ಬಿಬಿಎಂಪಿ ಸಂಜೆ ಪ್ರೌಢಶಾಲೆ ಪ್ರಾರಂಭಕ್ಕೆ ಸಿದ್ದತೆ
ಬೆಂಗಳೂರು, ಜೂನ್ 20: ಮಕ್ಕಳು ಸರ್ವಾಗೀಣ ಅಭಿವೃದ್ಧಿಯನ್ನು ಹೊಂದಬೇಕಾದರೆ ತರಗತಿಯ ನಾಲ್ಕು ಗೋಡೆಗಳ ನಡುವೆ ಕುಳಿತು ಶಿಕ್ಷಣವನ್ನು ಪಡೆಯಬೇಕು ಎಂಬುದಾಗಿದೆ. ಶಿಕ್ಷಣ ಮಕ್ಕಳ ಹಕ್ಕಾಗಿರುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯವಾಗಿದೆ. ಇದೇ ನಿಟ್ಟಿನಲ್ಲಿ ಕೆಲವು ಬಡಮಕ್ಕಳು ಶಾಲೆಗಳಿಂದ ವಂಚಿತರಾಗಿ ವಿದ್ಯಾಭ್ಯಾಸ ಕುಂಠಿತವಾಗುತ್ತಿರುವುದನ್ನು ಮನಗಂಡ ಬಿಬಿಎಂಪಿ ಸಂಜೆ ಶಾಲೆ ಪ್ರಾರಂಭಕ್ಕೆ ಸಿದ್ಧತೆಯನ್ನು ಪ್ರಾರಂಭಿಸಿದೆ.
ಬಿಬಿಎಂಪಿ ಸಂಜೆ ಪ್ರೌಢಶಾಲೆಯನ್ನು ತೆರೆಯಲು ಸಿದ್ದತೆಯನ್ನು ಆರಂಭಿಸುತ್ತಿದೆ. ಬೆಳಗಿನ ಸಂದರ್ಭದಲ್ಲಿ ಶಾಲೆಗೆ ಹೋಗಲು ಅನಾನೂಕೂಲ ಹೊಂದಿರುವವ ಮಕ್ಕಳು, ಬಡ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಸಂಜೆ ಪ್ರೌಢಶಾಲೆಯನ್ನು ತೆರೆಯಲು ಬಿಬಿಎಂಪಿ ಯೋಜನೆಯನ್ನು ಹಾಕಿಕೊಂಡಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸಂಜೆ ಪದವಿಪೂರ್ವ ಕಾಲೇಜುಗಳು ಮತ್ತು ಸಂಜೆ ಪದವಿ ಕಾಲೇಜುಗಳು ನಡೆಯುತ್ತಿದೆ. ಸಂಜೆ ಕಾಲೇಜುಗಳಂತೆಯೇ ಸರ್ಕಾರದ ಅನಮತಿಯನ್ನು ಪಡೆದು ಸಂಜೆ ಪ್ರೌಢಶಾಲೆಯನ್ನು ತೆರೆಯಯಲು ನಿರ್ಧರಿಸಲಾಗಿದೆ.
ಸಂಜೆ ಪ್ರೌಢಶಾಲೆಗಳು ನಡೆಯುವುದರಿಂದ ವಿದ್ಯಾಭ್ಯಾಸಕ್ಕೆ ವಂಚಿತ ಮಕ್ಕಳು ಮತ್ತು ಮನೆಯಲ್ಲಿ ಸಂಜೆಯಲ್ಲಿ ಕುಳಿತು ವ್ಯಾಸಂಗ ಮಾಡದ ಮಕ್ಕಳಿಗೆ ಅನುಕೂಲವಾಗಲಿದೆ. ಆ ಮೂಲಕ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿಯೇ ಸಂಜೆ ಪ್ರೌಢಶಾಲೆಯನ್ನು ತೆರೆಯಲಾಗುತ್ತಿದೆ.
ಪ್ರಾಯೋಗಿಕವಾಗಿ ಪ್ರೌಢಶಾಲೆ ಪ್ರಾರಂಭ
ಬಿಬಿಎಂಪಿ ದಾಸರಹಳ್ಳಿ ವಲಯದಲ್ಲಿ ಸಂಜೆ ಪ್ರೌಢಶಾಲೆಯನ್ನು ತೆರೆಯಲಿದೆ. ದಾಸರಹಳ್ಳಿಯ ನಿಶ್ಯಬ್ಧ ಪ್ರದೇಶದಲ್ಲಿ ಜಾಗವನ್ನು ಗುರುತಿಸಿ ಸಂಜೆ ಪ್ರೌಢಶಾಲೆ ತೆರೆಯಲಿದೆ. ಪ್ರಾಯೋಗಿಕವಾಗಿ ಪ್ರೌಢಶಾಲೆಯನ್ನು ತೆರೆಯುತ್ತಿದ್ದು. ಸಂಜೆ ಪ್ರೌಢಶಾಲೆಯು ಯಶಸ್ವಿಯಾದರೆ ಪ್ರತಿ ವಾರ್ಡ್ಗೆ ಒಂದರಂತೆ ಸಂಜೆ ಪ್ರೌಢಶಾಲೆಯು ತೆರೆಯಲು ನಿರ್ಧರಿಸಲಾಗಿದೆ.
ಸೆಕ್ಯೂರಿಟಿಯನ್ನು ನಿಯೋಜನೆ
ಸಂಜೆ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೋಧನೆಗೆ ಅನುಕೂಲವಾಗಲಿ ಎಂದು ಶಿಕ್ಷಕರನ್ನು ಪ್ರತ್ಯೇಕವಾಗಿ ನೇಮಕ ಮಾಡಲಾಗುತ್ತದೆ. ಭಾಷಾ ವಿಷಯಗಳಾದ ಕನ್ನಡ, ಇಂಗ್ಲೀಷ್, ಹಿಂದಿ ಕೋರ್ ವಿಷಯಗಳಾದ ಗಣಿತ, ವಿಜ್ಞಾನ, ಸಮಾಜವನ್ನು ಸರಳವಾಗಿ ಹೇಳಿಕೊಡುವ ಶಿಕ್ಷಕರನ್ನು ಗಮನವಿಟ್ಟು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸಂಜೆ ಪ್ರೌಢಶಾಲೆಗೆ ಸೆಕ್ಯೂರಿಟಿಯನ್ನು ಸಹ ನೇಮಕ ಮಾಡಿಕೊಳ್ಳಲಾಗುತ್ತದೆ.
ಮೂಲಭೂತ ಸೌಕರ್ಯದ ವ್ಯವಸ್ಥೆ
ಸಂಜೆ ಪ್ರೌಢಶಾಲೆಯ ಮೂಲ ಉದ್ದೇಶವೇ ಬಡ ವಿದ್ಯಾರ್ಥಿಗಳಿಗೆ ಅನುಕೂಲವನ್ನು ಕಲ್ಪಿಸಿಕೊಡುವುದಾಗಿದೆ. ಸಂಜೆಯ ಸಮಯ ಅಂದರೆ 6 ರಿಂದ 8 ಗಂಟೆಯ ಸಮಯದಲ್ಲಿ ವಿದ್ಯಾರ್ಥಿಗಳು ಓದುವ ಸಮಯ. ಹಣವುಳ್ಳ ಪೋಷಕರು ಮಕ್ಕಳನ್ನು ಮನೆಪಾಠ (ಟ್ಯೂಷನ್) ಗಳಿಗೆ ಕಳುಹಿಸುತ್ತಾರೆ. ಆದರೆ ಬಡ ವಿದ್ಯಾರ್ಥಿಗಳಿಗೆ ಶಾಲೆಯೇ ಎಲ್ಲವಾಗಿರುತ್ತದೆ. ಇದರಿಂದ ಸಂಜೆ ಪ್ರೌಢಶಾಲೆಯಲ್ಲಿ ಬಡವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲಿದೆ.
ಇನ್ನು ಶಾಲೆಗೆ ಅಗತ್ಯವಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ನೀಡಲು ಮುಂದಾಗಿದೆ. ಪೀಠೋಪಕರಣ, ಕಂಪ್ಯೂಟರ್, ಇಂಟರ್ ನೆಟ್ , ಪುಸ್ತಕ, ಸಮವಸ್ತ್ರ , ಶಿಕ್ಷಕರ ಅಗತ್ಯಗಳಿಗೆ ಅನುಗಣವಾಗಿ ಬೇಕಾಗಿರುವ ಪರಿಕರಗಳು ಸೇರಿದಂತೆ ಬಿಬಿಎಂಪಿ ಎಲ್ಲಾ ರೀತಿಯ ಸವಲತ್ತನ್ನು ಶಾಲೆಗೆ ಒದಗಿಸುತ್ತದೆ. ಆ ಮೂಲಕ ಬೆಳಗ್ಗೆ ಕಲಿಯುವ ಮಕ್ಕಳು ಮತ್ತು ಸಂಜೆ ಕಲಿಯುವ ಮಕ್ಕಳಿಗೆ ತಾರತಮ್ಯವಾಗದಂತೆ ಗಮನವನ್ನು ಹರಿಸಲಾಗುತ್ತಿದೆ.
ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶ
ವಿದ್ಯಾರ್ಥಿಗಳು ಮತ್ತು ಪೋಷಕರು ಕೆಲವು ಉತ್ತಮ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳವ ಸಾಧ್ಯತೆಯಿದೆ. ಇದೇ ಕಾರಣಕ್ಕಾಗಿ ಆನ್ ಲೈನ್ ಮೂಲಕವಾಗಿ ವಿದ್ಯಾರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ. ಆನ್ ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸಿದ ವಿದ್ಯಾರ್ಥಿಗಳ ಪೂರ್ವಪರವನ್ನು ವಿಚಾರಿಸಿ ಪೋಷಕರ ಸ್ಥಿತಿಗತಿಗಳನ್ನು ಗಮನಿಸಿ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ. ಮಕ್ಕಳು ಸಂಜೆ 6ರಿಂದ8ರ ವರೆಗೂ ಶಿಕ್ಷಣದ ಬಗ್ಗೆ ಹೆಚ್ಚು ಗಮನವನ್ನು ಕೊಡಬೇಕೆಂಬದು ವಿಶೇಷ ಆಯುಕ್ತ(ಶಿಕ್ಷಣ) ರಾಮ್ ಪ್ರಸಾದ್ ಮನೋಹರ್ರವರ ಆಶಯ ಎಂದು ಬಿಬಿಎಂಪಿ ಸಹಾಯಕ ಆಯುಕ್ತ(ಶಿಕ್ಷಣ) ಉಮೇಶ್ ತಿಳಿಸಿದ್ದಾರೆ.
Recommended Video