ಕೈಲಾಶ್ ಬಾರ್ ಅಗ್ನಿ ಅವಘಡ: ಬಾರ್ ಮ್ಯಾನೇಜರ್ ನಾಪತ್ತೆ
ಬೆಂಗಳೂರು, ಜನವರಿ ೦8: ಕೃಷ್ಣರಾಜ ಮಾರುಕಟ್ಟೆ (ಕೆ.ಆರ್ ಮಾರುಕಟ್ಟೆ) ಸಮೀಪದ ಕೈಲಾಶ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಸೋಮವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿದೆ. ಘಟನೆ ಬಳಿಕ ಬಾರ್ ಮ್ಯಾನೇಜರ್ ನಾಪತ್ತೆಯಾಗಿದ್ದಾರೆ.
ಈ ದುರ್ಘಟನೆಯಲ್ಲಿ ಬಾರ್ ನಲ್ಲಿ ಕೆಲಸ ಮಾಡುವ ಐವರು ಸಿಬ್ಬಂದಿ ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ. ರಾಜಾಜಿನಗರದ ನಿವಾಸಿಯಾಗಿರುವ ಸೋಮಶೇಖರ್ ಎನ್ನುವವರು ಬಾರ್ ನಡೆಸುತ್ತಿದ್ದರು. ದಯಾಶಂಕರ್ ಎನ್ನುವವರು ಬಾರ್ ಪರವಾನಗಿಯನ್ನು ಪಡೆದಿದ್ದರು. ದಯಾಶಂಕರ್ ಅವರಿಗೆ ಅನಾರೋಗ್ಯದ ಕಾರಣ ಬಾರ್ ಕಡೆಗೆ ಬರುತ್ತಿರಲಿಲ್ಲ. ಹತ್ತು ವರ್ಷದಿಂದ ಸೋಮಶೇಖರ್ ಅವರು ಬಾರ್ ನ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಕೆಆರ್ ಮಾರುಕಟ್ಟೆ ಕೈಲಾಶ್ ಬಾರ್ ನಲ್ಲಿ ಬೆಂಕಿ, 5 ಮಂದಿ ದುರ್ಮರಣ
ಬಾರ್ ಮಾಲೀಕರಿಗೆ ಮಾನವೀಯತೆ ಇಲ್ಲ, ಐವರು ಸಾವಿಗೀಡಾಗಿದ್ದರೂ ಮಾಲೀಕರು ಬಾರ್ ಕಡೆಗೆ ಬಂದಿಲ್ಲ, ಮ್ಯಾನೇಜರ್ ಆಗಿರುವ ಸೋಮಶೇಖರ್ ಕೂಡ ಆ ಕಡೆಗೆ ಧಾವಿಸಿಲ್ಲ. ಮೃತರ ಪೋಷಕರು ಕರೆ ಮಾಡಿ ವಿಚಾರಿಸಿದಾಗ ಇನ್ನು ಹತ್ತುಗಂಟೆಯ ಒಳಗೆ ಬರುವುದಾಗಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.
ಹೀಗಾಗಿ ಪೋಷಕರು ದಯಾಶಂಕರ್ ಹಾಗೂ ಸೋಮಶೇಖರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾರ್ ಮಾಲೀಕರ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ, ಅವರೇ ನೇರ ಹೊಣೆ ಮೃತರ ಕುಟುಂಬಕ್ಕೆ ಪರಿಹಾರ ನೀಡಲೇ ಬೇಕು, ಮೃತರ ಕುಟುಂಬ ಬೀದಿಗೆ ಬರುತ್ತದೆ. ಇಲ್ಲವಾದಲ್ಲಿ ಕಾನೂನು ಹೋರಾಟ ಕೈಗೊಳ್ಳುವುದುದಾಗಿ ಮೃತರ ಸಂಬಂಧಿಗಳು ತಿಳಿಸಿದ್ದಾರೆ. ಬಾರ್ ಮಾಲೀಕರು ಹಾಗೂ ಮ್ಯಾನೇಜರ್ ವಿರುದ್ಧ ಮೃತರ ಸಂಬಂಧಿಗಳು ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.