ಕೊವಿಡ್-19 ನಿಯಂತ್ರಣದಲ್ಲಿ ಬೆಂಗಳೂರೇ ಸೈ, ವಾರಿಯರ್ಸ್ ಗೆ ಜೈ!
ಬೆಂಗಳೂರು, ಮೇ.26: ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ಸೋಂಕು ನಿಯಂತ್ರಿಸುವಲ್ಲಿ ಭಾರತದ ನಾಲ್ಕು ನಗರಗಳು ಭೇಷ್ ಎನಿಸಿಕೊಂಡಿವೆ. ಈ ಪಟ್ಟಿಯಲ್ಲಿ ರಾಜ್ಯ ರಾಜಧಾನಿ, ಸಿಲಿಕಾನ್ ಸಿಟಿ ಬೆಂಗಳೂರು ಕೂಡಾ ಸ್ಥಾನ ಪಡೆದುಕೊಂಡಿದೆ.
ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಬೆಂಗಳೂರು ಸೈ ಎನಿಸಿಕೊಳ್ಳುವಂತೆ ಮಾಡಿದ ಕೊರೊನಾ ವಾರಿಯರ್ಸ್ ಗೆ ಕಂದಾಯ ಸಚಿವ ಆರ್.ಅಶೋಕ್ ತುಂಬು ಹೃದಯದ ಧನ್ಯವಾದವನ್ನು ಅರ್ಪಿಸಿದ್ದಾರೆ.
ಕೋವಿಡ್ ನಿಯಂತ್ರಣದಲ್ಲಿ ಬೆಂಗಳೂರು ನಂಬರ್ 1: ಕೇಂದ್ರ ಸಚಿವ
ಕೋವಿಡ್-19 ಸೋಂಕು ಪ್ರಪಂಚದಾದ್ಯಂತ ಹರಡಿ ಜನಜೀವನ ಅಸ್ತವ್ಯಸ್ತವಾಗಿಸಿದೆ. ಈ ಮಹಾಮಾರಿ ನಿಯಂತ್ರಣದಲ್ಲಿ ಬೆಂಗಳೂರು ದೇಶದಲ್ಲೇ ನಂ.1 ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ಈ ಹೋರಾಟದಲ್ಲಿ ಶ್ರಮಿಸುತ್ತಿರುವ ವೈದ್ಯರು-ವೈದ್ಯಕೀಯ ಸಿಬ್ಬಂದಿ, ಪೋಲೀಸರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಹಾಗೂ ಇತರರಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು ಎಂದು ಸಚಿವ ಆರ್.ಅಶೋಕ್ ಟ್ವೀಟ್ ಮಾಡಿದ್ದಾರೆ.
ಕೊರೊನಾ ವೈರಸ್ ನಿಯಂತ್ರಣದಲ್ಲಿ ಬೆಂಗಳೂರು ಬೆಸ್ಟ್:
ಭಾರತದಲ್ಲಿ ಕೊರೊನಾ ವೈರಸ್ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ ನಾಲ್ಕು ನಗರಗಳನ್ನು ಕೇಂದ್ರ ಸರ್ಕಾರವು ಗುರುತಿಸಿದೆ. ಈ ಪಟ್ಟಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ತಮಿಳುನಾಡಿನ ಚೆನ್ನೈ, ರಾಜಸ್ಥಾನದ ಜೈಪುರ್ ಹಾಗೂ ಮಧ್ಯಪ್ರದೇಶದ ಇಂದೋರ್ ನಗರಗಳು ಕೂಡ ಕೊವಿಡ್-19 ನಿಯಂತ್ರಿಸುವಲ್ಲಿ ಸೈ ಎನಿಸಿಕೊಂಡಿವೆ. ಇನ್ನು, ಕರ್ನಾಟಕದಲ್ಲಿ ಪತ್ತೆಯಾಗಿರುವ ಬಹುತೇಕ ಸೋಂಕಿತ ಪ್ರಕರಣಗಳು ನೆರೆ ರಾಜ್ಯ ಅಥವಾ ಸೋಂಕಿತ ಪ್ರದೇಶಗಳಿಂದ ಆಗಮಿಸಿದ ವ್ಯಕ್ತಿಗಳಲ್ಲಿಯೇ ಕಾಣಿಸಿಕೊಂಡಿದೆ.