ಬಿಬಿಎಂಪಿ ಜಾಹೀರಾತಲ್ಲಿ ಜನಪ್ರತಿನಿಧಿಗಳ ಫೋಟೊ ಹಾಕೋಹಾಗಿಲ್ಲ
ಬೆಂಗಳೂರು, ನವೆಂಬರ್ 21: ಬಿಬಿಎಂಪಿ ಜಾಹೀರಾತಲ್ಲಿ ಇನ್ನುಮುಂದೆ ಜನಪ್ರತಿನಿಧಿಗಳ ಚಿತ್ರಗಳನ್ನು ಹಾಕುವ ಹಾಗಿಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸುತ್ತೋಲೆ ಹೊರಡಿಸಿದ್ದಾರೆ.
ನೀರಿನ ಘಟಕ, ರಸ್ತೆ, ಬಸ್ ನಿಲ್ದಾಣ ಸೇರಿದಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯಿಂದ ಕೈಗೊಳ್ಳುವ ಯೋಜನೆ ಹಾಗೂ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಜಾಹೀರಾತುಗಳಲ್ಲಿ ಪ್ರಧಾನ ಮಂತ್ರಿ, ರಾಷ್ಟ್ರಪತಿ, ಮುಖ್ಯ ನ್ಯಾಯಮೂರ್ತಿ, ರಾಜ್ಯಪಾಲರು, ಮುಖ್ಯಮಂತ್ರಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರು ಹಾಗೂ ಮಹಾತ್ಮರ ಭಾವಚಿತ್ರವನ್ನು ಹೊರತುಪಡಿಸಿ ಇನ್ಯಾವುದೇ ಫೋಟೊಗಳನ್ನು ಹಾಕುವಂತಿಲ್ಲ. ಸುಪ್ರೀಂಕೋರ್ಟ್ ಇತ್ತೀಚೆಗೆ 2013ರ ಪ್ರಕರಣವೊಂದನ್ನು ಇತ್ಯರ್ಥ ಪಡಿಸುವಾಗ ಈ ತೀರ್ಪು ನೀಡಿದೆ.
ಬೆಂಗಳೂರು ಪೊಲೀಸರಿಗೆ ಹೈಕೋರ್ಟ್ ಕಪಾಳಮೋಕ್ಷ: ಕಾರಣ ಇಲ್ಲಿದೆ ನೋಡಿ
ಹಾಗಾಗಿ ಇನ್ನುಮುಂದೆ ಬಿಬಿಎಂಪಿ ವ್ಯಾಪ್ತಿಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಘಟಕ, ಬಸ್ ನಿಲ್ದಾಣಗಳು ಸೇರಿದಂತೆ ಇನ್ನಿತರೆ ಪಪಾಲಿಕೆ ಜಾಹೀರಾತು, ಪ್ರಕಟಣೆಯಲ್ಲಿ ರಾಜಕೀಯ ಪಕ್ಷಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳ ಹೆಸರನ್ನು ಹಾಕುವಂತಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಪಾಲಿಕೆಯ ಯೋಜನೆಗಳನ್ನು ಸಾರ್ವಜನಿಕರಿಗೆ ಮತ್ತು ಯೋಜನೆಗಳ ಅನುಷ್ಢಾನಗೊಳಿಸುವ ಹಾಗೂ ಇನ್ನಿತರೆ ಎಲ್ಲಾ ರೀತಿಯ ಕಾಮಗಾರಿಗಳನ್ನು ನಿರ್ವಹಿಸಿ ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಎಂಪಿ, ಎಂಎಲ್ಎ, ಕಾರ್ಪೊರೇಟರ್ಗಳ ಫೋಟೊವನ್ನು ಬಳಸುವಂತಿಲ್ಲ.