ಬೆಡ್ ಬ್ಲಾಕಿಂಗ್ ಬಿಗ್ ಟ್ವಿಸ್ಟ್, ದಂಧೆಯ ಹಿಂದೆ ಬಿಜೆಪಿ ಶಾಸಕ? ಅರ್ಥವಾಗದ 'ಗುಮ್ಮ'
ಬಿಜೆಪಿಯ ಸಂಸದ ಮತ್ತು ಮೂವರು ಪಕ್ಷದ ಶಾಸಕರು ಬೆಡ್ ಬ್ಲಾಕಿಂಗ್ ಹಗರಣವನ್ನು ಬಯಲು ಎಳೆಯಲು ಹೋಗಿ ತಮ್ಮ ನೆಲವನ್ನು ತಾವೇ ತೋಡಿಕೊಂಡರೇ? ತಮ್ಮದೇ ಸರಕಾರದ ಅವ್ಯವಹಾರವನ್ನು ಹೊರಗೆಳೆಯಲು ಹೋಗಿ ರಾಜ್ಯದ ಜನತೆಯ ಮುಂದೆ ನಗೇಪಾಟಲಿಗೆ ಗುರಿಯಾಗುತ್ತಿದ್ದಾರೆಯೇ?
ಹೌದು, ಈ ಹಗರಣ ಹೊಸ ಹೊಸ ತಿರುವನ್ನು ಪಡೆದುಕೊಳ್ಳುತ್ತಿದೆ. ಒಮ್ಮೆ ನೆನಪು ಮಾಡಿಕೊಳ್ಳಿ, ತೇಜಸ್ವಿ ಸೂರ್ಯಗಿಂತಲೂ ಜೋರಾಗಿ ಬಿಬಿಎಂಪಿ ಅಧಿಕಾರಿಗಳ ವಿರುದ್ದ ಅಂದು ಅಬ್ಬರಿಸಿದ್ದು ಬೊಮ್ಮನಹಳ್ಳಿಯ ಬಿಜೆಪಿ ಶಾಸಕ ಸತೀಶ್ ರೆಡ್ಡಿ.
ಕೋವಿಡ್ ವಾರ್ ರೂಂ ಫ್ರಾಡ್: ಹೆಣದ ಮೇಲಿನ ಹಣವನ್ನೂ ಬಿಡಲ್ವಲ್ರೋ!
ಈಗ, ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಹಾಗೇ ಈ ಹಗರಣದಲ್ಲಿ ಸತೀಶ್ ರೆಡ್ಡಿ ಶಾಮೀಲಾಗಿರುವ ವಿಚಾರ ಬೆಳಕಿಗೆ ಬಂದಿದೆ. ಆ ಮೂಲಕ, ಮೊದಲೇ ಕೊರೊನಾ ಅಲೆಯ ಮುಂದೆ ಶರಣಾಗಿರುವ ಬಿಜೆಪಿ ಸರಕಾರಕ್ಕೆ ತೀವ್ರ ಮುಜುಗರ ಎದುರಾಗಿದೆ.
ತಮ್ಮದೇ ಸರಕಾರದ ವಿರುದ್ದ ಯುವ ಬಿಜೆಪಿ ನಾಯಕರ ಗುಡುಗು, ಅಸಲಿಯತ್ತು ಏನು?
ಈಗಾಗಲೇ, ಈ ವಿಚಾರವನ್ನು ಇಟ್ಟುಕೊಂಡು ಅಲ್ಪಸಂಖ್ಯಾತ ಸಮುದಾಯವನ್ನು ಬಿಜೆಪಿಯವರು ಟಾರ್ಗೆಟ್ ಮಾಡಲು ಹೊರಟಿದ್ದಾರೆ ಎನ್ನುವ ಸುದ್ದಿಯ ನಡುವೆ, ಕೋವಿಡ್ ವಾರ್ ರೂಂನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇನ್ನೂರಕ್ಕೂ ಹೆಚ್ಚು ನೌಕರರ ಪೈಕಿ ಹದಿನೇಳು ಆ ಸಮದಾಯದವರನ್ನು ವಜಾಗೊಳಿಸಲಾಗಿದೆ.
ತೇಜಸ್ವಿ ಸೂರ್ಯ ಹಾಗೂ ಟೀಂನವರು ಬಿಬಿಎಂಪಿ ವಾರ್ ರೂಂಗೆ ಹೋಗುವ ಮುನ್ನ
ತೇಜಸ್ವಿ ಸೂರ್ಯ ಹಾಗೂ ಟೀಂನವರು ಬಿಬಿಎಂಪಿ ವಾರ್ ರೂಂಗೆ ಹೋಗುವ ಮುನ್ನವೇ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರನ್ನು ಸಂಪರ್ಕಿಸಿದ್ದರು. ಬೆಡ್ ಬ್ಲಾಕಿಂಗ್ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಗೌರವ್ ಗುಪ್ತಾ ಬಿಬಿಎಂಪಿ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆಯೇ ಎಂದು ವಿಚಾರಣೆ ನಡೆಸಿ ಎಂದು ಕಮಲ್ ಪಂಥ್ ಅವರಿಗೆ ತಿಳಿಸಿದ್ದರು. ಈ ಬೆಳವಣಿಗೆಯ ನಂತರ ತೇಜಸ್ವಿ ಸೂರ್ಯ ಬಿಬಿಎಂಪಿ ಕಚೇರಿಗೆ ದಾಳಿ ನಡೆಸಿದ್ದು.
ಪಾರದರ್ಶಕವಾಗಿ ಬೆಡ್ ಹಂಚಲು ಸತೀಶ್ ರೆಡ್ಡಿಯವರೇ ದೊಡ್ಡ ತೊಡಕು
ಕೆಲವು ಮಾಧ್ಯಮಗಳು ವರದಿ ಮಾಡಿದಂತೆ, ಶಾಸಕ ಸತೀಶ್ ರೆಡ್ಡಿಯ ಕಡೆಯವರೇ ಬೆಡ್ ಬ್ಲಾಕಿಂಗ್ನಲ್ಲಿ ನೇರ ಶಾಮೀಲಾಗಿದ್ದಾರೆ ಎನ್ನುವ ಗುರುತರ ಆರೋಪ ಕೇಳಿ ಬರುತ್ತಿದೆ. ಪಾರದರ್ಶಕವಾಗಿ ಬೆಡ್ ಹಂಚಲು ಸತೀಶ್ ರೆಡ್ಡಿಯವರೇ ದೊಡ್ಡ ತೊಡಕಾಗಿದ್ದಾರೆ. ತಮ್ಮ ಅನುಯಾಯಿಗಳ ಮೂಲಕ ಸತೀಶ್ ರೆಡ್ಡಿ ಬೆಡ್ ಹಂಚಿಕೆ ಮಾಡುತ್ತಿದ್ದರು. ಇದಕ್ಕೆ ಅಡ್ಡಿಯಾದರೆ, ವಾರ್ ರೂಂನವರ ಜೊತೆ ಜಗಳವಾಡುತ್ತಿದ್ದರು ಎನ್ನುವ ಮಾಹಿತಿ ಹೊರಬರುತ್ತಿದೆ.
ಅಂಬುಲೆನ್ಸ್, ಬೆಡ್ ಸಿಗದೇ ಇದ್ದಾಗ, ಸಹಾಯವಾಣಿಗೆ ಫೋನ್ ಮಾಡಿದ್ದು ನಿಜ
ಸ್ವಾಭಾವಿಕವಾಗಿ ಸತೀಶ್ ರೆಡ್ಡಿ ಈ ಆರೋಪವನ್ನು ತಳ್ಳಿಹಾಕಿದ್ದಾರೆ. "ನನ್ನದೇ ಕ್ಷೇತ್ರದ ರೋಗಿಗಳಿಗೆ ಬೆಡ್ ಕೊಡಿಸಲು ನನಗೆ ಸಾಧ್ಯವಾಗಲಿಲ್ಲ. ಅಂಬುಲೆನ್ಸ್ ಕೊರತೆಯಿಂದ ಎರಡೆರಡು ದಿನ ಶವಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕಾದ ಪರಿಸ್ಥಿತಿಯಿತ್ತು. ಅಂಬುಲೆನ್ಸ್, ಬೆಡ್ ಸಿಗದೇ ಇದ್ದಾಗ, ಸಹಾಯವಾಣಿಗೆ ಫೋನ್ ಮಾಡಿದ್ದು ನಿಜ. ಆದರೆ, ಈ ಹಗರಣದಲ್ಲಿ ನನ್ನ ಹೆಸರು ಎಳೆದು ತರುವುದು ಸರಿಯಲ್ಲ"ಎಂದು ಸತೀಶ್ ರೆಡ್ಡಿ ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಕುಮಾರಸ್ವಾಮಿಗೆ ಆಹಾರ ಆಗುವ ಮುನ್ನ ತಾವೇ ಬಯಲುಗೆಳೆದ ನಾಟಕ
ಆದರೆ, ಇಲ್ಲಿ ಅರ್ಥವಾಗದ ಪ್ರಶ್ನೆ ಏನಂದರೆ, ಈ ವಿಚಾರ ಗೊತ್ತಿದ್ದೇ ಬಿಜೆಪಿಯವರು ವಾರ್ ರೂಂ ದಾಳಿ ಎನ್ನುವ ಡ್ರಾಮಾ ಹುಟ್ಟುಹಾಕಿದರಾ? ಮಾಧ್ಯಮದಲ್ಲಿ ಭರ್ಜರಿ ಪ್ರಚಾರ ತೆಗೆದುಕೊಂಡ ಈ ದಾಳಿಗೆ ಮುನ್ನ ತೇಜಸ್ವಿ ಸೂರ್ಯ ಮತ್ತವರ ಟೀಂಗೆ ತಮ್ಮ ಪಕ್ಕದಲ್ಲಿ ಇರುವವರೇ ಇದರಲ್ಲಿ ಶಾಮೀಲಾಗಿದ್ದಾರೆ ಎನ್ನುವ ವಾಸನೆ ಬಂದಿರಲಿಲ್ಲವೇ ಅಥವಾ ಈ ವಿಚಾರ ಕಾಂಗ್ರೆಸ್ ಮತ್ತು ಕುಮಾರಸ್ವಾಮಿಗೆ ಆಹಾರ ಆಗುವ ಮುನ್ನ ತಾವೇ ಬಯಲುಗೆಳೆದ ನಾಟಕವಾಡಿತೇ? ಅಥವಾ..
ದಾಳಿಯ ನೆಪದಲ್ಲಿ ಕೋಮು ಬಣ್ಣ ಕಟ್ಟಿ, ವಿಷಯಾಂತರ ಮಾಡಲು ಬಿಜೆಪಿ ಹೊರಟಿತಾ
ಬಿಬಿಎಂಪಿ ದಾಳಿಯ ವೇಳೆ, ತೇಜಸ್ವಿ ಸೂರ್ಯ ಎಂಡ್ ಟೀಂ ಹದಿನೇಳು ನೌಕರರ ಹೆಸರನ್ನು ಓದಿ ಹೇಳಿದರು. ಅವರೆಲ್ಲಾ ಮುಸ್ಲಿಂ ಸಮುದಾಯದವರು, ಬಿಬಿಎಂಪಿ ವಾರ್ ರೂಂ ಅನ್ನು ಮದರಸ ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದರು ಕೂಡಾ.. ಆ ಮೂಲಕ ಇಲ್ಲೂ ಕೋಮು ಸೌಹಾರ್ದತೆಗೆ ಅಪವಾದವಾದ ಘಟನೆ ನಡೆಯಿತು. ಆ ಮೂಲಕ, ದಾಳಿಯ ನೆಪದಲ್ಲಿ ಕೋಮು ಬಣ್ಣ ಕಟ್ಟಿ, ವಿಷಯಾಂತರ ಮಾಡಲು ಬಿಜೆಪಿ ಹೊರಟಿತಾ ಎನ್ನುವ ಪ್ರಶ್ನೆ ಎದುರಾಗುತ್ತದೆ.