ಬಸವಜಯಮೃತ್ಯುಂಜಯ ಸ್ವಾಮಿ ತಂಡದಿಂದ ವಿಶಿಷ್ಟ ನಾಗ ಪಂಚಮಿ
ಬೆಂಗಳೂರು, ಜುಲೈ 23: ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ, ಧರ್ಮಕ್ಷೇತ್ರ ಕೂಡಲ ಸಂಗಮದ ಪ್ರಥಮ ಜಗದ್ಗುರು ಶ್ರೀ ಬಸವಜಯಮೃತ್ಯುಂಜಯ ಮಹಾಸ್ವಾಮಿಗಳು ವಿಶಿಷ್ಟವಾಗಿ ನಾಗರ ಪಂಚಮಿ ಹಬ್ಬ ಆಚರಣೆಗೆ ಕರೆ ನೀಡಿದ್ದಾರೆ.
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ , ವಿವಿಧ ಘಟಕ ಹಾಗೂ ಸಂಸ್ಥೆಗಳ ಸಹಯೋಗದೊಂದಿಗೆ ನಾಗರಪಂಚಮಿ ಹಬ್ಬದ ಪ್ರಯುಕ್ತ, ರಾಜ್ಯಾದ್ಯಂತ 20ನೇ ವರ್ಷದ ಕಲ್ಲುನಾಗರಕ್ಕೆ ಹಾಕುವ ಹಾಲನ್ನು ಮಕ್ಕಳಿಗೆ ಕುಡಿಯಲು ನೀಡುತ್ತಾ ಬಂದಿದೆ.
"ಹಾಲು ಕುಡಿಯುವ ಹಬ್ಬದ ಸಪ್ತಾಹ 2017" ಕಾರ್ಯಕ್ರಮವು 24/ 7/ 2017 ರ ಸೋಮವಾರ ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮವು ಬೊಸ್ಕೋ ಮನೆ ಚಿಲ್ಡ್ರನ್ಸ್ ಹೋಮ್, 242, 4ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಚಾಮರಾಜಪೇಟೆ, ಬೆಂಗಳೂರು ಇಲ್ಲಿ ನೆರವೇರಲಿದೆ.
ಜಗದ್ಗುರು ಶ್ರೀ ಬಸವಜಯಮೃತ್ಯುಂಜಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಎಚ್ ಆಂಜನೇಯ, ಸಮಾಜ ಕಲ್ಯಾಣ ಸಚಿವರು, ವಿನಯ್ ಕುಲಕರ್ಣಿ, ಭೂ ವಿಜ್ಞಾನ ಸಚಿವರು, ವಿಜಯಾನಂದ ಕಾಶಪ್ಪನವರ, ಶಾಸಕರು ಹುನಗುಂದ, ಟಿ. ಎ ನಾರಾಯಣಗೌಡರು, ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ, ಪ್ರಶಾಂತ್ ಕಲ್ಲೂರ್, ರಾಜ್ಯಾಧ್ಯಕ್ಷರು, ವೀರಶೈವ ಲಿಂಗಾಯತ ಯುವ ವೇದಿಕೆ, ಶಿವುಕುಮಾರ್, ಅಧ್ಯಕ್ಷರು, ಉತ್ತರ ಕರ್ನಾಟಕ ನವನಿರ್ಮಾಣ ವೇದಿಕೆ, ಡಾ|| ಸಂಗಮೇಶ್, ಬೆಂಗಳೂರು ಮುಖ್ಯ ಅತಿಥಿಗಳಾಗಿದ್ದಾರೆ.
ನಾಗರಪಂಚಮಿ ಅಥವಾ ಪಂಚಮಿ ಹಬ್ಬ ವಿಶೇಷವಾಗಿ ಹಾವಿನ ಹುತ್ತಕ್ಕೆ ಹಾಲೆರೆಯುವುದು ಸಂಪ್ರದಾಯ. ಆ ಹಾಲನ್ನು ನಾಗರ ಹಾವು ಸೇವಿಸುತ್ತದೆ ಎನ್ನುವುದು ಬಲವಾದ ನಂಬಿಕೆ. ಈ ಹಬ್ಬವನ್ನು ಶ್ರಾವಣಮಾಸ ಆರಂಭವಾದ 5ನೇ ದಿನಕ್ಕೆ ಆಚರಿಸುತ್ತಾರೆ.
ನಾಗರ ಪಂಚಮಿ ದಿನದಂದು ಮಹಿಳೆಯರು ನಾಗರ ಪ್ರತಿಮೆಗೆ ವಿವಿಧ ರೀತಿಯಲ್ಲಿ ಪೂಜಾ ಕಾರ್ಯಗಳನ್ನು ಮಾಡುತ್ತಾರೆ. ಜತೆಗೆ ನೂತನವಾಗಿ ಮದುವೆಯಾಗಿರುವ ಹೆಣ್ಣು ಮಕ್ಕಳು ತವರಿಗೆ ಬಂದು ಪಂಚಮಿ ಹಬ್ಬವನ್ನು ಆಚರಿಸುವುದು ರೂಢಿ. ಈ ಹಬ್ಬವನ್ನು ಸಹೋದರ-ಸಹೋದರಿಯರ ಹಬ್ಬ ಎಂದು ಕರೆಯಲಾಗುತ್ತದೆ. ತಂಗಿಯರು ತಮ್ಮ ಅಣ್ಣನಿಗೆ ಪ್ರೀತಿಯಿಂದ ಹಾರೈಸುವುದು. ಅಣ್ಣನಾದವನು ತಂಗಿಗೆ ಪ್ರೀತಿಯ ಪ್ರತೀಕವಾಗಿ ಉಡುಗೊರೆ ನೀಡುವುದು ಹಲವು ಕಡೆಗಳಲ್ಲಿ ಕಂಡು ಬರುವ ಆಚರಣೆ.