ಇಂದಿರಾ ಕ್ಯಾಂಟೀನ್ ಊಟ-ಉಪಹಾರದ ಬೆಲೆಯಲ್ಲೂ ಭಾರಿ ಏರಿಕೆ
ಬೆಂಗಳೂರು, ಫೆಬ್ರವರಿ.29: ಸಿಲಿಕಾನ್ ಸಿಟಿ ಜನರ ಹಸಿವು ನೀಗಿಸುತ್ತಿದ್ದ ಇಂದಿರಾ ಕ್ಯಾಂಟೀನ್ ಊಟ ಮತ್ತು ಉಪಹಾರ ಇನ್ನು ಮುಂದೆ ಸಾರ್ವಜನಿಕರ ಜೇಬಿಗೂ ಕತ್ತರಿ ಹಾಕಲಿದೆ. ಕಡಿಮೆ ಬೆಲೆಯಲ್ಲಿ ಸಿಗುತ್ತಿದ್ದ ಉಪಹಾರ ಮತ್ತು ಊಟ ಬೆಲೆಯಲ್ಲಿ ಏರಿಕೆ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ.
ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಇಂದಿರಾ ಕ್ಯಾಂಟೀನ್ ಗಳ ನಿರ್ವಹಣೆಯ ಮೊತ್ತವು ಹೊರೆಯಾಗುತ್ತಿದ್ದು, ಇದನ್ನು ತಗ್ಗಿಸಲು ಬೆಂಗಳೂರು ಮಹಾನಗರ ಪಾಲಿಕೆ ಪ್ಲಾನ್ ಮಾಡಿಕೊಂಡಿದೆ. ಆ ಮೂಲಕ ಹೆಚ್ಚುವರಿ ಹೊರೆಯನ್ನು ಸಾರ್ವಜನಿಕರ ಮೇಲೆ ಹೊರೆಸಲು ಮುಂದಾಗಿದೆ.
ಉಪಹಾರದ ಬೆಲೆಯನ್ನು 5 ರೂಪಾಯಿಯಿಂದ 10 ರೂಪಾಯಿ ಮತ್ತು ಊಟದ ದರವನ್ನು 10 ರೂಪಾಯಿಯಿಂದ 15 ರೂಪಾಯಿಗೆ ಏರಿಕೆ ಮಾಡಲು ಬಿಬಿಎಂಪಿ ಮುಂದಾಗಿದೆ. ಅತಿಶೀಘ್ರದಲ್ಲಿಯೇ ಹೊಸ ಗುತ್ತಿಗೆದಾರರಿಗೆ ಇಂದಿರಾ ಕ್ಯಾಂಟೀನ್ ಗುತ್ತಿಗೆಯನ್ನು ನೀಡಲಾಗುತ್ತಿದ್ದು, ಹೊಸ ಗುತ್ತಿಗೆ ಜೊತೆಗೆ ಪರಿಷ್ಕೃತ ದರವು ಜಾರಿಗೆ ಬರಲಿದೆ.
ಜನರ ಜೇಬಿಗೆ ಕತ್ತರಿ; ಸರ್ಕಾರಿ ಬಸ್ ದರ ಶೇ 12ರಷ್ಟು ಏರಿಕೆ
12 ರೂಪಾಯಿ ಸಬ್ಸಿಡಿ ನೀಡುತ್ತಿದ್ದ ರಾಜ್ಯ ಸರ್ಕಾರ
ಇಂದಿರಾ ಕ್ಯಾಂಟೀನ್ ನಲ್ಲಿ ಗುತ್ತಿಗೆದಾರರು ಒಂದು ಊಟಕ್ಕೆ 22 ಚಾರ್ಜ್ ಮಾಡಿದರೆ ಇದರಲ್ಲಿ ಗ್ರಾಹಕರಿಂದ 10 ರೂಪಾಯಿ ಪಡೆದುಕೊಳ್ಳಲಾಗುತ್ತದೆ. ಉಳಿದ 12 ರೂಪಾಯಿ ಹಣವನ್ನು ಸರ್ಕಾರವು ಸಬ್ಸಿಡಿ ರೂಪದಲ್ಲಿ ಗುತ್ತಿಗೆದಾರರಿಗೆ ನೀಡುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೊಡೆತ ಬೀಳುತ್ತಿದ್ದು, ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಇಂದಿರಾ ಕ್ಯಾಂಟೀನ್ 1 ವರ್ಷದಿಂದ ಅನುದಾನ ಕಟ್
ಇನ್ನು, ಇಂದಿರಾ ಕ್ಯಾಂಟೀನ್ ಗೆ ಸರ್ಕಾರವು ಕಳೆದ ಒಂದು ವರ್ಷದಿಂದ ಯಾವುದೇ ರೀತಿ ಅನುದಾನವನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯೇ ಇಂದಿರಾ ಕ್ಯಾಂಟೀನ್ ಗಳನ್ನು ನಿರ್ವಹಣೆ ಮಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರದ ಹೊರೆ ತಪ್ಪಿಸಲು ಪಾಲಿಕೆ ಬೆಲೆ ಏರಿಕೆ ಕ್ರಮಕ್ಕೆ ಮುಂದಾಗಿದೆ.
ಇಂದಿರಾ ಕ್ಯಾಂಟೀನ್ ಮೇಲೆ ಮೊದಲಿನಿಂದಲೂ ಕಣ್ಣು
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಇಂದಿರಾ ಕ್ಯಾಂಟೀನ್ ಮುಚ್ಚಲು ಪ್ರಯತ್ನಿಸುತ್ತಲೇ ಇದೆ. ಈಗ ಬೆಲೆ ಏರಿಕೆ ಮೂಲಕ ಜನರು ಕ್ಯಾಂಟೀನ್ ಗೆ ಬಾರದಂತೆ ಮಾಡುತ್ತಿದ್ದಾರೆ. ನಂತರದಲ್ಲಿ ಜನರು ಬರುತ್ತಿಲ್ಲ ಎಂಬ ಕಾರಣವನ್ನು ನೀಡಿ, ಕ್ಯಾಂಟೀನ್ ಗಳನ್ನು ಬಂದ್ ಮಾಡುವ ಷಡ್ಯಂತ್ರವನ್ನು ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಪ್ರತಿಪಕ್ಷ ನಾಯಕ ಅಬ್ದುಲ್ ವಾಜೀದ್ ಆರೋಪಿಸಿದರು.
ಬಸ್ ಟಿಕೆಟ್ ಆಯ್ತು, ಊಟ-ಉಪಹಾರ ಬೆಲೆಯಲ್ಲಿ ಏರಿಕೆ
ಇತ್ತೀಚಿಗಷ್ಟೇ ಕೆಎಸ್ಆರ್ ಟಿಸಿ ಬಸ್ ಟಿಕೆಟ್ ದರದಲ್ಲಿ ಶೇ.12ರಷ್ಟು ಬೆಲೆ ಏರಿಕೆಯನ್ನು ಮಾಡಿದ್ದಾರೆ. ಇದರ ಬೆನ್ನಲ್ಲೇ ಇಂದಿರಾ ಕ್ಯಾಂಟೀನ್ ನಲ್ಲಿನ ಊಟ-ಉಪಹಾರದ ಬೆಲೆ ಏರಿಕೆಗೆ ಮುಂದಾಗಿದ್ದಾರೆ. ಬಡವರ ಹಸಿವು ನೀಗಿಸುತ್ತಿರುವ ಇಂದಿರಾ ಕ್ಯಾಂಟೀನ್ ಯೋಜನೆಗೆ ನೀಡುತ್ತಿರುವ 150 ಕೋಟಿ ರೂಪಾಯಿ ಅನುದಾನ ಸರ್ಕಾರ ಮತ್ತು ಬಿಬಿಎಂಪಿ ಎರಡಕ್ಕೂ ಹೊರೆ ಆಗುವುದಿಲ್ಲ. ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಇದರ ವಿರುದ್ಧ ಧ್ವನಿ ಎತ್ತುವುದಾಗಿ ಪ್ರತಿಪಕ್ಷ ನಾಯಕ ಅಬ್ದುಲ್ ವಜೀದ್ ತಿಳಿಸಿದ್ದಾರೆ.