ಸಿಗ್ನಲ್ ಬ್ಯಾಟರಿ ಕಳ್ಳರ ಹಾವಳಿ: ಬೆಂಗಳೂರು ಪೊಲೀಸರಿಗೆ ಹೊಸ ತಲೆನೋವು
ಬೆಂಗಳೂರು, ಏಪ್ರಿಲ್ 20 : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಸಿಗ್ನಲ್ನಲ್ಲಿರುವ ಬ್ಯಾಟರಿ ಕದಿಯುವ ಕಳ್ಳರ ಸಂಖ್ಯೆ ಹೆಚ್ಚಾಗಿದೆ. ನಗರದ ಹೃದಯಭಾಗದಲ್ಲಿರುವ ಬಸವೇಶ್ವರ ಸರ್ಕಲ್ನಲ್ಲಿದ್ದ ಸಿಗ್ನಲ್ ಬ್ಯಾಟರಿಯನ್ನ ಕಳ್ಳರು ಕದ್ದು ಪರಾರಿಯಾಗಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಬೈಕ್, ಕಾರುಗಳನ್ನ ಕಳ್ಳತನ ಮಾಡುತ್ತಿದ್ದ ಖದೀಮರು ಈಗ ಸಿಗ್ನಲ್ ಲೈಟ್ನ ಬ್ಯಾಟರಿಗಳನ್ನ ಕದಿಯಲು ಶುರು ಮಾಡಿದ್ದಾರೆ. ಸದ್ಯ ಪೊಲೀಸರಿಗೆ ಕಳ್ಳರನ್ನ ಹುಡುಕುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕಳೆದ ಎರಡು ತಿಂಗಳ ಹಿಂದೆ ಇದೇ ರೀತಿ ಬ್ಯಾಟರಿ ಕಳ್ಳತನ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದ ದಂಪತಿ ಸಿಕಂದರ್ ಹಾಗೂ ನಜ್ಮಾಳನ್ನ ಅಶೋಕ ನಗರ ಪೊಲೀಸರು ಬಂಧಿಸಿ ಅವರ ಬಳಿ ಇದ್ದ 230 ಬ್ಯಾಟರಿಗಳನ್ನು ಜಪ್ತಿ ಮಾಡಿದ್ದರು. ನಂತರ ಇಬ್ಬರನ್ನು ಪರಪ್ಪನ ಅಗ್ರಹಾರಕ್ಕೆ ಕಳಿಸಿದ್ದರು. ಆದಾದ ಕೆಲವೇ ದಿನಗಳಲ್ಲಿ ಮತ್ತೆ ಬ್ಯಾಟರಿ ಕಳ್ಳತನವಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ.
ಹೈಗ್ರೌಂಡ್ ಪೊಲೀಸ್ ಸ್ಟೇಷನ್ ಮುಖ್ಯ ಪೇದೆಯಾದ ಅಬ್ಬಾಸ್ಅಲಿ ಬಸವೇಶ್ವರ ಸರ್ಕಲ್ನಲ್ಲಿ ಕರ್ತವ್ಯದಲ್ಲಿದ್ದರು. ಈ ವೇಳೆ ಸಿಗ್ನಲ್ ವರ್ಕ್ ಆಗದೇ ಇರುವುದನ್ನು ಗಮನಿಸಿದ ಅವರು ಕೂಡಲೇ ವಿಧಾನಸೌಧದ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಸಿಗ್ನಲ್ ನಲ್ಲಿದ್ದ ಬ್ಯಾಟರಿ ತುಂಬಿರುವ ಬಾಕ್ಸ್ ತೆರದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಒಂದು ಬ್ಯಾಟರಿ ಇಲ್ಲದೆ ಇರುವುದು ಗೊತ್ತಾಗಿದೆ. ಕಳುವಾದ ಬ್ಯಾಟರಿ ಹೆಸರು ಅಮಾರಾನ್ 12V 75AH ಆಗಿದ್ದು, ಅದರ ಬೆಲೆ 7 ಸಾವಿರ ರೂಪಾಯಿ ಆಗಿದೆ.
ಸದ್ಯ ವಿಧಾನಸೌಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಖದೀಮರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಸದ್ಯ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ದಂಪತಿಯನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು. ಮತ್ತೆ ನಗರದಲ್ಲಿ ಎರಡು ಮೂರು ಬ್ಯಾಟರಿಗಳು ಕಳ್ಳತನವಾಗಿವೆ. ಈ ಕೃತ್ಯದ ಹಿಂದೆ ಹೊಸ ಕಳ್ಳರ ಕೈಚಳಕವಿದೆ ಎಂಬ ಶಂಕೆ ಇದೆ. ಈ ಬ್ಯಾಟರಿಗಳನ್ನು ಸಾಮಾನ್ಯವಾಗಿ ಗುಜರಿ ಅಂಗಡಿಗಳಲ್ಲಿ 2 ಸಾವಿರದಿಂದ ಮೂರು ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಹೀಗಾಗಿ ಈಗ ಕದ್ದಿರುವ ಬ್ಯಾಟರಿಗಳು ಗುಜರಿ ಅಂಗಡಿಗಳಲ್ಲಿ ಮಾರಾಟ ಮಾಡಲಾಗಿದೆಯೇ ಎಂದು ಪರಿಶೀಲಿಸಲು ನಮ್ಮ ತಂಡ ನಗರದಲ್ಲಿರುವ ಗುಜರಿ ಅಂಗಡಿಗಳಿಗೆ ಭೇಟಿ ನೀಡುತ್ತಿದೆ ಅಂತ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Recommended Video
ಸದ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಕಳ್ಳರ ಹಾವಳಿಯನ್ನ ನಿಯಂತ್ರಿಸಲು ಪೊಲೀಸರು ಸಹ ಹರಸಾಹಸ ಪಡಬೇಕಾದ ಅನಿರ್ವಾಯ ಸ್ಥಿತಿ ಎದುರಾಗಿದೆ. ಸರ, ಬೈಕ್, ಕಾರುಗಳನ್ನ ಕಳ್ಳತನ ಮಾಡುತ್ತಿದ್ದ ಖದೀಮರು ಈಗ ಸಿಗ್ನಲ್ ಬ್ಯಾಟರಿ ಮೇಲೂ ಕಣ್ಣಾಕಿದ್ದು, ಈಗಾಗಲೇ ನಗರದ ಎಷ್ಟೋ ಕಡೆ ಈ ಕೃತ್ಯ ಎಸಗಿದ್ದಾರೆ ಎಂಬುದನ್ನ ಪೊಲೀಸರು ಪರಿಶೀಲನೆ ನಡೆಸಬೇಕಿದೆ. ಹಾಗೂ ಈ ಕೃತ್ಯಗಳಿಗೆ ಬ್ರೇಕ್ ಹಾಕುವ ಕಠಿಣ ಕ್ರಮಗಳನ್ನ ಜಾರಿಗೆ ತರಬೇಕಿದೆ.