ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಚಿತ್ರಹಾಕದಿದ್ದರೆ ಹೋರಾಟ: ಎಚ್ಚರಿಕೆ
ಬೆಂಗಳೂರು, ಮೇ ೦1: ಬಸವಜಯಂತಿಯ ಒಳಗಾಗಿ ಎಲ್ಲ ಸರ್ಕಾರಿ ಕಚೇರಿಗಳು ಮತ್ತು ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಬಸವಣ್ಣ ಅವರ ಭಾವಚಿತ್ರವನ್ನು ಇರಿಸದಿದ್ದರೆ ಹೋರಾಟ ಮಾಡುವುದಾಗಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಎರಡು ವರ್ಷಗಳ ಹಿಂದೆಯೇ, ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣರವರ ಭಾವಚಿತ್ರ ಇರಿಸಿ ಗೌರವಿಸಲು ಆದೇಶ ಹೊರಡಿಸಿದ್ದರೂ ಇದುವರೆಗೂ ಅದು ಕಾರ್ಯಗತವಾಗಿಲ್ಲ ಎಂದು ಅವರು ದೂರಿದರು.
ಸರ್ಕಾರಿ ಆದೇಶ ಹೊರಡಿಸಿ ಎರಡು ವರ್ಷಗಳು ಕಳೆದಿದ್ದರು ಈವರೆಗೆ ಕೇವಲ ಕೆಲವು ಕಚೇರಿಗಳಲ್ಲಿ ಮಾತ್ರ ಬಸವಣ್ಣ ಅವರ ಭಾವಚಿತ್ರ ಕಾಣಸಿಗುತ್ತದೆ. ಆದ್ದರಿಂದ ಈ ಬಸವಜಯಂತಿ ಒಳಗೆ ಬಸವಣ್ಣನವರ ಭಾವಚಿತ್ರ ಅಳವಡಿಸಬೇಕು ಎಂದು ಅವರು ಹೇಳಿದರು.
ಏಪ್ರಿಲ್ 07ರ ಒಳಗಾಗಿ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣ ಅವರ ಚಿತ್ರ ಇರಿಸಿ ಗೌರವಿಸದೇ ಹೋದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.
ಜಗದ್ಗುರು ಬಸವಣ್ಣನವರು ಯಾವುದೇ ಒಂದು ಧರ್ಮ, ಜಾತಿ, ವರ್ಗಕ್ಕೆ ಸೀಮಿತವಾದವರಲ್ಲ. ಸಾಮಾಜಿಕ, ಆರ್ಥಿಕ ಸಮಾನತೆಗಾಗಿ ಶ್ರಮಿಸಿ ಸಾಮಾಜಿಕ ಸುಧಾರಣೆ ತಂದ ಹರಿಕಾರರು. ಅಂತಹ ಮಹಾನುಭಾವರಾದ ಭಾವಚಿತ್ರ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಬೇಕು ಎಂದು ಒತ್ತಾಯಿಸಿದರು.