ಮಳೆಗಾಲ ಆರಂಭ; ಬಿಬಿಎಂಪಿ ಆಯುಕ್ತರಿಂದ ಅಧಿಕಾರಿಗಳಿಗೆ ಸೂಚನೆಗಳು
ಬೆಂಗಳೂರು, ಜು.1: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ ಜನರ ಅಹವಾಲು, ಕುಂದು ಕೊರತೆ ಆಲಿಸಲು ಶುಕ್ರವಾರ ಪಶ್ಚಿಮ ವಲಯಕ್ಕೆ ಭೇಟಿ ನೀಡಿದರು.
ವಲಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದು, ಅಧಿಕಾರಿಗಳು ಕೆಲವು ಸಲಹೆ ಸೂಚನೆ ನೀಡಿದರು. ಬಿಬಿಎಂಪಿಯ ಎಲ್ಲ ಎಂಟು ವಲಯಗಳ ಸಾರ್ವಜನಿಕರು ತಮ್ಮ ಪ್ರದೇಶಗಳಲ್ಲಿನ ವಿವಿಧ ಸಮಸ್ಯೆ, ಮಳೆಗಾಲದಲ್ಲಿ ಎದುರಾಗು ಆತಂಕ ಸೇರಿದಂತೆ ಅನೇಕ ಅಹವಾಲುಗಳನ್ನು ನೀಡಲು ನಿತ್ಯ ಮುಖ್ಯ ಆಯುಕ್ತರ ಕಛೇರಿಗೆ ಆಗಮಿಸುತ್ತಿರುವುದು ಕಂಡು ಬಂದಿದೆ.
ಇದನ್ನು ಗಮನಿಸಿ ಜನರ ಅನುಕೂಲಕ್ಕಾಗಿ ತುಷಾರ್ ಗಿರಿನಾಥ್ ಖುದ್ದು ತಾವೇ ಪಶ್ಚಿಮ ವಲಯದ ವ್ಯಾಪ್ತಿಯ ಜನರ ಬಳಿ ಹೋಗಿ ಪರಿಶೀಲಿಸದ್ದಾರೆ. ಈ ವೇಳೆ ಜನರು ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ನೀಡಿದ ಅಹವಾಲುಗಳನ್ನು ಸ್ವೀರಿಸಿ, ಕೂಡಲೇ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮುಖ್ಯ ಆಯುಕ್ತರ ಭೇಟಿ ವೇಳೆ ಈ ವೇಳೆ ವಲಯ ಆಯುಕ್ತರಾದ ಡಾ. ದೀಪಕ್, ವಲಯ ಜಂಟಿ ಆಯುಕ್ತರಾದ ಶ್ರೀನಿವಾಸ್, ಮುಖ್ಯ ಅಭಿಯಂತರರಾದ ದೊಡ್ಡಯ್ಯ, ಜಲಮಂಡಳಿ, ಬೆಸ್ಕಾಂ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಸಾರ್ವಜನಿಕರಿಂದ ಬಂದ 10 ಅಹವಾಲು, ಆಯುಕ್ತ ಸೂಚನೆಗಳು ಹೀಗಿವೆ
1. ರಾಜಾಜಿನಗರದ ಭಾಷ್ಯಂ ವೃತ್ತ ಎ2ಬಿ ಬಳಿ ರಸ್ತೆ ಬದಿಯಿರುವ ಚರಂಡಿಯಿಂದ ನೀರು ರಸ್ತೆ ಮೇಲೆ ಬಂದು ಸಮಸ್ಯೆ ಆಗಲಿದೆ. ಆದ್ದರಿಂದ ಮುಖ್ಯ ಇಂಜಿನಿಯರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚರಂಡಿ ದುರಸ್ತಿ ಕಾರ್ಯ ಕೈಗೊಳ್ಳಲು ಮುಖ್ಯ ಆಯುಕ್ತರು ಸೂಚನೆ ನೀಡಿದರು.
2. ಆಕ್ಸ್ ಫರ್ಡ್ ನ್ಯೂ ಫಬ್ಲಿಕ್ ಸ್ಕೂಲ್ ಬಳಿಯಿರುವ ಖಾಲಿ ಜಾಗದಲ್ಲಿ ಕಸ ಹಾಕಲಾಗುತ್ತಿರುವುದನ್ನು ತಪ್ಪಿಸಲು ಮನವಿ. ಈ ಸಂಬಂಧ ಖಾಲಿ ಸ್ಥಳದಲ್ಲಾಕಿರುವ ಕಸವನ್ನು ತೆರವುಗೊಳಿಸಿ ಖಾಲಿ ಸ್ಥಳದ ಮಾಲೀಕರಿಗೆ ದಂಢ ವಿಧಿಸಬೇಕು ಎಂದು ತುಷಾರ್ ಗಿರಿನಾಥ್ ಸೂಚಿಸಿದರು.
3. ಪಾಲಿಕೆಯ ಸ್ಥಳದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಅದನ್ನು ನಿಯಂತ್ರಿಸಲು ಬಂದ ಮನವಿಗೆ ಪ್ರತಿಕ್ರಿಯಿಸಿ ತುಷಾರ್ ಗಿರಿನಾಥ್ ಅವರು ಅಕ್ರಮ ಚಟುವಟಿಕೆಗಳಿಗೆ ಕೂಡಲೇ ಕಡಿವಾಣ ಹಾಕವಂತೆ ವಲಯ ಜಂಟಿ ಆಯುಕ್ತರಿಗೆ ತಾಕೀತು ಮಾಡಿದರು.
4. ಪ್ರಕಾಶ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬಳಿ ಶನಿಮಹಾತ್ಮ ದೇವಸ್ಥಾನ ಟ್ರಸ್ಟ್ ಪಾಲಿಕೆಯ ಜಾಗದಲ್ಲಿ ಮಳಿಗೆಗಳನ್ನು ನಿರ್ಮಾಣ ಮಾಡಿಕೊಂಡಿದ್ದ ಸಮಸ್ಯೆ ಸೃಷ್ಟಿಯಾಗಿದೆ. ಆ ಸ್ಥಳಕ್ಕೆ ಜಂಟಿ ಆಯುಕ್ತರು ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಿ.
5. ರಾಜಾಜಿನಗರ ರಂಗನಾಥ ದೇವಸ್ಥಾನದ ಬಳಿಯಿರುವ ರಸ್ತೆ ಮಾರ್ಗದ ಎರಡೂ ಬದಿಯಿರುವ ಮನೆ ಮಾಲೀಕರು ವಾಹನಗಳ ಅನುಕೂಲಕ್ಕಾಗಿ ಪಾದಚಾರಿ ಮಾರ್ಗದಿಂದ ರಸ್ತೆಗೆ ರ್ಯಾಂಪ್ ಅಳವಡಿಸಿದ್ದು, ಇದರಿಂದ ಪಾದಚಾರಿಗಳಿಗೆ ಸಮಸ್ಯೆ ಆಗುತ್ತಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ರ್ಯಾಂಪ್ ತೆರವುಗೊಳಿಸಲು ನಿರ್ದೇಶಿಸಿದ ಮುಖ್ಯ ಆಯಕ್ತರು.
6. ಮಲ್ಲೇಶ್ವರಂನ 30 ಅಡಿ ರಸ್ತೆಯಲ್ಲಿ ಕೇಬಲ್ ಅಳವಡಿಸಲು ಬೆಸ್ಕಾಂ ಅನಧಿಕೃತವಾಗಿ ರಸ್ತೆ ಅಗೆದು ಸಮಸ್ಯೆ ಸೃಷ್ಟಿಸಿದೆ. ಈ ಬಗ್ಗೆ ಕಾರ್ಯಪಾಲಕ ಅಭಿಯಂತರರು ಸ್ಥಳ ಪರಿಶೀಲಿಸಿ ವಲಯ ಆಯುಕ್ತರಿಗೆ ವರದಿ ನೀಡಬೇಕು.
7. ಮಲ್ಲೇಶ್ವರದಲ್ಲಿ ಮನೆಯೊಂದರ ಪಕ್ಕದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಲಾಗಿದ್ದು, ಅದನ್ನು ತೆರವುಗೊಳಿಸುವಂತೆ ನಾಗರಿಕರೊಬ್ಬರು ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿದ ತುಷಾರ್ ಗಿರಿನಾಥ್ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅನಧಿಕೃತವಾಗಿ ನಿರ್ಮಾಣ ಮಾಡಿದ ಕಟ್ಟಡ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ. ಅನಧಿಕೃತ ಕಟ್ಟವನ್ನು ತೆರವುಗೊಳಿಸಿ ಎಂದು ಸೂಚಿಸಿದರು.
8. ಮಂತ್ರಿ ಮಾಲ್ ಮುಂಭಾಗ ಪಾದಚಾರಿಗಳ ಓಟಾಡಕ್ಕೆ ಹೆಚ್ಚು ಸಮಸ್ಯೆಯಾಗಿದೆ. ಈ ಪೈಕಿ ತಾತ್ಕಾಲಿಕ ಪರಿಹಾರಗಳನ್ನು ಕಂಡುಕೊಂಡು ಪಾದಚಾರಿಗಳ ಓಡಾಟಕ್ಕೆ ಸಮಸ್ಯೆಯಾಗದಂತೆ ಜೀಬ್ರಾ ಕ್ರಾಸಿಂಗ್ ಮಾರ್ಕ ಮಾಡಲಾಗುವುದು.
9. ಮಳೆ ಬಂದಾಗ ಮಂತ್ರಿ ಮಾಲ್ ಮುಂದೆ ಜಲಾವೃತವಾಗುವುದನ್ನು ತಡೆಯಲು ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜಕಾಲುವೆಯ ಬಳಿ ರಸ್ತೆಯನ್ನು ಎತ್ತರಿಸಿ ರಸ್ತೆ ಮೇಲೆ ನೀರು ನಿಲ್ಲದಂತೆ ರಸ್ತೆ ಬದಿಯ ಶೋಲ್ಡರ್ ಡ್ರೈನ್ ಗಳಿಗೆ ಹರಿದು ಹೋಗುವಂತೆ ಬಿಬಿಎಂಪಿ ಯಿಂದ ಕ್ರಮ ಕೈಗೊಳ್ಳಲಾಗಿದೆ.
10. ಪಶ್ಚಿಮ ವಲಯ ವ್ಯಾಪ್ತಿಯಲ್ಲಿರುವ ಬೀದಿ ದೀಪಗಳನ್ನು ಸಮೀಕ್ಷೆ ನಡೆಸಿ. ಎಲ್ಲೆಲ್ಲಿ ಬೀದಿ ದೀಪಗಳಿಲ್ಲ ಅಥವಾ ದೀಪಗಳು ಹಾಳಾಗಿವೆ ಅದನ್ನು ಕೂಡಲೇ ಸರಿಪಡಿ. ಬೀದಿ ದೀಪಗಳ ನಿರ್ವಹಣೆಯ ಆಯಾ ವಾರ್ಡ್ ಸಹಾಯಕ ಅಭಿಯಂತರರು ಮೇಲುಸ್ತುವಾರಿ ಸಹಿತ ನೋಡಿಕೊಳ್ಳಬೇಕೆಂದು ತಿಳಿಸಲಾಯಿತು.
Recommended Video