ದಕ್ಷಿಣ ವಲಯದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರ ರೌಂಡ್ಸ್
ಬೆಂಗಳೂರು, ಮೇ 16: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ದಕ್ಷಿಣ ವಲಯದ ವ್ಯಾಪ್ತಿಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಸೋಮವಾರ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಪ್ರಗತಿ ಪರಿಶೀಲನೆ ನಡೆಸಿದರು.
ನಗರದ ಟೌನ್ ಹಾಲ್ ಬಳಿ ಆಟೋ ಟಿಪ್ಪರ್ ಮಸ್ಟರಿಂಗ್ ಪಾಯಿಂಟ್ ಹಾಗೂ ದಾಸಪ್ಪ ಆಸ್ಪತ್ರೆ ಆವರಣದಲ್ಲಿ ಪೌರಕಾರ್ಮಿಕರ ಮಸ್ಟಿಂಗ್ ಪಾಯಿಂಟ್ಗೆ ಭೇಟಿ ನೀಡಿ ಅವರ ಅಹವಾಲುಗಳನ್ನು ಆಲಿಸಿದರು.
ದಾಸಪ್ಪ ಹೆರಿಗೆ ಆಸ್ಪತ್ರೆಯನ್ನು 40 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಆಸ್ಪತ್ರೆಯಲ್ಲಿ 24 ಹಾಸಿಗೆಗಳ ಸಾಮರ್ಥ್ಯದ ಜೊತೆಗೆ ಪಾಲಿ ಕ್ಲಿನಿಕ್ ವ್ಯವಸ್ಥೆಯಿದೆ. ಆಸ್ಪತ್ರೆಯನ್ನು ದಿನದ 24 ಗಂಟೆಯೂ ತೆರೆಯಲಾಗುತ್ತಿದ್ದು, ಒಂದು ತಿಂಗಳಲ್ಲಿ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಿ ನಾಗರಿಕರ ಸೇವೆಗ ಒದಗಿಸಲು ಮುಖ್ಯ ಆಯುಕ್ತರು ಸೂಚನೆ ನೀಡಿದರು.
ಎಸ್ಜೆಪಿ ರಸ್ತೆಯ ಜಮಿಯಾ ಮಸೀದಿಯ ಬಳಿ ಜಲಮಂಡಳಿ ಇಲಾಖೆ ವತಿಯಿಂದ ಸೀವೇಜ್ ಲೈನ್ ಕೆಲಸ ನಡೆಯುತ್ತಿದ್ದು, ಈ ಲೈನ್ ರಸ್ತೆ ಮಾರ್ಗದಲ್ಲಿ ಹೋಗುವುದನ್ನು ಗಮನಿಸಿ ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ. ಆದ್ದರಿಂದ ಎಸ್. ಜೆ. ಪಿ ಉದ್ಯಾನವನದ ಮೂಲಕ ಸೀವೇಜ್ ಲೈನ್ ತೆಗೆದುಕೊಂಡು ಹೋಗಲು ಸೂಚಿಸಿ, ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ನಿರ್ದೇಶಿಸಿದರು.
ವಿಜಯ ನಗರ ರಾಜಕಾಲುವೆ ಪರಿಶೀಲನೆ
ವಿಜಯನಗರ ವಾರ್ಡ್ ಮನುವನದ ಬಳಿ ಮಳೆಯಾದರೆ ರಾಜಕಾಲುವೆಯಲ್ಲಿ ನೀರು ತುಂಬಿ ಹರಿಯುತ್ತದೆ. ಈ ಸಂಬಂಧ ವೃಷಭಾವತಿ ವ್ಯಾಲಿಯ ಬಿ-116 ರಾಜಕಾಲುವೆಯ ಕಾಮಗಾರಿ ಪ್ರಗತಿಯಲ್ಲಿದ್ದು, ರಾಜಕಾಲುವೆ ಸೇತುವೆಯ ಕೆಳಗಿರುವ ಪೈಪ್ ಅನ್ನು ಬದಲಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ಅಲ್ಲದೆ ಮನುವನದಿಂದ ಪೈಪ್ ಲೈನ್ ರಸ್ತೆ ಜಂಕ್ಷನ್ ವರೆಗೆ ಜಲಮಂಡಳಿ ವತಿಯಿಂದ ಕೊಳೆವೆ ನೀರಿನ ಲೈನ್ ರಾಜಕಾಲುವೆ ಮೂಲಕ ಹಾದು ಹೋಗುತ್ತಿದ್ದು, ಮಳೆಗಾಲ ಪ್ರಾರಂಭಕ್ಕೂ ಮುನ್ನ ಕೆಲಸ ಪೂರ್ಣಗೊಳಿಸಲು ಜಲಮಂಡಳಿ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದರು.
ಗಾಳಿ ಆಂಜನೇಯ ದೇವಸ್ಥಾನದ ಬಳಿ ರಾಜಕಾಲುವೆ ಪರಿಶೀಲನೆ:
ಗಾಳಿ ಆಂಜನೇಯ ದೇವಸ್ಥಾನದ ಬಳಿ ವೃಷಭಾವತಿ ವ್ಯಾಲಿ ಪರಿಶೀಲನೆ ನಡೆಸಿ, ಸೇತುವೆಯ ಕೆಳಭಾಗದಲ್ಲಿ ಹೂಳು ತೆಗೆಯಲು ಸೂಚನೆ ನೀಡಿದರು. ಜೊತೆಗೆ ಅಕ್ಕ-ಪಕ್ಕದ ಪ್ರದೇಶದಲ್ಲಿ ಬರುವ ರಸ್ತೆ ಬದಿಯ ಚರಂಡಿಗಳಲ್ಲಿ ಹೂಳು ಎತ್ತಿ ವೃಷಭಾವತಿ ವ್ಯಾಲಿಗೆ ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಾಯಂಡಹಳ್ಳಿ ಜಂಕ್ಷನ್ ಬಳಿ ರಾಜಕಾಲುವೆಯ ಪ್ರಗತಿ ಕಾಮಗಾರಿಯನ್ನು ಪರಿಶೀಲಿಸಿ ಮಳೆಗಾಲಕ್ಕೂ ಮುಂಚಿತವಾಗಿ ಪೂರ್ಣಗೊಳಿಸಲು ತಿಳಿಸಿದರು. ಇದೇ ವೇಳೆ ರಾಜಕಾಲುವೆಯಲ್ಲಿ ತೆಗೆದ ಹೂಳು ಸ್ಥಳದಲ್ಲೇ ಇರುವುದನ್ನು ಕಂಡು ಅದನ್ನು ಕೂಡಲೆ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಡಿಸೋಜಾ ನಗರದ ಸ್ಕೈ ಲೈನ್ ಅಪಾರ್ಟ್ಮೆಂಟ್ ಬಳಿ ಕೊಳಚೆ ನೀರು ನೇರವಾಗಿ ರಾಜಕಾಲುವೆಗೆ ಸೇರುತ್ತಿರುವುದನ್ನು ಕಂಡು ಸಂಬಂಧಪಟ್ಟ ಜಲಮಂಡಳಿ ಅಧಿಕಾರಿಗಳಿಗೆ ನೋಟೀಸ್ ನೀಡಲು ಅಧಿಕಾರಿಗಳಿಗೆ ತಿಳಿಸಿದರು. ರಾಜಕಾಲುವೆಗೆ ಕೊಳಚೆ ನೀರು ಹರಿಯದಂತೆ ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಜಲಮಂಡಳಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ವಿವೇಕಾನಂದ ಉದ್ಯಾನವನ ಪರಿಶೀಲನೆ
ಗಿರಿನಗರ ವಾರ್ಡ್ ವಿವೇಕಾನಂದ ಉದ್ಯಾನವವನ್ನು 5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ ವಾಯುವಿಹಾರ ಮಾರ್ಗ, ಮಕ್ಕಳ ಆಟಿಕೆ, ಜಿಮ್, 20 ಅಡಿ ಎತ್ತರದ 50 ಮೀಟರ್ ಆರ್. ಸಿ. ಸಿ ವಾಲ್, ಯೋಗಾಸನ ಸ್ಥಳದಲ್ಲಿ ಕೆನೊಪಿ ಅಳವಡಿಕೆ ಹಾಗೂ ಉದ್ಯಾನವನದಲ್ಲಿ ಸುಂದರೀಕರಣ ಕೆಲಸ ನಡೆಯುತ್ತಿದ್ದು, ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿದ್ಯಾಪೀಠ ವೃತ್ತ ಸಿಟಿ ಬೆಡ್ ನಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ವಿವಿಧ ಇಲಾಖೆಗಳ ಕಚೇರಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಇದೇ ಸ್ಥಳದಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ಕ್ರೀಡೆ, ಸ್ಕೇಟಿಂಗ್ ಟ್ರಾಕ್ ನವೀಕರಣ, ಮಳೆಗಾದಲ್ಲೂ ಸ್ಕೇಟಿಂಗ್ ಆಡಲು ಕೆನೊಪಿ ಅಳವಡಿಕೆ, ಪ್ರೇಕ್ಷಕರು ಕೂರುವ ಸ್ಥಳಕ್ಕೆ ಕೆನೊಪಿ ಅಳವಡಿಕೆ ಕಾಮಗಾರಿಯ ಪರಿಶೀಲನೆ ನಡೆಸಿದರು.
ರಾಜಕಾಲುವೆ ಪರಿಶೀಲನೆ
ಏಪ್ರಿಲ್ 14 ರಂದು ಕಾಮಾಕ್ಯ ಚಿತ್ರ ಮಂದಿರದ ಬಳಿ ಸುಮಾರು 70 ಮಿ. ಮೀ. ಮಳೆಯಾದ ಹಿನ್ನೆಲೆಯಲ್ಲಿ ರಾಜಕಾಲುವೆಯಲ್ಲಿ ನೀರಿನ ಹರಿವಿನ ಮಟ್ಟ ಹೆಚ್ಚಾಗಿ ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗಿತ್ತು. ಈ ಸಂಬಂಧ ಇಂದು ಸ್ಥಳ ಪರಿಶೀಲನೆ ನಡೆಸಿ ರಸ್ತೆ ಕೆಳಗೆ ಹಾದುಹೋಗಿರುವ ರಾಜಕಾಲುವೆ ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸಿ ಸ್ಥಳದಲ್ಲಾಗುವ ಸಮಸ್ಯೆಯನ್ನು ಬಗೆಹರಿಸಲು ರಾಜಕಾಲುವೆ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗಣೇಶ ಮಂದಿರ ವಾರ್ಡ್ನಲ್ಲಿ ಬಿಬಿಎಂಪಿಯ ಅನುದಾನ 12 ಕೊಟಿ ರೂ. ಹಾಗೂ ನಗರೋತ್ಥಾನ ಅನುದಾನ 12 ಕೋಟಿ ರೂ. ಕೋಟಿ ರೂ. ವೆಚ್ಚದಲ್ಲಿ 1 ಲಕ್ಷ 20 ಸಾವಿರ ಚ.ಅಡಿಯಲ್ಲಿ ತಳಮಹಡಿ, ಜಿ + ಮೂರು ಅಂತಸ್ತಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ. ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ಸಾಮರ್ಥ್ಯವಿದ್ದು, ಡಾಯಾಲಿಸಿಸ್ ಸೆಂಟರ್, ಡೆಂಟಲ್ ಕ್ಲೀನಿಕ್ ಸೇರಿದಂತೆ ಇನ್ನಿತರೆ ಸೌಲಭ್ಯಗಳು ಲಭ್ಯವಿರಲಿವೆ.
ಜೆಪಿ ನಗರದಲ್ಲಿ ರಾಜಕಾಲುವೆ ಪರಿಶೀಲನೆ
ಜೆ. ಪಿ. ನಗರ 12ನೇ ಮುಖ್ಯ ರಸ್ತೆ, 15ನೇ ಕ್ರಾಸ್, 5ನೇ ಹಂತದ ಬಳಿ ಮಳೆಯಾದರೆ ರಾಜಕಾಲುವೆಯಲ್ಲಿ ನೀರು ಹಿಮ್ಮುಖವಾಗಿ ಚಲಿಸಿ ರಸ್ತೆ ಮೇಲೆ ನೀರು ನಿಂತು ಮನೆಗಳಿಗೆ ನೀರು ನುಗ್ಗುತ್ತದೆ. ರಾಜಕಾಲುವೆಯ ಮೇಲ್ಭಾಗವನ್ನು ಸಂಪೂರ್ಣವಾಗಿ ಮುಚ್ಚಿದ್ದು, ಅದನ್ನು ಅಲ್ಲಿ ತೆರೆದು ಚೇಂಬರ್ ಮಾಡಿಕೊಂಡು ಹೂಳನ್ನು ತೆಗೆದು ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿ. ಜೊತೆಗೆ ರಸ್ತೆ ಮೇಲೆ ನೀರು ನಿಲ್ಲುವುದನ್ನು ತಪ್ಪಿಸಲು ತಾತ್ಕಾಲಿಕವಾಗಿ ಪಂಪ್ ಅನ್ನು ಇಟ್ಟು ಮಳೆಯಾದ ಕೂಡಲೆ ನೀರು ತೆರವು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೋರಮಂಗಲ ವಾರ್ಡ್ ವ್ಯಾಪ್ತಿಯಲ್ಲಿ ಖಾಸಗಿ ಸಂಸ್ಥೆ ಸಯೋಗದಲ್ಲಿ ನಡೆಯುತ್ತಿರುವ ಕಸ-ರಸ ಘಟಕಕ್ಕೆ ಭೇಟಿ ನೀಡಿ ಜೈವಿಕ ಅನಿಲ ಘಟಕ, ಕಸ-ರಸ ಘಟಕ, ಥರ್ಮಕೋಲ್ ಹಾಗೂ ಹಾಸಿಗೆ ಪುನರ್ಬಳಕೆ ಘಟಕ, ಒಣ ತ್ಯಾಜ್ಯ ಸಂಗ್ರಹಣಾ ಘಟಕ, ಬಯೋಗ್ಯಾಸ್ ಕಂಟೈನರ್ ಘಟಕದ ಕಾರ್ಯವೈಖರಿಯನ್ನು ಪರಿಶೀಲನೆ ನಡೆಸಿದರು.
Recommended Video