ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರು? ಸಸ್ಪೆನ್ಸ್ ಮುಂದುವರಿಕೆ
Recommended Video
ಬೆಂಗಳೂರು, ಮಾರ್ಚ್ 25 : ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದಲ್ಲಿ ಸಸ್ಪೆನ್ಸ್ ಮುಂದುವರಿದಿದೆ. 6 ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅನಂತ್ ಕುಮಾರ್ ಅವರ ನಂತರ ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ
ಅನಂತ್ ಕುಮಾರ್ ಅವರು ದೈವಾಧೀನರಾದ ನಂತರ ಯಾರನ್ನು ಈ ಪ್ರತಿಷ್ಠಿತ ಕ್ಷೇತ್ರದಲ್ಲಿ ಕಣಕ್ಕಿಳಿಸಬೇಕು ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಆಗ ಸಹಜವಾಗಿ ಹೆಸರು ಕೇಳಿಬಂದಿದ್ದೇ ಅನಂತ್ ಕುಮಾರ್ ಅವರು ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರದು.
ಲೋಕಸಭೆ ಚುನಾವಣೆ 2019: ಬಿಜೆಪಿಯ ಮೊದಲ ಪಟ್ಟಿಯಲ್ಲಿ ಅಚ್ಚರಿ
ಅದಮ್ಯ ಚೇತನದ ಮೂಲಕ ಬೆಂಗಳೂರಿನಾದ್ಯಂತ ಸಾಕಷ್ಟು ಸಾಮಾಜಿಕ ಕಾರ್ಯ ನಡೆಸಿರುವ ಈ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿದ್ದಾರೆ ಎಂಬುದರಲ್ಲಿ ಎರಡು ಮಾತೇ ಇಲ್ಲ. ಅಲ್ಲದೆ, ತಾವು ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಚುನಾವಣಾ ಕಣಕ್ಕಿಳಿಯಲು ಸಿದ್ಧ ಎಂದು ಕೂಡ ಅವರು ಬಿಜೆಪಿ ಹೈಕಮಾಂಡಿಗೆ ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸ್ಥೂಲ ಪರಿಚಯ
ಆದರೂ, ಅಭ್ಯರ್ಥಿಯನ್ನು ಘೋಷಿಸಲು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರು ಮೀನಮೇಷ ಎಣಿಸುತ್ತಿದ್ದಾರೆ. ಅದಕ್ಕೆ ಕಾರಣಗಳು ಕೂಡ ಹಲವಾರಿವೆ. ಅದರಲ್ಲಿ ಪ್ರಮುಖವಾದದ್ದೆಂದರೆ, ಜನಪ್ರಿಯತೆ ಇದ್ದರೂ ರಾಜಕೀಯವನ್ನು ಅಷ್ಟಾಗಿ ಬಲ್ಲ ತೇಜಸ್ವಿನಿ ಅವರಿಗೆ ಕೊಡುವುದೋ ಅಥವಾ ರಾಜಕೀಯವನ್ನು ಬಲ್ಲ ಯುವ ನಾಯಕರಿಗೆ ಅವಕಾಶ ನೀಡುವುದೋ ಎಂದು.
ಅನಂತ್ 6 ಬಾರಿ ಪ್ರತಿನಿಧಿಸಿದ್ದ ಕ್ಷೇತ್ರ
ಯಾರು ನಿಂತರೂ ಈ ಪ್ರತಿಷ್ಠಿತ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಗೆಲುವು ಕಟ್ಟಿಟ್ಟ ಬುತ್ತಿ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಏಕೆಂದರೆ, 2018ರ ನವೆಂಬರ್ 12ರಂದು ವೈಕುಂಠ ವಾಸಿಗಳಾದ ಅನಂತ್ ಕುಮಾರ್ ಅವರು ಈ ಕ್ಷೇತ್ರದಲ್ಲಿ ಆ ಪರಿ ಆವರಿಸಿಕೊಂಡಿದ್ದಾರೆ. 1996ರಲ್ಲಿ ಕಾಂಗ್ರೆಸ್ಸಿನ ವರಲಕ್ಷ್ಮೀ ಗುಂಡೂರಾವ್ ಅವರನ್ನು ಸೋಲಿಸಿದ ನಂತರ ಅನಂತ್ ಅವರು ಸೋಲು ಕಂಡೇ ಇಲ್ಲ. 2014ರಲ್ಲಿ ಅನಂತ್ ಕುಮಾರ್ ಅವರು ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಆಧಾರ್ ರೂವಾರಿ ನಂದನ್ ನಿಲೇಕಣಿ ಅವರನ್ನು 2.3 ಲಕ್ಷ ಮತಗಳ ಅಂತರದಿಂದಲೂ ಸೋಲಿಸಿದ್ದರು. ಆದರೆ, ಅವರು ನಿಧನರಾಗುತ್ತಿದ್ದಂತೆ ಮುಂದೆ ಯಾರು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಸ್ಪರ್ಧೆಗೆ ತೇಜಸ್ವಿನಿ ಅನಂತ್ ಕುಮಾರ್ ರೆಡಿ
ತೇಜಸ್ವಿನಿ ಅನಂತ್ ಕುಮಾರ್ ಅವರು ಸುತ್ತೂರು ಮಠಾಧೀಶರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡು, ತಾವು ಚುನಾವಣೆಗೆ ಸಿದ್ಧ ಎಂಬ ಸಂದೇಶವನ್ನು ಬಿಜೆಪಿ ಹೈಕಮಾಂಡಿಗೆ ರವಾನಿಸಿದ್ದರೂ, ಬಿಜೆಪಿ ಹಿಂದೆ ಮುಂದೆ ನೋಡುತ್ತಿರುವುದಕ್ಕೆ ಕಾರಣ, ತೇಜಸ್ವಿನಿ ಅವರು ಹಲವಾರು ದಶಕಗಳಿಂದ ಅನಂತ್ ಅವರಿಗೆ ರಾಜಕೀಯ ಚಟುವಟಿಕೆಗಳಲ್ಲಿಯೂ ಸಾಥ್ ನೀಡಿದ್ದರೂ ಅವರಿಗೆ ಅಷ್ಟಾಗಿ ರಾಜಕೀಯದಲ್ಲಿ ಅನುಭವ ಇಲ್ಲದಿರುವುದು. ಆಗ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಿಂದ ಕೇಳಿಬಂದ ಹೆಸರು ತೇಜಸ್ವಿ ಸೂರ್ಯ ಅವರದು.
ಬೆಂಗಳೂರು ದಕ್ಷಿಣದ ಸಂಭಾವ್ಯ ಬಿಜೆಪಿ ಅಭ್ಯರ್ಥಿ ತೇಜಸ್ವಿನಿ ವ್ಯಕ್ತಿಚಿತ್ರ
ತೇಜಸ್ವಿ ಸೂರ್ಯಗೆ ಅವಕಾಶ ಸಿಗುವುದಾ?
ಬಿಜೆಪಿಯಲ್ಲಿ ಯುವ ನಾಯಕರಾಗಿ ಗುರುತಿಸಿಕೊಂಡಿರುವ ತೇಜಸ್ವಿ ಸೂರ್ಯ ಅವರು 'ಬೆಂಗಳೂರು ಉಳಿಸಿ' ಅಭಿಯಾನದಲ್ಲಿ ಸಕ್ರೀಯರಾಗಿ ಪಾಲ್ಗೊಂಡಿದ್ದರು. ವಕೀಲರಾದರೂ ರಾಜಕೀಯಕ್ಕೆ ಧುಮುಕಿ, ತಮ್ಮ ಪ್ರಖರ ಮಾತುಗಾರಿಕೆಯಿಂದ ತಮ್ಮತನವನ್ನು ಪ್ರತಿಷ್ಠಾಪಿಸಿದ್ದಾರೆ. ಅಲ್ಲದೆ, ಬಿಎನ್ ವಿಜಯ್ ಕುಮಾರ್ ಅವರ ನಿಧನದಿಂದ ನಡೆದಿದ್ದ ಜಯನಗರ ಉಪ ಚುನಾವಣೆಯಲ್ಲಿ ಕೂಡ ತೇಜಸ್ವಿ ಸೂರ್ಯ ಅವರ ಹೆಸರು ಕೇಳಿಬಂದಿತ್ತು. ಆಗ, ವಿಜಯ್ ಕುಮಾರ್ ಅವರ ಸಹೋದರ ಪ್ರಹ್ಲಾದ್ ಬಾಬು ಅವರಿಗೆ ಟಿಕೆಟ್ ನೀಡಿದ್ದರಿಂದ ಹೀನಾಯವಾಗಿ ಬಿಜೆಪಿ ಸೋತಿತ್ತು.
ತೇಜಸ್ವಿನಿ ವರ್ಸಸ್ ತೇಜಸ್ವಿ ಸೂರ್ಯ
ಈಗ ಅಂಥದೇ ತಪ್ಪಾಗಬಾರದು ಎಂದು ಬಿಜೆಪಿ ಎಚ್ಚರಿಕೆ ವಹಿಸಿದೆ. ಈ ಕಾರಣದಿಂದಾಗಿಯೇ ಅಭ್ಯರ್ಥಿಯ ಹೆಸರಿನ ಘೋಷಣೆ ಮುಂದೂಡಲಾಗುತ್ತಿದೆ. ಅಂದ ಹಾಗೆ, ಏಪ್ರಿಲ್ 18ರಂದು ಎರಡನೇ ಹಂತದ ಮತದಾನ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿಯೂ ನಡೆಯಲಿದ್ದು, ಮಾರ್ಚ್ 26 ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ಆದ್ದರಿಂದ ಕೂಡಲೇ ಅಭ್ಯರ್ಥಿಯನ್ನು ಘೋಷಿಸುವ ಅಗತ್ಯವೂ ಇದೆ. ಆದರೆ, ಯಾರಿಗೆ ಒಲಿಯಲಿದೆ ಅದೃಷ್ಟ? ತೇಜಸ್ವಿನಿ ಅನಂತ್ ಕುಮಾರ್ ಅವರಿಗೋ, ತೇಜಸ್ವಿ ಸೂರ್ಯ ಅವರಿಗೋ? ಸಸ್ಪೆನ್ಸ್ ಮುಂದುವರಿದಿದೆ.
ಪ್ರಧಾನಿ ಮೋದಿ ಸ್ಪರ್ಧಿಸುತ್ತಾರಾ?
ಆದರೆ, ಈ ನಡುವೆ ಮತ್ತೊಂದು ಅಚ್ಚರಿಯ ಹೆಸರು ಕೂಡ ಈ ಕ್ಷೇತ್ರದಲ್ಲಿ ಕೇಳಿಬಂದಿತ್ತು. ಅದಾವುದೆಂದರೆ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರದ್ದು. ಕಳೆದ ಬಾರಿ ವಾರಣಾಸಿ ಮತ್ತು ಬರೋಡಾದಿಂದ ಸ್ಪರ್ಧಿಸಿ ಎರಡರಲ್ಲಿಯೂ ಗೆದ್ದು, ಕಡೆಗೆ ಬರೋಡಾವನ್ನು ತ್ಯಜಿಸಿದ್ದ ನರೇಂದ್ರ ಮೋದಿಯವರು, ಈ ಬಾರಿ ವಾರಣಾಸಿಯಿಂದ ಸ್ಪರ್ಧಿಸುತ್ತಿರುವುದು ಖಾತ್ರಿಯಾಗಿದೆ. ಆದರೆ, ಇನ್ನೊಂದು ಕ್ಷೇತ್ರದಿಂದಲೂ ಸ್ಪರ್ಧಿಸಬೇಕು ಎಂಬ ಮಾತು ಕೇಳಿಬಂದಾಗ, ಮತ್ತು ಕರ್ನಾಟಕದಲ್ಲಿ ಬಿಜೆಪಿಯನ್ನು ಇನ್ನಷ್ಟು ಬಲಪಡಿಸಬೇಕು ಎಂಬ ಮಾತು ಕೇಳಿದಾಗ, ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ವಿಷಯ ಚರ್ಚೆಯಾಗಿತ್ತು. ಆದರೆ, ಯಾವುದೂ ನಿರ್ಧಾರವಾಗಿಲ್ಲ. ರಾಜ್ಯ ಬಿಜೆಪಿ ತೇಜಸ್ವಿನಿ ಅನಂತ್ ಕುಮಾರ್ ಅವರ ಪರವಾಗಿದ್ದರೂ, ಆರೆಸ್ಸೆಸ್ ತೇಜಸ್ವಿ ಸೂರ್ಯ ಅವರ ಪರವಾಗಿದೆ.
ಕಾಂಗ್ರೆಸ್ ನಿಂದ ಬಿಕೆ ಹರಿಪ್ರಸಾದ್
ಕಳೆದ ಬಾರಿ ನಂದನ್ ನಿಲೇಕಣಿ ಸ್ಪರ್ಧಿಸಿದ್ದರೆ, ಈ ಬಾರಿ ಅವರ ಪತ್ನಿ ರೋಹಿಣಿ ನಿಲೇಕಣಿ ಅವರನ್ನು ಕಣಕ್ಕಿಳಿಸುವ ಕುರಿತು ಕಾಂಗ್ರೆಸ್ ಚಿಂತಿಸಿತ್ತು. ಆದರೆ, ಕಡೆಗೆ ಕಾಂಗ್ರೆಸ್ಸಿನ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅವರಿಗೆ ಟಿಕೆಟ್ ನೀಡಲಾಗಿದೆ. ಬಿಕೆ ಹರಿಪ್ರಸಾದ್ ಅವರು, ಪುಲ್ವಾಮಾ ಭಯೋತ್ಪಾದಕ ದಾಳಿಯ ಹಿಂದೆ ನರೇಂದ್ರ ಮೋದಿ ಸರಕಾರ ಮತ್ತು ಪಾಕಿಸ್ತಾನದ 'ಮ್ಯಾಚ್ ಫಿಕ್ಸಿಂಗ್' ಎಂದು ಹೇಳಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಈ ಟೀಕೆಗೆ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಜನತೆ ಈ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ ಎಂದು ತೇಜಸ್ವಿ ಸೂರ್ಯ ಅವರು ಎಚ್ಚರಿಕೆ ನೀಡಿದ್ದಾರೆ. 1999ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲೇ ಬಿಕೆ ಹರಿಪ್ರಸಾದ್ ಅವರು ಅನಂತ್ ಕುಮಾರ್ ವಿರುದ್ಧ ಸೋಲು ಅನುಭವಿಸಿದ್ದರು. ಈಗ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಬೆಂಗಳೂರು ದಕ್ಷಿಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್
ಮತ್ತೆ ಉಪ ಚುನಾವಣೆಯ ಹೊರೆಯೇಕೆ?
ಪ್ರಧಾನಿ ನರೇಂದ್ರ ಮೋದಿಯವರೇ, ನೀವು ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿ, ಕರ್ನಾಟಕದಲ್ಲಿ 28ಕ್ಕೆ 28 ಕ್ಷೇತ್ರಗಳನ್ನೂ ಗೆಲ್ಲಿಸಿ ಕೊಡುತ್ತೇವೆ ಎಂದು ಬಿಜೆಪಿ ಯುವ ಬ್ರಿಗೇಡ್ ನೇತಾರ ಚಕ್ರವರ್ತಿ ಸೂಲಿಬೆಲೆ ಅವರು ಘೋಷಣೆ ಮಾಡಿದ್ದರು. ಒಂದು ವೇಳೆ ನರೇಂದ್ರ ಮೋದಿಯವರು ಇಲ್ಲಿ ಸ್ಪರ್ಧಿಸಿ ಗೆಲ್ಲುತ್ತಾರೆ ಎಂದಿಟ್ಟುಕೊಳ್ಳೋಣ. ವಾರಣಾಸಿಯಿಂದಲೂ ಸ್ಪರ್ಧಿಸಿ ಗೆದ್ದರೆ ಯಾವ ಕ್ಷೇತ್ರ ಬಿಟ್ಟುಕೊಡುತ್ತಾರೆ? ಬೆಂಗಳೂರು ದಕ್ಷಿಣ ಕ್ಷೇತ್ರವನ್ನೇ ಅಲ್ಲವೆ? ಹೀಗಿರುವಾಗ ಮತ್ತೆ ಉಪ ಚುನಾವಣೆಯ ಹೊರೆಯೇಕೆ ಬೆಂಗಳೂರು ದಕ್ಷಿಣ ಮತದಾರರ ಮೇಲೆ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.