷ್ಠ ಆರು ತಿಂಗಳು ಚುನಾವಣೆ ಮುಂದೂಡುವ ಸಾಧ್ಯತೆಯಿದೆ.
ಮೀಸಲಾತಿ ಅನುಕೂಲಕ್ಕೆ ತಕ್ಕಂತೆ ಬದಲಾವಣೆ?
ಬಿಜೆಪಿ ಸರ್ಕಾರ ಬ್ಲಾಕ್ ಅಧ್ಯಕ್ಷರು ಮತ್ತು ವಾರ್ಡ್ಗಳ ಮುಖಂಡರ ಅಭಿಪ್ರಾಯವನ್ನು ಸಂಗ್ರಹವಾಗುತ್ತಿದ್ದಾರೆ. ಬಿಜೆಪಿಯ ಗೆಲುವಿಗೆ ಹೆಚ್ಚು ಅನುಕೂಲವಾಗುವ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತಿದೆ. ವಾರ್ಡ್ಗಳ ಮೀಸಲಾತಿಯನ್ನು ಪ್ರಕಟಸಬೇಕಾದರೆ ವಾರ್ಡ್ಗಳಲ್ಲಿ ಯಾವ ಜನಾಂಗದ ಜನಸಂಖ್ಯೆ ಹೆಚ್ಚಿದೆ ಎನ್ನುವುದರ ಮೇಲೆ ಮೀಲಾತಿಯನ್ನು ಬಿಡುಗಡೆ ಮಾಡಬೇಕಿದೆ. ಎಸ್ಸಿ, ಎಸ್ಟಿ, ಒಬಿಸಿ ಮತ್ತು ಮಹಿಳಾ ಕೋಟಾದಲ್ಲಿ ಮೀಸಲಾತಿಯನ್ನು ಬಿಡುಗಡೆ ಮಾಡಬೇಕಿದೆ. ಆದರೆ ಬಿಜೆಪಿ ನಾಯಕರ ಅಭಿಪ್ರಾಯದ ಮೇಲೆ ಕೆಲವು ವಾರ್ಡ್ಗಳ ಮೀಸಲಾತಿಯನ್ನು ಬದಲಾಯಿಸಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ವಿಪಕ್ಷಗಳಿಂದ ಸರ್ಕಾರದ ವಿರುದ್ದ ಆರೋಪ
ಬಿಬಿಎಂಪಿಯ ಚುನಾವಣೆಯನ್ನು ಮುಂದೂಡಲು ಸರ್ಕಾರ ಇನ್ನಿಲ್ಲದ ಕಸರತ್ತನ್ನು ನಡೆಸುತ್ತಿದೆ. ಚುನಾವಣೆಗೆ ಸಿದ್ದ ಎನ್ನುತ್ತಲೇ ಹಿಂಬಾಗಿಲ ಮೂಲಕ ಚುನಾವಣೆಯನ್ನು ಮುಂದಿನ ವಿಧಾನಸಭಾ ಚುನಾವಣೆವರೆಗೂ ಮುಂದೂಡಲು ತಂತ್ರಗಳನ್ನು ಹೂಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಆದರೆ ವಿರೋದಪಕ್ಷಗಳು ಏನೇ ಆರೋಪವನ್ನು ಮಾಡುತ್ತಿದ್ದರು ಸರ್ಕಾರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ.