ಬೆಂಗಳೂರಿಗರು ಗಣೇಶ ಮೂರ್ತಿ ವಿಸರ್ಜನೆ ಮಾಡುವುದು ಎಲ್ಲಿ?: ತಿಳಿಯಿರಿ ಮಾಹಿತಿ
ಬೆಂಗಳೂರು, ಆಗಸ್ಟ್ 30: ಬೆಂಗಳೂರಿನಲ್ಲಿ ಅದ್ಧೂರಿ ಗಣೇಶ ಚತುರ್ಥಿ ಆಚರಣೆಗೆ ಎಲ್ಲಾ ಸಿದ್ಧತೆಗಳು ನಡೆದಿವೆ. ಸಿಲಿಕಾನ್ ಸಿಟಿಯ ಮನೆಗಳು, ರಸ್ತೆಗಳು ಮತ್ತು ಕಚೇರಿಗಳು ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಕೂರಿಸುವ ಗಣೇಶ ಮೂರ್ತಿಗಳ ವಿಸರ್ಜನೆಗೆ ಬಿಬಿಎಂಪಿ ವಿಶೇಷ ವ್ಯವಸ್ಥೆ ಕಲ್ಪಿಸಿದೆ.
ಬೆಂಗಳೂರಿನ 458 ಕಡೆಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ. ಕೆಲವು ಪ್ರದೇಶಗಳಲ್ಲಿ ಮನೆಗಳಿಗೆ ಹತ್ತಿರವಾಗುವ ರೀತಿಯಲ್ಲಿ ಗಣೇಶ ವಿಸರ್ಜನೆಗೆ ತಾತ್ಕಾಲಿಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಬಿಬಿಎಂಪಿಯ 27 ವಿಧಾನಸಭಾ ಕ್ಷೇತ್ರಗಳ 8 ವಲಯಗಳಲ್ಲಿ ಒಟ್ಟು 421 ತಾತ್ಕಾಲಿಕ ಸಂಚಾರಿ ಟ್ಯಾಂಕರ್ಗಳನ್ನು ವ್ಯವಸ್ಥೆ ಮಾಡಲಾಗಿದೆ. 5 ಇಂಚಿನಿಂದ 3 ಅಡಿ ಎತ್ತರದವರೆಗಿನ ಎಲ್ಲ ಮಣ್ಣಿನ ಗಣೇಶ ಮೂರ್ತಿಗಳನ್ನು ಈ ಮೊಬೈಲ್ ಟ್ಯಾಂಕರ್ಗಳಲ್ಲಿ ವಿಸರ್ಜನೆ ಮಾಡುವುದಕ್ಕೆ ಅವಕಾಶ ಇರುತ್ತದೆ. ಇನ್ನು ಪ್ರತ್ಯೇಕ ಗಾತ್ರದ ಮೂರ್ತಿಗಳನ್ನು ಯಾವ ರೀತಿಯಲ್ಲಿ, ಎಲ್ಲಿ ಮತ್ತು ಹೇಗೆ ವಿಸರ್ಜಿಸುವುದಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳಿರಿ.
ದೊಡ್ಡ ಗಾತ್ರದ ಮೂರ್ತಿ ವಿಸರ್ಜನೆಗೆ ತಾತ್ಕಾಲಿಕ ಕಲ್ಯಾಣಿ
ಬೆಂಗಳೂರಿನಲ್ಲಿ ದೊಡ್ಡ ಗಾತ್ರದ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವುದಕ್ಕಾಗಿ ಒಟ್ಟು 37 ತಾತ್ಕಾಲಿಕ ಕಲ್ಯಾಣಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಪೂರ್ವ ವಲಯದಲ್ಲಿ ಹಲಸೂರು ಕೆರೆಯಲ್ಲಿ ಕಲ್ಯಾಣಿ ನಿರ್ಮಾಣ ಮಾಡಲಾಗಿದೆ. 107 ಮೊಬೈಲ್ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಪಶ್ಚಿಮ ವಲಯದಲ್ಲಿ ಸ್ಯಾಂಕಿ ಕೆರೆ ಕಲ್ಯಾಣಿ ಹಾಗೂ 48 ಮೊಬೈಲ್ ಟ್ಯಾಂಕರ್ ವ್ಯವಸ್ಥೆ, ದಕ್ಷಿಣ ವಲಯದ ಯಡಿಯೂರು ಕೆರೆ ಹಾಗೂ ಎಸಿಐ ಲೇಔಟ್ನಲ್ಲಿಯಲ್ಲಿ ಕಲ್ಯಾಣಿ, 51 ಟ್ಯಾಂಕರ್, ದಾಸರಹಳ್ಳಿ ವಲಯದ ಚೊಕ್ಕಸಂದ್ರ ಕೆರೆದಲ್ಲಿ ಕಲ್ಯಾಣಿ ಹಾಗೂ 18 ಮೊಬೈಲ್ ಟ್ಯಾಂಕರ್ ಸಂಚರಿಸಲಿವೆ.
ಮಹದೇವಪುರ, ಬೊಮ್ಮನಹಳ್ಳಿ ವಲಯದಲ್ಲಿ ವ್ಯವಸ್ಥೆ
ಬೆಂಗಳೂರಿನ ಬೊಮ್ಮನಹಳ್ಳಿ ವಲಯದಲ್ಲಿ ಕೂಡ್ಲು ದೊಡ್ಡಕೆರೆ, ಸಿಂಗಸಂದ್ರ ಕೆರೆ, ಅರಕೆರೆ ಕೆರೆಯಲ್ಲಿ ಕಲ್ಯಾಣಿ ಹಾಗೂ 59 ಮೊಬೈಲ್ ಟ್ಯಾಂಕರ್ ವ್ಯವಸ್ಥೆಯಿದೆ. ಅದೇ ರೀತಿ ಮಹದೇವಪುರ ವಲಯದಲ್ಲಿ ಬಿ.ನಾರಾಯಣಪುರ ಕೆರೆ, ವಿಭೂತಿಪುರ, ಚೆಲ್ಕೆರೆ, ಕಲ್ಕೆರೆ, ಮೇಡಹಳ್ಳಿ, ಕಾಡುಗೋಡಿ ಕಾಶಿ ವಿಶ್ವನಾಥ ದೇವಸ್ಥಾನ, ವಾಗ್ದೇವಿ ವಿಲಾಸ್ ರಸ್ತೆ, ಕೈಕೊಂಡ್ರಹಳ್ಳಿ ಕೆರೆ ಮತ್ತು ದೇವರಬೀಸನಹಳ್ಳಿ ಕಲ್ಯಾಣಿ ಹಾಗೂ 21 ಮೊಬೈಲ್ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ.
ಯಲಹಂಕ, ಆರ್ಆರ್ ನಗರದಲ್ಲಿ ವಿಸರ್ಜನೆಗೆ ವ್ಯವಸ್ಥೆ ಹೇಗಿದೆ?
ರಾಜರಾಜೇಶ್ವರಿ ನಗರ ವಲಯದ ಮಾದವಾರ, ಹೇರೋಹಳ್ಳಿ, ಉಲ್ಲಾಳ, ದುಬಾಸಿಪಾಳ್ಯ, ಗಾಂಧಿನಗರ, ಕೋಣಸಂದ್ರಕೆರೆ, ಜೆ.ಪಿ. ಪಾರ್ಕ್ ಆಟದ ಮೈದಾನದಲ್ಲಿ ಕಲ್ಯಾಣಿ ಹಾಗೂ 113 ಮೊಬೈಲ್ ಟ್ಯಾಂಕರ್ ವ್ಯವಸ್ಥೆಯಿದೆ. ಅದೇ ರೀತಿ ಯಲಹಂಕ ವಲಯದ ಹೆಬ್ಬಾಳ, ಯಲಹಂಕ, ಅಟ್ಟೂರು, ಅಲ್ಲಾಳಸಂದ್ರ, ಕೋಗಿಲು, ಜಕ್ಕೂರು, ರಾಚೇನಹಳ್ಳಿ ಕೆರೆ, ಸಹಕಾರನಗರ ಗಣಪತಿ ದೇವಸ್ಥಾನ, ದೊಡ್ಡಬೊಮ್ಮಸಂದ್ರ ಕೆರೆ, ಬಿಇಎಲ್ ಲೇಔಟ್ನ ರಾಘವೇಂದ್ರ ಸ್ವಾಮಿ ಮಠ, ಸಿಂಗಾಪುರ ಕೆರೆಯಕಲ್ಯಾಣಿ ಹಾಗೂ 4 ಮೊಬೈಲ್ ಟ್ಯಾಂಕರ್ ವ್ಯವಸ್ಥೆಯನ್ನು ಪಾಲಿಕೆ ಮಾಡಿದೆ.
ಬೆಸ್ಕಾಂ ಅನುಮತಿ ಕಡ್ಡಾಯ
ಬೆಂಗಳೂರಿನಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆ ಮಾಡುವುದಕ್ಕೆ ಬೆಸ್ಕಾಂ ಇಲಾಖೆಯಿಂದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ತಾಲೂಕು ಉಪ ವಿಭಾಗದ ವ್ಯಾಪ್ತಿಯಲ್ಲಿ ಗಣೇಶೋತ್ಸವ ಆಚರಣೆ ಮಾಡುವ ಸಾರ್ವಜನಿಕರಿಗೆ ಹಾಗೂ ಆಯೋಜಕರಿಗೆ ಬೆವಿಕಂ ಇಲಾಖೆಯಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಲು ಕೆಲವು ನಿದೇರ್ಶನಗಳನ್ನು ಪಾಲಿಸುವಂತೆ ಬೆಸ್ಕಾಂ ತಿಳಿಸಿದೆ.