ಬನ್ನೇರುಘಟ್ಟ ಉದ್ಯಾನ ಸುತ್ತ ಶೀಘ್ರ ಕಲ್ಲು ಗಣಿಗಾರಿಕೆ ರದ್ದು
ಬೆಂಗಳೂರು, ಏಪ್ರಿಲ್ 27: ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನದ ಸುತ್ತಲಿನ ಕಲ್ಲಿನ ಕ್ವಾರಿಗಳ ಲೈಸೆನ್ಸ್ ರದ್ದುಪಡಿಸಲು ಭೂಗರ್ಭ ಹಾಗೂ ಗಣಿ ಇಲಾಖೆಯು ಮುಂದಾಗಿದೆ.
ಪರಿಸರ ತಜ್ಞರು ಹಾಗೂ ಉದ್ಯಾನದ ಸುತ್ತಲಿನ ಗ್ರಾಮಸ್ಥರಿಂದ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇಲಾಖೆ ಲೈಸೆನ್ಸ್ ರದ್ದುಪಡಿಸುತ್ತಿದೆ. ಈ ಕುರಿತು ನಿವೃತ್ತ ನ್ಯಾಯಾಧೀಶ ಎಂ.ಎಫ್. ಸಾಲ್ಡಾನಾ ಅವರು ಕೇಂದ್ರ ಪರಿಸರ ಸಚಿವ ಹರ್ಷವರ್ಧನ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.
ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಜಿರಾಫೆ ಆಗಮನ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸುತ್ತಮುತ್ತಲಿನ 47 ಗ್ರಾಮಗಳ ಜನರ ಜೀವನಕ್ಕೆ ಎರವಾಗಿದ್ದ ಕಲ್ಲು ಗಣಿಗಾರಿಕೆ ಗೆ ಕೊನೆಗೂ ಬ್ರೇಕ್ ಬೀಳುತ್ತಿರುವುದು ಸ್ವಾಗತಾರ್ಹ. ಭವಿಷ್ಯದಲ್ಲಿ ಗಣಿ ಮಾಲೀಕರು ಇತ್ತ ದೃಷ್ಟಿ ಹರಿಸದಂತೆ ಇಲ್ಲಿನ ಜನರು ಸದಾ ಜಾಗೃತಿಯಿಂದ ಇರಬೇಕು ಎಂದು ಅವರು ಹೇಳಿದ್ದಾರೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಮರ ತಜ್ಞ ವಿಜಯ್ ನಿಶಾಂತ್ ಅವರು ಗಣಿ ಇಲಾಖೆಯ ಕ್ರಮಕ್ಕೆ ಹರ್ಷ ವ್ಯಕ್ತಪಡಿಸಿದ್ದು, ಪರಿಸರ ಜೀವ ವೈವಿಧ್ಯತೆ ಕಾಪಾಡಲು ಇದು ನೆರವಾಗುತ್ತದೆ ಎಂದಿದ್ದಾರೆ.
ಒಂದು ಸಲ ಪರವಾನಗಿ ರದ್ದಾದರೆ ಕ್ವಾರಿ ಮಾಲೀಕರು ಮತ್ತೆ ಇಲ್ಲಿ ಕೆಲಸ ಪ್ರಾರಂಭಿಸಲು ಸಾಧ್ಯವಿಲ್ಲ ಹೆದರುತ್ತಾರೆ. ಸುತ್ತಲಿರುವ 47 ಹಳ್ಳಿಗಳ ಜನರು ಭಯದಿಂದಲೇ ಜೀವನ ಮಾಡುತ್ತಿದ್ದಾರೆ. ಶೀಘ್ರವೇ ಅವರ ಭಯವೆಲ್ಲಾ ದೂರವಾಗಲಿದೆ ಎಂದು ತಿಳಿಸಿದ್ದಾರೆ.