ಉಗ್ರರದಾಳಿಯಲ್ಲಿ ಮೃತಪಟ್ಟ ಸುದರ್ಶನ್ ಯಾರು?
ರಾಮನಗರ, ಸೆ.24 : ವಿದೇಶಗಳಲ್ಲಿ ವ್ಯವಹಾರ ನಡೆಸುವಷ್ಟು ಚಾಣಕ್ಷನಾಗಿದ್ದ, ಅಣ್ಣ, ಅಕ್ಕ ಬಂಧುಗಳ ಅಕ್ಕರೆಯ ವ್ಯಕ್ತಿಯಾಗಿದ್ದ ಬಿಡದಿಯ ಸುದರ್ಶನ್ ನೈರೋಬಿಯಲ್ಲಿ ನಡೆದ ಉಗ್ರರ ಅಟ್ಟಹಾಸದಲ್ಲಿ ಸಾವನ್ನಪ್ಪಿದ್ದಾರೆ. ಕನಸುಗಳ ಗೋಪುರ ಕಟ್ಟಿಕೊಂಡು ವಿದೇಶಕ್ಕೆ ತೆರಳಿದ್ದ ಸುದರ್ಶನ್ ಅವರನ್ನು ಉಗ್ರರು ಕೊಂದು ಹಾಕಿದ್ದಾರೆ.
ಬಿಡದಿ ಬಳಿಯ ಹೆಜ್ಜಾಲದ ನಿವಾಸಿಯಾದ ಸುದರ್ಶನ್ ಕುಟುಂಬದಲ್ಲಿ ಮೂವರು ಅಣ್ಣ ತಮ್ಮಂದಿರು, ಒಬ್ಬರು ಅಕ್ಕ. ಸಹೋದರ ರಾಮ್ಪ್ರಸಾದ್ ಮದುವೆಯಾಗಿದ್ದಾರೆ, ಶ್ರೀಧರ್ ಮತ್ತು ಸುದರ್ಶನ್ ವಿವಾಹ ಬಂಧನಕ್ಕೆ ಒಳಗಾಗಿಲ್ಲ. ಶಾಲಾ ಪುಸ್ತಕಗಳನ್ನು ಮುದ್ರಿಸಿ ವಿದೇಶಕ್ಕೆ ಕಳುಹಿಸುವ ವ್ಯವಹಾರವನ್ನು ಸುದರ್ಶನ್ ನೋಡಿಕೊಳ್ಳುತ್ತಿದ್ದರು.
ಘಾನಾ ದೇಶವನ್ನು ತಮ್ಮ ವ್ಯವಹಾರ ಕೇಂದ್ರವನ್ನಾಗಿಸಿಕೊಂಡಿದ್ದ ಸುದರ್ಶನ್, ಆಫ್ರಿಕಾ ಖಂಡದ ದೇಶಗಳಲ್ಲೇ ಹೆಚ್ಚಿನ ವ್ಯವಹಾರವನ್ನು ನಡೆಸುತ್ತಿದ್ದರು. ವರ್ಷದಲ್ಲಿ 8 ತಿಂಗಳು ಹೊರದೇಶಗಳಲ್ಲೇ ಇರುತ್ತಿದ್ದ ಸುದರ್ಶನ್, ಉಳಿದ ಸಮಯದಲ್ಲಿ ಭಾರತದಲ್ಲಿ ಕಾಲ ಕಳೆಯುತ್ತಿದ್ದರು.
ಸುದರ್ಶನ್ ಮನೆಯಲ್ಲಿ ಸಿರಿವಂತಿಕೆ ತುಂಬಿ ತುಳುಕಿತ್ತಿದೆ. ಸಹೋದರರು, ಅಕ್ಕ ಭಾವ ಎಲ್ಲರೂ ಒಂದೇ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ವ್ಯವಹಾರಕ್ಕಾಗಿ ವಿದೇಶಕ್ಕೆ ತೆರಳಿದ್ದಾಗಲೇ ಉಗ್ರರು ಅವರನ್ನು ಹತ್ಯೆ ಮಾಡಿದ್ದಾರೆ. ಸುದರ್ಶನ್ ಕುರಿತು ಒಂದಷ್ಟು ತಿಳಿಯೋಣ ಬನ್ನಿ.
ವಿದೇಶಗಳಲ್ಲಿ ವ್ಯವಹಾರ
ಸುಮಾರು 30 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮೊದಲಿಗೆ ಕಟ್ಟಡ ನಿರ್ಮಾಣದ ಪರಿಕರಗಳನ್ನ ಮಾರುವ ಏಜೆನ್ಸಿಯನ್ನು ಪಡೆದಿದ್ದು ಸುದರ್ಶನ್ ಅವರ ಕುಟುಂಬ. ನಂತರ ಮುದ್ರಣ ಕ್ಷೇತ್ರಕ್ಕೆ ಈ ಕುಟುಂಬ ಕಾಲಿಟ್ಟಿತು. ಕೀನ್ಯಾ, ಉಗಾಂಡಾ, ರುವಾಂಡಾ, ಪೂರ್ವ ಆಫ್ರಿಕಾ, ಪಶ್ಚಿಮ ಆಫ್ರಿಕಾ ಮುಂತಾದ ದೇಶಗಳಲ್ಲಿ ಸರ್ಕಾರಿ ಶಾಲೆಗಳ ಪಠ್ಯಪುಸ್ತಕಗಳನ್ನು ಮುದ್ರಿಸಿಕೊಡುವ ಗುತ್ತಿಗೆ ವ್ಯವಹಾರವನ್ನು ಕುಟುಂಬ ನಡೆಸುತ್ತದೆ.
ಸುದರ್ಶನ್ ಹೆಗಲಿಗೆ ಜವಾಬ್ದಾರಿ
ಸುದರ್ಶನ್ ಅವರ ಕುಟುಂಬ ಮೊದಲು ಮುದ್ರಣ ಮಾಡಿದ ಪಠ್ಯಪುಸ್ತಕಗಳನ್ನು ಹೊರದೇಶಗಳಿಗೆ ರಫ್ತು ಮಾಡುವ ವ್ಯವಹಾರವನ್ನು ಆರಂಭಿಸಿತ್ತು. 15 ವರ್ಷಗಳ ಹಿಂದೆ ಆ ಜವಾಬ್ದಾರಿಯನ್ನು ಸುದರ್ಶನ್ ವಹಿಸಿಕೊಂಡರು. ನಂತರ ಅದರಲ್ಲಿ ಭಾರೀ ಹೆಸರು ಮತ್ತು ಹಣ ಗಳಿಸಿದರು.
`ಅಭಿಮಾನ`ದ ಫಲ
ಸುದರ್ಶನ್ ಅವರಿಗೆ ಕೀನ್ಯಾದಲ್ಲಿ ಒಮ್ಮೆ ಅಭಿಮಾನಿ ಪ್ರಕಾಶನದ ಮಾಲೀಕರಾದ ವೆಂಕಟೇಶ್ರವರ ಪರಿಚಯವಾಯಿತು. ನಂತರ ಪುಸ್ತಕ ಮುದ್ರಣ ವ್ಯವಹಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡ ಸುದರ್ಶನ್, ಅಭಿಮಾನಿ ಪ್ರಕಾಶನದ ಮೂಲಕ ಮುದ್ರಣವಾಗುವ ವಿದೇಶಿ ಪಠ್ಯಪುಸ್ತಕಗಳನ್ನು ರಫ್ತು ಮಾಡುವ ವ್ಯವಹಾರದಲ್ಲಿ ಯಶಸ್ಸುಗಳಿಸಿದರು.
8 ತಿಂಗಳು ಹೊರದೇಶದಲ್ಲಿರುತ್ತಾರೆ
ಘಾನಾ ದೇಶವನ್ನು ತಮ್ಮ ವ್ಯವಹಾರ ಕೇಂದ್ರವನ್ನಾಗಿಸಿಕೊಂಡಿದ್ದ ಸುದರ್ಶನ್, ಆಫ್ರಿಕಾ ಖಂಡದ ದೇಶಗಳಲ್ಲೇ ಹೆಚ್ಚಿನ ವ್ಯವಹಾರವನ್ನ ನಡೆಸುತ್ತಿದ್ದರು. ವರ್ಷದಲ್ಲಿ 8 ತಿಂಗಳು ಹೊರದೇಶಗಳಲ್ಲೇ ಇರುತ್ತಿದ್ದ ಸುದರ್ಶನ್, ಉಳಿದ ಸಮಯದಲ್ಲಿ ಭಾರತದಲ್ಲಿ ಕಾಲ ಕಳೆಯುತ್ತಿದ್ದರು.
ನೈರೋಬಿಯಲ್ಲಿ ಉಳಿಯುತ್ತಿದ್ದರು
ಕೀನ್ಯಾಗೆ ಭೇಟಿ ನೀಡಿದರೆ, ನೈರೋಬಿಯ ಸೆಂಟ್ರಲ್ ಹೋಟೆಲ್ನಲ್ಲಿ ಸುದರ್ಶನ್ ಉಳಿದುಕೊಳ್ಳುತ್ತಿದ್ದರು. ಶುಕ್ರವಾರ ನೈರೋಬಿಗೆ ಅವರು ತೆರಳಿದ್ದರು. ನಂತರ ವೆಸ್ಟ್ಗೇಟ್ ಮಾಲ್ಗೆ ಹೋಗಿದ್ದಾರೆ. ಅಲ್ಲಿ ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.
ಕುಟುಂಬಕ್ಕೆ ಶನಿವಾರ ಕೊನೆಯ ಕರೆ
ಸುದರ್ಶನ್ ನೈರೋಬಿಯಿಂದ ಶನಿವಾರ ಮಧ್ಯಾಹ್ನ ಬಿಡದಿಯ ಮನೆಗೆ ಕರೆ ಮಾಡಿದ್ದರು. ನಂತರ ಅವರಿಂದ ಯಾವುದೇ ಫೋನ್ ಕಾಲ್ ಬಂದಿರಲಿಲ್ಲ. ನೈರೋಬಿಯಲ್ಲಿ ಉಗ್ರರ ದಾಳಿಯಿಂದ ಕುಟುಂಬದವರು ಆತಂಕಗೊಂಡಿದ್ದರು. ಸೋಮವಾರವೂ ಅವರಿಂದ ಕರೆ ಬರದ ಹಿನ್ನಲೆಯಲ್ಲಿ ಭಾರತೀಯ ರಾಯಭಾರ ಕಚೇರಿಗೆ ಫೋನ್ ಮಾಡಿದ ಕುಟುಂಬದವರು ಮಾಹಿತಿ ನೀಡುವಂತೆ ಕೋರಿದ್ದರು.
ಡ್ರೈವಿಂಗ್ ಲೈಸೆನ್ಸ್ ನೆರವು
ನೈರೋಬಿ ಉಗ್ರರ ದಾಳಿಯಲ್ಲಿ ಮೂವರು ಭಾರತೀಯರು ಮೃತಪಟ್ಟಿದ್ದಾರೆ. ಸುದರ್ಶನ್ ಶವದ ಜೊತೆ ಇದ್ದ ಡ್ರೈವಿಂಗ್ ಲೈಸೆನ್ಸ್ ಪತ್ತೆ ಹಚ್ಚಿದ್ದ ಅಧಿಕಾರಿಗಳು, ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದರು. ನಂತರ ಸುದರ್ಶನ್ ಮೃತಪಟ್ಟಿರುವ ಸುದ್ದಿ ಕುಟುಂಬದವರಿಗೆ ತಿಳಿದಿದೆ.
ಶನಿವಾರ ಹೊರಡಬೇಕಿತ್ತು
ಶನಿವಾರ ಕೀನ್ಯಾದಿಂದ ಉಗಾಂಡಕ್ಕೆ ಸುದರ್ಶನ್ ತೆರಳಬೇಕಾಗಿತ್ತು. ಆದರೆ, ಅಂದು ಅವರು ಉಗ್ರರ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಸುದರ್ಶನ್ ಶವವನ್ನು ಪಡೆದುಕೊಳ್ಳು ಪ್ರಕ್ರಿಯೆ ಆರಂಭವಾಗಿದೆ. ಗುರುವಾರ ಸಂಜೆ ಅಥವ ಶುಕ್ರವಾರ ಬೆಳಗ್ಗೆ ಸುದರ್ಶನ್ ಪಾರ್ಥಿವ ಶರೀರ ಬೆಂಗಳೂರು ತಲುಪುವ ಸಾಧ್ಯತೆ ಇದೆ.