ಬಿಬಿಎಂಪಿ, ಸಂಚಾರಿ ಪೊಲೀಸ್ ಆಯುಕ್ತರಿಂದ ರಾತ್ರಿ ಸಿಟಿ ರೌಂಡ್ಸ್!
ಬೆಂಗಳೂರ,ಜೂನ್ 28: ರಸ್ತೆಗುಂಡಿಗಳ ಸುದ್ದಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನವನ್ನು ಹರಾಜು ಹಾಕುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಬಂದು ಹೋದ ಬಳಿಕ ರಸ್ತೆಗಳು ಕಿತ್ತು ಬಂದ ಸುದ್ದಿ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು. ಇದರಿಂದ ಬಿಬಿಎಂಪಿ ಮುಖ್ಯ ಆಯುಕ್ತರು ವಿವಿಧ ಇಲಾಖೆಯ ಸಭೆಯನ್ನು ನಡೆಸಿದ್ದರು. ಇದೀಗ ಸಂಚಾರಿ ಪೊಲೀಸ್ ಆಯುಕ್ತರ ಜೊತೆ ಬಿಬಿಎಂಪಿ ಮುಖ್ಯ ಆಯುಕ್ತರು ಖುದ್ದು ಪರಿಶೀಲನೆಗೆ ನೈಟ್ ರೌಡ್ಸ್ ಹಾಕಲಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನಡೆಸಿದ್ದ ಸಭೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಸಂಚಾರಿ ಆಯುಕ್ತರಾದ ರವಿಕಾಂತೇಗೌಡರವರು ಭಾಗವಹಿಸಿದ್ದರು. ಈ ವೇಳೆ ರಸ್ತೆಗುಂಡಿಗಳ ಕುರಿತಾಗಿಯು ಚರ್ಚೆಯಾಗಿತ್ತು. ಇದರಿಂದಾಗಿ ಜೂನ್ 28 (ಇಂದು) ರಾತ್ರಿ ಜಂಟಿಯಾಗಿ ನಗರ ಸಂಚಾರ ಮತ್ತು ರಸ್ತೆಗುಂಡಿ ಪರಿಶೀಲನೆಗೆ ನಿರ್ಧಾರ ಮಾಡಲಾಗಿತ್ತು.
ಬೆಂಗಳೂರು ನಗರದ ಹೊರ ವಲಯದಲ್ಲಿ ಶಾಲೆ-ಕಾಲೇಜು ತೆರೆಯಲಿದೆ ಬಿಬಿಎಂಪಿ
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತು ಸಂಚಾರಿ ಪೊಲೀಸ್ ಆಯುಕ್ತರಾದ ರವಿಕಾಂತೇಗೌಡ ರಾತ್ರಿ 10.30 ಕ್ಕೆ ಪೊಲೀಸ್ ಇಲಾಖೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆಯನ್ನು ನಡೆಸಲಿದ್ದಾರೆ. ಆ ಮೂಲಕ ಬಿಬಿಎಂಪಿ ಎಲ್ಲೆಲ್ಲಿ ರಸ್ತೆ ಹಾಳಾಗಿರುವ ಮತ್ತು ಮಳೆ ಬಂದಾಗ ಸಮಸ್ಯೆ ಉಂಟಾಗುವ ಸ್ಥಳಗಳನ್ನು ಗಮನಿಸಿ ರಸ್ತೆಯನ್ನು ದುರಸ್ತಿ ಮಾಡಲು ಆದೇಶ ನೀಡಲು ಅನುಕೂಲವಾಗಲಿದೆ. ಬೆಂಗಳೂರು ಸಂಚಾರ ನಿಯಂತ್ರಣಕ್ಕೂ ಅನುಕೂಲವಾಗಲಿದೆ.
ನಮ್ಮ ಸಂಚಾರಿ ಪೊಲೀಸರ ಜೊತೆ ಸಭೆ
ಮಳೆಗಾಲ ಹಿನ್ನೆಲೆ ರಸ್ತೆಗುಂಡಿ, ನೀರು ನುಗ್ಗುವ ತಗ್ಗುಪ್ರದೇಶಗಳು, ಸಂಚಾರ ದಟ್ಟಣೆ ಆಗುವ ಪ್ರಮುಖ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು ಮೊದಲ ಆದ್ಯತೆಯಾಗಿ 50 ಹಾಗೂ ಎರಡನೇ ಆದ್ಯತೆಯಾಗಿ 54 ಬ್ಲಾಕ್ ಸ್ಪಾಟ್ ಗಳ ಅಭಿವೃದ್ದಿಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಸಂಸ್ಥೆಗಳ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ. ಸಂಚಾರಿ ಪೊಲೀಸರಿಂದ ಬಿಬಿಎಂಪಿಗೆ ಯಾವ ನೆರವು ನೀಡಬೇಕು ಎಂಬುದರ ಬಗ್ಗೆ ಚರ್ಚಿಸಲಾಗಿದೆ.
ನಗರದಲ್ಲಿ ಅತಿ ಹೆಚ್ಚು ಟ್ರಾಫಿಕ್ ಉಂಟಾಗುವ ಪ್ರಮುಖ 10 ಜಂಕ್ಷನ್ ಗಳನ್ನು ಗುರುತಿಸಲಾಗಿದೆ. ಗೊರಗುಂಟೆಪಾಳ್ಯ, ಹೆಬ್ಬಾಳ, ಸಿಲ್ಕ್ ಬೋರ್ಡ್ ಹಾಗೂ ಕೆ.ಆರ್.ಪುರ ಬಿಡ್ಜ್ ಪ್ರಮುಖವಾಗಿವೆ. ಈ ಮಾರ್ಗಗಳಲ್ಲಿ ಟ್ರಾಫಿಕ್ ಸಮಸ್ಯೆಗೆ ಕಾರಣವೇನು?, ರಸ್ತೆಗುಂಡಿಗಳಿವೆಯಾ?, ಮಳೆನೀರು ಹರಿಯದೆ ರಸ್ತೆಯಲ್ಲಿ ನೀರು ನಿಲ್ಲುತ್ತಿದೆಯಾ ಎಂಬುದು ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜೂನ್ 28ರ ರಾತ್ರಿ 10.30 ಕ್ಕೆ ಪೊಲೀಸ್ ಇಲಾಖೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದೇವೆ. ಮೊದಲು ಗೊರಗುಂಟೆಪಾಳ್ಯದಿಂದ ಪರಿಶೀಲನೆ ಆರಂಭಿಸಲಾಗುವುದು ಎಂದು ರವಿಕಾಂತೇಗೌಡ ಮಾಹಿತಿ ನೀಡಿದರು.
ಬಿಬಿಎಂಪಿ ಸೇರಿ ಸ್ಥಳೀಯ ಸಂಸ್ಥೆಯ ಅಧಿಕಾರಿಗೆ ಮಾಹಿತಿ
ಟ್ರಾಫಿಕ್ ನಿಯಂತ್ರಣ ಜೊತೆಗೆ ಬಾಯ್ತೆದಿರುವ ರಸ್ತೆಗುಂಡಿ ಹಾಗೂ ರಸ್ತೆಗಳಲ್ಲಿ ಮಳೆ ನೀರು ನಿಲ್ಲುವ ಒಟ್ಟು 104 ಜಾಗಗಳನ್ನು ಗುರುತಿಸಲಾಗಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಸೇರಿದಂತೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಯ ಅಧಿಕಾರಿಗಳೊಂದಿಗೆ ತಿಳಿಸಲಾಗಿದೆ ಎಂದು ಟ್ರಾಫಿಕ್ ಕಮೀಷನರ್ ಡಾ. ಬಿ. ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.
ಡಿಜಿಪಿ ನಿರ್ದೇಶನ ಪಾಲನೆಗೆ ಸೂಚನೆ
ಸಂಚಾರಿ ಪೊಲೀಸರಿಂದ ಎಲ್ಲೆಂದರಲ್ಲಿ ವಾಹನ ದಾಖಲಾತಿ ಪರಿಶೀಲನೆ ಸಂಬಂಧ ಈಗಾಗಲೇ ಡಿಜಿಪಿ ನಿರ್ದೇಶನ ನೀಡಿದ್ದಾರೆ. ಕಣ್ಣಿಗೆ ಕಾಣುವ ಸಂಚಾರಿ ನಿಯಮ ಉಲ್ಲಂಘನೆ ಕಂಡುಬಂದರೆ ಮಾತ್ರ ತಪಾಸಣೆ ನಡೆಸಬೇಕು. ಅನಗತ್ಯವಾಗಿ ವಾಹನ ದಾಖಲಾತಿ ಪರಿಶೀಲನೆ ನಡೆಸುವುದು ಕಂಡುಬಂದರೆ ಸಿಬ್ಬಂದಿ ವಿರುದ್ದ ಶಿಸ್ತುಕ್ರಮ ಜರುಗಿಸಲಾಗುವುದು ಎಂದರು.
ಸುಗಮ ಸಂಚಾರಕ್ಕೆ ಸಹಕಾರದ ಭರವಸೆ
ಟ್ರಾಫಿಕ್ ಪೊಲೀಸರು ನಗರದಲ್ಲಿ ಮಳೆ ಬಂದಾಗ ವಾಟರ್ ಲಾಗಿನ್ ಆಗುವ 54 ಸ್ಥಳಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರ ಬಗ್ಗೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಹೆಬ್ಬಾಳ, ಕೆಆರ್ ಪುರಂ ಜಂಕ್ಷನ್ ಗೊರಗುಂಟೆ ಪಾಳ್ಯದಲ್ಲಿನ ಟ್ರಾಫಿಕ್ ಬಗ್ಗೆ ಸಹ ಸಭೆಯಲ್ಲಿ ಚರ್ಚೆ ನಡೆದಿದೆ. ಈ ಭಾಗದಲ್ಲಿ ಟ್ರಾಫಿಕ್ ತಡೆಗಟ್ಟಲು ತಾತ್ಕಾಲಿಕ ಹಾಗೂ ಕ್ರಿಯಾ ಯೋಜನೆ ಮಾಡಲಾಗುವುದು. ಇಂದು (ಜೂನ್ 28) ರಾತ್ರಿ 11 ಗಂಟೆಗೆ ಪೊಲೀಸ್ ಇಲಾಖೆಯೊಂದಿಗೆ ತಪಾಸಣೆ ಮಾಡಲಿದ್ದೇವೆ. ಟ್ರಾಫಿಕ್ ಸುಲಲಿತ ಸಂಚಾರಕ್ಕೆ ಪೊಲೀಸ್ ಇಲಾಖೆಗೆ ಬೇಕಿರುವ ಸಹಕಾರ ಬಿಬಿಎಂಪಿ ಮಾಡಲಿದೆ ಎಂದು ತಿಳಿಸಿದರು.