ಬಸವನಗುಡಿ ಕ್ಷೇತ್ರದ ಸರಕಾರಿ ಶಾಲೆಗಳಿಗೆ ಕಾಯಕಲ್ಪ
ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳೊಂದಿಗೆ ಸ್ಪರ್ಧಿಸುವ ಮಟ್ಟಕ್ಕೆ ಬೆಳೆಸುವ ಉದ್ದೇಶದಿಂದ ಮತ್ತೊಂದು ಮಹತ್ತರ ಯೋಜನೆಗೆ ಬಿಜೆಪಿ ನಾಯಕ ರವಿ ಕೈಹಾಕಿದ್ದಾರೆ. ಗುಟ್ಟಹಳ್ಳಿಯಲ್ಲಿರುವ ಸರಕಾರಿ ಶಾಲೆಯನ್ನು 1.5 ಕೋಟಿ ರು. ವೆಚ್ಚದಲ್ಲಿ ಉನ್ನತ ದರ್ಜೆಗೆ ಏರಿಸುವ ಕಾರ್ಯ ಭರದಿಂದ ಸಾಗಿದೆ. ಅಲ್ಲಿರುವ 200 ವಿದ್ಯಾರ್ಥಿಗಳಾಗಿ ವಿಜ್ಞಾನ, ರಾಸಾಯನಿಕ ಪ್ರಯೋಗಾಲಯ, ಗ್ರಂಥಾಲಯ, ಉತ್ತಮ ಗುಣಮಟ್ಟದ ಸಮವಸ್ತ್ರ, ಸುರಕ್ಷತೆಗೆ ಸಿಸಿಟಿವಿ ಮುಂತಾದ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು, ಅದು ಇನ್ನೇನು ಮುಕ್ತಾಯದ ಹಂತದಲ್ಲಿದೆ.
ಇದಲ್ಲದೆ, 100 ವರ್ಷಕ್ಕೂ ಹಳೆಯದಾಗಿರುವ ಸುಂಕೇನಹಳ್ಳಿ, ಗವಿಪುರಂ, ಕತ್ರಿಗುಪ್ಪೆ, ಶ್ರೀನಗರ ಮತ್ತು ಎನ್ಆರ್ ಕಾಲೋನಿಯಲ್ಲಿರುವ ಸರಕಾರಿ ಮತ್ತು ಬಿಬಿಎಂಪಿ ಶಾಲೆಗಳನ್ನು ಕೂಡ ಇದೇ ಮಟ್ಟಕ್ಕೆ ಏರಿಸುವ ಯೋಜನೆ ರೂಪುಗೊಳ್ಳುತ್ತಿದೆ. ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಸಾಫ್ಟ್ ವೇರ್ ಇಂಜಿನಿಯರುಗಳ ಮುಖಾಂತರ ತರಬೇತಿ ನೀಡುವ, ಕಲಿಕಾ ಕಿಟ್ ನೀಡುವ ಉದ್ದೇಶವೂ ಇದೆ. ಒಟ್ಟಿನಲ್ಲಿ ಸರಕಾರಿ ಶಾಲೆ ವಿದ್ಯಾರ್ಥಿಗಳು ಖಾಸಗಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸುವ ಮಟ್ಟಕ್ಕೆ ನಿಲ್ಲಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಬೇರೆ ಶಾಲೆಗಳಂತೆ ಈಜುಗೊಳ, ಪವರ್ ಪಾಯಿಂಟ್ ಪ್ರೆಸೆಂಟೇಶನ್ ನೀಡಲು ನಮಗೆ ಸಾಧ್ಯವಾಗುವುದಿಲ್ಲ. ಆದರೆ, ಈ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಯಾರಿಗೂ ಕಮ್ಮಿ ಇಲ್ಲದಂತೆ ಸ್ಪರ್ಧಿಸಲಿದ್ದಾರೆ. ಇನ್ನು ಎರಡೇ ವರ್ಷದಲ್ಲಿ 200 ವಿದ್ಯಾರ್ಥಿಗಳ ಸಂಖ್ಯೆ 800ಕ್ಕೇರಲಿದೆ. ಶಾಲೆಯ ಜೊತೆಗೆ ಕಾಲೇಜನ್ನೂ ಇದೇ ಶಾಲೆಗಳ ಆವರಣದಲ್ಲಿ ಆರಂಭಿಸುವ ಚಿಂತನೆಯೂ ನಡೆದಿದೆ ಎಂದು ಸ್ವತಃ ಎಂಬಿಎ ಪದವೀಧರರಾಗಿರುವ ರವಿ ಸುಬ್ರಮಣ್ಯ ಅವರು ವಿವರಿಸಿದರು.
ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಕುರಿತು ಒನ್ಇಂಡಿಯಾ ಅವರ ಗಮನ ಸೆಳೆದಾಗ, ಬಸವನಗುಡಿ ಕ್ಷೇತ್ರದ ಎಲ್ಲ ಸರಕಾರಿ ಶಾಲೆಗಳಲ್ಲಿ ಕೂಡ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸುರಕ್ಷತೆಗಾಗಿ ಸಿಸಿಟಿವಿ ಅಳವಡಿಸಲಾಗುವುದು ಎಂದು ಉತ್ತರಿಸಿದರು.