ಬೆಂಗಳೂರು ದಕ್ಷಿಣದಲ್ಲಿ ಅನುಕಂಪದ ಅಲೆಯಲ್ಲಿ ಕಮಲ ಅರಳುವುದೇ?
ಬೆಂಗಳೂರು, ಏಪ್ರಿಲ್ 16 : ಬಿಜೆಪಿ ಅಭ್ಯರ್ಥಿ ಆಯ್ಕೆಯ ವಿಚಾರಕ್ಕೆ ಹೆಚ್ಚು ಸುದ್ದಿಯಾದ ಕ್ಷೇತ್ರ ಬೆಂಗಳೂರು ದಕ್ಷಿಣ. ಬಿಜೆಪಿ ಅನುಕಂಪದ ಅಲೆಯಲ್ಲಿ ಮತ್ತೊಮ್ಮೆ ಗೆದ್ದು ಬರುವ ವಿಶ್ವಾಸವನ್ನು ಹೊಂದಿದೆ. ಕಾಂಗ್ರೆಸ್-ಜೆಡಿಎಸ್ ಹಳೆ ಹುಲಿಯನ್ನು ಕಣಕ್ಕಿಳಿಸಿ ಬಿಜೆಪಿ ಗೆಲುವಿಗೆ ತಡೆ ಹಾಕಲು ಮುಂದಾಗಿದೆ.
ಏಪ್ರಿಲ್ 18ರಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ 28 ವರ್ಷದ ತೇಜಸ್ವಿ ಸೂರ್ಯ ಅಭ್ಯರ್ಥಿ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಕೆ.ಹರಿಪ್ರಸಾದ್ ಅವರು ಕಣದಲ್ಲಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಪರಿಚಯ
1996ರಿಂದಲೂ ಬಿಜೆಪ ವಶದಲ್ಲಿರುವ ಕ್ಷೇತ್ರ ಬೆಂಗಳೂರು ದಕ್ಷಿಣ. ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರು 6 ಸಲ ಕ್ಷೇತ್ರದಲ್ಲಿ ಗೆದ್ದಿದ್ದರು. ಅವರ ನಿಧನದ ನಂತರ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ಹೈಕಮಾಂಡ್ ಅಚ್ಚರಿ ಎಂಬಂತೆ ತೇಜಸ್ವಿ ಸೂರ್ಯ ಅವರನ್ನು ಅಭ್ಯರ್ಥಿಯಾಗಿ ಮಾಡಿದೆ.
ಪ್ರತಿಬಾರಿಯೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಪೈಪೋಟಿ ನಡೆಯುತ್ತದೆ. ಈ ಬಾರಿಯೂ ಕ್ಷೇತ್ರದಲ್ಲಿ ಯಾವುದೇ ಜೆಡಿಎಸ್ ಶಾಸಕರು ಇಲ್ಲ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಲಾಭವಾಗುವ ಸಾಧ್ಯತೆ ಕಡಿಮೆ.....
ಅಚ್ಚರಿಯ ಅಭ್ಯರ್ಥಿ
ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರು? ಎಂಬ ಬಗ್ಗೆ ಬಾರಿ ಚರ್ಚೆ ನಡೆದಿತ್ತು. ಹಲವು ಹೆಸರುಗಳು ಕೇಳಿಬಂದಿದ್ದವು. ರಾಜ್ಯ ಬಿಜೆಪಿ ಘಟಕ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರ ಹೆಸರು ಶಿಫಾರಸು ಮಾಡಿತ್ತು. ಆದರೆ, ಅಚ್ಚರಿ ಎಂಬಂತೆ ಹೈಕಮಾಂಡ್ 28 ವರ್ಷದ ವಕೀಲ ತೇಜಸ್ವಿ ಸೂರ್ಯ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ.
ಅಸಮಾಧಾನ ಉಂಟಾಗಿತ್ತು
ಅನಂತಕುಮಾರ್ ಅವರು 6 ಸಲ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಗೆದ್ದಿದ್ದರು. ಅವರ ನಿಧನದ ಬಳಿಕ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ತೇಜಸ್ವಿ ಸೂರ್ಯ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಲಾಯಿತು. ಬಳಿಕ ಸಣ್ಣ-ಪುಟ್ಟ ಅಸಮಾಧಾನಗಳು ಉಂಟಾದವು. ಎಲ್ಲರೂ ಒಗ್ಗಟ್ಟಾಗಿದ್ದಾರೆಯೇ? ಎಂಬುದು ಚುನಾವಣೆ ಫಲಿತಾಂಶದ ಬಳಿಕ ತಿಳಿಯಲಿದೆ.
ಬಿ.ಕೆ.ಹರಿಪ್ರಸಾದ್ ಮೈತ್ರಿ ಅಭ್ಯರ್ಥಿ
ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದಾರೆ. 1999ರ ಚುನಾವಣೆಯಲ್ಲಿಯೂ ಬಿ.ಕೆ.ಹರಿಪ್ರಸಾದ್ ಅವರು ಅನಂತಕುಮಾರ್ ಎದುರಾಳಿಯಾಗಿದ್ದರು. 66,054 ಮತಗಳ ಅಂತರದಿಂದ ಸೋಲು ಕಂಡಿದ್ದರು.
ವಿಧಾನಸಭೆ ಬಲಾಬಲ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. ಆದರೆ, ಜೆಡಿಎಸ್ ಪಕ್ಷದ ಯಾವುದೇ ಶಾಸಕರು ಇಲ್ಲ.
*
ಬಿಜೆಪಿ
-
ಗೋವಿಂದರಾಜನಗರ,
ಪದ್ಮನಾಭನಗರ,
ಬಸವನಗುಡಿ,
ಚಿಕ್ಕಪೇಟೆ,
ಬೊಮ್ಮನಹಳ್ಳಿ
*
ಕಾಂಗ್ರೆಸ್
-
ಬಿಟಿಎಂ
ಬಡಾವಣೆ,
ವಿಜಯನಗರ,
ಜಯನಗರ
2014ರ ಫಲಿತಾಂಶ
2014ರ ಚುನಾವಣೆಯಲ್ಲಿ ಬಿಜೆಪಿಯ ಅನಂತಕುಮಾರ್ ಅವರು 6,33,816 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ನಿಂದ ನಂದನ್ ನಿಲೇಕಣಿ ಅವರು ಕಣದಲ್ಲಿದ್ದರು 405241 ಮತಗಳನ್ನು ಪಡೆದಿದ್ದರು. ಜೆಡಿಎಸ್ನಿಂದ ಕಣಕ್ಕಿಳಿದಿದ್ದ ರುತ್ ಮನೋರಮಾ ಅವರು 25,677 ಮತಗಳನ್ನು ಪಡೆದಿದ್ದರು.