ಹಿಮಾಲಯ ಚಾರಣಕ್ಕೆ ಹೋದ ಬೆಂಗಳೂರು ವೈದ್ಯ ಕಣ್ಮರೆ!
ಬೆಂಗಳೂರು, ಜೂ. 27: ಹಿಮಾಲಯ ಪರ್ವತವೇರಲು ನೇಪಾಳಕ್ಕೆ ಹೋಗಿದ್ದ ಮಣಿಪಾಲ್ ಆಸತ್ರೆಯ ವೈದ್ಯ ನಾಪತ್ತೆಯಾಗಿದ್ದು, ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಇಲ್ಲಿನ ಮಣಿಪಾಲ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದ ಡಾ. ಎಸ್. ಚಂದ್ರಮೋಹನ್ (31) ಅನುಮಾನಸ್ಪದವಾಗಿ ನಾಪತ್ತೆಯಾದವರು. ಬೆಂಗಳೂರಿನ ವಸಂತನಗರದಲ್ಲಿ ನೆಲೆಸಿದ್ದ ಚಂದ್ರಮೋಹನ್ ಸರ್ಜಾಪುರ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ಹಲವು ವರ್ಷದಿಂದ ಕೆಲಸ ಮಾಡುತ್ತಿದ್ದರು. ಹಿಮಾಲಯಕ್ಕೆ ತೆರಳಿದ್ದು, ವಾಪಸು ಬರದ ಬಗ್ಗೆ ತಂದೆ ಶಿವನಾಥ್ ನೀಡಿದ ದೂರಿನ ಮೇರೆಗೆ ಹೈಗ್ರೌಂಡ್ಸ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಮೂಲಕ ನೇಪಾಳ ಪೊಲೀಸರಿಗೆ ಮಾಹಿತಿ ವಿನಿಯಮ ಮಾಡಿಕೊಳ್ಳಲಾಗಿದೆ.
ಸ್ಥಳೀಯ ಪೊಲೀಸರು ಚಂದ್ರಮೋಹನ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಚಂದ್ರಮೋಹನ್ ಪೋಷಕರು ಮತ್ತು ಸಹೋದರ ನೇಪಾಳಕ್ಕೆ ಹೋಗಿ ಹುಡುಕಾಡುತ್ತಿದ್ದಾರೆ. ಇನ್ನು ಹಿಮಾಯಲಯಕ್ಕೆ ತೆರಳಿದ್ದ ಬಗ್ಗೆ ಚಂದ್ರ ಮೋಹನ್ ಅಲ್ಲಿಂದ ಪೋಟೋ ಕಳುಹಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಬೆಂಗಳೂರಿನಿಂದ ನೇಪಾಳಕ್ಕೆ ಮೇ 03 ರಂದು ತೆರಳಿದ್ದರು. ಪೋಷಕರಿಗೆ ವಿಷಯ ತಿಳಿಸಿದ್ದು, ಇದೀಗ ಎರಡು ತಿಂಗಳು ಸಮೀಪಿಸುತ್ತಿದ್ದರೂ ಡಾ. ಚಂದ್ರಮೋಹನ್ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲ ದಿನಗಳ ಕಾಲ ನೇಪಾಳದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿರುವ ವೈದ್ಯ ಚಂದ್ರಮೋಹನ್, ಹಿಮಾಲಯ ಪರ್ವತಕ್ಕೆ ಚಾರಣ ತೆರಳಲು ಎವರೆಸ್ಟ್ ಕ್ಯಾಂಪ್ನಲ್ಲಿ ತಂಗಿದ್ದರು. ಮೇ. 20 ರಂದು ವಾಟ್ಸಪ್ ಮೂಲಕ ಪೋಟೋ ಹಾಗೂ ಸಂದೇಶ ಕಳುಹಿಸಿದ್ದರು. ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಪೋಷಕರು ಎಷ್ಟೇ ಪ್ರಯತ್ನಿಸಿದರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎಂದು ಹೇಳಲಾಗಿದೆ. ಚಂದ್ರಮೋಹನ್ ಒಂಟಿಯಾಗಿ ನೇಪಾಳಕ್ಕೆ ಹೋಗಿದ್ದು, ಅವರೊಬ್ಬರೇ ಹಿಮಾಲಯ ಪರ್ವತಕ್ಕೆ ತೆರಳಿರುವ ಸಾಧ್ಯತೆಯಿದೆ. ಅವರನ್ನು ಪತ್ತೆ ಮಾಡುವುದು ಸವಾಲಾಗಿದ್ದು ಎಂದು ಪೊಲೀಸರು ತಿಳಿಸಿದ್ದಾರೆ.
ದೇವರ ಭಕ್ತಿಯಲ್ಲಿ ಮುಳಗಿದ್ದ ವೈದ್ಯ:
Recommended Video
ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಚಂದ್ರಮೋಹನ್, ಹಲವು ಸರ್ಜರಿಗಳ ಮೂಲಕ ಹೆಸರು ಗಳಿಸಿದ್ದರು. ವಿಶ್ರಾಂತಿ ಸಿಕ್ಕಾಗ ಮನೆಯಲ್ಲಿ ಪದೇ ಪದೇ ದೇವರ ಧ್ಯಾನ ಮಾಡುತ್ತಿದ್ದರು. ದೇವರ ಭಕ್ತಿಯಿಂದ ಹಿಮಾಲಯಕ್ಕೆ ಹೋಗಿದ್ದು, ಇಷ್ಟು ದಿನವಾದರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗಾಗಿ ಚಂದ್ರಮೋಹನ್ ಅವರನ್ನು ಹುಡುಕಿಕೊಡಿ ಎಂದು ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.