ಸಾಂಸ್ಕೃತಿಕ ಪ್ರವಾಸಿ ಕೇಂದ್ರವಾಗಿ ಬಸವನಗುಡಿ ಅಭಿವೃದ್ಧಿ: ರವಿ ಸುಬ್ರಹ್ಮಣ್ಯ
ಬೆಂಗಳೂರು, ಡಿಸೆಂಬರ್ 3: ಹಲವಾರು ಐತಿಹಾಸಿಕ ದೇವಸ್ಥಾನಗಳನ್ನು ಒಳಗೊಂಡ ಹಾಗೂ ಐತಿಹಾಸಿಕ ಕಡಲೆಕಾಯಿ ಪರಿಷೆ ನಡೆಯುವ ಬಸವನಗುಡಿ ಪ್ರದೇಶವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಭರವಸೆ ನೀಡಿದರು.
ಕಾರ್ತಿಕ ಕಡೇ ಸೋಮವಾರವಾದ ಇಂದು ಬಸವನಗುಡಿ ಕಡಲೆಕಾಯಿ ಪರಿಷೆ ಉದ್ಘಾಟಿಸಿ ಮಾತನಾಡಿದರು, ವರ್ಷಕ್ಕೊಂದು ಬಾರಿ ನಡೆಯುವ ಕಡಲೆ ಕಾಯಿ ಪರಿಷೆ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜನರನ್ನು ಆಕರ್ಷಿಸುತ್ತಿದೆ.
ಡಿ.3ರಿಂದ ಸಾಂಪ್ರದಾಯಿಕ ಬಸವನಗುಡಿ ಕಡಲೆಕಾಯಿ ಪರಿಷೆ
ಇದನ್ನು ಒಳಗೊಂಡಂತೆ ಈ ಪರಿಸರದಲ್ಲಿನ ಐತಿಹಾಸಿಕ ದೇವಾಲಯಗಳು ಹಾಗೂ ಸ್ಮಾರಕಗಳನ್ನು ಒಳಗೊಂಡು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಈಗಾಗಲೇ ಬಿಬಿಎಂಪಿ ಸಹಕಾರ ನೀಡುವ ಭರವಸೆ ನೀಡಿದೆ. ಶೀಘ್ರದಲ್ಲೇ ಪ್ರವಾಸಿ ಕೇಂದ್ರದ ಪಟ್ಟಿಯಲ್ಲಿ ಬಸವನಗುಡಿಯನ್ನು ಸೇರ್ಪಡೆ ಮಾಡುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮಾತನಾಡಿ, ವರ್ಷಕ್ಕೊಂದು ಬಾರಿ ನಡೆಯುವ ಕಡಲೆಕಾಯಿ ಪರಿಷೆ ಬೆಂಗಳೂರಿನ ಮೂಲ ಸಾಂಪ್ರದಾಯಿಕ ಸೊಗಡನ್ನು ನೆನಪಿಸುತ್ತದೆ. ಅಲ್ಲದೆ ಪ್ರತಿ ವರ್ಷದ ಚಳಿಗಾಲದ ಸಂದರ್ಭದಲ್ಲಿ ಕಡಲೆಕಾಯಿ ಪರಿಷೆ ನಮ್ಮ ನೆಲಮೂಲದ ಸಂಸ್ಕೃತಿಯನ್ನು ನೆನಪಿಸುತ್ತದೆ ಎಂದರು.
ವ್ಯಾಪಾರದ ಭರಾಟೆ ಜೋರು
ಈ ಪರಿಷೆಯ ಪ್ರಮುಖ ಆಕರ್ಷಣೆ ಕಡಲೆಕಾಯಿ , ಪರಿಷೆಗೆ ಕಾಲಿಟ್ಟ ತಕ್ಷಣವೇ ಕಡಲೆಕಾಯ್ ಕಡಲೆಕಾಯ್ ಎನ್ನುವ ಸದ್ದು ಕಿವಿಗೆ ಅಪ್ಪಳಿಸುತ್ತದೆ.ಪರಿಷೆಯಲ್ಲಿ ತರಹೇವಾರಿ ಕಡಲೆಕಾಯಿ ಕಾಣುತ್ತದೆ. ಬಣ್ಣ ಹಾಗೂ ಗಾತ್ರ ಆಧರಿಸಿ ಹಸಿ ಕಾಯಿ ಹಾಗೂ ಹುರಿದ ಕಾಯಿಗೆ ಪ್ರತ್ಯೇಕ ಬೆಲೆಯನ್ನು ವ್ಯಾಪಾರಸ್ಥರು ನಿಗದಿ ಮಾಡುತ್ತಾರೆ.
ಕಡಲೆಕಾಯಿ ಸೇರಿಗೆ 25 ರೂ
ಗ್ರಾಹಕರು ಕಡಲೆಕಾಯಿ ಅಂಗಡಿಗೆ ಹೋಗಿ ಎಷ್ಟಪ್ಪಾ ಕಡಲೆಕಾಯಿ ಎನ್ನುವುದು ಅದಕ್ಕೆ ಪ್ರತಿಯಾಗಿ ಎಷ್ಟು ಬೇಕಮ್ಮಾ ನಿಮಗೆ ಎಂದು ಹೇಳಿ ಒಂದು ಸೇರಿಗೆ 25 ರೂ ನಂತೆ ಮಾರಾಟ ಮಾಡುತ್ತಿದ್ದಾರೆ. ಹುರಿದ ಹಸಿ ಕಡಲೆಗೆ 30 ರೂ ಹಾಗೂ ಹುಡಿದ ಒಣಗಿದ ಕಡಲೆಗೆ 25 ರೂ ಇದೆ.
ಕಡಲೆಕಾಯಿ ಪರಿಷೆಗೆ ರೈತರು ಎಲ್ಲೆಲ್ಲಿಂದ ಬಂದಿದ್ದಾರೆ ಗೊತ್ತಾ?
ಮಾಲೂರು, ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರ, ರಾಮನಗರ, ದೊಡ್ಡಬಳ್ಳಾಪುರ, ಹೊಸಕೋಟೆ, ಮಾಗಡಿ,ತಮಿಳುನಾಡು, ಆಂಧ್ರಪ್ರದೇಶದಿಂದ ರೈತರು ಬಂದಿದ್ದಾರೆ. ಸುಮಾರು 5ರಿಂದ 6 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ.
ಎರಡು ದಿನ ನಡೆಯಲಿದೆ ಪರಿಷೆ
ಬಸವನಗುಡಿ ಕಡಲೆಕಾಯಿ ಪರಿಷೆ ಡಿಸೆಂಬರ್ 3-4 ಎರಡು ದಿನಗಳ ಕಾಲ ನಡೆಯಲಿದೆ. ಆದರೆ 15 ದಿನಗಳ ಕಾಲ ಕಡಲೆಕಾಯಿ ಮಾರಾಟವಾಗಲಿದೆ. ವಿಶೇಷ ಪೂಜೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿದೆ.