ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ಶೀಘ್ರ ಪ್ರತ್ಯೇಕ ಕಾನೂನು!
ಬೆಂಗಳೂರು, ಸೆ. 09: ಬೆಂಗಳೂರಿನ ಸಮಸ್ಯೆಗಳನ್ನು ನೀಗಿಸಲು ರಾಜ್ಯ ಸರ್ಕಾರ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಕೋವಿಡ್ ಜೊತೆಗೆ ಹಲವು ಸಮಸ್ಯೆಗಳನ್ನು ಬೆಂಗಳೂರು ಎದುರಿಸುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದ ಎಲ್ಲರಿಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಸಾಧ್ಯವಾಗುತ್ತಿಲ್ಲ. ಜೊತೆಗೆ ಅತ್ಯಂತ ವೇಗವಾಗಿ ಬೆಂಗಳೂರು ಬೆಳೆಯುತ್ತಿದೆ. ಕೊರೊನಾ ವೈರಸ್ ಆತಂಕದ ಹಿನ್ನೆಲೆ ಬೆಂಗಳೂರು ತೊರೆದವರೂ ಬೆಂಗಳೂರಿಗೆ ಹಿಂದಿರುಗುತ್ತಿದ್ದಾರೆ.
ಬೇರೆ ರಾಜ್ಯಗಳಿಂದ ವಲಸೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರಿಂದಾಗಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಕಷ್ಟವಾಗುತ್ತಿದೆ. ಸದ್ಯ ಇರುವ ಕರ್ನಾಟಕ ಮುನ್ಸಿಪಾಲ್ ಕಾರ್ಪೊರೇಶನ್ ಕಾಯ್ದೆ 1976ರ ಪ್ರಕಾರ ಬೆಂಗಳೂರು ಮಹಾನಗರದ ನಿಯಂತ್ರಣ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ರಾಜ್ಯ ಸರ್ಕಾರ ಬಂದಿದೆ. ಬೆಂಗಳೂರು ಗಲಭೆ ಪ್ರಕರಣದ ಬಳಿಕ ಬೆಂಗಳೂರು ಮಹಾನಗರದ ಅಭಿವೃದ್ಧಿ ಹಾಗೂ ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ಹೊಸ ಕಾನೂನು ರೂಪಿಸಲಾಗುತ್ತಿದೆ.
ಕೋವಿಡ್ ಚಾಲೆಂಜ್ ಗೆದ್ದ ಬೆಂಗಳೂರಿನ ಸ್ಟಾರ್ಟ್ಪ್ ಕಂಪನಿಗಳು!
ಬೆಂಗಳೂರಿಗೆ ಪ್ರತ್ಯೇಕ ಕಾನೂನು
ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಮತ್ತಿತರೆ ಮೂಲಭೂತ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ನಿಟ್ಟಿನಲ್ಲಿ ರಾಜಧಾನಿ ಬೆಂಗಳೂರು ನಗರಕ್ಕೆ ಪ್ರತ್ಯೇಕ ಕಾಯ್ದೆಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ಸರಕಾರ ಹೆಜ್ಜೆಗಳನ್ನಿಡುತ್ತಿದೆ. ಎಲ್ಲರಿಗೂ ಗೊತ್ತಿರುವಂತೆ ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ಇದು ಇತರೆ ನಗರಗಳಂತೆ ಅಲ್ಲ. ದಿನೇದಿನೆ ರಾಜ್ಯದ ಮೂಲೆಮೂಲೆಗಳಿಂದ, ಇತರೆ ರಾಜ್ಯಗಳಿಂದ ಇಲ್ಲಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಹೀಗಾಗಿ ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ಅಗತ್ಯವಾಗಿದೆ. ಈಗಾಗಲೇ ಅದಕ್ಕೆ ಸಂಬಂಧಿಸಿದ ಕೆಎಂಸಿ ಕಾಯ್ದೆ ವ್ಯಾಪ್ತಿಯಲ್ಲಿ ನಗರವನ್ನು ನಿರ್ವಹಿಸಲು ಸಾಧ್ಯವಿಲ್ಲ. ಈಗಾಗಲೇ ಮಸೂದೆಯನ್ನು ಮಂಡಿಸಲಾಗಿದ್ದು, ಅದು ಜಂಟಿ ಸದನ ಸಮಿತಿ ಪರಿಶೀಲನೆಯಲ್ಲಿದೆ. ಸದನದ ಒಪ್ಪಿಗೆ ಪಡೆದ ನಂತರ ಅದನ್ನು ಕಾಯ್ದೆಯಾಗಿ ಜಾರಿ ಮಾಡಲಾಗುವುದು ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ಬೆಂಗಳೂರಿನಲ್ಲಿ ಮಾಹಿತಿ ನೀಡಿದ್ದಾರೆ.
ಅತ್ಯುತ್ತಮ ಯೋಜನೆ ಬೇಕು
ಬೆಂಗಳೂರು ದೇಶದಲ್ಲಿಯೇ ಅತಿದೊಡ್ಡ ಉದ್ಯೋಗ ತಾಣವೂ ಆಗುತ್ತಿದೆ. ಹೀಗಾಗಿ ನಗರಕ್ಕೆ ಅತ್ಯುತ್ತಮ ಪ್ಲ್ಯಾನಿಂಗ್ ಬೇಕು, ಉತ್ತಮ ಸಹಕಾರ ಬೇಕು ಹಾಗೂ ಯೋಜನೆಗಳನ್ನು ಜಾರಿ ಮಾಡಲು ಅತ್ಯುತ್ತಮವಾದ ವ್ಯವಸ್ಥೆ ಬೇಕು. ಇವೆಲ್ಲ ಹಿನ್ನೆಲೆಯಲ್ಲಿ ನಗರಕ್ಕೆ ಪ್ರತ್ಯೇಕ ಕಾಯ್ದೆ ತರಲು ಸರಕಾರ ಮುಂದಾಗಿದೆ ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ಮಾಹಿತಿ ನೀಡಿದರು.
ಈಗಾಗಲೇ ಈ ಬಗ್ಗೆ ಬೆಂಗಳೂರು ಎಲ್ಲ ಜನ ಪ್ರತಿನಿಧಿಗಳ ಜತೆ ವ್ಯಾಪಕ ಸಮಾಲೋಚನೆ ನಡೆಸಲಾಗಿದೆ. ಹೊಸ ಕಾಯ್ದೆಗೆ ಎಲ್ಲರ ಬೆಂಬಲವೂ ಬೇಕಿದೆ ಎಂದು ಅವರು ಹೇಳಿದರು.
ಬಿಬಿಎಂಪಿ ಚುನಾವಣೆ
ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ರಾಜ್ಯ ಬಿಜೆಪಿ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದು ಆರೋಪ ಎದುರಾಗಿದೆ. ಬಿಬಿಎಂಪಿ ಚುನಾವಣೆ ಮುಂದೂಡುವ ಯೋಚನೆ ಸರ್ಕಾರಕ್ಕೆ ಇಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಅವರೂ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಬಿಬಿಎಂಪಿ ಚುನಾವಣೆ ಬಗ್ಗೆ ಸರಕಾರದ ಪಾತ್ರವೇನೂ ಇಲ್ಲ. ಚುನಾವಣೆ ಆಯೋಗ ತನ್ನ ಕೆಲಸವನ್ನು ತಾನು ಮಾಡಿಕೊಂಡು ಹೋಗುತ್ತಿದೆ. ಅದಕ್ಕೆ ಬೇಕಾದ ಸೌಕರ್ಯಗಳನ್ನಷ್ಟೇ ಸರಕಾರ ಮಾಡಿಕೊಡುತ್ತಿದೆ ಎಂದರು.
ರಾಗಿಣಿ ಬಿಜೆಪಿ ಸದಸ್ಯೆ ಅಲ್ಲ:
ಮಾದಕ ವಸ್ತು ಹಗರಣಕ್ಕೆ ಸಿಲುಕಿ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ಅವರು ಬಿಜೆಪಿ ಸದಸ್ಯೆ ಅಲ್ಲ. ಹೀಗಾಗಿ ಅವರನ್ನು ಪಕ್ಷದಿಂದ ಅಮಾನತು ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಇದು ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಡ್ರಗ್ಸ್ನ ಮೂಲ ಯಾವುದು? ಅದು ಎಲ್ಲಿಂದ ಬರುತ್ತಿದೆ? ಯಾರು ಯಾರು ಬಳಕೆ ಮಾಡುತ್ತಿದ್ದಾರೆ? ಎಂಬ ಅಂಶಗಳ ಬಗ್ಗೆ ಪೊಲೀಸರು ಆಳವಾದ ತನಿಖೆ ಮಾಡುತ್ತಿದ್ದಾರೆ. ಆದಷ್ಟು ಬೇಗ ತನಿಖೆಯನ್ನು ಪೂರ್ಣಗೊಳಿಸಿ ಈ ಪೀಡೆಗೆ ಇತಿಶ್ರೀ ಹಾಡಲಾಗುವುದು.
ರಾಗಿಣಿ ಅವರು ಬಿಜೆಪಿ ಪರವಾಗಿ ಕೆ.ಆರ್. ಪೇಟೆ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದು ಹೌದು. ಹಾಗಂತ ಅವರು ನಮ್ಮ ಪಕ್ಷದ ಸದಸ್ಯೆಯಂತೂ ಅಲ್ಲ. ಚುನಾವಣೆ ಬಂದಾಗ ನಟ ನಟಿಯರು ವಿವಿಧ ಪಕ್ಷಗಳ ಪರವಾಗಿ ಪ್ರಚಾರ ಮಾಡುವುದು ಸಾಮಾನ್ಯ. ರಾಗಿಣಿ ಪಕ್ಷದ ಪರ ಪ್ರಚಾರ ಮಾಡಿದ್ದಾರೆ ಅಂದ ಮಾತ್ರಕ್ಕೆ ಅವರು ಮಾಡಿದ್ದೆಲ್ಲವನ್ನೂ ಸರಿ ಎನ್ನಲಾಗುತ್ತದೆಯೇ? ಯಾರೇ ಮಾಡಿದರೂ ತಪ್ಪು ತಪ್ಪೇ ಎಂದು ಡಾ. ಅಶ್ವಥ್ ನಾರಾಯಣ್ ಹೇಳಿದರು.
ಉನ್ನತ ಶಿಕ್ಷಣ ಸಂಸ್ಥೆಗಳು ಅದರಲ್ಲೂ ಎಂಜಿನೀಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತು ವ್ಯಸನ ಇದೆ ಎಂದು ಕೆಲವರು ಹೇಳುತ್ತಿದ್ದಾರೆ. ಈಗಾಗಲೇ ಈ ಬಗ್ಗೆ ಸರಕಾರ ಕಠಿಣ ಮುನ್ನೆಚ್ಚರಿಕೆ ವಹಿಸಿದೆ. ಒಂದು ವೇಳೆ ಎಲ್ಲಾದರೂ ಅಂಥದ್ದು ಕಂಡು ಬಂದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಡಾ. ಅಶ್ವಥ್ನಾರಾಯಣ ಹೇಳಿದರು.
Recommended Video