ಬೆಂಗಳೂರು ಗಲಭೆ: ಬಿಎಲ್ ಸಂತೋಷ್ ಭೇಟಿ ಮಾಡಿದ ಗೃಹ ಸಚಿವ ಬೊಮ್ಮಾಯಿ
ಬೆಂಗಳೂರು, ಆ. 22: ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಭೇಟಿ ಮಾಡಿ ಚರ್ಚೆ ನಡೆಸಿದರು. ಬೆಂಗಳೂರು ಗಲಭೆ ಬಳಿಕ ಮೊದಲ ಬಾರಿ ಈ ಭೇಟಿ ನಡೆದಿರುವುದು ಮಹತ್ವ ಪಡೆದುಕೊಂಡಿದೆ. ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಪ್ರದೇಶಗಳಲ್ಲಿ ಗಲಭೆ ನಿರ್ವಹಣೆ ಕುರಿತಂತೆ ಬಿಜೆಪಿ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿತ್ತು.
Recommended Video
ಗಲಭೆ ಪೂರ್ವನಿರ್ಧಾರಿತ ಎಂಬ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಹೇಳಿಕೆಗೆ ಬಿಜೆಪಿ ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಆ ರೀತಿಯ ಹೇಳಿಕೆ ಕೊಡುವುದರಿಂದ ಸರ್ಕಾರ ಅಸಮರ್ಥವಾಗಿದೆ ಎಂಬಂತಹ ಸಂದೇಶ ರವಾನೆಯಾಗುತ್ತದೆ. ಜೊತೆಗೆ ಶೀಘ್ರದಲ್ಲಿಯೇ ಬಿಬಿಎಂಪಿ ಚುನಾವಣೆ ಕೂಡ ಬರಲಿದೆ. ಹೀಗಾಗಿ ಇಡೀ ಪ್ರಕರಣವನ್ನು ಸೂಕ್ತವಾಗಿ ನಿಭಾಯಿಸಿ ಎಂದು ರಾಜ್ಯ ಬಿಜೆಪಿ ಘಟಕಕ್ಕೆ ಹೈಕಮಾಂಡ್ ಸೂಚನೆ ರವಾನಿಸಿತ್ತು. ಹೀಗಾಗಿ ರಾಜ್ಯ ಬಿಜೆಪಿ ಘಟಕ ಕೂಡ ಸರ್ಕಾರಕ್ಕೆ ಪರ್ಯಾಯವಾಗಿ ಸತ್ಯಶೋಧನಾ ಸಮಿತಿ ರಚನೆ ಮಾಡಿತ್ತು.
"ಕಾಂಗ್ರೆಸ್ ನವರು, ಗಲಭೆ, ದಲಿತರ ಮೇಲಿನ ದಾಳಿಗೆ ಖಂಡಿಸುವುದಿಲ್ಲ"
ಹೈಕಮಾಂಡ್ ಅಸಮಾಧಾನ ಬಳಿಕ ಇದೀಗ ಮೊದಲ ಬಾರಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ಬಳಿಕ ಮಾತನಾಡಿದ ಬೊಮ್ಮಾಯಿ ಅವರು, ಬಿ.ಎಲ್. ಸಂತೋಷ್ ಅವರೊಂದಿಗೆ ಜೊತೆ ಪಕ್ಷ ಸಂಘಟನೆ ಮತ್ತು ಗಣೇಶೋತ್ಸವ ಆಚರಣೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಜೊತೆಗೆ ನಮ್ಮ ಹಾವೇರಿ ಜಿಲ್ಲೆಯ ಪಕ್ಷದ ಕಚೇರಿ ಕಟ್ಟಡ ಸ್ಥಾಪನೆ ಬಗ್ಗೆಯೂ ಚರ್ಚಿಸಿದ್ದೇವೆ. ಅದರೊಂದಿಗೆ ಬೆಂಗಳೂರು ಗಲಭೆ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದಿದ್ದಾರೆ. ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಫೋನ್ ಟ್ಯಾಪಿಂಗ್ ಆರೋಪದ ಬಗ್ಗೆ ತಿಳಿದುಕೊಂಡು ಪ್ರತಿಕ್ರಿಯಿಸುತ್ತೇವೆ ಎಂದೂ ಬೊಮ್ಮಾಯಿ ಹೇಳಿಕೆ ಕೊಟ್ಟಿದ್ದಾರೆ.