ಏಕ ಬಳಕೆ ಪ್ಲಾಸ್ಟಿಕ್ ನಿಷೇಧ: ಮೂರೇ ದಿನದಲ್ಲಿ 2 ಲಕ್ಷ ರುಪಾಯಿ ದಂಡ ಸಂಗ್ರಹಿಸಿದ ಬಿಬಿಎಂಪಿ
ಬೆಂಗಳೂರು, ಜುಲೈ 6: ಜುಲೈ 1ರಿಂದ ದೇಶಾದ್ಯಂತ ಏಕ-ಬಳಕೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ನಿಷೇಧದ ನಂತರ ಬೆಂಗಳೂರು ನಗರದಾದ್ಯಂತ ಬಿಬಿಎಂಪಿ ಸುಮಾರು 700 ಕೆ.ಜಿ. ಏಕ-ಬಳಕೆ ಪ್ಲಾಸ್ಟಿಕ್ (ಎಸ್ಯುಪಿ) ಜಪ್ತಿ ಮಾಡಿದ್ದು, ಸುಮಾರು 2 ಲಕ್ಷ ರುಪಾಯಿ ದಂಡವನ್ನು ಸಂಗ್ರಹಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜುಲೈ 1 ರಿಂದ ಜುಲೈ 3 ರ 321 ಕಡೆ ದಾಳಿ ನಡೆಸಿ ಪ್ಲಾಸ್ಟಿಕ್ ವಶ ಪಡಿಸಿಕೊಳ್ಳುವ ಜೊತೆಗೆ ದಂಡವನ್ನು ಸಂಗ್ರಹಿಸಿದೆ.
ಇಲ್ಲಿಯವರೆಗೆ ಹೆಚ್ಚಾಗಿ ಚಿಲ್ಲರೆ(Retail) ವ್ಯಾಪಾರಿಗಳು ಮತ್ತು ಪೂರೈಕೆದಾರರಿಂದ ಏಕ ಬಳಕೆಯ ಪ್ಲಾಸ್ಟಿಕ್ (ಎಸ್ಯುಪಿ) ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಲವು ಉದ್ದಿಮೆಗಳ ಮೇಲೆ ಪರಿಣಾಮ ಬೀರಿದ ಏಕ-ಬಳಕೆ ಪ್ಲಾಸ್ಟಿಕ್ ನಿಷೇಧ
"ಪ್ರಸ್ತುತ, ಎಸ್ಯುಪಿ ಉತ್ಪಾದನಾ ಘಟಕಗಳು ಹೆಚ್ಚಾಗಿ ಅಹಮದಾಬಾದ್ ಮತ್ತು ಗುಜರಾತ್ನಲ್ಲಿವೆ, ಅವುಗಳ ಪೂರೈಕೆ ಜಾಲ ಗುಜರಾತ್ನಲ್ಲಿ ಹುಟ್ಟಿಕೊಂಡಿದೆ. ನಾವು ಬೆಂಗಳೂರಿನ ಹೊರವಲಯದಲ್ಲಿರುವ ತುಮಕೂರು ರಸ್ತೆ ಮತ್ತು ಕೆಂಗೇರಿ ರಸ್ತೆಯಲ್ಲಿ ಕೆಲವು ತಿಂಗಳ ಹಿಂದೆ ಕೆಲವು ಉತ್ಪಾದನಾ ಘಟಕಗಳ ಮೇಲೆ ದಾಳಿ ನಡೆಸಿದ್ದೇವೆ ಮತ್ತು ಈ ಘಟಕಗಳನ್ನು ಮುಚ್ಚಲಾಗಿದೆ. ಈಗ ಪೂರೈಕೆದಾರರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದೇವೆ" ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಅಹಮದಾಬಾದ್ನಿಂದ ಪ್ಲಾಸ್ಟಿಕ್ ವಸ್ತುಗಳು ಪೂರೈಕೆ
ನಾಗರಿಕ ಮಂಡಳಿಯ ಪ್ರಕಾರ, ಅಹಮದಾಬಾದ್ನಿಂದ ಟ್ರಕ್ಗಳಲ್ಲಿ ಹೆಚ್ಚಿನ ಸಂಖ್ಯೆಯ ಎಸ್ಯುಪಿಗಳು ಪಾಲಿಥೀನ್ ಬ್ಯಾಗ್ಗಳ ರೂಪದಲ್ಲಿ ಕಲಾಸಿಪಾಳ್ಯ ಮಾರುಕಟ್ಟೆ ಮತ್ತು ಕೆಆರ್ ಮಾರುಕಟ್ಟೆಗೆ ನಿಯಮಿತವಾಗಿ ತಲುಪುತ್ತಿವೆ.
"ನಾವು ಇತ್ತೀಚೆಗೆ ಐದು ಟನ್ ಪ್ಲಾಸ್ಟಿಕ್ ಅನ್ನು ಸಾಗಿಸುತ್ತಿದ್ದ ಎಸ್ಯುಪಿಯ ಟ್ರಕ್ಲೋಡ್ ಅನ್ನು ವಶಪಡಿಸಿಕೊಂಡಿದ್ದೇವೆ. ವಸ್ತುಗಳನ್ನು ವಶಪಡಿಸಿಕೊಂಡು ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದೇವೆ. ಸುಸ್ತಿದಾರರಿಗೆ 40 ಸಾವಿರ ದಂಡವನ್ನೂ ವಿಧಿಸಲಾಗಿದೆ. ಸಂಪೂರ್ಣ ಸರಕುಗಳನ್ನು ವಶಪಡಿಸಿಕೊಂಡು, ತುಂಡುಗಳಾಗಿ ಕತ್ತರಿಸಿ ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ'' ಎಂದು ಬಿಬಿಎಂಪಿ ಮುಖ್ಯ ಮಾರ್ಷಲ್ ರಾಜ್ಬೀರ್ ಸಿಂಗ್ ಹೇಳಿದ್ದಾರೆ.
ಏಕ ಬಳಕೆಯ ಪ್ಲಾಸ್ಟಿಕ್ಗೆ ಮತ್ತೆ ನಿಷೇಧ: ಉಲ್ಲಂಘಿಸಿದರೆ ವ್ಯಾಪಾರಿಗಳಿಗೆ ಬೀಳಲಿದೆ ಭಾರಿ ದಂಡ
ವಶಪಡಿಸಿಕೊಂಡ ಪ್ಲಾಸ್ಟಿಕ್ ಮರುಬಳಕೆಗೆ ಹಸ್ತಾಂತರ
''ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಪೂರೈಕೆ ಮತ್ತು ಬಳಕೆಯ ಮೇಲೆ ಪರಿಣಾಮಕಾರಿ ನಿಗ್ರಹವನ್ನು ಖಚಿತಪಡಿಸಿಕೊಳ್ಳಲು ಪಾಲಿಕೆಯು ಈಗ ಅನೇಕ ವಾರ್ಡ್ವಾರು ತಂಡಗಳನ್ನು ರಚಿಸಿದೆ. ಪ್ರಸ್ತುತ ವಶಪಡಿಸಿಕೊಳ್ಳಲಾದ ಹೆಚ್ಚಿನ ಎಸ್ಯುಪಿ ವಸ್ತುಗಳನ್ನು ಮರುಬಳಕೆಗಾಗಿ ಕೆಕೆ ಪ್ಲಾಸ್ಟಿಕ್ಗೆ ಹಸ್ತಾಂತರಿಸಲಾಗುತ್ತಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ನಿರ್ದೇಶನಗಳ ಪ್ರಕಾರ ದಂಡವನ್ನು ವಿಧಿಸಲು ಚಿಂತನೆ ನಡೆಸಿದ್ದೇವೆ'' ಎಂದು ನಾಗರಿಕ ಅಧಿಕಾರಿಗಳು ಹೇಳಿದ್ದಾರೆ.
ಅಪರಾಧ ಪುನರಾವರ್ತನೆಯಾದರೆ ದಂಡದ ಪ್ರಮಾಣ ಹೆಚ್ಚು
"ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಹೊಸ ಮಾರ್ಗಸೂಚಿಗಳೊಂದಿಗೆ, ನಾವು ಈಗ ಡೀಫಾಲ್ಟರ್ಗಳಿಗಾಗಿ ವಿವಿಧ ಹಂತಗಳಲ್ಲಿ ದಂಡ ವಿಧಿಸುತ್ತಿದ್ದೇವೆ. ಇಲ್ಲಿಯವರೆಗೆ, ನಾವು ರವಾನೆಯ ಗಾತ್ರದ ಆಧಾರದ ಮೇಲೆ ದಂಡವನ್ನು ವಿಧಿಸುತ್ತಿದ್ದೇವೆ. ಉದಾಹರಣೆಗೆ, ಸರಬರಾಜುದಾರರು ಒಂದು ಟನ್ ಪ್ಲಾಸ್ಟಿಕ್ನೊಂದಿಗೆ ಸಿಕ್ಕಿಬಿದ್ದರೆ, ಅವರಿಗೆ 1000 ರುಪಾಯಿ ದಂಡ ವಿಧಿಸಲಾಗುತ್ತದೆ. ಈಗ ನಾವು ಮೊದಲ ಬಾರಿಗೆ ಅಪರಾಧಿಗಳಿಗೆ ಮೂಲ ದಂಡವನ್ನು ವಿಧಿಸಲು ಯೋಚಿಸುತ್ತಿದ್ದೇವೆ, ಇದು ಪುನರಾವರ್ತಿತ ಅಪರಾಧಗಳಿಗೆ ದಂಡದ ಪ್ರಮಾಣ ಹೆಚ್ಚಾಗುತ್ತಲೇ ಇರುತ್ತದೆ," ಎಂದು ಸಿಂಗ್ ಹೇಳಿದರು.
ಪಾಲಿಕೆಯು ಈ ವರ್ಷದ ಜನವರಿಯಿಂದ ಜೂನ್ ತಿಂಗಳ ನಡುವೆ ಸುಮಾರು ಎರಡು ಸಾವಿರ ಪ್ಲಾಸ್ಟಿಕ್ ವಶಪಡಿಸಿಕೊಂಡ ಪ್ರಕರಣಗಳ ಮೂಲಕ 22.5 ಲಕ್ಷ ರೂ. ಸಂಗ್ರಹಿಸಿದೆ. ಕಚ್ಚಾ ವಸ್ತುಗಳ ಪೂರೈಕೆಯನ್ನು ಕಡಿಮೆ ಮಾಡುವುದು ಬಿಬಿಎಂಪಿ ಮುಖ್ಯ ಉದ್ದೇಶವಾಗಿದೆ.
ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಪ್ಲಾಸ್ಟಿಕ್ ಪೂರೈಕೆ
ದೇಶಾದ್ಯಂತ ಪ್ಲಾಸ್ಟಿಕ್ ನಿಷೇಧವಾಗಿರುವುದರಿಂದ, ಉತ್ಪಾದನೆಯ ಮೂಲಗಳು ಮುಖ್ಯವಾಗಿವೆ. ಎಸ್ಯುಪಿ ನಿಷೇಧಕ್ಕೆ ಬಂದಾಗ ಪ್ರತಿಯೊಂದು ರಾಜ್ಯವು ವಿಭಿನ್ನ ನಿಯಮಗಳನ್ನು ಹೊಂದಿದ್ದರೂ, ಬೆಂಗಳೂರಿಗೆ ತಲುಪುವ ಹೆಚ್ಚಿನ ಎಸ್ಯುಪಿ ವಸ್ತುಗಳು ನೆರೆಯ ರಾಜ್ಯಗಳಿಂದ ಸರಬರಾಜಾಗುತ್ತವೆ.
ಕಚ್ಚಾ ವಸ್ತುಗಳ ಪೂರೈಕೆಯನ್ನು ಕಡಿತಗೊಳಿಸುವುದು, ಎಸ್ಯುಪಿ ವಸ್ತುಗಳ ತಯಾರಿಕೆಯನ್ನು ಕಡಿಮೆ ಮಾಡುವುದು ಮತ್ತು ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಬೇಡಿಕೆಯನ್ನು ತಗ್ಗಿಸಲು ಬಿಬಿಎಂಪಿ ಪ್ರಯತ್ನ ಮಾಡುತ್ತಿದೆ.
ಏಕ ಬಳಕೆ ಪ್ಲಾಸ್ಟಿಕ್ ನಿಷೇಧವನ್ನು ಯಶಸ್ವಿಯಾಗಿ ಜಾರಿಗೆ ತರಲು ಸ್ಥಳದಲ್ಲೇ ತಪಾಸಣೆಯೊಂದಿಗೆ ಡಿಜಿಟಲೀಕೃತ ಮಾನಿಟರಿಂಗ್ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ ಎಂದು ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆಯ ವಿಶೇಷ ಆಯುಕ್ತ ಡಾ.ಹರೀಶ್ ಕುಮಾರ್ ಹೇಳಿದರು.