ತಾಯಿಯ ಅಚಾತುರ್ಯ: ಆಟೋ ಮಗುವಿನ್ನೂ ಪತ್ತೆಯಾಗಿಲ್ಲ
ಚಿಕ್ಕಲಸಂದ್ರದ ಕೋಮಲಾ ಬ್ರಿಗೇಡ್ ಅಪಾರ್ಟ್ ಮೆಂಟ್ ಸಮೀಪ ಮಗುವನ್ನು ಆಟೋದಲ್ಲಿ ಮಲಗಿಸಿ ಎದುರಿಗಿದ್ದ ಔಷಧ ಅಂಗಡಿಗೆ ಮಗುವಿನ ತಾಯಿ ಹೋಗಿಬರುವಷ್ಟರಲ್ಲಿ ಮಗು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದೆ.
ತಾಯಿಯಿಂದ ಭಾರಿ ಅಚಾತುರ್ಯವೇ ನಡೆದಿದೆ: ಉತ್ತರಹಳ್ಳಿ ನಿವಾಸಿ ಜಿಆರ್ ಸುಧೀಂದ್ರ ಹಾಗೂ ಜ್ಯೋತಿ ದಂಪತಿಯ 4 ತಿಂಗಳ ಗಂಡುಮಗು ನಾಪತ್ತೆಯಾಗಿರುವುದು. ಅನಾರೋಗ್ಯದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಸುಮಾರು 11 ಗಂಟೆಯಲ್ಲಿ ಮಗನನ್ನು ಕ್ಲಿನಿಕ್ಕಿಗೆ ಚಿಕಿತ್ಸೆಗೆಂದು ಜ್ಯೋತಿ ಕರೆತಂದಿದ್ದರು. ವೈದ್ಯಕೀಯ ತಪಾಸಣೆ ಬಳಿಕ ಆಟೋದಲ್ಲಿ ಅವರು ಮನೆಗೆ ಹಿಂತಿರುಗುತ್ತಿದ್ದರು.
ಆ ವೇಳೆ ಸ್ವಲ್ಪ ಅಚಾತುರ್ಯ ನಡೆದಿದೆ. ಮಾರ್ಗ ಮಧ್ಯೆ ಶನೇಶ್ವರ ದೇವಸ್ಥಾನದ ಹತ್ತಿರ ಆಟೋದಲ್ಲಿ ಮಗನನ್ನು ಮಲಗಿಸಿ ಜ್ಯೋತಿ ಔಷಧ ಖರೀದಿಗೆ ತೆರಳಿದ್ದಾರೆ. ಅಂಗಡಿಯಲ್ಲಿ ರಶ್ ಇದ್ದುದ್ದರಿಂದ ಸುಮಾರು 10 ನಿಮಿಷ ಕಾಲ ಅಂಗಡಿ ಮುಂದೆಯೇ ಕಾದಿದ್ದು, ಔಷಧ ಖರೀದಿಸಿದ ನಂತರ ಅಲ್ಲಿಂದ ವಾಪಸ್ಸಾಗಿದ್ದಾರೆ. ಅಂದರೆ 10 ನಿಮಿಷ ಕಾಲ ಮಗುವನ್ನು ಆಟೋದಲ್ಲೇ ಬಿಟ್ಟಿದ್ದಾರೆ!
ಮರಳಿ ಬಂದಾಗ ಆಟೋದಲ್ಲಿ ಮಲಗಿಸಿದ್ದ ಮಗು ನಾಪತ್ತೆಯಾಗಿತ್ತು ಎಂದು ಜ್ಯೋತಿ ದೂರಿನಲ್ಲಿ ತಿಳಿಸಿದ್ದಾರೆ. ಮಗು ನಾಪತ್ತೆಯಾಗಿರುವ ಕುರಿತು ಆಟೋ ಚಾಲಕನನ್ನು ಪ್ರಶ್ನಿಸಿದಾಗ, ತಾನು ಮೊಬೈಲಿನಲ್ಲಿ ಮಾತನಾಡುತ್ತಿದ್ದೆ. ಮಗು ಕಣ್ಮರೆ ಬಗ್ಗೆ ತನಗೇನು ಗೊತ್ತಿಲ್ಲ ಎಂದು ಉತ್ತರ ನೀಡಿದವನೇ ತಕ್ಷಣ ಅಲ್ಲಿಂದ ಹೊರಟು ಹೋಗಿದ್ದಾನೆ.
ಆತಂಕಗೊಂಡ ಜ್ಯೋತಿ ಮತ್ತು ಆಕೆಯ ತಾಯಿ ಸುತ್ತುಮತ್ತ ಮಗನಿಗೆ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಕೊನೆಗೆ ಮನೆಗೆ ಮರಳಿ ನಡೆದ ಘಟನೆ ಕುರಿತು ತಮ್ಮ ಪತಿಗೆ ಜ್ಯೋತಿ ತಿಳಿಸಿದ್ದಾರೆ. ಮಗುವನ್ನು ಕಳೆದುಕೊಂಡ ದಂಪತಿ, ಸುಬ್ರಹ್ಮಣ್ಯಪುರ ಠಾಣೆಗೆ ಹೋಗಿ ಪುತ್ರ ನಾಪತ್ತೆಯಾಗಿರುವ ಸಂಬಂಧ ದೂರು ನೀಡಿದ್ದಾರೆ.
ಉತ್ತರಹಳ್ಳಿ ಜಂಕ್ಷನ್ ಸುತ್ತಮುತ್ತ ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ಆಳವಡಿಸಿರುವ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಆರಂಭವಾಗಿದ್ದು, ಆಟೋ ಚಾಲಕನ್ನು ಪತ್ತೆ ಹಚ್ಚಿ, ವಿಚಾರಣೆ ನಡೆಸಿದರೆ ಮಾಹಿತಿ ಸಿಗಬಹುದು ಎಂದು ದಕ್ಷಿಣ ವಿಭಾಗದ ಡಿಸಿಪಿ ಎಚ್ಎಸ್ ರೇವಣ್ಣ ಆಶಿಸಿದ್ದಾರೆ.