ಮಳೆನೀರು ಕೊಳಚೆನೀರು ಬೇರ್ಪಡಿಸುವ ಯೋಜನೆ
2010ರಲ್ಲಿ ಬಿಡಬ್ಲ್ಯೂಎಸ್ಎಸ್ಬಿ ಪೈಲಟ್ ಪ್ರಾಜೆಕ್ಟನ್ನು ಬಸವನಗುಡಿಗೂ ವಿಸ್ತರಿಸಿದ್ದಾಗಿ ಹೆಮ್ಮೆಯಿಂದ ಹೇಳಿಕೊಂಡ ಅವರು, ಬಿಜೆಪಿ ಸರಕಾರವಿದ್ದಾಗ ಮಳೆ ನೀರನ್ನು ಚರಂಡಿ ನೀರಿನೊಂದಿಗೆ ಬೇರ್ಪಡಿಸಲು 30 ಕೋಟಿ ರು. ಅನುದಾನ ದೊರಕಿತ್ತು ಎಂದು ಹೇಳಿದರು. ಈ ಕೆಲಸ ಕೆಲ ಪ್ರದೇಶದಲ್ಲಿ ಮುಗಿದಿದ್ದು, ಗಿರಿನಗರ, ಚೆನ್ನಮ್ಮನಕೆರೆ ಅಚ್ಚುಕಟ್ಟು, ವಿದ್ಯಾಪೀಠ, ಶ್ರೀನಗರ, ಕತ್ರಿಗುಪ್ಪೆ, ಹನುಮಂತನಗರಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಚರಂಡಿ ನೀರಿನ ಲೈನಿಗಾಗಿ 22 ಕೋಟಿ ಮತ್ತು ಮಳೆ ನೀರು ಲೈನಿಗಾಗಿ 28 ಕೋಟಿ ರು. ತಗುಲಲಿದ್ದು, ಇನ್ನು ಐದಾರು ತಿಂಗಳಲ್ಲಿ ಇದರ ಕಾಮಗಾರಿ ಮುಗಿಯಲಿದೆ ಎಂದು ಅವರು ವಿವರಿಸಿದರು.
ಕಾವೇರಿ ನೀರಿನ ಸರಬರಾಜಿಗಾಗಿ 40-50 ವರ್ಷ ಹಳೆಯ ಪೈಪುಗಳನ್ನು ಕಿತ್ತುಹಾಕಿ, ಮುಖ್ಯ ಸಂಪರ್ಕವಾಗಿ ಡಿಐ ಪೈಪುಗಳನ್ನು ಮತ್ತು ಮನೆಗಳಿಗೆ ನೈಲಾನ್ ಪೈಪುಗಳನ್ನು ಅಳವಡಿಸಲಾಗಿದೆ. 20 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹೊಸ ಮೀಟರುಗಳನ್ನು ಉಚಿತವಾಗಿ ನೀಡಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಕಾಮಗಾರಿಯಿಂದ ನೀರು ಪೋಲಾಗುವುದನ್ನು ನಿಲ್ಲಿಸಲಾಗಿದೆ. ಅಲ್ಲದೆ, ಅನೇಕ ಬಡಾವಣೆಗಳಲ್ಲಿ ಮಳೆನೀರು ಕೊಯ್ಲು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ, ರಸ್ತೆಯಲ್ಲಿಯೂ ಅಲ್ಲಲ್ಲಿ ತೆಗ್ಗುತೆಗೆದು ಮಳೆನೀರು ಕೊಯ್ಲಿಗೆ ಬೇಕಾದ ಅಗತ್ಯ ವಸ್ತುಗಳನ್ನು ತುಂಬಿಸಿ ನೀರು ಭೂಮಿಯೊಳಗೆ ಇಂಗಿಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ.
ಬಸವನಗುಡಿಯಲ್ಲಿ ದಿನನಿತ್ಯ ಅಡ್ಡಾಡುವವರಿಗೆ ವಾಹನ ಸಂಚಾರ ಹೇಗಿರುತ್ತದೆ ಎಂದು ವಿವರಿಸಿ ಹೇಳಬೇಕಾಗಿಲ್ಲ. ಜನಸಂಖ್ಯೆ ಮತ್ತು ವಾಹನ ಸಂಖ್ಯೆ ವೃದ್ಧಿಯಾಗುತ್ತಿದ್ದಂತೆ ಈ ಜನನಿಬಿಡ ಪ್ರದೇಶಗಳು ಸಾಕಷ್ಟು ಸಮಸ್ಯೆಯನ್ನು ತಂದೊಡ್ಡುತ್ತಿವೆ. ಇನ್ನು ಈ ಪ್ರದೇಶಗಳಲ್ಲಿ ಕೆಳಸೇತುವೆ, ಮೇಲುಸೇತುವೆ ಅಳವಡಿಸುವುದು ದೂರದ ಮಾತು. ಹೀಗಾಗಿ, ವಿದ್ಯಾಪೀಠ, ಹನುಮಂತನಗರ, ರಾಮಾಂಜನೇಯ ಗುಡ್ಡ, ಕೆಆರ್ ರಸ್ತೆ, ಕತ್ರಿಗುಪ್ಪೆ ಮುಂತಾದ ಕೆಲವೆಡೆಗಳಲ್ಲಿ 50 ಅಡಿ ರಸ್ತೆ ಅಗಲೀಕರಿಸುವ ಅಗತ್ಯ ಇದೆ. ಆದರೆ, ಅದು ಬಿಬಿಎಂಪಿ ಮತ್ತು ಬಿಡಿಎ ಮತ್ತು ಸರಕಾರದ ಸಹಯೋಗದೊಂದಿಗೆ ಆಗುವ ಕೆಲಸ, ಶಾಸಕರಿಂದಲ್ಲ. [ಬಿಬಿಎಂಪಿ ಯೋಜನೆಗಳು]