ಸಚಿವರ ಆದೇಶಕ್ಕಿಲ್ಲ ಬೆಲೆ? ಸಿಟಿ ಸ್ಕ್ಯಾನ್ನಲ್ಲಿ ಪಾಸಿಟಿವ್ ಬಂದ್ರೂ ಬೆಡ್ ಸಿಗಲ್ಲ!
ಬೆಂಗಳೂರು, ಮೇ. 05: ಆರ್ಟಿಪಿಸಿಆರ್ ಅಥವಾ ಆಂಟಿಜನ್ ಪರೀಕ್ಷೆಯಲ್ಲಿ ನೆಗಟಿವ್ ಬಂದು ಸಿಟಿ ಸ್ಕ್ಯಾನ್ನಲ್ಲಿ ಪಾಸಿಟಿವ್ ಬಂದರೂ ಕೋವಿಡ್ ರೋಗಿ ಎಂದು ಪರಿಗಣಿಸಿ ಚಿಕಿತ್ಸೆ ಕೊಡಿ ಆರೋಗ್ಯ ಸಚಿವರು ಏ. 28 ರಂದೇ ಆದೇಶ ಮಾಡಿದ್ದರು. ಸಿಟಿ ಸ್ಕ್ಯಾನ್ನಲ್ಲಿ ಪಾಸಿಟಿವ್ ಬಂದವರಿಗೆ ಬಿಯು ನಂಬರ್ ಆಗಲೀ ಎಸ್ಆರ್ಎಫ್ ನಂಬರ್ ಆಗಲೀ ಕ್ರಿಯೇಟ್ ಆಗುತ್ತಿಲ್ಲ. ಈ ಎರಡು ಸಂಖ್ಯೆಯಲ್ಲಿ ಒಂದು ಇಲ್ಲದಿದ್ದರೂ ಐಸಿಯು ಬೆಡ್ ಸಿಗಲ್ಲ !
ಆರೋಗ್ಯ ಸಚಿವ ಡಾ. ಸುಧಾಕರ್ ಅವರ ಆದೇಶಕ್ಕೆ ಕೋವಿಡ್ ವಾರ್ ರೂಮ್ಗಳು ಕಡವೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಆರ್ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗಟಿವ್ ಬಂದಿದ್ದರಿಂದ ಮಹಿಳೆಯೊಬ್ಬರು ಸಿಟಿ ಸ್ಕ್ಯಾನ್ ಮಾಡಿಸಿದ್ದರು. ಅದರಲ್ಲಿ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಕೂಡಲೇ ಐಸಿಯುನಲ್ಲಿ ಚಿಕಿತ್ಸೆ ಪಡೆಯುವಂತೆ ಕೂಡ ವೈದ್ಯರು ಸಲಹೆ ಮಾಡಿದ್ದರು. ಸಿಟಿ ಸ್ಕ್ಯಾನ್ ವರದಿ ಆಧಾರವಾಗಿಟ್ಟುಕೊಂಡು ಪೂರ್ವ ವಿಭಾಗದ ಬಿಬಿಎಂಪಿ ಕೋವಿಡ್ ವಾರ್ ರೂಮ್ಗೆ ಕರೆ ಮಾಡಿದರೆ, ಎಸ್ಆರ್ಎಫ್ ಐಡಿ ಇಲ್ಲವೇ ಬಿಯು ನಂಬರ್ ಇಲ್ಲದಿದ್ದರೆ ಬೆಡ್ ಕೊಡಲಾಗುವುದಿಲ್ಲ ಎಂದು ನಿರಾಕರಿಸಿದ್ದಾರೆ. ಸಚಿವ ಮಹಾಶಯ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲಿಕ್ಕೆ ಆದೇಶ ಮಾಡಿದರೆ ಎಂಬ ಅನುಮಾನ ಮೂಡಿಸಿದೆ.
ಹೊಸಕೋಟೆ ತಾಲೂಕಿನ ಚನ್ನಸಂದ್ರ ನಿವಾಸಿ ಸರೋಜಮ್ಮ ಅವರಿಗೆ ಅನಾರೋಗ್ಯವಾಗಿತ್ತು. ಕೂಡಲೇ ಅವರು ಸಿಟಿ ಸ್ಕ್ಯಾನ್ ಮಾಡಿಸಿದ್ದರು. ಉಸಿರಾಟದ ಪ್ರಮಾಣ 85 ಕ್ಕೆ ಇಳಿದಿದ್ದು ಕೂಡಲೇ ಐಸಿಯುಗೆ ದಾಖಲಿಸುವಂತೆ ವೈದ್ಯರು ಸಲಹೆ ಮಾಡಿದ್ದಾರೆ. ಸ್ಥಳೀಯವಾಗಿ ಹುಡುಕಾಡಿದರೆ ಎಲ್ಲೂ ಹಾಸಿಗೆ ಸಿಕ್ಕಿಲ್ಲ. ಕೂಡಲೇ ಪೂರ್ವ ವಿಭಾಗದ ಬಿಬಿಎಂಪಿ ಕೋವಿಡ್ ವಾರ್ ರೂಮ್ಗೆ ಕರೆ ಮಾಡಿದಾಗ, ಅವರು ಹೇಳಿದ್ದು ಇಷ್ಟು.
"ಆರ್ಟಿ ಪಿಸಿಅರ್ ಪರೀಕ್ಷೆಯಲ್ಲಿ ನೆಗಟಿವ್ ಬಂದು, ಸಿಟಿ ಸ್ಕ್ಯಾನ್ನಲ್ಲಿ ಪಾಸಿಟಿವ್ ಬಂದರೆ ದಾಖಲಾತಿಗೆ ಅವಕಾಶ ಇಲ್ಲವೇ ಎಂದು ಕೇಳಿದರೆ, ಅರ್ಟಿಪಿಸಿಅರ್ ಪರೀಕ್ಷೆಯಲ್ಲಿ ನೆಗಟಿವ್ ಬರಲೀ, ಬರದಿರಲಿ ಬಿಯು ನಂಬರ್ ಇರಬೇಕು. ಇಲ್ಲವೇ ಎಸ್ಆರ್ಎಫ್ ನಂಬರ್ ಕೊಡಬೇಕು. ಸಿಟಿ ಸ್ಕ್ಯಾನ್ನಲ್ಲಿ ಪಾಸಿಟಿವ್ ಬಂದರೆ ಅಂಥ ರೋಗಿಗೆ ಬೆಡ್ ನೀಡಲಾಗುವುದಿಲ್ಲ. ಅದರ ಬಗ್ಗೆ ನಾವು ತಿಳಿದುಕೊಳ್ಳುತ್ತೇವೆ ಎಂದು ಹಾರಿಕೆ ಉತ್ತರ ನೀಡಿದರು.
ಆರೋಗ್ಯ ಸಚಿವ ಸುಧಾಕಾರ್ ಅವರು ಏ. 28 ರಂದು ಮಾಡಿರುವ ಆದೇಶದ ಬಗ್ಗೆ ಉಲ್ಲೇಖಿಸಿದಾಗ, ಬಿಯು ನಂಬರ್ ಇಲ್ಲದಿದ್ದರೆ ನಾವು ಬೆಡ್ ಕೊಡುವುದಿಲ್ಲ. ರೆಮ್ಡೆಸಿವಿರ್ ಕೂಡ ಕೊಡಲಿಕ್ಕೆ ಆಗಲ್ಲ. ಬೇರೆಯವರು ದುರುಪಯೋಗ ಮಾಡಿಕೊಳ್ಳುತ್ತಾರೆ ಎನ್ನುವ ಕಾರಣಕ್ಕೆ ಎಸ್ಆರ್ಎಫ್ ನಂಬರ್ ಕಡ್ಡಾಯ ಮಾಡಿದ್ದೇವೆ. ಬಿಯು ನಂಬರ್ ಇದ್ದರೆ ಹೇಳಿ, ಬೆಡ್ ಹುಡುಕುತ್ತೇವೆ ಎಂದು ಕೈತೊಳೆದುಕೊಂಡಿದ್ದು, ಈ ಕುರಿತ ವಾಯ್ಸ್ ರೆಕಾರ್ಡ್ ಒನ್ಇಂಡಿಯಾ ಕನ್ನಡಕ್ಕೆ ಲಭ್ಯವಾಗಿದೆ.
ಕೊರೊನಾ ಸೋಂಕು ತಗುಲಿದವರಿಗೆ ಯಾವ ನಂಬರ್ ಮುಖ್ಯವಲ್ಲ, ಅವರಿಗೆ ಬೆಡ್ ಕೊಡುವುದು ವ್ಯವಸ್ಥೆಯ ಮುಖ್ಯ ಉದ್ದೇಶ ಎಂಬ ಸಾಮಾನ್ಯ ಜ್ಞಾನ ಇಲ್ಲದೇ ರೂಪಿಸಿರುವ ನಿಯಮಗಳೇ ಕೋವಿಡ್ ರೋಗಿಗಳ ಪಾಲಿಗೆ ಮುಳುವಾಗಿವೆ. ಕೆಲವು ಹಾಸಿಗೆ ಖಾಲಿ ಬಿದ್ದಿದ್ದರೂ ಬೆಡ್ ಸಿಗದೇ ಜನರು ಬೀದಿಯಲ್ಲಿ ಉಸಿರು ಬಿಡುವಂತಾಗಿದೆ.
ಆರೋಗ್ಯ ಸಚಿವರೇ ಇನ್ನೂ ಎಷ್ಟು ಎಡವಟ್ಟು ಮಾಡಬೇಕು: ರಾಜ್ಯದಲ್ಲಿ ಸೂಕ್ತ ಆಕ್ಸಿಜನ್ ವ್ಯವಸ್ಥೆ ಮಾಡಲಾಗಲಿಲ್ಲ. ಕೋವಿಡ್ ಸೋಂಕಿತರಿಗೆ ಬೆಡ್ ಸಿಗುತ್ತಿಲ್ಲ. ರೆಮ್ಡೆಸಿವಿರ್ ಕಾಳಸಂತೆಯಲ್ಲಿ ಮಾರಾಟ. ಇನ್ನು ಕೋವಿಡ್ಗೆ ವ್ಯಾಕ್ಸಿನ್ ಪಡೆಯಲು 45 ವರ್ಷ ವಯಸ್ಸಿನ ಕೆಳಗಿನವರಿಗೆ ಉಚಿತ ವ್ಯಾಕ್ಸಿನ್ ಸೌಲಭ್ಯ ಸಿಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಇಲ್ಲದೇ ಸರಣಿ ಸಾವುಗಳು. ಇಷ್ಟೆಲ್ಲಾ ಅವಾಂತರಗಳು ರಾಜ್ಯದಲ್ಲಿ ಸೃಷ್ಟಿಯಾಗುತ್ತಿದ್ದರೂ, ಪಾರದರ್ಶಕ ವ್ಯವಸ್ಥೆ ಮಾಡಿಲ್ಲ.