ಬೆಂಗಳೂರಿನಲ್ಲಿ ಬಿಬಿಎಂಪಿ ಚುನಾವಣೆ ಕಾವು ಆರಂಭ- ಜನರತ್ತ ಹೊರಟ ಜನಪ್ರತಿನಿಧಿಗಳು!
ಬೆಂಗಳೂರು, ಆಗಸ್ಟ್ 06: ಬಿಬಿಎಂಪಿ ಚುನಾವಣೆ ಕಾವು ಬೆಂಗಳೂರಿನಲ್ಲಿ ಸದ್ದಿಲ್ಲದೇ ಏರುತ್ತಿದೆ. ಬೆಂಗಳೂರಿನ ನಿವಾಸಿಗಳನ್ನು ಮರೆತಂತಿದ್ದ ಶಾಸಕರು, ಸಚಿವರು, ಬಿಬಿಎಂಪಿ ಮಾಜಿ ಸದಸ್ಯರು, ಪಕ್ಷಗಳ ಟಿಕೆಟ್ ಆಕಾಕ್ಷಿಗಳು ವಾರ್ಡ್ ಗಳಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ತಿರುಗಲು ಶುರುವಿಟ್ಟುಕೊಂಡಿದ್ದಾರೆ. ಈ ಕುರಿತ ವಿಶೇಷ ವರದಿ ಇಲ್ಲದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸುಪ್ರೀಂ ಆದೇಶದ ಬಳಿಕ 243 ವಾರ್ಡ್ಗಳನ್ನು ಮರು ವಿಂಗಡಣೆ ಮಾಡಲಾಯಿತು. ಇನ್ನು ವಾರ್ಡ್ಗಳ ಮರುವಿಂಗಡಣೆ ಬಳಿಕ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಣೆಯನ್ನು ಮಾಡಿದೆ. ಮೀಸಲಾತಿಗೆ ಸಂಬಂಧಿಸಿದಂತೆ ಆಕ್ಷೇಪಣೆಯನ್ನು ಸಲ್ಲಿಸಲು ವಾರದ ಗಡುವನ್ನು ನೀಡಲಾಗಿದೆ.
ಬಿಬಿಎಂಪಿ ಚುನಾವಣೆಯ ನಡೆಸಲು ಮೀಸಲಾತಿಯನ್ನು ಬಿಡುಗಡೆಯಾದ ಮೇಲೆ ಮೀಸಲಾತಿಗೆ ಸಂಬಂಧಿಸಿದಂತೆ ಸಾಕಷ್ಟು ಆಕ್ಷೇಪಗಳು ಕೇಳಿಬಂದಿದೆ. ಸರ್ಕಾರ ತನ್ನಿಚ್ಛೆ ಮತ್ತು ತಮ್ಮ ಪಕ್ಷಕ್ಕೆ ಅನುಕೂಲವಾಗುವಂತೆ ಮೀಸಲಾತಿಯನ್ನು ಪ್ರಕಟ ಮಾಡಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಇನ್ನು ಆರೋಪ ಪ್ರತ್ಯಾರೋಪ ಏನೇ ಇದ್ದರೂ ಸುಪ್ರೀಂ ಕೋರ್ಟ್ ಆದೇಶವೇ ಪಾಲನೆ ಮತ್ತು ಚುನಾವಣಾ ಆಯೋಗ ಬಿಬಿಎಂಪಿ ಚುನಾವಣೆಗೆ ದಿನಾಂಕವನ್ನು ಘೋಷಣೆ ಮಾಡಿದರೇ ಎಂಬ ಆತಂಕದಿಂದ ಚುನಾವಣೆಯ ಸಿದ್ದತೆ ಎಂಬಂತೆ ಟಿಕೆಟ್ ಆಕಾಂಕ್ಷಿಗಳು ವಾರ್ಡ್ ಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ.
ಶಾಸಕರು ಸಚಿವರುಗಳಿಂದ ವಾರ್ಡ್ ರೌಂಡಪ್
ಬಿಬಿಎಂಪಿ ಚುನಾವಣೆ ಮೀಸಲಾತಿ ಪಟ್ಟಿಯನ್ನು ಬಿಡುಗಡೆಯಾದ ಬಳಿಕ ಶಾಸಕರು ಮತ್ತು ಮಂತ್ರಿಗಳು ತಮ್ಮ ಕ್ಷೇತ್ರಗಳತ್ತ ಮುಖವನ್ನು ಮಾಡಿದ್ದಾರೆ. ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾರ್ಡ್ಗಳ ಅಭಿವೃದ್ದಿ ಕಾರ್ಯವನ್ನು ವೀಕ್ಷಿಸುವುದು. ವಾರ್ಡ್ಗಳಿಗೆ ಅನುಕೂಲವಾಗು ಕಾರ್ಯಗಳನ್ನು ಮಾಡಿಸುವುದು. ಅಭಿವೃದ್ದಿಗೆ ವೇಗವನ್ನು ಕೊಡುವ ಕೆಲಸವನ್ನು ಮಾಡಲು ಶುರುವಿಟ್ಟಿಕೊಂಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳನ್ನು ಬಡಿದೆಬ್ಬಿಸಿ ಕೆಲಸ ಮಾಡಿಸಲು ಶುರುವಿಟ್ಟುಕೊಂಡಿದ್ದಾರೆ ಈ ಮುಖೇನ ಬಿಬಿಎಂಪಿ ಚುನಾವಣೆಯ ಕಾವು ಏರುತ್ತಿದೆ.
ವಾರ್ಡ್ಗಳ ಅದಲು ಬದಲು ಆಟ
ಬಿಬಿಎಂಪಿ ವಾರ್ಡ್ಗಳ ಮೀಸಲಾತಿ ಪಟ್ಟಿಯನ್ನು ಬಿಡುಗಡೆಯನ್ನು ಮಾಡಿದ ಬಳಿಕ ಆಕಾಂಕ್ಷಿಗಳು ಬೆಚ್ಚಿಬಿದ್ದಿದ್ದಾರೆ. ಕೆಲವು ವಾರ್ಡ್ಗಳಲ್ಲಿ ನಿರಂತರವಾಗಿ ಕೆಲಸ ಮಾಡಿಕೊಂಡು ಬಂದಿದ್ದೇವೆ. ಆದರೆ ಇದೀಗ ಮೀಸಲಾತಿ ಬದಲಾಗಿರುವ ಹಿನ್ನೆಲೆಯಲ್ಲಿ ಪರಿಚಿತ ವಾರ್ಡ್ಗಳನ್ನು ಬಿಟ್ಟು ಬೇರೆ ವಾರ್ಡ್ಗಳಿಗೆ ಹೋಗಿ ಹೊಸದಾಗಿ ಸ್ಪರ್ಧೆಯನ್ನು ಮಾಡಬೇಕಿದೆ. ಪಕ್ಷಗಳು ಟಿಕೆಟ್ ನೀಡುತ್ತವೋ ಇಲ್ಲವೋ ಅದು ತಿಳಿದು ಬರುತ್ತಿಲ್ಲ. ಇದರಿಂದಾಗಿ ಹೊಸ ಕ್ಷೇತ್ರದ ಹುಡುಕಾಟದಲ್ಲಿ ಮಾಜಿ ಬಿಬಿಎಂಪಿ ಸದಸ್ಯರು ನಿರತರಾಗಿದ್ದಾರೆ. ಆದರೆ ಶಾಸಕರು ಮತ್ತು ಸಚಿವರು ತಮ್ಮ ಹಿಂಬಾಲಕರನ್ನು ಗೆಲ್ಲಿಸಿಕೊಂಡು ಮುಂಬರುವ ವಿಧಾನ ಸಭಾ ಚುನಾವಣೆಗೆ ಅಣಿಯಾಗಬೇಕಿದೆ. ಇದಕ್ಕಾಗಿ ಮಾಜಿ ಪಾಲಿಕೆ ಸದಸ್ಯರಿಗಿಂತಲೂ ಶಾಸಕರೇ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶಾಸಕರ ಜೊತೆ ಪಾಲಿಕೆ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು ಸುತ್ತುತ್ತಿದ್ದಾರೆ.
ಚುನಾವಣೆಗೆ ಸಜ್ಜಾಗಲು ಅಡ್ಡಿಯಾದ ಆತಂಕ
ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ 243 ವಾರ್ಡ್ಗಳ ಮೀಸಲಾತಿಯ ಪಟ್ಟಿಯನ್ನು ಗಮನಿಸಿದಾಗ ಬಿಜೆಪಿ ಪಕ್ಷಕ್ಕೆ ಅನುಕೂಲವಾಗುವಂತೆ ಮೀಸಲು ಪ್ರಕಟವಾಗಿರುವ ಆರೋಪವಿದೆ. ಅಂಗೈ ಗಾಯಕ್ಕೆ ಕನ್ನಡಿ ಬೇಕೆ ಎನ್ನುವಂತೆ ಮೀಸಲಾತಿಯನ್ನು ಗಮನಿಸಿದರೇ ಸರಕಾರ ತನ್ನ ಅನುಕೂಲಕ್ಕೆ ತಕ್ಕಂತೆ ಬದಲಾಗಿರೋದು ತಿಳಿಯಲಿದೆ. ಆದರೂ ಆಕ್ಷೇಪಣೆಯ ಬಳಿಕ ಕೆಲವು ವಾರ್ಡ್ಗಳ ಮೀಸಲಾತಿ ಬದಲಾಗಲೂ ಬಹುದು. ಇದರಿಂದ ಟಿಕೆಟ್ ಆಕಾಂಕ್ಷಿಗಳು ಏನೋ ಆಗಲಿದೆ ಎಂಬ ಆತಂಕ ಮನೆ ಮಾಡಿದೆ. ಕೆಲವರು ಶಾಸಕರಿಗೆ ದುಂಬಾಲು ಬಿದ್ದದ್ದು ಅನುಕೂಲವಾಗುವ ವಾರ್ಡ್ನ ಟಿಕೆಟ್ ಕೊಡಿಸಲು ಬೇಡಿಕೆಯನ್ನು ಇಡುತ್ತಿದ್ದಾರೆ.
ಆಪ್ಗೂ ನಿರಾಸೆ ತಂದ ಮೀಸಲಾತಿ
ಮೀಸಲಾತಿ ವಿಚಾರದಲ್ಲಿ ತಮ್ಮದೇ ಸರಕಾರವಿದ್ದರೂ ಕೆಲವು ಬಿಜೆಪಿ ಶಾಸಕರ ಕ್ಷೇತ್ರಗಳಲ್ಲೂ ಮೀಸಲಾತಿ ಬದಲಾಯಿಸಲಾಗಿದೆ. ಶಾಸಕರಿಗೆ ಚಾಲೆಂಜ್ ಮಾಡಲಿದ್ದವರ ವಾರ್ಡ್ಗಳ ಮೀಸಲು ಬದಲಾಯಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ರಾಜ್ಯದ ಪಕ್ಷಗಳು ಮೀಸಲಾತಿಯನ್ನು ವಿರೋಧಿಸಿವೆ. ಹೊಸ ಪಕ್ಷ ಆಮ್ ಆದ್ಮಿಯಲ್ಲಿ ಕೆಲವು ವಾರ್ಡ್ಗಳಲ್ಲಿ ಸುತ್ತತ್ತ ಪಕ್ಷವನ್ನು ಸಂಘಟನೆ ಮಾಡಿದ್ದರು ಇಂಥ ವಾರ್ಡ್ಗಳ ಮೀಸಲಾತಿಯೂ ಬದಲಾಗಿದೆ. ಇದರಿಂದ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಸುತ್ತುತ್ತ ಬಿಬಿಎಂಪಿ ಚುನಾವಣೆಗೆ ಸಜ್ಜಾಗುತ್ತಿದ್ದರೆ, ಟಿಕೆಟ್ ಆಕಾಂಕ್ಷಿಗಳು ಓಡಾಟವನ್ನು ಶುರುವಿಟ್ಟುಕೊಂಡಿದ್ದಾರೆ.