ಬಿಬಿಎಂಪಿ ಚುನಾವಣೆ: ಕೋಡಿಶ್ರೀಗಳ ಭವಿಷ್ಯವಾಣಿ
ಹಾಸನ, ಆಗಸ್ಟ್ 21: ಶನಿವಾರ (ಆ 22) ನಡೆಯಲಿರುವ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಚುನಾವಣೆಗೆ ಎರಡು ದಿನದ ಮುನ್ನ ಅರಸೀಕೆರೆ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ತಾಳೇಗರಿ ಮೂಲಕ ಭವಿಷ್ಯ ನುಡಿಯುವ ಶ್ರೀಗಳು, ಈ ಬಾರಿ ರಾಜಕೀಯ ಪಕ್ಷಗಳಿಗೆ ಮಿಶ್ರಫಲ ತೋರಿಬರುವ ಸಾಧ್ಯತೆಯಿದೆ ಎಂದಿದ್ದಾರೆ.
ಮೂರು ಪಕ್ಷಗಳಿಗೂ ಚುನಾವಣೆ ಪ್ರತಿಷ್ಠೆಯ ವಿಷಯವಾಗಿದ್ದರೂ, ಯಾವ ಪಕ್ಷಕ್ಕೂ ಬಹುಮತ ಸಿಗುವ ಸಾಧ್ಯತೆಯಿಲ್ಲ ಎಂದು ಕೋಡಿಮಠ ಸಂಸ್ಥಾನದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ನುಡಿದಿದ್ದಾರೆ.(ವಿಜಯವಾಣಿ ಸಮೀಕ್ಷೆ)
ಬಿಜೆಪಿ, ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷಗಳು ಏಕಾಂಗಿಯಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ಒಟ್ಟಿನಲ್ಲಿ ಈ ಬಾರಿಯ ಬಿಬಿಎಂಪಿ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದೇ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಶ್ರೀಗಳು, ಹಾಸನದಲ್ಲಿ ಗುರುವಾರ (ಆ 20) ಭವಿಷ್ಯ ನುಡಿದಿದ್ದಾರೆ.[2014ರಲ್ಲಿ ಕೋಡಿಶ್ರೀಗಳು ಭವಿಷ್ಯ ನುಡಿದಿದ್ದೇನು, ಆಗಿದ್ದೇನು?]
ರಾಜ್ಯದ ವಿವಿಧ ಮಾಧ್ಯಮಗಳು ನಡೆಸಿದ ಸಮೀಕ್ಷೆಯಲ್ಲೂ ಇದೇ ಉತ್ತರ ಬಂದಿತ್ತು. ಪಬ್ಲಿಕ್ ಟಿವಿ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ 80 ರಿಂದ 90, ಕಾಂಗ್ರೆಸ್ 85 ರಿಂದ 95, ಜೆಡಿಎಸ್ 12 ರಿಂದ 17 ಮತ್ತು ಇತರರು 01 ರಿಂದ 05 ಸ್ಥಾನ ಗೆಲ್ಲಬಹುದು ಎಂದು ತನ್ನ ಸಮೀಕ್ಷೆಯಲ್ಲಿ ತಿಳಿಸಿತ್ತು. (ಪಬ್ಲಿಕ್ ಟಿವಿ ಸಮೀಕ್ಷೆ)
ಇನ್ನು ವಿಜಯವಾಣಿ ಹಾಗೂ ಈಟಿವಿ ಕನ್ನಡ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್ 80-90, ಬಿಜೆಪಿ 75-80, ಜೆಡಿಎಸ್ 19-25 ಮತ್ತು ಇತರರು 5 ರಿಂದ 8 ಸ್ಥಾನ ಗೆಲ್ಲಬಹುದೆಂದು ಸಮೀಕ್ಷಾ ಫಲಿತಾಂಶ ಪ್ರಕಟಿಸಿತ್ತು.